ತುಮಕೂರು ನಗರದಲ್ಲಿ ಕೆಲ ಯುವಕರ ಬೈಕ್ ವೀಲಿಂಗ್ ಮತ್ತು ಹುಚ್ಚು ಸಾಹಸದ ಚಟುವಟಿಕೆಗಳು ಹದ್ದು ಮೀರಿದೆ. ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟು ಹಲವರನ್ನು ಬಂಧಿಸಿದ್ದರೂ ಈ ಅಪಾಕಾರಿ ಬೈಕ್ ವೀಲಿಂಗ್ ನಡೆದೇ ಇದೆ. ಮೊಬೈಲ್ ಗಳಲ್ಲಿ ಇಂತಹ ರೋಮಾಂಚನಕಾರಿ ವಿಡಿಯೋಗಳನ್ನು ನೋಡುವ ಯುವಕರು ತಾವೂ ಕೂಡ ಹಾಗೆ ಮಾಡುವ ಕ್ರಿಯೆಯಲ್ಲಿ ತೊಡಗಿದ್ದಾರೆ.
ಕುಣಿಗಲ್ ಮುಖ್ಯರಸ್ತೆ, ಸದಾಶಿವನಗರ, ಸೋಮೇಶ್ವರಪುರಂ ಮುಖ್ಯರಸ್ತೆ, ಉಪ್ಪಾರಹಳ್ಳಿ, ರಿಂಗ್ ರಸ್ತೆ ಹೀಗೆ ತುಮಕೂರಿನ ಹೊರವಲಯ ಮತ್ತು ನಗರದ ಮಧ್ಯ ಭಾಗದ ಜನನಿಬಿಡ ರಸ್ತೆಗಳಲ್ಲಿ ಸಾಹಸಕಾರಿ ಬೈಕ್ ರೈಡಿಂಗ್ ಮತ್ತು ಅತಿ ವೇಗ ಜೋರು ಶಬ್ದ ಬರುವಂತೆ ಬೈಕ್ ಓಡಿಸುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ.
ಇದರಿಂದ ರಸ್ತೆಯಲ್ಲಿ ಹೋಗುವ ಇತರ ಬೈಕ್ ಸವಾರರು ಹೆದರಿಕೊಂಡು ದಾರಿ ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ಬೈಕ್ ಸವಾರರು ಮೇಲೆ ಬರಬಹುದೆಂಬ ಕಾರಣದಿಂದ ದಾರಿ ಬಿಡಲು ಹೋಗಿ ಬಿದ್ದಿದ್ದಾರೆ. ಪಾದಚಾರಿಗಳು ಮತ್ತು ಸಾಮಾನ್ಯರು ಈ ಕರ್ಕಶ ಶಬ್ದ ಕೇಳಲಾರದೆ ಬಾಯಿಗೆ ಬಂದಂತೆ ಬೈಯ್ಯುವುದು ಉಂಟು.
ಇಂತಹ ಕೃತ್ಯದಲ್ಲಿ ತೊಡಗುವ ಯುವಕರ ತಂದೆ-ತಾಯಿ ಮತ್ತು ಪೋಷಕರು ಕೂಡ ತಮ್ಮ ಮಕ್ಕಳಿಗೆ ಬುದ್ದಿ ಹೇಳುವಂತಹ ಕೆಲಸ ಮಾಡಬೇಕು. ಇಲ್ಲದಿದ್ದರೆ ಹುಚ್ಚು ಸಾಹಸ ಮಾಡಲು ಹೋಗಿ ಜೀವಕ್ಕೆ ಸಂಚಕಾರ ತಂದುಕೊಳ್ಳಬಹುದು ಇಲ್ಲವೇ ಅಪಘಾತವಾಗಿ ಕೈಕಾಲು ಕಳೆದುಕೊಳ್ಳಬಹುದು. ತಾವು ಜೀವಕ್ಕೆ ಹಾನಿ ತಂದುಕೊಳ್ಳುವ ಜೊತೆಗೆ ಬೇರೆಯವರ ಜೀವಕ್ಕೂ ಕುತ್ತು ತರುತ್ತಾರೆ. ಹೀಗಾಗಿ ಬುದ್ಧಿ ಹೇಳಿ ಅವರು ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರ ವಹಿಸುವುದು ಒಳ್ಳೆಯದು.
ಇನ್ನೊಂದೆಡೆ ಬೈಕ್ ಚಾಲಕ ವೇಗವಾಗಿ ಓಡಿಸಿದರೆ ಹಿಂದೆ ಕುಳಿತ ಯುವಕರು ಬೈಕ್ ಸೀಟಿನ ಮೇಲೆ ನಿಂತು ಕೇಕೆ ಹೊಡೆಯುತ್ತಾ ಹೋಗುತ್ತಾರೆ. ಇದು ಅವರಿಗೆ ರಂಜನೆಯ ವಿಷಯವಾದರೆ ಬೇರೆಯವರಿಗೆ ಅಪಾಯ ತಂದೊಡ್ಡುವುದು ಆಗಿದೆ. ಬೈಕ್ ರೈಡಿಂಗ್ ವಿಡಿಯೋ ವೈರಲ್ ಆಗಿರುವುದು ಪರಿಶೀಲಿಸಿದ ತುಮಕೂರು ಪೊಲೀಸರು ಎಂಟು ಜನ ಯುವಕರನ್ನು ಬಂಧಿಸಿದ್ದಾರೆ. ನಾಲ್ಲು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಬುದ್ದಿ ಹೇಳಿದ್ದಾರೆ.
ಇಂತಹ ಹುಚ್ಚುತನದ ಬೈಕ್ ವ್ಹೀಲಿಂಗ್ ನೋಡುವ ಮಕ್ಕಳೂ ಕೂಡ ತಾಸಿಸುವ ರಸ್ತೆಗಳಲ್ಲಿ ಸೈಕಲ್ ವ್ಹೀಲಿಂಗ್ ನಡೆಸುವುದು ಉಂಟು. ಮುಂದಿನ ಚಕ್ರವನ್ನು ಮೇಲಕ್ಕೆ ಎತ್ತಿ ಸೈಕಲ್ ತುಳಿಯುವುದು ತನ್ನ ಸ್ನೇಹಿತರನ್ನು ರಂಜಿಸುವುದು ನಡೆಯುತ್ತಲೇ ಇದೆ. ಇದನ್ನು ನೋಡಿಯೂ ಪೋಷಕರೂ ಮಕ್ಕಳನ್ನು ಗದರಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ. ಜನಬಿಡ ರಸ್ತೆಗಳಲ್ಲಿ ಇಂತಹ ಚಟುವಟಿಕೆಗಳು ನಡೆಯದಂತೆ ಪೊಲೀಸ್ ಇಲಾಖೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕು.ಪೋಷಕರು ಬುದ್ಧಿ ಹೇಳುವ ಕೆಲಸ ಮಾಡಬೇಕು.