ನವದೆಹಲಿ: ದೆಹಲಿ ವಿಶ್ವವಿದ್ಯಾಲಯದಲ್ಲಿ (DU) ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲಾತಿ ನೀತಿಗಳ ಅನುಷ್ಠಾನದಲ್ಲಿ ಗಂಭೀರ ಲೋಪಗಳನ್ನು ಸಂಸದೀಯ ಸಮಿತಿಯೊಂದು ಎತ್ತಿ ತೋರಿಸಿದೆ. ರೋಸ್ಟರ್ ನಿರ್ವಹಣೆಯಲ್ಲಿ 2013ರ ಬದಲಾವಣೆಯು SC/ST ಪ್ರಾತಿನಿಧ್ಯದಲ್ಲಿ ಅಸಮತೋಲನಕ್ಕೆ ಕಾರಣವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದ್ದು, ಈ ಸಮಸ್ಯೆಯನ್ನು ಸರಿಪಡಿಸಲು ಹಳೆಯ, ಇಲಾಖಾ ಮಟ್ಟದ ರೋಸ್ಟರ್ ವ್ಯವಸ್ಥೆಗೆ ಮರಳಬೇಕೆಂದು ಶಿಫಾರಸು ಮಾಡಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕುರಿತ ಈ ಸಮಿತಿಯು ತನ್ನ 50 ಪುಟಗಳ ವರದಿಯನ್ನು ಆಗಸ್ಟ್ 7 ರಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿದೆ. ಈ ವರದಿಯು, ಏಪ್ರಿಲ್ 11, 2025 ರಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸ್ಥಳೀಯ ಅಧ್ಯಯನ ಮತ್ತು ಅಧಿಕಾರಿಗಳು, ಶಿಕ್ಷಕರ ಸಂಘಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಭೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.
ರೋಸ್ಟರ್ ವ್ಯವಸ್ಥೆಯಲ್ಲಿನ ಲೋಪಗಳು:
2013 ರವರೆಗೆ, DU ನ ಪ್ರತಿಯೊಂದು ಶೈಕ್ಷಣಿಕ ವಿಭಾಗವು ತನ್ನದೇ ಆದ ಮೀಸಲಾತಿ ರೋಸ್ಟರ್ ಅನ್ನು ನಿರ್ವಹಿಸುತ್ತಿತ್ತು. ಆದರೆ, UGC ಮತ್ತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸೂಚನೆಯ ಮೇರೆಗೆ, ವಿಶ್ವವಿದ್ಯಾಲಯ-ವ್ಯಾಪಿ ರೋಸ್ಟರ್ ವ್ಯವಸ್ಥೆಗೆ ಬದಲಾವಣೆ ಮಾಡಲಾಯಿತು. ಈ ಬದಲಾವಣೆಯು ಸಮಸ್ಯಾತ್ಮಕವಾಗಿದೆ ಎಂದು ಸಮಿತಿ ಹೇಳಿದೆ. ಹಳೆಯ ವ್ಯವಸ್ಥೆಯಲ್ಲಿ ಮೀಸಲು ಹುದ್ದೆಗಳು ಎಲ್ಲಾ ವಿಭಾಗಗಳಲ್ಲಿ ಹರಡಿದ್ದವು. ಆದರೆ ಹೊಸ ವ್ಯವಸ್ಥೆಯಲ್ಲಿ, ಮೀಸಲುರಹಿತ ಹುದ್ದೆಗಳನ್ನು ಮೀಸಲು ಹುದ್ದೆಗಳಾಗಿ ಪರಿವರ್ತಿಸಿದ್ದರಿಂದ ಕೆಲವು ಇಲಾಖೆಗಳಲ್ಲಿ ಮೀಸಲಾತಿ ಹುದ್ದೆಗಳ ಸಂಖ್ಯೆ ಹೆಚ್ಚಿ, ಮತ್ತೆ ಕೆಲವು ಇಲಾಖೆಗಳು ಪ್ರಾತಿನಿಧ್ಯವಿಲ್ಲದೆ ಉಳಿದಿವೆ ಎಂದು ವರದಿ ತಿಳಿಸಿದೆ.
ರೋಸ್ಟರ್ ಬದಲಾವಣೆಯ ನಂತರ ಮೀಸಲುರಹಿತ ಹುದ್ದೆಗಳು 522 ರಿಂದ 402ಕ್ಕೆ ಇಳಿದಿವೆ. ಅದೇ ಸಮಯದಲ್ಲಿ, SC ಹುದ್ದೆಗಳು 98 ರಿಂದ 119 ಕ್ಕೆ ಮತ್ತು ST ಹುದ್ದೆಗಳು 40 ರಿಂದ 59 ಕ್ಕೆ ಏರಿವೆ. ಈ ಹುದ್ದೆಗಳ ಸಂಖ್ಯೆ ಹೆಚ್ಚಾಗಿದ್ದರೂ, ಅನೇಕ ಹುದ್ದೆಗಳು ಇನ್ನೂ ಖಾಲಿಯಾಗಿಯೇ ಉಳಿದಿವೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.
ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸೂಚನೆ:
ವರ್ಷಗಳಿಂದ ಭರ್ತಿಯಾಗದೆ ಉಳಿದಿರುವ SC/ST ಬ್ಯಾಕ್ಲಾಗ್ ಹುದ್ದೆಗಳ ಕುರಿತು ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ. ಮೀಸಲಾತಿಯ ಉದ್ದೇಶವನ್ನು ಈ ವಿಳಂಬಗಳು ದುರ್ಬಲಗೊಳಿಸುತ್ತಿವೆ ಎಂದು ಹೇಳಿರುವ ಸಮಿತಿಯು, “ಎಲ್ಲಾ ಬ್ಯಾಕ್ಲಾಗ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮೂರು ತಿಂಗಳೊಳಗೆ ವಿಶೇಷ ನೇಮಕಾತಿ ಅಭಿಯಾನಗಳನ್ನು ನಡೆಸಬೇಕು” ಎಂದು ಕಟ್ಟುನಿಟ್ಟಾಗಿ ಶಿಫಾರಸು ಮಾಡಿದೆ.
ಅಲ್ಲದೆ, ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಟು ಅಡ್-ಹಾಕ್ ಬೋಧಕವರ್ಗ ಹುದ್ದೆಗಳಲ್ಲಿ SC/ST ಪ್ರಾತಿನಿಧ್ಯ ಇಲ್ಲದಿರುವ ಬಗ್ಗೆ ಸಮಿತಿ ಗಮನ ಸೆಳೆದಿದೆ. ಇಂತಹ ಹುದ್ದೆಗಳನ್ನು ನಿಯಮಿತಗೊಳಿಸುವಾಗ SC/ST ಅಭ್ಯರ್ಥಿಗಳಿಗೆ ವಯಸ್ಸು ಮತ್ತು ಅರ್ಹತೆಯಲ್ಲಿ ಸಡಿಲಿಕೆಗಳನ್ನು ನೀಡುವಂತೆ ಸಮಿತಿ ಶಿಫಾರಸು ಮಾಡಿದೆ.
ವಿದ್ಯಾರ್ಥಿ ಪ್ರವೇಶಾತಿ ಮತ್ತು ಬೋಧಕ ಸಿಬ್ಬಂದಿಯ ಸ್ಥಿತಿಗತಿ:
ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ವಿಶ್ವವಿದ್ಯಾಲಯವು ಸರ್ಕಾರಿ ನಿಯಮಗಳನ್ನು ಸಾಮಾನ್ಯವಾಗಿ ಪಾಲಿಸುತ್ತಿದೆ. 2024-25 ರ ಅಂಕಿಅಂಶಗಳ ಪ್ರಕಾರ, ಪದವಿಪೂರ್ವ ಪ್ರವೇಶಾತಿಯಲ್ಲಿ SC ವಿದ್ಯಾರ್ಥಿಗಳು 15.44% ಮತ್ತು ST ವಿದ್ಯಾರ್ಥಿಗಳು 4.14% ಇದ್ದಾರೆ. ಸ್ನಾತಕೋತ್ತರ ಮತ್ತು ಪಿಎಚ್ಡಿ ಹಂತಗಳಲ್ಲಿಯೂ ಮೀಸಲಾತಿ ನಿಯಮಗಳನ್ನು ಪಾಲಿಸಲಾಗಿದೆ. ಆದರೆ ಕೆಲವು ಕಾರ್ಯಕ್ರಮಗಳಲ್ಲಿ ಇನ್ನೂ ಅಂತರಗಳಿವೆ ಎಂದು ವರದಿ ಹೇಳಿದೆ.
ಮಾರ್ಚ್ 31, 2025 ರಂತೆ, DU ನಲ್ಲಿ 995 ಬೋಧಕ ಸಿಬ್ಬಂದಿಯಿದ್ದು, ಅವರಲ್ಲಿ 129 (12.96%) SC ಮತ್ತು 56 (5.62%) ST ಆಗಿದ್ದಾರೆ. ಪ್ರಾಧ್ಯಾಪಕರ ಹಂತದಲ್ಲಿ SC ಪ್ರಾತಿನಿಧ್ಯ 9.09% ಮತ್ತು ST ಪ್ರಾತಿನಿಧ್ಯ ಕೇವಲ 1.51% ರಷ್ಟಿದೆ. ಇದಕ್ಕೆ ಕಾರಣ “ST ಅಭ್ಯರ್ಥಿಗಳಿಂದ ಸೀಮಿತ ಅರ್ಜಿಗಳು” ಎಂದು ಬೋಧಕವರ್ಗದ ಸ್ಥಿತಿಯ ಕುರಿತು ಸಮಿತಿ ಉಲ್ಲೇಖಿಸಿದೆ.
ಕುಂದುಕೊರತೆ ನಿವಾರಣೆಗೆ SC/ST ಸೆಲ್ ಕಡ್ಡಾಯ:
DU ನಲ್ಲಿ SC/ST ಸೆಲ್ ಕಾರ್ಯನಿರ್ವಹಿಸುತ್ತಿದ್ದರೂ, ಅದರ ಅಂಗಸಂಸ್ಥೆ ಮತ್ತು ಘಟಕ ಕಾಲೇಜುಗಳಲ್ಲಿ ಇಂತಹ ಯಾವುದೇ ಘಟಕವಿಲ್ಲದಿರುವುದು ಸಮಿತಿಯ ಕಳವಳಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಕುಂದುಕೊರತೆಗಳನ್ನು ನಿವಾರಿಸಲು ಮತ್ತು ಮೀಸಲಾತಿ ಜಾರಿಗೊಳಿಸಲು “ಎಲ್ಲಾ ಅಂಗಸಂಸ್ಥೆ ಕಾಲೇಜುಗಳಲ್ಲಿ SC/ST ಸೆಲ್ಗಳನ್ನು ಕಡ್ಡಾಯಗೊಳಿಸಬೇಕು” ಎಂದು ಸಮಿತಿ ಶಿಫಾರಸು ಮಾಡಿದೆ.
ಸಮಿತಿಯ ಶಿಫಾರಸುಗಳು ಈಗ ಕೇಂದ್ರ ಶಿಕ್ಷಣ ಸಚಿವಾಲಯದ ಪರಿಶೀಲನೆಗೆ ಹೋಗಿದ್ದು, ಸಚಿವಾಲಯವು ಇದರ ಬಗ್ಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಈ ಶಿಫಾರಸುಗಳು ಜಾರಿಯಾದರೆ, ದೆಹಲಿ ವಿಶ್ವವಿದ್ಯಾಲಯದ ನೇಮಕಾತಿ ಮತ್ತು ಪ್ರವೇಶಾತಿ ನೀತಿಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಇದು ಇದೇ ರೀತಿಯ ನೀತಿಗಳನ್ನು ಅನುಸರಿಸುತ್ತಿರುವ ಇತರ ಕೇಂದ್ರ ಸಂಸ್ಥೆಗಳ ಮೇಲೂ ಪರಿಣಾಮ ಬೀರಬಹುದು.
ಸಮಿತಿಯ ಪ್ರಮುಖ ಶಿಫಾರಸುಗಳು
ಈ ಸಮಸ್ಯೆಗಳನ್ನು ಪರಿಹರಿಸಲು ಸಮಿತಿಯು ಕೆಲವು ಶಿಫಾರಸುಗಳನ್ನು ಮಾಡಿದೆ:
*ಕಟ್-ಆಫ್ ಮಾರ್ಕ್ಗಳನ್ನು ಕಡಿಮೆ ಮಾಡುವುದು: ಮೀಸಲಾತಿ ಹುದ್ದೆಗಳು ಖಾಲಿ ಉಳಿಯದಂತೆ ಪ್ರವೇಶ ಕಟ್-ಆಫ್ ಮಾರ್ಕ್ಗಳನ್ನು “ಗಮನಾರ್ಹವಾಗಿ” ಕಡಿಮೆ ಮಾಡಬೇಕು.
*ಎಸ್ಸಿ/ಎಸ್ಟಿ ಸೆಲ್ ಸುಧಾರಣೆ: ವಿಶ್ವವಿದ್ಯಾಲಯಕ್ಕೆ ಕೇವಲ ಒಂದು ಎಸ್ಸಿ/ಎಸ್ಟಿ ಸೆಲ್ ಇದ್ದು, ಅದಕ್ಕೆ ಸಿಬ್ಬಂದಿ ಕೊರತೆ ಇದೆ. ಇದನ್ನು ಬಲಪಡಿಸುವಂತೆ ಸಮಿತಿ ಹೇಳಿದೆ.
*ಶುಲ್ಕ ಮನ್ನಾ: ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅಗತ್ಯವಿದ್ದರೆ, ಸರ್ಕಾರವು ಎಲ್ಲಾ ಬೋಧನಾ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ಮನ್ನಾ ಮಾಡಬೇಕು.
*ಗ್ರೀವಾನ್ಸ್ ಕಮಿಟಿ ರಚನೆ: ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರವೇಶ ಕುಂದುಕೊರತೆ ಸಮಿತಿಗಳನ್ನು ರಚಿಸಬೇಕು.
ಒಳಮೀಸಲಾತಿ ತಕ್ಷಣ ಜಾರಿಗೆ ಆಗ್ರಹ: ಮುಖ್ಯಮಂತ್ರಿಯವರಿಗೆ ದೇವನೂರು ಮಹಾದೇವ ಬಹಿರಂಗ ಪತ್ರ


