Homeಮುಖಪುಟಬಿಡುಗಡೆಯಾಗದ ವಸತಿ ಯೋಜನೆ ಹಣ, ಅಪೂರ್ಣವಾದ ಮನೆಗಳು: ಈಡೇರದ ಗುಡಿಸಲು ಮುಕ್ತ ಭರವಸೆ

ಬಿಡುಗಡೆಯಾಗದ ವಸತಿ ಯೋಜನೆ ಹಣ, ಅಪೂರ್ಣವಾದ ಮನೆಗಳು: ಈಡೇರದ ಗುಡಿಸಲು ಮುಕ್ತ ಭರವಸೆ

ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಮಂಜೂರಾಗಿರುವ ಮನೆ ನಿರ್ಮಾಣ ಕಾಮಗಾರಿಗಳು ಸ್ಥಗಿತ ಗೊಂಡಿದ್ದು ವಿವಿಧ ಹಂತದ ನಿರ್ಮಾಣದಲ್ಲೇ ನಿಂತುಹೋಗಿವೆ. ಫಲಾನುಭವಿಗಳಿಗೆ ಹಣ ಬಿಡುಗಡೆಗೊಳಿಸಬೇಕಾದ ಸರ್ಕಾರ ಜವಾಬ್ದಾರಿ ಮತ್ತು ಕರ್ತವ್ಯವನ್ನು ಮರೆತಂತೆ ಕಾಣುತ್ತಿದೆ. 

- Advertisement -
- Advertisement -

ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿರುವ ಮನೆಗಳ ಕಾಮಗಾರಿ ಸ್ಥಗಿತಗೊಂಡಿದೆ. ಹಣ ಬಿಡುಗಡೆಯಾಗದೆ ಕಾಮಗಾರಿಗಳು ಅರ್ಧಕ್ಕೆ ನಿಂತುಹೋಗಿವೆ. ಇಂದಿರಾಗಾಂಧೀ ವಸತಿ ಯೋಜನೆ, ಅಟಲ್ ವಸತಿ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ ಹೀಗೆ ವಿವಿಧ ವಸತಿ ಯೋಜನೆಗಳಲ್ಲಿ  2019-20ನೇ ಸಾಲಿನಲ್ಲಿ 9 ಲಕ್ಷಕ್ಕೂ ಹೆಚ್ಚು ಮನೆಗಳು ಮಂಜೂರಾಗಿ ಸರ್ಕಾರ ಹಣ ನೀಡದೆ ಮನೆ ನಿರ್ಮಾಣ ಕಾಮಗಾರಿ ಕುಂಠಿತಗೊಂಡಿದೆ. ವಸತಿ ಸಚಿವರು ಮೇ 14ರಂದು ವಾರದಲ್ಲೇ ಹಣ ಬಿಡುಗಡೆ ಮಾಡುವುದಾಗಿ ನೀಡಿದ್ದ ಭರವಸೆ ಮೂರು ತಿಂಗಳು ಕಳೆದರೂ ಈಡೇರಿಲ್ಲ.

ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಮಂಜೂರಾಗಿದ್ದ ಮನೆಗಳು ಪೂರ್ಣಗೊಂಡು ಫಲಾನುಭವಿಗಳು ಮಳೆ-ಗಾಳಿ-ಬಿಸಿಲಿನಿಂದ ರಕ್ಷಣೆ ಪಡೆದಿದ್ದಾರೆ. ಆದರೆ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಮಂಜೂರಾಗಿರುವ ಮನೆ ನಿರ್ಮಾಣ ಕಾಮಗಾರಿಗಳು ಸ್ಥಗಿತ ಗೊಂಡಿದ್ದು ವಿವಿಧ ಹಂತದ ನಿರ್ಮಾಣದಲ್ಲೇ ನಿಂತುಹೋಗಿವೆ. ಫಲಾನುಭವಿಗಳಿಗೆ ಹಣ ಬಿಡುಗಡೆಗೊಳಿಸಬೇಕಾದ ಸರ್ಕಾರ ಜವಾಬ್ದಾರಿ ಮತ್ತು ಕರ್ತವ್ಯವನ್ನು ಮರೆತಂತೆ ಕಾಣುತ್ತಿದೆ.

ನಿವೇಶನರಹಿತ ಮತ್ತು ಮನೆರಹಿತ ಬಡವರಿಗೆ ಸೂರು ಕಲ್ಪಿಸುವ ಭರವಸೆ ನೀಡಿದ ಯಡಿಯೂರಪ್ಪ ಸರ್ಕಾರ ಇದೀಗ ಬಾಕಿ ಹಣ ಬಿಡುಗಡೆ ಮಾಡದೆ ಮೌನಕ್ಕೆ ಜಾರಿದೆ. ಹಾಗಾಗಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮನೆ ನಿರ್ಮಾಣ ಕಾಮಗಾರಿಗಳು ಅಪೂರ್ಣಗೊಂಡಿವೆ. ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ನಾವು ಮನೆ ಸೇರಿಕೊಳ್ಳುತ್ತೇವೆ ಎಂದು ಹುಮ್ಮಸ್ಸಿನಿಂದ ಮನೆ ಕಟ್ಟಿಸಲು ಮುಂದಾದ ಜನರು ಸಾಲಸೋಲ ಮಾಡಿ ಹಣ ಹೊಂದಿಸಿದ್ದರು. ಆದರೆ ಕಳೆದ ಒಂದು ವರ್ಷದಿಂದ ಕೇವಲ ಪಾಯದ ಹಂತಕ್ಕೆ ಮಾತ್ರ ಹಣ ಬಿಡುಗಡೆ ಆಗಿದೆ ಎಂದು ಆರೋಪಿಸಿದ್ದಾರೆ.

ಫಲಾನುಭವಿಗಳಿಗೆ ನಾಲ್ಕು ಹಂತದಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ. ಪಾಯದ ಹಂತಕ್ಕೆ 43 ಸಾವಿರ ರೂ ಬಿಡುಗಡೆಯಾಗಿದೆ. ಆದರೆ ನಂತರದ ಹಂತಗಳಿಗೆ ಹಣ ಬಿಡುಗಡೆಯಾಗಿಲ್ಲ. ಫಲನುಭವಿಗಳು ಪಾಯ, ಗೋಡೆ, ಮೇಲ್ಛಾವಣೆ, ಮತ್ತು ಮನೆ ಪೂರ್ಣಗೊಳಿಸಲು ಮೊದಲೇ ಹಣ ಸುರಿಯಬೇಕು. ಬಡವರಾಗಿರುವ ಫಲಾನುಭವಿಗಳು ಇದಕ್ಕಾಗಿ ಸಾಲ ಮಾಡಿದ್ದಾರೆ. ಸಾವಿರಾರು ರೂಪಾಯಿ ಸಾಲ ಮಾಡಿ ತಮ್ಮ ಸಾಮರ್ಥ್ಯಕ್ಕೆ ತಕ್ಕಹಾಗೆ ಪಾಯ, ಗೋಡೆ, ಟಾಪ್ ಹಂತದವರೆಗೂ ಮನೆ ನಿರ್ಮಿಸಿಕೊಂಡಿದ್ದಾರೆ. ಸಾಲ ನೀಡಿದವರು ಸಾಲಕ್ಕೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಸಾಲ ಪಡೆದವರು ಹಣ ನೀಡಲು ಬೇರೆ ಮಾರ್ಗಗಳೇ ಇಲ್ಲವಾಗಿದೆ.

ಪ್ರತಿ ಮನೆ ನಿರ್ಮಾಣಕ್ಕೂ ರಾಜ್ಯ ಸರ್ಕಾರ 75 ಸಾವಿರ, ಕೇಂದ್ರ ಸರ್ಕಾರ 50 ಸಾವಿರ ಹೀಗೆ ಒಟ್ಟು 1.25 ಲಕ್ಷ ರೂ ಫಲಾನುಭವಿಗೆ ನೀಡುತ್ತದೆ. ಅಂದರೆ ಈ ಹಣವನ್ನು ನಾಲ್ಕು ಹಂತದಲ್ಲಿ ನೀಡಲಾಗುತ್ತದೆ.

ರಾಜ್ಯ ಸರ್ಕಾರ 9.74ಲಕ್ಷ ಮನೆಗಳನ್ನು 10,194 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಇನ್ನೂ ಒಂದು ಹೆಜ್ಞೆ ಮುಂದೆ ಹೋಗಿರುವ ಸಚಿವ ಸೋಮಣ್ಣ ಮತ್ತೆ 1.25 ಲಕ್ಷ ಮನೆಗಳನ್ನು ಮಂಜೂರು ಮಾಡುತ್ತೇವೆ ಎಂದು ಜೂನ್ 1ರಂದು ಹೇಳಿದ್ದರು. ಆದರೆ ಈಗ ಮಂಜೂರು ಮಾಡಿರುವ ಮನೆಗಳೇ ಪೂರ್ಣಗೊಂಡಿಲ್ಲ. ಹಣವೂ ಬಿಡುಗಡೆ ಮಾಡಿಲ್ಲ. ಮತ್ತೆ ಒಂದು ಲಕ್ಷ ಮನೆಗಳಿಗೆ ಹಣ ಎಲ್ಲಿಂದ ತರುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿಗೆ 4 ಸಾವಿರ ಕೋಟಿ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿತ್ತು. ಸಚಿವ ಸೋಮಣ್ಣನವರು ಮೇ 14, 2020ರಂದು ಪ್ರಜಾವಾಣಿ ಪೋನ್ ಇನ್ ಕಾರ್ಯಕ್ರಮದಲ್ಲಿ ಫಲನುಭವಿಯೊಬ್ಬರ ಕರೆಗೆ ಉತ್ತರಿಸಿ ಇನ್ನೊಂದು ವಾರದಲ್ಲಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಮೂರು ತಿಂಗಳು ಕಳೆದರೂ ಹಣ ಬಿಡುಗಡೆಯಾಗಿಲ್ಲ. ಹಣ ಬಿಡುಗಡೆ ಮಾಡುವ ಭರವಸೆ ದೊರೆಯುತ್ತಿದೆಯೇ ಹೊರತು ಕೊಟ್ಟ ಮಾತನ್ನು ಸರ್ಕಾರ ಉಳಿಸಿಕೊಂಡಿಲ್ಲ ಎಂಬುದು ಜನರ ದೂರು.

ಗ್ರಾಮಗಳನ್ನು ಗುಡಿಸಲು ಮುಕ್ತಗೊಳಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಹಟ್ಟಿಗಳಲ್ಲಿ ಇಂದಿಗೂ ಗುಡಿಸಲು ಮನೆಗಳಲ್ಲೇ ಬಡಕುಟುಂಬಗಳು ವಾಸಿಸುತ್ತಿವೆ. ಗೊಲ್ಲರಹಟ್ಟಿಗಳು, ಹಾಡಿಗಳು, ಆದಿವಾಸಿಗಳು, ಕೊಳಗೇರಿಗಳು ವಾಸಿಸುವ ಪ್ರದೇಶಗಳಲ್ಲಿ ಗುಡಿಸಲುಗಳು ಬಿಟ್ಟರೆ ಇಟ್ಟಿಗೆಯ ಮೆನಗಳನ್ನು ನೋಡುವುದು ಅಪರೂಪ. ಗುಡಿಸಲುಗಳಲ್ಲಿ ವಾಸಿಸುವ ಬಡಕುಟುಂಬಗಳು ಮಳೆಗಾಲದಲ್ಲಿ ಸೋರು ಮನೆಗಳಲ್ಲೇ ಜೀವನ ದೂಡುವಂತಹ ಪರಿಸ್ಥಿತಿ ಇದೆ. ಸರ್ಕಾರದ ವಸತಿ ಯೋಜನೆಗಳು ಇಂಥವರ ಬಾಳಿಗೆ ಆಸರೆ ಆಗುವುದು ಗಗನ ಕುಸುಮವಾಗಿದೆ.

ವಸತಿ ಸಚಿವರು ಹಿಂದಿನ ಸರ್ಕಾರಗಳಲ್ಲಾದ ಲೋಪದೋಷಗಳನ್ನು ಮುಂದುಮಾಡಿಕೊಂಡು ಟೀಕಿಸುವುದು ಬಿಟ್ಟು ನಿಜವಾದ ಫಲನುಭರಿಗಳಿಗೆ ಸೂರು ಕಲ್ಪಿಸುವತ್ತ ಮುಂದಾಗಬೇಕು. ಫಲನುಭವಿಗಳಿಗೆ ಶೀಘ್ರ ಹಣ ಬಿಡುಗಡೆ ಮಾಡಿ ಬಡಕುಟುಂಬಗಳ ನೆರವಿಗೆ ಬರಬೇಕು. ಸಾಲದಲ್ಲಿ ನರಳುತ್ತಿರುವ ಕುಟುಂಬಗಳನ್ನು ಪಾರು ಮಾಡುವ ಕೆಲಸ ಸರ್ಕಾರದಿಂದ ಅಗಬೇಕಾಗಿದೆ.


ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಪಟ್ಟು: ಬೆಳಗಾವಿ, ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....