ದೇಶವೇ ಬೆಚ್ಚಿ ಬೀಳಿಸುವಂತೆ ಕೊರೊನಾ ಎರಡನೇ ಅಲೆ ದೊಡ್ಡ ಪೆಟ್ಟು ನೀಡಿದ್ದರೂ ಜನರು ತಮ್ಮ ಸಣ್ಣತನ, ವಿಕೃತಿಗಳನ್ನು ನಿಲ್ಲಿಸಿಲ್ಲ. ಇಂದಿಗೂ ಜಾತಿದೌರ್ಜನ್ಯ, ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರಗಳು ಮುಂದುವರೆಯುತ್ತಲೇ ಇವೆ. ಇಂತಹದೇ ಕ್ರೂರ ದೌರ್ಜನ್ಯದ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.
ಅಪ್ರಾಪ್ತ ದಲಿತ ಬಾಲಕಿಯೊಬ್ಬಳಿಗೆ ದಂಪತಿಗಳಿಬ್ಬರು ಬಲವಂತವಾಗಿ ಮದ್ಯ ಕುಡಿಸಿ, ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದೆ.
ಜಲ್ಪೈಗುರಿ ಜಿಲ್ಲೆಯ ದುಪ್ಗುರಿ ಎಂಬ ಹಳ್ಳಿಯಲ್ಲಿ ಮನೆಗೆಲಸ ಮಾಡುತ್ತಿದ್ದ ದಲಿತ ಬಾಲಕಿಯ ಮೇಲೆ ಈ ದೌರ್ಜನ್ಯ ನಡೆದಿದ್ದು, ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಬಾಲಕಿ ನೀಡಿದ ದೂರಿದ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿ ಮಹಿಳೆ ಪ್ರತಿಮಾ ಸರ್ಕಾರ್ ಗಡಾಂಗರ್ ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದಾರೆ. ಆಕೆಯನ್ನು ಬಂಧಿಸಲಾಗಿದೆ. ಆಕೆಯ ಪತಿ ಪಾರ್ಥ ಸರ್ಕಾರ್ ಕೂಡ ಘಟನೆಯಲ್ಲಿ ಭಾಗಿಯಾಗಿದ್ದು ಸದ್ಯಕ್ಕೆ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಶೋಧ ನಡೆಯುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ದಲಿತ ಬಾಲಕಿ ಖಲೈಗ್ರಾಮ್ ಗ್ರಾಮದಲ್ಲಿರುವ ಆರೋಪಿಗಳ ಮನೆಯಲ್ಲಿ ಮನೆಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದಳು. ಘಟನೆಯ ನಂತರ ಆಕೆ, ವೋಟ್ ಪ್ಯಾರಾ ಹಾಟ್ ಎಂಬ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಅವರೊಂದಿಗೆ ತೆರಳಿ ದುಪ್ಗುರಿ ಪೊಲೀಸ್ ಠಾಣೆಯಲ್ಲಿ ಸರ್ಕಾರ್ ದಂಪತಿಗಳ ವಿರುದ್ದ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ದ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಘಟನೆಯನ್ನು ದಲಿತ್ ವಾಯ್ಸ್ ಸಂಘಟನೆ ತೀವ್ರವಾಗಿ ಖಂಡಿಸಿದೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಕೊಡಗು: ಪೊಲೀಸರ ದೌರ್ಜನ್ಯಕ್ಕೆ ಮಾನಸಿಕ ಅಸ್ವಸ್ಥ ಬಲಿ: ಎಂಟು ಪೊಲೀಸರ ಅಮಾನತು