ಮಾಜಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗೆಗಿನ ಕಾಂಗ್ರೆಸ್ ಇತಿಹಾಸಕ್ಕೆ ಸಂಬಂಧಿಸಿದ ಭಾಗಗಳನ್ನು 12 ನೇ ತರಗತಿಯ ಪಠ್ಯಕ್ರಮದಿಂದ ಉತ್ತರ ಪ್ರದೇಶದ ಶಿಕ್ಷಣ ಮಂಡಳಿ ಕೈಬಿಟ್ಟಿದೆ. ಈ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್ ವಿರೋಧಿಸಿದ್ದು, ಪಠ್ಯಕ್ರಮ ಕೈಬಿಡುವ ಕ್ರಮದಿಂದ ಹಿಂದಕ್ಕೆ ಸರಿಯದಿದ್ದರೆ ರಾಜ್ಯಾದ್ಯಮತ ಆಂದೋಲನಕ್ಕೆ ಕರೆ ಕೊಡುವುದಾಗಿ ಎಚ್ಚರಿಕೆ ನೀಡಿದೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಕಾಂಗ್ರೆಸ್ ಮುಖಂಡ ಅನಿಲ್ ಶಾಸ್ತ್ರಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲ ಆನಂದಿ ಬೆನ್ ಪಟೇಲ್ ಅವರಿಗೆ ಭಾನುವಾರ ಸಂಜೆ ಪತ್ರ ಬರೆದಿದ್ದು, ಆ ಭಾಗಗಳನ್ನು ಪಠ್ಯಕ್ರಮದಲ್ಲಿ ಪುನಃ ಸೇರಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನು “ಪಿತೂರಿ” ಎಂದು ಕರೆದ ಅನಿಲ್ ಶಾಸ್ತ್ರಿ, ’ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಸ್ವಾತಂತ್ರ್ಯದ ನಂತರ ದೇಶದ ರಚನೆಯಲ್ಲಿ ಕಾಂಗ್ರೆಸ್ ಕೊಡುಗೆಯನ್ನು ತೊಡೆದುಹಾಕಲು ಬಯಸುತ್ತಿವೆ’ ಎಂದು ಕಿಡಿಕಾರಿದ್ದಾರೆ.
ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಲಲ್ಲು, ಅನಿಲ್ ಶಾಸ್ತ್ರಿ ಬರೆದ ಪತ್ರವನ್ನು ಅರಿತುಕೊಂಡು ಕ್ರಮ ತೆಗೆದುಕೊಳ್ಳುವಲ್ಲಿ ಸರ್ಕಾರ ವಿಫಲವಾದರೆ, ಅವರು ಈ ವಿಷಯದ ವಿರುದ್ಧ ಆಂದೋಲನ ನಡೆಸುತ್ತೇವೆ ಎಂದಿದ್ದಾರೆ.
“ದೇಶದ ಮಕ್ಕಳು ನೆಹರೂ-ಶಾಸ್ತ್ರಿಗಳ (ಪರಂಪರೆಯ) ಬಗ್ಗೆ ತಿಳಿದುಕೊಳ್ಳದಿದ್ದರೆ, ಇತಿಹಾಸದ ಬಗ್ಗೆ ಏನು ಕಲಿಯುತ್ತಾರೆ” ಎಂದು ಅವರು ಪ್ರಶ್ನಿಸಿದ್ದಾರೆ. “ಇದೆಲ್ಲವೂ ಸರ್ಕಾರದ ಆದೇಶದ ಮೇರೆಗೆ ನಡೆಯುತ್ತಿದೆ. ಯುಪಿ ಕಾಂಗ್ರೆಸ್ ಇದನ್ನು ಬಹಿರಂಗವಾಗಿ ವಿರೋಧಿಸುತ್ತದೆ” ಎಂದು ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಶಾಲೆ ನಡೆಯುವ ಅವಧಿ ಕಡಿತಗೊಂಡಿದ್ದರಿಂದ 9-12 ತರಗತಿಗಳಿಂದ ಪಠ್ಯಕ್ರಮದ ತರ್ಕಬದ್ಧಗೊಳಿಸುವಿಕೆಯ ಭಾಗವಾಗಿ ಕೆಲ ಪಠ್ಯಕ್ರಮಗಳನ್ನು ಕೈಬಿಡಲಾಗಿದೆ ಎಂದು ಮಂಡಳಿ ತಿಳಿಸಿದೆ.
ಕಾಂಗ್ರೆಸ್, ನೆಹರೂ ಮತ್ತು ಶಾಸ್ತ್ರಿಗೆ ಸಂಬಂಧಿಸಿದ ಭಾಗಗಳು ಯುನಿಟ್ ಬಿ ಎಂಬ ವಿಭಾಗದ ಅಡಿಯಲ್ಲಿ 12 ನೇ ತರಗತಿಯ ಪಠ್ಯಕ್ರಮದ ಒಂದು ಭಾಗವಾಗಿದ್ದವು. ಇದು ‘ಸ್ವತಂತ್ರ ಭಾರತದಲ್ಲಿ ರಾಜಕೀಯ’ ಎಂಬ ಪಠ್ಯದ ಭಾಗವಾಗಿತ್ತು.
’’ಏಕ ಪಕ್ಷ (ಕಾಂಗ್ರೆಸ್) ಪ್ರಾಬಲ್ಯದ ಹಂತ, ಮೊದಲ ಮೂರು ಸಾರ್ವತ್ರಿಕ ಚುನಾವಣೆಗಳು, ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪ್ರಾಬಲ್ಯದ ಸ್ವರೂಪ, ಕಾಂಗ್ರೆಸ್ ಕಾರ್ಯವೈಖರಿಗೆ ಸವಾಲುಗಳು, ನೆಹರೂ ಮತ್ತು ಶಾಸ್ತ್ರಿ ನಂತರದ ಸಾಮಾನ್ಯ ಮಾದರಿಗಳು, 1967 ರ ಚುನಾವಣೆ, ಕಾಂಗ್ರೆಸ್ ವಿಭಜನೆ ಮತ್ತು ಮರು ಸಂಘಟನೆ ಮತ್ತು 1971ರ ಚುನಾವಣೆಯಲ್ಲಿ ಪಕ್ಷದ ಗೆಲುವು’’ ಮುಂತಾದವುಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ.
ಇವುಗಳನ್ನಷ್ಟೇ ಅಲ್ಲದೇ ಇನ್ನೂ ಇತರೆ ವಿಷಯಗಳನ್ನು ಕೈಬಿಡಲಾಗಿದೆ. ವಿಲಿಯಂ ಷೇಕ್ಸ್ಪಿಯರ್ನ ಭವ್ಯ ಕೃತಿ ‘ಮರ್ಚೆಂಟ್ ಆಫ್ ವೆನಿಸ್’ ಅನ್ನು 12 ನೇ ತರಗತಿಯ ಇಂಗ್ಲಿಷ್ ಪಠ್ಯಕ್ರಮದಿಂದ ಕೈಬಿಡಲಾಗಿದ್ದು, ಜನಪ್ರಿಯ ವಿಡಂಬನಕಾರ ಹರಿಶಂಕರ್ ಪಾರ್ಸಾಯಿ ಬರೆದ ‘ನಿಂಡಾ ರಾಸ್’ ಎಂಬ ವಿಡಂಬನೆಯನ್ನು 12 ನೇ ತರಗತಿ ಹಿಂದಿ ಪಠ್ಯಕ್ರಮದಿಂದ ಕೈಬಿಡಲಾಗಿದೆ.
ಚುನಾವಣಾ ರಾಜಕೀಯ, ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗೆ ಸಂಬಂಧಿಸಿದ ಭಾಗಗಳನ್ನು ಸಮಾಜ ವಿಜ್ಞಾನದ 10 ನೇ ತರಗತಿಯ ಪಠ್ಯಕ್ರಮದಿಂದ ಕೈಬಿಡಲಾಗಿದ್ದು, ಚುನಾವಣಾ ರಾಜಕೀಯ ಮತ್ತು ಚುನಾವಣಾ ಸುಧಾರಣೆಗಳನ್ನು 11 ನೇ ತರಗತಿಯ ಪಠ್ಯಕ್ರಮದಿಂದ ಕೈಬಿಡಲಾಗಿದೆ.
ನಾಜಿಸಂನ ಉದಯ’, ಹಿಟ್ಲರ್ ಮತ್ತು ಹರಪ್ಪನ್ ನಾಗರಿಕತೆಯ ವಿಷಯಗಳನ್ನು 12 ನೇ ತರಗತಿಯ ಇತಿಹಾಸ ಪಠ್ಯಕ್ರಮದಿಂದ ಕೈಬಿಡಲಾಗಿದೆ.
ಕಳೆದ ವಾರ ಮಂಡಳಿಯ ಕಾರ್ಯದರ್ಶಿ ದಿವ್ಯಾ ಕಾಂತ್ ಶುಕ್ಲಾ ಮಾಧ್ಯಮಗಳೊಂದಿಗೆ ನಡೆದ ಸಂವಹನದಲ್ಲಿ, ಈ ಎಲ್ಲ ವಿಷಯಗಳನ್ನು ಪಠ್ಯಕ್ರಮದಿಂದ ತೆಗೆದುಹಾಕಲಾಗಿದೆಯೆ ಹೊರತು ಪಠ್ಯಪುಸ್ತಕಗಳಿಂದಲ್ಲ. “ಅವುಗಳನ್ನು ಓದಲು ಬಯಸುವವರಿಗೆ ಅವು ತುಂಬಾ ಲಭ್ಯವಿದೆ” ಎಂದು ಅವರು ಹೇಳಿದ್ದಾರೆ.
ಸಾಂಕ್ರಾಮಿಕ ರೋಗದಿಂದಾಗಿ ವಿದ್ಯಾರ್ಥಿಗಳಿಗೆ ಬಹಳ ಕಡಿಮೆ ತರಗತಿಗಳು ನಡೆದವು, ಅದಕ್ಕಾಗಿಯೇ ಅವರ ಪರೀಕ್ಷೆಗಳ ಪಠ್ಯಕ್ರಮವನ್ನು ಕಡಿಮೆ ಮಾಡಲಾಗಿದೆ ಎಂದು ಶುಕ್ಲಾ ಹೇಳಿದರು.
ಈ ವಿಷಯದಲ್ಲಿ ಎದ್ದಿರುವ ಆಕ್ಷೇಪಣೆಗಳ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
“ಸರ್ಕಾರದ ನಿಜವಾದ ಉದ್ದೇಶವು ಸ್ಪಷ್ಟವಾಗಿದೆ, ಇಲ್ಲದಿದ್ದರೆ ಅಂತಹ ಪ್ರಮುಖ ಅಧ್ಯಾಯಗಳನ್ನು ಹೇಗೆ ಬಿಡಬಹುದು? ಮೊದಲ ಮೂರು ಸಾರ್ವತ್ರಿಕ ಚುನಾವಣೆಗಳ ಬಗ್ಗೆ ಮಕ್ಕಳು ತಿಳಿದುಕೊಳ್ಳದಿದ್ದರೆ, ಅವರು ದೇಶದ ಚುನಾವಣಾ ಇತಿಹಾಸವನ್ನು ಹೇಗೆ ಗ್ರಹಿಸಲು ಸಾಧ್ಯವಾಗುತ್ತದೆ” ಎಂದು ಅನಿಲ್ ಶಾಸ್ತ್ರಿ ಪ್ರಶ್ನಿಸಿದ್ದಾರೆ.
ಈ ನಡುವೆ ಕರ್ನಾಟಕದಲ್ಲಿಯೂ ಕೂಡ ಟಿಪ್ಪು ಸುಲ್ತಾನ್ ಬಗೆಗಿನ ಪಠ್ಯಗಳನ್ನು ಕೈಬಿಟ್ಟಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: ರಾಜಸ್ಥಾನ: ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿ, ಇಲ್ಲ ಪಕ್ಷದ ಸದಸ್ಯತ್ವ ರದ್ದು – ಮಾಯಾವತಿ


