ಲಸಿಕೆಗಳ ಬೆಲೆ ಕೇಂದ್ರ ಮತ್ತು ರಾಜ್ಯಗಳಿಗೆ ಒಂದೇ ಆಗಿರಬೇಕು ಮತ್ತು ಹೆಚ್ಚಿನ ಬೆಲೆಯನ್ನು ಈಗಾಗಲೇ ಭಾರಿ ಹಣದ ಕೊರತೆಯಿರುವ ರಾಜ್ಯಗಳ ಮೇಲೆ ವರ್ಗಾಯಿಸಬಾರದು ಎಂದು ಕಾಂಗ್ರೆಸ್ ಇಂದು ಹೇಳಿದೆ. ನಿನ್ನೆ ಸೋಮವಾರ 18 ರಿಂದ 45 ರವರೆಗಿನ ವಯಸ್ಸಿನವರಿಗೆ ಘೋಷಿಸಿದ ಲಸಿಕೆ ನೀತಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ದಾಳಿ ನಡೆಸಿದೆ.
“ಲಸಿಕೆ ತಯಾರಕರು ಲಾಭ ಬಯಸುವುದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ, ಆದರೆ ಕೇಂದ್ರವು ತನ್ನ ಜವಾಬ್ದಾರಿಯನ್ನು ತ್ಯಜಿಸಲು ಸಾಧ್ಯವಿಲ್ಲ” ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ. “ನಿಮಗೆ ಒಂದು ದೇಶ ಒಂದು ಮಾರುಕಟ್ಟೆ ಇತ್ಯಾದಿಯೆಲ್ಲ ಬೇಕು. ಹಾಗಾದರೆ ನಾವು ಒಂದೇ ದೇಶಕ್ಕೆ ಒಂದು ಬೆಲೆಯನ್ನು ಏಕೆ ಹೊಂದಲು ಸಾಧ್ಯವಿಲ್ಲ?’ ಎಂದು ಅವರು ಪ್ರಶ್ನಿಸಿದ್ದಾರೆ.
ಸೋಮವಾರ ಸಂಜೆ ಪ್ರಕಟಗೊಂಡ ಹೊಸ ನೀತಿಯಡಿಯಲ್ಲಿ, ಲಸಿಕೆ ತಯಾರಕರು ತಮ್ಮ ಮಾಸಿಕ ಉತ್ಪನ್ನದ ಶೇಕಡಾ 50 ರಷ್ಟು ಪ್ರಮಾಣವನ್ನು ಭಾರತ ಸರ್ಕಾರಕ್ಕೆ ಪೂರೈಸುತ್ತಾರೆ ಮತ್ತು ಉಳಿದ ಉತ್ಪನ್ನವನ್ನು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಗೆ ಪೂರೈಸಲು ಮುಕ್ತರಾಗಿದ್ದಾರೆ.
ಆದರೆ ಅವರು ಮೇ 1 ರ ಮೊದಲು ರಾಜ್ಯಗಳು ಮತ್ತು ಮುಕ್ತ ಮಾರುಕಟ್ಟೆಯ ಬೆಲೆಯನ್ನು ಘೋಷಿಸಬೇಕು ಎಂದು ಸರ್ಕಾರ ಹೇಳಿದೆ. ಇದು ಬೆಲೆ ವಿಷಯದ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ.
18 ರಿಂದ 45 ವರ್ಷದ ಪ್ರಜೆಗಳಿಗೆ ಏಕೆ ಉಚಿತ ಲಸಿಕೆ ಸಿಗುವುದಿಲ್ಲ ಎಂದು ಕಾಂಗ್ರೆಸ್ ನ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. “18-45 ವರ್ಷ ವಯಸ್ಸಿನವರಿಗೆ ಉಚಿತ ಲಸಿಕೆಗಳು ಇಲ್ಲ. ಬೆಲೆ ನಿಯಂತ್ರಣವಿಲ್ಲದೆ ಮಧ್ಯವರ್ತಿಗಳನ್ನು ನಡುವೆ ತರಲಾಗಿದೆ. ದುರ್ಬಲ ವರ್ಗದವರಿಗೆ ಲಸಿಕೆ ಗ್ಯಾರಂಟಿ ಇಲ್ಲ. ಇದು ಭಾರತ ಸರ್ಕಾರದ ಲಸಿಕೆ ತಾರತಮ್ಯ – ವಿತರಣಾ ತಂತ್ರವಲ್ಲ” ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
“ಜಿಎಸ್ಟಿ ಆದಾಯದಲ್ಲಿ ಕುಗ್ಗುವಿಕೆ, ಕಡಿಮೆ ತೆರಿಗೆ ಹಂಚಿಕೆ, ಅನುದಾನ ಕಡಿತ ಮತ್ತು ಹೆಚ್ಚಿದ ಸಾಲಗಳು- ಈ ಹೆಚ್ಚುವರಿ ಹೊರೆಗಳನ್ನು ರಾಜ್ಯಗಳು ಭರಿಸಬೇಕಾಗುತ್ತದೆ. ಈ ನಡುವೆ ಪಿಎಂ ಕೇರ್ಸ್ ಅಡಿಯಲ್ಲಿ ಸಂಗ್ರಹಿಸಲಾದ ಸಾವಿರಾರು ಕೋಟಿ ರೂಪಾಯಿಗಳನ್ನು ಎಲ್ಲಿ ನಿಯೋಜಿಸಲಾಗಿದೆ ಎಂದು ಯಾರಿಗೂ ತಿಳಿದಿಲ್ಲ, ” ಎಂದು ಚಿದಂಬರಂ ಮತ್ತು ರಣದೀಪ್ ಸುರ್ಜೇವಲಾ ಟ್ವೀಟ್ ಮಾಡಿದ್ದಾರೆ.
ಲಸಿಕೆಗಳು ಸೋಂಕನ್ನು ತಡೆಗಟ್ಟುವಲ್ಲಿ ಶೇಕಡಾ 100 ರಷ್ಟು ಪರಿಣಾಮಕಾರಿಯಲ್ಲದಿದ್ದರೂ, ಅವು ಅಪಾಯಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಆಮ್ಲಜನಕ, ಔಷಧಗಳು ಅಥವಾ ಆಸ್ಪತ್ರೆಗೆ ದಾಖಲು ಮಾಡುವ ಅಗತ್ಯವನ್ನು ನಿವಾರಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: 18-45 ವರ್ಷ ವಯಸ್ಸಿನವರಿಗೆ ಲಸಿಕೆ ಉಚಿತವಲ್ಲ: ಕೇಂದ್ರದ ತಾರತಮ್ಯಕ್ಕೆ ರಾಹುಲ್ ಗಾಂಧಿ ಆಕ್ಷೇಪ