HomeಮುಖಪುಟMGNREGA ಬದಲು VB-G Ram G : ರಾಜ್ಯಗಳ ಮೇಲೆ 40 ಶೇಕಡ ಆರ್ಥಿಕ ಹೊರೆ

MGNREGA ಬದಲು VB-G Ram G : ರಾಜ್ಯಗಳ ಮೇಲೆ 40 ಶೇಕಡ ಆರ್ಥಿಕ ಹೊರೆ

ಯೋಜನೆಯಿಂದ ಮಹಾತ್ಮಾ ಗಾಂಧಿ ಹೆಸರು ಮಾಯ!

- Advertisement -
- Advertisement -

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2005ರಲ್ಲಿ ಜಾರಿಗೆ ತಂದ ಮಹತ್ವಕಾಂಕ್ಷೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಮತ್ತು ಅದರಡಿ ರೂಪಿಸಲಾದ ನರೇಗಾ ಯೋಜನೆಯ ಹೆಸರನ್ನು ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ನರೇಗಾ ಕಾಯ್ದೆಯ ಹೆಸರು ಬದಲಿಸುವ ವಿಕಸಿತ್ ಭಾರತ್ – ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 ಅನ್ನು (ವಿಬಿ–ಜಿ ರಾಮ್ ಜಿ ಮಸೂದೆ) ಈ ವಾರ ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕಾಯ್ದೆಯ ಅಡಿ ನರೇಗಾ ಯೋಜನೆಯ ಹೆಸರನ್ನು ‘ಪೂಜ್ಯ ಬಾಪು ಗ್ರಾಮೀಣ್ ರೋಜ್‌ಗಾರ್ ಯೋಜನಾ’ ಎಂದು ಬದಲಿಸಲು ಪ್ರಸ್ತಾಪಿಸಲಾಗಿದೆ.

ಹೊಸ ಕಾನೂನು ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಒಂದು ಹಣಕಾಸು ವರ್ಷದಲ್ಲಿ ಪ್ರಸ್ತುತ ಖಾತರಿಪಡಿಸಿರುವ ವೇತನ ಸಹಿತ ಕೆಲಸ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಿಸಲಿದೆ. ಆದರೆ, ಇದೇ ವೇಳೆ ಕಾಯ್ದೆಯು ರಾಜ್ಯಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹೊರಿಸಲಿದೆ. ರಾಜ್ಯಗಳು ಯೋಜನೆಯ ಆರ್ಥಿಕ ಜವಾಬ್ದಾರಿಯಲ್ಲಿ ಹೆಚ್ಚಿನ ಪಾಲನ್ನು ಭರಿಸಬೇಕಾಗುತ್ತದೆ.

ಕೇಂದ್ರ ಸರ್ಕಾರ ಪ್ರತಿ ರಾಜ್ಯಕ್ಕೆ ಯೋಜನೆಯಡಿ ಸಿಗುವ ಹಣದ ಮೊತ್ತವನ್ನು ಮುಂಗಡವಾಗಿ ನಿರ್ಧರಿಸುವುದು ಹೊಸ ಕಾನೂನಿನ ಇನ್ನೊಂದು ನಿಬಂಧನೆಯಾಗಿದೆ. ಇದು ‘ನಿಯಮಾತ್ಮಕ’ (normative) ಆಧಾರದ ಮೇಲೆ ಇರುತ್ತದೆ. ಅಂದರೆ, ಕೆಲವು ನಿಗದಿತ ನಿಯತಾಂಕಗಳು (ಉದಾ: ಜನಸಂಖ್ಯೆ, ಬಡತನ ಮಟ್ಟ, ಇತ್ಯಾದಿ) ಆಧರಿಸಿ ಎಂದು ವರದಿಗಳು ಹೇಳಿವೆ.

ಪ್ರಸ್ತಾವಿತ ಮಸೂದೆಯ ಪ್ರಕಾರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಯೋಜನೆಯ ಆರ್ಥಿಕ ವೆಚ್ಚವನ್ನು 60:40 ಅನುಪಾತದಲ್ಲಿ ಭರಿಸಲಿವೆ. ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಸೇರಿದಂತೆ ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸಿನ ಹಂಚಿಕೆಯು 90:10 ಅನುಪಾತದಲ್ಲಿ ಇರುತ್ತದೆ.

ಪ್ರಸ್ತುತ ಅಸ್ತಿತ್ವದಲ್ಲಿರುವ ನರೇಗಾ ಯೋಜನೆಯಲ್ಲಿ ಅನಕುಶಲ ಕೈಕೆಲಸದ ಕೂಲಿಯನ್ನು ಸಂಪೂರ್ಣವಾಗಿ (ಶೇ.100) ಕೇಂದ್ರ ಸರ್ಕಾರ ಭರಿಸುತ್ತಿದೆ. ವಸ್ತು ವೆಚ್ಚದಲ್ಲಿ (material costs) ಕೇಂದ್ರ ಸರ್ಕಾರ ಶೇಕಡ 75 ಮತ್ತು ರಾಜ್ಯಗಳು ಶೇಕಡ 25 ಪಾಲನ್ನು ಹೊಂದಿವೆ. ಕುಶಲ ಮತ್ತು ಅರೆಕುಶಲ ಕೆಲಸಗಾರರ ಕೂಲಿಯಲ್ಲಿ ಶೇಕಡ 75ರಷ್ಟು ಕೇಂದ್ರ ಭರಿಸುತ್ತಿದೆ. ಹೊಸ ಮಸೂದೆಯು ಹಣಕಾಸಿನ ಹಂಚಿಕೆಯನ್ನು ಬದಲಾಯಿಸುತ್ತದೆಯಾದರೂ, ನರೇಗಾ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಸೂಚಿಸಲಾದ ಅಸ್ತಿತ್ವದಲ್ಲಿರುವ ವೇತನ ದರಗಳನ್ನು ಹಾಗೆಯೇ ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ.

ಪ್ರಸ್ತಾವಿತ ಮಸೂದೆಯು ಯೋಜನೆಯ ಮೇಲ್ವಿಚಾರಣೆ, ಪರಿಶೀಲನೆ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೇಂದ್ರ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿ ಮತ್ತು ರಾಜ್ಯ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿಗಳ ರಚನೆಗೆ ಅವಕಾಶ ನೀಡುತ್ತದೆ. ಇದರ ಜೊತೆಗೆ, ಪ್ರಮಾಣಿತ ಹಂಚಿಕೆಗಳು (Normative Allocation) ಏಕಪಕ್ಷೀಯ (One Sided) ಮತ್ತು ಇತರ ಕಾರ್ಯಾಚರಣೆಯ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಶಿಫಾರಸು ಮಾಡಲು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ಟೀರಿಂಗ್ ಸಮಿತಿಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ.

ಮತ್ತೊಂದು ಪ್ರಮುಖ ನಿಬಂಧನೆಯೆಂದರೆ, ರಾಜ್ಯಗಳಿಗೆ ಕೃಷಿ ಋತುಗಳ ಗರಿಷ್ಠ ಅವಧಿಯಲ್ಲಿ ಯೋಜನೆಯ ಅನುಷ್ಠಾನವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಅವಕಾಶ ನೀಡುತ್ತದೆ. ಕೃಷಿ ಕಾರ್ಮಿಕರ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಯೋಜನೆಯಡಿಯಲ್ಲಿ ಕೆಲಸಗಳನ್ನು ಕೈಗೊಳ್ಳದ ಬಿತ್ತನೆ ಮತ್ತು ಕೊಯ್ಲು ಋತುಗಳನ್ನು ಒಳಗೊಂಡ ನಿರ್ದಿಷ್ಟ ಅವಧಿಗಳನ್ನು ತಿಳಿಸಲು ಮಸೂದೆ ರಾಜ್ಯಗಳಿಗೆ ಅಧಿಕಾರ ನೀಡುತ್ತದೆ.

ಮಹಿಳೆಯರು, ವೃದ್ಧರು, ಅಂಗವಿಕಲರು ಮತ್ತು ದುರ್ಬಲಗೊಳಿಸುವ ಕಾಯಿಲೆಗಳಿಂದ ಬಳಲುತ್ತಿರುವವರು ಸೇರಿದಂತೆ ದುರ್ಬಲ ಗುಂಪುಗಳಿಗೆ ಸೂಕ್ತವಾದ ಕೆಲಸದ ವರ್ಗಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಲು ವಿಶೇಷ ದರಗಳ ವೇಳಾಪಟ್ಟಿಯನ್ನು ಮಸೂದೆ ಪ್ರಸ್ತಾಪಿಸುತ್ತದೆ.

ಇದಲ್ಲದೆ, ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಉದ್ಯೋಗ ಒದಗಿಸದಿದ್ದರೆ ದೈನಂದಿನ ನಿರುದ್ಯೋಗ ಭತ್ಯೆಯ ನಿಬಂಧನೆಯನ್ನು ಮಸೂದೆ ಉಳಿಸಿಕೊಂಡಿದೆ. ನಿರುದ್ಯೋಗ ಭತ್ಯೆ ಮತ್ತು ವಿಳಂಬ ಪರಿಹಾರದ ವೆಚ್ಚವನ್ನು ರಾಜ್ಯ ಸರ್ಕಾರಗಳು ಭರಿಸುತ್ತವೆ. ಕೆಲಸಗಾರರ ಹಾಜರಾತಿ ಪಟ್ಟಿ ಮುಚ್ಚಿದ 15 ದಿನಗಳ ಒಳಗೆ ವೇತನವನ್ನು ಪಾವತಿಸದ ಸಂದರ್ಭಗಳಲ್ಲಿ, ಹದಿನಾರನೇ ದಿನದಿಂದ ಪಾವತಿಸದ ವೇತನದ 0.05 ಪ್ರತಿಶತದಷ್ಟು ದರದಲ್ಲಿ ಪರಿಹಾರವನ್ನು ಪಡೆಯಲು ಕಾರ್ಮಿಕರಿಗೆ ಅರ್ಹತೆ ಇರುತ್ತದೆ.

ಪ್ರಸ್ತಾವಿತ ಮಸೂದೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐ (ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್, “ಸರ್ಕಾರವು ಹಕ್ಕು ಆಧಾರಿತ ಖಾತರಿ ಕಾನೂನಿನ ಆತ್ಮವನ್ನು ತೆಗೆದುಹಾಕಿ, ಸರ್ಕಾರಗಳು ಮತ್ತು ಕಾರ್ಮಿಕರ ವಿರುದ್ಧ ಸಿದ್ದಪಡಿಸಲಾದ ಷರತ್ತುಬದ್ಧ, ಕೇಂದ್ರ ನಿಯಂತ್ರಿತ ಯೋಜನೆಯನ್ನು ಜಾರಿಗೆ ತರುತ್ತಿದೆ” ಎಂದು ಹೇಳಿದ್ದಾರೆ.

“125 ಕೆಲಸದ ದಿನಗಳು’ ಎಂಬುವುದು ಹೆಡ್‌ಲೈನ್ ಮಾತ್ರ. ಇದು ಆಕರ್ಷಣೆಗೆ ಒಡ್ಡುವ ಸುದ್ದಿಯಾದರೆ, 60:40 ಎಂಬುದು ಸಣ್ಣ ಅಕ್ಷರಗಳಲ್ಲಿರುವ ನಿಜವಾದ ವಿವರವಾಗಿದೆ. ನರೇಗಾ ಯೋಜನೆಯಲ್ಲಿ ಅನಕುಶಲ ಕೆಲಸಗಳ ಕೂಲಿಯನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆದರೆ, ಹೊಸ ಯೋಜನೆಯು ತೆಗೆದು ಹಾಕಿ ರಾಜ್ಯಗಳು ಶೇ.40ರಷ್ಟು ಹೊರೆ ಹೊರರುವಂತೆ ಮಾಡಲಿದೆ. ಇದರಿಂದ ರಾಜ್ಯಗಳು ಈಗ ಸುಮಾರು 50,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಕೇರಳ ರಾಜ್ಯ ಏಕಾಏಕಿ ಹೆಚ್ಚುವರಿ 2,000 ದಿಂದ 2,500 ಕೋಟಿ ರೂಪಾಯಿಗಳ ಹೊರೆ ಹೊರಬೇಕಾಗುತ್ತದೆ. ಇದು ಸುಧಾರಣೆಯಲ್ಲ, ಬದಲಿಗೆ ರಾಜ್ಯಗಳ ಮೇಲೆ ಗುಪ್ತವಾಗಿ ಹಣದ ಹೊರೆ ಹೇರುವ ತಂತ್ರವಾಗಿದೆ. ರಾಜ್ಯಗಳು ಹೆಚ್ಚು ಹಣ ಖರ್ಚು ಮಾಡಬೇಕು, ಕೇಂದ್ರ ಸರ್ಕಾರ ಹೊಣೆಗಾರಿಕೆಯಿಂದ ದೂರ ಸರಿದು ನಿಂತುಕೊಂಡು ಕೀರ್ತಿ ಮಾತ್ರ ಪಡೆಯಬೇಕು ಎಂಬುವುದು ಹೊಸ ಒಕ್ಕೂಟ ವ್ಯವಸ್ಥೆ” ಎಂದು ಜಾನ್ ಬ್ರಿಟ್ಟಾಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

“ನರೇಗಾ ಬೇಡಿಕೆ ಆಧಾರಿತವಾಗಿದೆ. ಒಬ್ಬ ಕೆಲಸಗಾರ ಕೆಲಸ ಕೇಳಿದರೆ ಕೇಂದ್ರ ಸರ್ಕಾರವೇ ಕೂಲಿ ಪಾವತಿಸಬೇಕಿತ್ತು. ಆದರೆ, ಹೊಸ ಯೋಜನೆಯು ಇದನ್ನು ಬದಲಾಯಿಸಿ ಕೇಂದ್ರ ಸರ್ಕಾರ ಮುಂಗಡ ಹಣ ಹಂಚಿಕೆ ನಿಯಮಗಳು ಮತ್ತು ಮಿತಿಗಳನ್ನು ನಿಗದಿಪಡಿಸುತ್ತದೆ. ಇದರ ಪ್ರಕಾರ, ಹಣ ಮುಗಿದರೆ ಜನರ ಹಕ್ಕುಗಳೂ ಮುಗಿದಂತೆ. ಹಾಗಾಗಿ, ಇದು ಕಾನೂನುಬದ್ಧ ಉದ್ಯೋಗ ಖಾತ್ರಿಯನ್ನು ರಾಜ್ಯಗಳ ವೆಚ್ಚದಲ್ಲಿ ನಿರ್ವಹಣೆ ಮಾಡಿ ಕೇಂದ್ರ ಸರ್ಕಾರ ಪುಕ್ಕಟೆ ಪ್ರಚಾರ ಪಡೆಯುವ ಯೋಜನೆಯಾಗಿ ಕನಿಷ್ಠ ಮಟ್ಟಕ್ಕೆ ಇಳಿಸಲಾಗಿದೆ” ಎಂದು ಜಾನ್ ಬ್ರಿಟ್ಟಾಸ್ ಟೀಕಿಸಿದ್ದಾರೆ.

“ಹೊಸ ಕಾನೂನು ಪಂಚಾಯತ್‌ಗಳು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕಡೆಗಣಿಸಲಿದೆ. ಗ್ರಾಮೀಣ ಕಾರ್ಮಿಕರನ್ನು ಡ್ಯಾಶ್ ಬೋರ್ಡ್‌ಗೆ ಸೀಮಿತಗೊಳಿಸಲಿದೆ. ನರೇಗಾ ಯೋಜನೆಯು ಸ್ಥಳೀಯ ಅಗತ್ಯಗಳ ಆಧಾರದ ಮೇಲೆ ಕೆಲಸಗಳನ್ನು ಯೋಜಿಸಲು ಗ್ರಾಮ ಸಭೆಗಳು ಮತ್ತು ಪಂಚಾಯತ್‌ಗಳಿಗೆ ಅಧಿಕಾರ ನೀಡಿತ್ತು. ಆದರೆ, ಹೊಸ ಯೋಜನೆ ಜಿಐಎಸ್‌ ಉಪಕರಣಗಳು, ಪಿಎಂ ಗತಿಶಕ್ತಿ ಲೇಯರ್‌ಗಳು ಮತ್ತು ಕೇಂದ್ರೀಯ ಡಿಜಿಟಲ್ ಸ್ಟ್ಯಾಕ್‌ಗಳನ್ನು ಕಡ್ಡಾಯಗೊಳಿಸುತ್ತದೆ. ಸ್ಥಳೀಯ ಆದ್ಯತೆಗಳನ್ನು ವಿಕಸಿತ ಭಾರತ್ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟ್ಯಾಕ್ ಮೂಲಕ ಫಿಲ್ಟರ್ ಮಾಡಲಾಗುತ್ತದೆ. ಇದು ಬಯೋಮೆಟ್ರಿಕ್, ಜಿಯೋ-ಟ್ಯಾಗಿಂಗ್, ಡ್ಯಾಶ್‌ಬೋರ್ಡ್‌ಗಳು ಮತ್ತು ಎಐ ಆಡಿಟ್‌ಗಳನ್ನು ಕಾನೂನುಬದ್ಧಗೊಳಿಸುತ್ತದೆ. ಈ ಮೂಲಕ ಲಕ್ಷಾಂತರ ಗ್ರಾಮೀಣ ಕಾರ್ಮಿಕರಿಗೆ ತಾಂತ್ರಿಕ ಸಮಸ್ಯೆಗಳನ್ನು ಉಂಟು ಮಾಡಲಿದೆ. ಅವರನ್ನು ಯೋಜನೆಯಿಂದ ಹೊರಗಟ್ಟಲಿದೆ” ಎಂದಿದ್ದಾರೆ.

“ಹೊಸ ಕಾನೂನು ಯೋಜನೆಯ ವಿಕೇಂದ್ರೀಕರಣವನ್ನು ಕೇಂದ್ರೀಕರಿಸಲಿದೆ. ಜನರು ಡೇಟಾ ಪಾಯಿಂಟ್‌ಗಳಾಗುತ್ತಾರೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

“ಹೊಸ ಕಾನೂನಿನ ಇನ್ನೊಂದು ಕೆಟ್ಟ ನಿಬಂಧನೆ ಎಂದರೆ, ಕೃಷಿ ಋತುಗಳ ಹೆಸರಿನಲ್ಲಿ ಪ್ರತಿ ವರ್ಷ 60 ದಿನಗಳವರೆಗೆ ಕೆಲಸವನ್ನು ಸ್ಥಗಿತಗೊಳಿಸುವುದು” ಎಂದಿರುವ ಬ್ರಿಟ್ಟಾಸ್, “ಇದು ಉದ್ಯೋಗ ಖಾತರಿಯೇ..ಇಲ್ಲ ಕಾರ್ಮಿಕರ ನಿಯಂತ್ರಣವೇ?” ಎಂದು ಪ್ರಶ್ನಿಸಿದ್ದಾರೆ. “ಈ ನಿಬಂಧನೆಯ ಮೂಲಕ ಕಾರ್ಮಿಕರಿಗೆ ಕೆಲಸ ಮಾಡಬೇಡಿ, ಹಣ ಸಂಪಾದಿಸಬೇಡಿ, ಕಾಯಿರಿ ಎಂದು ಹೇಳಲಾಗುತ್ತದೆ. ಖಾಸಗಿ ಜಮೀನುಗಳಿಗೆ ಕಾರ್ಮಿಕರನ್ನು ತಳ್ಳಲು ಸಾರ್ವಜನಿಕ ಕೆಲಸಗಳನ್ನು ನಿಲ್ಲಿಸುವುದು ಕಲ್ಯಾಣವಲ್ಲ, ಇದು ಸರ್ಕಾರವೇ ಕಾರ್ಮಿಕರನ್ನು ಪೂರೈಸಿದಂತೆ. ಇದು ಕಾರ್ಮಿಕರ ವೇತನ, ಆಯ್ಕೆ ಮತ್ತು ಘನತೆಯನ್ನು ಕಸಿದುಕೊಳ್ಳುತ್ತದೆ” ಎಂದಿದ್ದಾರೆ.

ವಿಬಿ–ಜಿ ರಾಮ್ ಜಿ ಎಂದರೆ ಕೇಂದ್ರದ ನಿಯಂತ್ರಣ, ರಾಜ್ಯದ ಹಣ ಮತ್ತು ‍‍‍ಷರತ್ತುಗಳ ಮೂಲಕ ಜನರ ಹಕ್ಕುಗಳನ್ನು ನಿಯಂತ್ರಿಸುವುದಾಗಿದೆ. ಇದು ಕಾರ್ಮಿಕರ ಮೇಲೆ ಹೆಚ್ಚಿನ ಹೊರೆಯನ್ನು ಹೊರಿಸುತ್ತದೆಯೇ ಹೊರತು, ನರೇಗಾ ಯೋಜನೆಯನ್ನು ಸುಧಾರಿಸುವುದಿಲ್ಲ. ಆರ್ಥಿಕ, ಸಾಂಸ್ಥಿಕ ಮತ್ತು ನೈತಿಕವಾಗಿ ನರೇಗಾ ಯೋಜನೆಯನ್ನು ಹಾಳು ಮಾಡುತ್ತದೆ. ರಾಮ್ ಹೆಸರಿನಲ್ಲಿ, ರಾಜ್ಯಗಳು ಮತ್ತು ಬಡವರನ್ನು ದಂಡಿಸಲಾಗುತ್ತಿದೆ. ಹಕ್ಕು, ಅಧಿಕಾರವನ್ನು ಕಸಿದುಕೊಳ್ಳಲಾಗುತ್ತಿದೆ. ಆರ್ಥಿಕ ಹೊರೆಯನ್ನು ರಾಜ್ಯಗಳ ಮೇಲೆ ಹೊರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುತ್ತಿದೆ ಎಂದು ಜಾನ್ ಬ್ರಿಟ್ಟಾಸ್ ಹೇಳಿದ್ದಾರೆ.

ರಾಜ್ಯಗಳ ಮೇಲೆ ಹೆಚ್ಚಿನ ಹೊರೆ- ಬಿಜೆಪಿ ಮಿತ್ರ ಪಕ್ಷ ಟಿಡಿಪಿ

ಪ್ರಸ್ತಾವಿತ ಕಾನೂನಿನ ಬಗ್ಗೆ ಎನ್‌ಡಿಎ ಒಕ್ಕೂಟದ ಬಿಜೆಪಿ ಮಿತ್ರ ಪಕ್ಷ ಟಿಡಿಪಿ ಪ್ರತಿಕ್ರಿಯೆ ನೀಡಿದೆ. ಈ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿರುವ ಆಂಧ್ರ ಪ್ರದೇಶದ ಹಣಕಾಸು, ಯೋಜನೆ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪಯ್ಯಾವುಲ ಕೇಶವ್, “ಪ್ರಸ್ತಾವಿತ ಕಾನೂನನ್ನು ನಾವು ಒಪ್ಪುತ್ತೇವೆ. ಆದರೆ, ಅದರಲ್ಲಿನ ಹಣಕಾಸಿನ ಹಂಚಿಕೆಯ ಕುರಿತ ನಿಯಮಗಳು ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಹೊರಿಸುವಂತಿದೆ. ಹಾಗಾಗಿ, ನಾವು ಕಾನೂನನ್ನು ಪರಿಶೀಲಿಸಬೇಕಿದೆ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...