Homeಪುಸ್ತಕ ವಿಮರ್ಶೆ1924ರ ’ಸರ್ಫರೋಶಿ ಕೀ ತಮನ್ನಾ’; ಸತ್ವಿಂದರ್ ಜಸ್ ಅವರ ’ಭಗತ್ ಸಿಂಗ್- ಎ ಲೈಫ್ ಇನ್...

1924ರ ’ಸರ್ಫರೋಶಿ ಕೀ ತಮನ್ನಾ’; ಸತ್ವಿಂದರ್ ಜಸ್ ಅವರ ’ಭಗತ್ ಸಿಂಗ್- ಎ ಲೈಫ್ ಇನ್ ರೆವೊಲ್ಯೂಶನ್’ ಪುಸ್ತಕದಿಂದ ಆಯ್ದ ಅಧ್ಯಾಯ

- Advertisement -
- Advertisement -

1924ರಲ್ಲಿ ಪೂರ್ವ ಬಂಗಾಳದ ಹಳ್ಳಿಯೊಂದರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ (ಎಚ್‌ಆರ್‌ಎ) ಸ್ಥಾಪನೆಯಾದದ್ದು ಒಂದು ಸುಳಿಗಾಳಿಯಂತೆ ರಭಸವಾಗಿತ್ತು. ಅದರ ಗುರಿಯೆಂದರೆ, ಬ್ರಿಟಿಷ್ ಆಡಳಿತಕ್ಕೆ ಸಶಸ್ತ್ರ ಪ್ರತಿರೋಧ ಒಡ್ಡುವುದು. ಅದರ ಸ್ಥಾಪಕ ಸದಸ್ಯರಲ್ಲಿ ಒಬ್ಬರೆಂದರೆ, “ಸರ್ಫರೋಶಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ/ ದೇಖ್ ನಾ ಹೈ ಜೋರ್ ಕಿತ್‌ನಾ ಬಾಜು-ಎ-ಖಾತಿಲ್ ಮೇ ಹೈ” (ಕ್ರಾಂತಿಯ ಹಂಬಲ ಈಗ ನಮ್ಮ ಎದೆಯಲ್ಲಿದೆ/ ದಂಡಿದುವವನ ತೋಳುಗಳಲ್ಲಿ ಬಲವೆಷ್ಟಿದೆ ನೋಡೇಬಿಡೋಣ) ಎಂಬ ಪ್ರಸಿದ್ಧ ಕ್ರಾಂತಿಕಾರಿ ಗೀತೆ ಬರೆದ ರಾಮಪ್ರಸಾದ್ ಬಿಸ್ಮಿಲ್. ಕ್ರಾಂತಿಯ ಮುನ್ನೋಟದಲ್ಲಿ ಬದುಕುವ ಈ ಕ್ರಾಂತಿಕಾರಕ ಸ್ವಯಂಕಲ್ಪನೆ, ಆಗಿನ ಕಾಲದ ಅವರ ಸ್ವಾರಸ್ಯಕರ ಮಾತುಕತೆ, ಚರ್ಚೆಗಳನ್ನು ಡಾ. ಅರ್ಪಣಾ ವೈದಿಕ್ ಅವರ ’ವೈಟಿಂಗ್ ಫಾರ್ ಸ್ವರಾಜ್’ನಲ್ಲಿ ಚೊಕ್ಕವಾಗಿ ಹಿಡಿದಿಡಲಾಗಿದ್ದು, ಕ್ರಾಂತಿಕಾರಿಗಳ ಚಿಂತನೆಗಳ ಕುರಿತು ಅಮೂಲ್ಯವಾದ ಒಳನೋಟಗಳನ್ನು ನೀಡಲಾಗಿದೆ. ಇನ್ನೊಬ್ಬ ಸ್ಥಾಪಕ ಸದಸ್ಯ ಎಂದರೆ, ಸಚೀಂದ್ರನಾಥ್ ಸನ್ಯಾಲ್. 1924ರಲ್ಲಿ ಲಾಹೋರ್ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕ್ರಾಂತಿಕಾರಿ ಭಗತ್ ಸಿಂಗ್, ಸನ್ಯಾಲ್ ಅವರ ಪ್ರಭಾವದಿಂದಲೇ ಅವರ ಅನುಯಾಯಿಯಾಗಿದ್ದು. ಸನ್ಯಾಲ್ ಅವರು ಆಗಲೇ, ಮುಂದೆ ಕ್ರಾಂತಿಕಾರಿಗಳ ಮಾರ್ಗದರ್ಶಕ ಗ್ರಂಥವಾಗಲಿದ್ದ ’ಬಂಡಿ ಜೀವನಿ’ಯನ್ನು (ಬಂಡಾಯ ಜೀವನ) ಬರೆದಿದ್ದರು. ಎಚ್‌ಆರ್‌ಎಯ ಸ್ಪಷ್ಟ ಉದ್ದೇಶ ಸಾರ್ವತ್ರಿಕ ವಯಸ್ಕ ಚುನಾವಣೆಯ ತಳಹದಿಯ ಮೂಲಕ ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಎಂಬ ಒಕ್ಕೂಟ ಗಣರಾಜ್ಯದ ಸ್ಥಾಪನೆಯಾಗಿತ್ತು. ಇದು ಕಾರ್ಯರೂಪಕ್ಕೆ ಬಂದಿದ್ದರೆ, ಮುಂದೆ 1947ರಲ್ಲಿ ಭಾರತದ ವಿಭಜನೆಯು ತಪ್ಪುತ್ತಿತ್ತು.

ಸಶಸ್ತ್ರ ಹೋರಾಟವನ್ನು ಹಣವಿಲ್ಲದೇ ನಡೆಸಲು ಸಾಧ್ಯವಿರಲಿಲ್ಲ. ಜನರನ್ನು ನೇಮಕಾತಿ ಮಾಡಿ ಅವರಿಗೆ ತರಬೇತಿ ನೀಡುವುರು, ಶಸ್ತ್ರಾಸ್ತ್ರಗಳ ಖರೀದಿ, ರಾಷ್ಟ್ರೀಯ ಮಟ್ಟದಲ್ಲಿ ಒಂದು ಬಲವಾದ ಪ್ರಚಾರಾಭಿಯಾನದ ಸಂಘಟನೆ ಇತ್ಯಾದಿಗಳಿಗೆಲ್ಲ ಹಣಕಾಸು ಒದಗಿಸಬೇಕಾಗಿತ್ತು. ಸಂಘಟಿತರಾಗಿ ಮೂಡಿಬಂದವರಲ್ಲಿ ಉತ್ತರ ಭಾರತದ ಕ್ರಾಂತಿಕಾರಿಗಳು ಮೊದಲಿಗರಾಗಿದ್ದು, ರಾಮಪ್ರಸಾದ್ ಬಿಸ್ಮಿಲ್, ಸಚೀಂದ್ರನಾಥ ಸನ್ಯಾಲ್, ಸಚೀಂದ್ರನಾಥ ಭಕ್ಷಿ, ಮತ್ತು ಜಗದೀಶ್ ಚಂದ್ರ ಚಟರ್ಜಿ 1924ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ಅಥವಾ ಆರ್ಮಿಯನ್ನು (ಎಚ್‌ಆರ್‌ಎ) ಸ್ಥಾಪಿಸಿದರು. 1924ರ ಅಕ್ಟೋಬರ್ ತಿಂಗಳಲ್ಲಿ ಕಾನ್ಪುರದಲ್ಲಿ ಭೇಟಿಯಾದ ಅವರು, ವಸಾಹತುಶಾಹಿ ಆಡಳಿತವನ್ನು ಕಿತ್ತೆಸೆದು ಒಂದು ಪ್ರಜಾಸತ್ತಾತ್ಮಕ ಒಕ್ಕೂಟ ಭಾರತವನ್ನು ಸ್ಥಾಪಿಸುವ ಪ್ರತಿಜ್ಞೆ ಮಾಡಿದರು.

1925ರ ಆಗಸ್ಟ್ 9ರಂದು ಹತ್ತು ಜನರು ಲಕ್ನೋ ಸಮೀಪದ ಕಾಕೋರಿ ಎಂಬ ಒಂದು ಅಜ್ಞಾತ ಹಳ್ಳಿಯ ಬಳಿ ನಂಬರ್ 8 ಡೌನ್ ರೈಲನ್ನು ನಿಲ್ಲಿಸಿ ರೈಲ್ವೆಯ ಅಧಿಕೃತ ಖಜಾನೆಯನ್ನು ದೋಚಿದರು. ಆದರೆ, ಅವರೆಲ್ಲರನ್ನು ಬೇಗನೇ ಬಂಧಿಸಲಾಯಿತು. ಸರಕಾರದ ಪ್ರತೀಕಾರ ತ್ವರಿತ ಮತ್ತು ಕಟುವಾಗಿತ್ತು. ಅಶ್ಫಾಕುಲ್ಲಾ ಖಾನ್, ರಾಮಪ್ರಸಾದ್ ಬಿಸ್ಮಿಲ್, ರೋಷನ್ ಸಿಂಗ್ ಮತ್ತು ರಾಜೇಂದ್ರ ಲಾಹಿರಿ ಸೇರಿದಂತೆ ಐವರನ್ನು ಗಲ್ಲಿಗೇರಿಸಲಾಯಿತು. ನಾಲ್ವರನ್ನು ಅಂಡಮಾನಿನ ಕ್ರೂರ ಜೈಲಿನಲ್ಲಿ ಜೀವನಪರ್ಯಂತ ಶಿಕ್ಷೆ ಅನುಭವಿಸಲು ಕಳುಹಿಸಲಾಯಿತು. ಅವರಲ್ಲಿ ಒಬ್ಬರಾದ ಮಹಾವೀರ್ ಸಿಂಗ್ ಜೈಲುವಾಸದಿಂದ ಮತ್ತೆ ಹೊರಹೊಮ್ಮಿದರು. ಉಳಿದ ಹದಿನೇಳು ಮಂದಿಗೆ ದೀರ್ಘಕಾಲದ ಜೈಲುವಾಸ ಕಾದಿತ್ತು. ಅವರಲ್ಲಿ ಒಬ್ಬರಾದ ಚಂದ್ರಶೇಖರ ಅಜಾದ್ ಅಚ್ಚರಿಕಾರಕ ರೀತಿಯಲ್ಲಿ ತಪ್ಪಿಸಿಕೊಂಡರು.

ಕಾರ್ಯವ್ಯೂಹಾತ್ಮಕ ಚಾತುರ್ಯ ಇದ್ದ ಭಗತ್ ಸಿಂಗ್ ಕ್ರಾಂತಿಕಾರಿ ಚಳವಳಿಯನ್ನು ಮತ್ತೆ ಸಕ್ರಿಯಗೊಳಿಸುವ ಅವಕಾಶವನ್ನು ಕಂಡರು. ಹಾಗಾಗಿ 1926ರಲ್ಲಿ ನೌಜವಾನ್ ಭಾರತ್ ಸಭಾ ಪ್ರಸಿದ್ಧಿಗೆ ಬಂತು. ಅದು ಯುವಜನರನ್ನು ಸಮಾಜವಾದಿ, ಧರ್ಮಾತೀತ ವೇದಿಕೆಯಡಿ- ’ಕೋಮುವಾದಿ ರಾಜಕೀಯದ ವಿರುದ್ಧ ಜನರನ್ನು ಬದಲಾವಣೆಗೆ ಒಡಮಾಡುವ’ ಉದ್ದೇಶ ಹೊಂದಿತ್ತು.

ಭಗತ್ ಸಿಂಗ್ ಇಂತಾ ತೀವ್ರ ಕ್ರಮ ಕೈಗೊಳ್ಳಲೇಬೇಕಾಗಿತ್ತು; ಏಕೆಂದರೆ, 1925ರ ಕಾಕೋರಿ ಸಂಚು ಪ್ರಕರಣದ ಯೋಜಕರ ಸೋಲು ಭಾರತದಲ್ಲಿ ಕ್ರಾಂತಿಕಾರಿ ಹೋರಾಟದ ನಾಯಕತ್ವದ ತಲೆಯನ್ನೇ ಕಡಿದಿತ್ತು. ಆಗಿನ ಅಲ್ಪಕಾಲದ ಚಳವಳಿಯ ಉಜ್ವಲ ನಾಯಕರಾಗಿದ್ದ ರಾಮಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕುಲ್ಲಾ ಖಾನ್ ಇನ್ನಿಲ್ಲವಾಗಿದ್ದರು. ಒಂದೇ ಏಟಿನಲ್ಲಿ ಭಾರತೀಯ ಕ್ರಾಂತಿಕಾರಿ ಚಳವಳಿಯ ನಾಯಕತ್ವವನ್ನು ತೊಡೆದುಹಾಕಲಾಗಿತ್ತು ಮತ್ತು ಹೊಸ ಪೀಳಿಗೆಯ ಕ್ರಾಂತಿಕಾರಿ ನಾಯಕರ ಅಗತ್ಯವಿತ್ತು. ಕ್ರಾಂತಿಕಾರಿ ಚಳವಳಿಯ ಬೂದಿಯಿಂದ ಅದಕ್ಕೆ ಮರುಹುಟ್ಟು ನೀಡಿ ಅದನ್ನು ಮುನ್ನಡೆಸುವ ನಾಯಕರ ಅಗತ್ಯವಿತ್ತು.

ಅಶ್ಫಾಕುಲ್ಲಾ ಖಾನ್

ಆರ್ಯಸಮಾಜವಾದಿ ಮತ್ತು ಗದ್ದರ್‌ವಾದಿ ಪ್ರಬಲ ಕ್ರಾಂತಿಕಾರಿ ಹಿನ್ನೆಲೆ ಮತ್ತು ಪರಂಪರೆಯ ಕುಟುಂಬದಿಂದ ಬಂದ ಭಗತ್ ಸಿಂಗ್ ಅವರಿಗೆ ಈ ಗುಣಗಳ ಬಳುವಳಿಯಿತ್ತು. 1919ರಲ್ಲಿ ಹನ್ನೆರಡು ವರ್ಷಗಳ ಹುಡುಗನಾಗಿದ್ದಾಗಲೇ ಅವರು ಅಮೃತಸರದ ಜಲಿಯನ್‌ವಾಲಾ ಬಾಗ್‌ನಲ್ಲಿ ಜನರಲ್ ಡೈಯರ್ ನೂರಾರು ಅಮಾಯಕ ಜನರನ್ನು ಕೊಲ್ಲಿಸಿದ ಹತ್ಯಾಕಾಂಡದಿಂದ ರೋಸಿಹೋಗಿದ್ದರು. ಅನೇಕರು ಇತರರಂತೆಯೇ ಅವರು ಮಹಾತ್ಮಾ ಗಾಂಧಿಯವರ ಅಸಹಕಾರ ಚಳವಳಿಯ ಜೊತೆ ಸೇರಿದ್ದರು. ಆದರೆ ಮಹಾತ್ಮರು ಬೇಗನೇ ಈ ಚಳವಳಿಯನ್ನು ಹಿಂತೆಗೆದುಕೊಂಡಿದ್ದರು. ಉಳಿದ ಅನೇಕರಂತೆ ಭಗತ್ ಸಿಂಗ್ ಕೂಡಾ ಮಹಾತ್ಮರ ವಿಷಯದಲ್ಲಿ ಭ್ರಮನಿರಸನಗೊಂಡಿದ್ದರು. 1926ರಲ್ಲಿ ಅವರು ಸ್ಥಾಪಿಸಿದ ನೌಜವಾನ್ ಭಾರತ್ ಸಭಾ ಮುಂದೆ 1928ರಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್‌ನ ಅಸ್ಥಿಯಿಂದ ಅಸ್ತಿತ್ವಕ್ಕೆ ಬಂದ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌ಗೆ ಒಂದು ಅಸ್ಪಷ್ಟ ಮುನ್ನುಡಿಯಂತಿತ್ತು. ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್‌ನ ಕ್ಷಣಿಕ ಇತಿಹಾಸವು ನಿಧಿ ಸಂಗ್ರಹ ಮತ್ತು ಕಾಕೋರಿ ಘಟನೆಯನ್ನು ಮೀರಿ ಬೆಳೆಯಲು ಸಾಧ್ಯವಾಗಿರಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ನೌಜವಾನ್ ಭಾರತ್ ಸಭಾದ ಚಳವಳಿಯು ಜಾತಿ, ಧರ್ಮಗಳನ್ನು ಮೀರಿ ಒಂದು ರೀತಿಯ ಅತಿಕ್ರಮಣಕಾರಿ ಸಾಮಾಜಿಕತೆಯನ್ನು ಉತ್ತೇಜಿಸುವ ವ್ಯಕ್ತಿಗಳನ್ನು ಜೊತೆಗೆ ತರಲು ಯಶಸ್ವಿಯಾಗಿತ್ತು.

ಆದುದರಿಂದ, 1925ರ ಕಾಕೋರಿ ಸಂಚು ಪ್ರಕರಣವು ಸ್ವಾತಂತ್ರ್ಯ ಚಳವಳಿಗೆ ಒಂದು ನಿರ್ಣಾಯಕ ಕ್ಷಣವಾಗಿತ್ತು. ಬಹಳಷ್ಟು ಕಡೆಗಣಿಸಲಾದ ಘಟನೆಯಾಗಿದ್ದರೂ ಅದಕ್ಕೆ ಅತ್ಯಂತ ಐತಿಹಾಸಿಕ ಮಹತ್ವವಿದೆ. ಏಕೆಂದರೆ, ಅದರ ಕಾರಣದಿಂದ ಎಚ್‌ಆರ್‌ಎಯ ಎಳೆಯ ನಾಯಕರು ಮೃತರಾಗಿದ್ದುದರಿಂದ ಭಗತ್ ಸಿಂಗ್ ತಮ್ಮನ್ನು ಸ್ವಾತಂತ್ರ್ಯ ಹೋರಾಟದ ಉರಿಯುತ್ತಿರುವ ಕುಲುಮೆಯಲ್ಲಿ ಕಂಡುಕೊಂಡರು. ಈ ಸಂಘರ್ಷವು ಗಾಂಧಿಯವರ ಸಂಘರ್ಷಕ್ಕಿಂತ ಬೇರೆಯಾಗಿತ್ತು. ಅದು ಕೋಮುವಾದವನ್ನು ಎದುರಿಸಿ ನಿಂತಿತ್ತು. ಜನಾಂಗ, ವರ್ಗ, ಜಾತಿಗಳ ಹಂಗಿಲ್ಲದೆ ಒಂದು ಬಲವಾದ ರಾಷ್ಟ್ರೀಯ ಏಕತೆಯನ್ನು ರೂಪಿಸುವುದಕ್ಕಿಂತಲೂ ತುರ್ತಾದ ಕೆಲಸ ಬೇರೊಂದಿರಲಿಲ್ಲ. ವಸಾಹತುವಾದವು ಒಬ್ಬರನ್ನು ಒಬ್ಬರ ವಿರುದ್ಧ ಎತ್ತಿಕಟ್ಟುವುದರ ಮೂಲಕ ಭಾರತದಂತ ವೈವಿಧ್ಯಮಯ ದೇಶದ ಏಕತೆಗೆ ಅಪಾಯವಾಗಿತ್ತು. ಭಾರತವು ತನಗೆ ಬೇಕಿದ್ದ ಸ್ವಾತಂತ್ರ್ಯದ ಕಡೆಗೆ ಯಶಸ್ವಿಯಾಗಿ ಮುನ್ನಡೆಯಬೇಕಾದರೆ, ಈ ಏಕತೆಯು ಈಗ ಮೊದಲ ಆದ್ಯತೆಯಾಗಿತ್ತು.

ಇದನ್ನು 1927ರಲ್ಲಿ ತನ್ನನ್ನು ಗಲ್ಲಿಗೇರಿಸುವುದಕ್ಕೆ ಕೇವಲ ಮೂರು ದಿನಗಳಿಗೆ ಮೊದಲು ಅಶ್ಫಾಕುಲ್ಲಾ ಖಾನ್ ಭಾರತದಲ್ಲಿ ಕೋಮುವಾದದ ಬೆಳವಣಿಗೆಯ ಕುರಿತು ಎಚ್ಚರಿಸುತ್ತಾ, ತನ್ನ ದೇಶವಾಸಿಗಳನ್ನುದ್ದೇಶಿಸಿ ಬರೆದ ಬಹಿರಂಗ ಪತ್ರಕ್ಕಿಂತ ಚೆನ್ನಾಗಿ ಬೇರೇನೂ ಇದನ್ನು ತೋರಿಸಿಕೊಡಲಾರದು. ಅವರು ತಬ್ಲೀಗ್ ಮತ್ತು ಶುದ್ಧಿ ಚಳವಳಿಗಳನ್ನು ಖಂಡಿಸಿದರು. “ಹಿಂದೂಗಳು ಮತ್ತು ಮುಸ್ಲಿಮರು ಜೊತೆಯಾಗಿ ಬದುಕಲು ಕಲಿಯಬೇಕು; ಇಲ್ಲದಿದ್ದರೆ, ಚಾಕರಿಯ ಗುಲಾಮಗಿರಿಯ ಸಂಕೋಲೆಯಿಂದ ಕಳಚಿಕೊಳ್ಳಲು ಅವರು ವಿಫಲವಾಗುವರು. ಅವರು ಇದರಲ್ಲಿ ವಿಫಲರಾದರೆ, ಪರಿಣಾಮವು ಋಣಾತ್ಮಕವಾಗಿ ಕಟುವಾಗಿರುವುದಲ್ಲದೆ ಸ್ವಾತಂತ್ರ್ಯಕ್ಕಾಗಿನ ಹೋರಾಟದ ಮೇಲೆ ಪರಿಣಾಮ ಬೀರುವುದು. ಏಳು ಕೋಟಿ ಮುಸ್ಲಿಮರನ್ನು ಶುದ್ಧೀಕರಿಸುವುದು ಅಸಾಧ್ಯ. ಅದೇ ರೀತಿಯಲ್ಲಿ ಇಪ್ಪತ್ತೈದು ಕೋಟಿ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರ ಮಾಡಬಹುದು ಎಂದು ಯೋಚಿಸುವುದೇ ಅಸಂಬದ್ಧ. ಆದರೆ ಹೌದು, ನಾವೆಲ್ಲರೂ ಗುಲಾಮಗಿರಿಯ ಸಂಕೋಲೆಯನ್ನು ನಮ್ಮ ಕೊರಳ ಸುತ್ತ ಹಾಕಿಕೊಳ್ಳುವುದು ಸುಲಭ” ಎಂಬುದವರ ಸುಸ್ಪಷ್ಟ ಮಾತುಗಳಾಗಿದ್ದವು.

ಇದೇ ಮಾತುಗಳನ್ನು ಮಹಾವೀರ್ ಸಿಂಗ್ ಅವರು ಕೂಡಾ ಅಂಡಮಾನಿನ ಜೈಲಿನಲ್ಲಿ ಜೀವನ ಪರ್ಯಂತದ ಸಜೆಯನ್ನು ಎದುರು ನೋಡುತ್ತಿದ್ದಾಗ ತನ್ನ ತಂದೆಯವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ:

ಭಗತ್‌ಸಿಂಗ್

“ಸಮಾಜ ಎಂದರೆ ಆರ್ಯ ಸಮಾಜ ಅಥವಾ ಇನ್ಯಾವುದೇ ಸಂಕುಚಿತ ಸಮಾಜವೆಂದು ನನ್ನ ಅರ್ಥವಲ್ಲ. ಸಮಾಜ ಎಂದರೆ, ಸಾಮಾನ್ಯ ಜನರ ಸಮಾಜ. ಯಾಕೆಂದರೆ, ಈ ಧಾರ್ಮಿಕ ಸಮಾಜಗಳು, ತಮ್ಮ ದೂರದೃಷ್ಟಿಯ ಕೊರತೆಯ ಕಾರಣದಿಂದಾಗಿ ನನಗೆ ಅರ್ಥಹೀನವಾಗಿ ಕಾಣುತ್ತವೆ. ಮೇಲಾಗಿ, ನಾನು ಎಲ್ಲಾ ಧರ್ಮಗಳಿಂದ ದೂರ ಉಳಿಯಲು ಬಯಸುತ್ತೇನೆ; ಏಕೆಂದರೆ, ಅವು ಸಂಕುಚಿತ, ಸ್ವಯಂಕೇಂದ್ರಿಯವಾಗಿವೆ ಮತ್ತು ಅನ್ಯಾಯದ ಮೇಲೆ ಆಧರಿಸಿವೆ ಹಾಗೂ ಇತರರೂ ಹಾಗೆಯೇ ಮಾಡಬೇಕೆಂದು ಬಯಸುತ್ತವೆ. ಮಾನವ ಮತ್ತು ಸಮಾಜಕ್ಕೆ ಆತ್ಯಂತ ಹೆಚ್ಚು ಅನುಕೂಲ ತಂದುಕೊಡುವ ತತ್ವವೆಂದು ನಾನು ನಂಬಿರುವುದು: ಮಾನವ ಸಂಬಂಧಗಳು ಯಾವುದೇ ಜಾತಿ, ಧರ್ಮ, ಬಣ್ಣ ಮತ್ತು ಹಣದ ತಾರತಮ್ಯದ ಮೇಲೆ ಆಧರಿಸಿರಬಾರದೆಂದು.”

ಭಾರತವು ಸ್ವಾತಂತ್ರ್ಯವನ್ನು ಪಡೆಯುವುದರ ಮೂಲಕ, ಒಂದು ಸ್ವರೂಪದ ದಮನಕಾರಿ ಆಡಳಿತದ ಬದಲು ಇನ್ನೊಂದು ಸ್ವರೂಪದ ದಮನಕಾರಿ ಆಡಳಿತವನ್ನು ತರಬಾರದು ಎಂದು ಅಶ್ಫಾಕುಲ್ಲಾ ಖಾನ್ ಸಾಕಷ್ಟು ಸ್ಪಷ್ಟಪಡಿಸಿದ್ದಾರೆ.

“ಪರಕೀಯರ ಆಡಳಿತವು ದುಷ್ಟತನ ಎಂದು ನಾನು ಪರಿಗಣಿಸುತ್ತೇನೆ. ಅದೇ ಹೊತ್ತಿಗೆ ದುರ್ಬಲರಿಗೆ ಹಕ್ಕುಗಳನ್ನು ನಿರಾಕರಿಸಲಾಗುವ ಯಾವುದೇ ಪ್ರಜಾಸತ್ತಾತ್ಮಕ ಭಾರತೀಯ ಆಡಳಿತವನ್ನು ನಾನು ದ್ವೇಷಿಸುತ್ತೇನೆ: ಅದು ಶ್ರೀಮಂತರು ಮತ್ತು ಜಮೀನುದಾರರ ರಚನೆಯಾಗಿದ್ದರೆ ಅಥವಾ ಅದರಲ್ಲಿ ರೈತರು ಮತ್ತು ಕಾರ್ಮಿಕರ ಭಾಗವಹಿಸುವಿಕೆ ಇಲ್ಲದಿದ್ದರೆ ಅಥವಾ ಸರಕಾರಿ ಕಾನೂನುಗಳು ಅಸಮಾನತೆ ಮತ್ತು ಅಸಮಾನ ವ್ಯವಹಾರದ ಮೇಲೆ ಆಧರಿಸಿದ್ದರೆ…”

(ಕ್ರಾಂತಿಕಾರಿಗಳು 1925ರ ಸುತ್ತಮುತ್ತ ಕೋಮುವಾದ ವಿರೋಧಿ ಸಂಘಟನೆಯನ್ನು ರೂಪಿಸಿಕೊಳ್ಳುತ್ತಿರುವಾಗಲೇ ಹಿಂದೂ ಕೋಮುವಾದಿಗಳು ಆರೆಸ್ಸೆಸ್ಸನ್ನು ಸ್ಥಾಪಿಸಿದರು. ಈ ಕುರಿತು ಇನ್ನಷ್ಟು ಮುಂದಿನ ಸಂಚಿಕೆಯಲ್ಲಿ)

(ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ಕಾನೂನು ಪ್ರೊಫೆಸರ್ ಆಗಿರುವ ಡಾ. ಸತ್ವಿಂದರ್ ಜಸ್ ಅವರು ಬರೆದಿರುವ ಈ ಪುಸ್ತಕವನ್ನು ಪೆಂಗ್ವಿನ್ ರ್‍ಯಾಂಡಮ್ ಹೌಸ್ ಸಂಸ್ಥೆ ಪ್ರಕಟಿಸಿದೆ. ಪೆಂಗ್ವಿನ್ ರ್‍ಯಾಂಡಮ್ ಹೌಸ್ ಅನುಮತಿಯ ಮೇರೆಗೆ ಈ ಭಾಗವನ್ನು ಪ್ರಕಟಿಸಲಾಗಿದೆ)

ಕನ್ನಡಕ್ಕೆ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಪುಸ್ತಕ ಪರಿಚಯ; ಎಡಿತ್ ನೆಸ್ಬೂತರ ಕಾದಂಬರಿ: ‘ರೈಲ್ವೆಮಕ್ಕಳು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....