ಕೋಮು ದಂಗೆ, ಕೊಲೆ ಎಲ್ಲೇ ನಡೆದರೂ ತಕ್ಷಣ ಹಿಂದೂ ನಾವೆಲ್ಲ ಒಂದು ಎಂದು ಪ್ರಚೋದನೆ ಹೇಳಿಕೆ ಕೊಡುತ್ತಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಸ್ವಕ್ಷೇತ್ರದ ಆದಿವಾಸಿ ಕೊರಗ ಸಮುದಾಯದ ಮೇಲೆ ಪೊಲೀಸರು ಲಾಠಿ ಬೀಸಿ ದೌರ್ಜನ್ಯ ನಡೆಸಿದರೂ ಸುಮ್ಮನೇಕಿದ್ದಾರೆ? ಹಲ್ಲೆಗೊಳಗಾದ ಕೊರಗರ ಮೇಲೆಯೆ ಪೊಲೀಸರು ದೂರು ದಾಖಲಿಸದರೂ ಮೌನ ವಹಿಸಿರುವುದು ಏಕೆ ಎಂದು ಉಡುಪಿ ಜಿಲ್ಲಾ ಸಿಪಿಎಂ ಪ್ರಶ್ನಿಸಿದೆ.
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ದೌರ್ಜನ್ಯಕ್ಕೊಳಗಾದ ಕೊರಗ ಕುಟುಂಬದ ಮದುವೆಯಲ್ಲಿ ಪಾಲ್ಗೊಂಡು ಸರ್ಕಾರ ನಿಮ್ಮ ಜತೆಗಿದೆ ಎಂದು ಸಾಂತ್ವನ ಹೇಳಿದ ಮರು ಕ್ಷಣವೆ ಕೊರಗರ ಮೇಲೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸುತ್ತಾರೆಂದರೆ ಏನರ್ಥ? ಸರ್ಕಾರಕ್ಕೆ ಪೊಲೀಸ್ ಇಲಾಖೆ ಮೇಲೆ ಹಿಡಿತವಿಲ್ಲವೆ? ದೂರು ನೀಡಿರುವ ಉರಾಳ ಎಂಬುವರು ಮತ್ತು ಕೊರಗ ಕುಟುಂಬದ ನಡುವೆ ಜಮೀನು ತಕರಾರಿದೆ ಎಂಬ ಮಾಹಿತಿಯಿದೆ. ಕೋಟತಟ್ಟು ಕೊರಗರ ಮೇಲೆ ನಡೆದ ಪೊಲೀಸ್ ದಾಳಿ ಪ್ರಕರಣ ದಿನ ಕಳೆದಂತೆ ಒಂದು ಪೂರ್ವ ಯೋಜಿತ ಕೃತ್ಯವೆಂಬಂತೆ ಕಂಡುಬರುತ್ತಿದೆ ಎಂದು ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.
ಸ್ಥಳೀಯ ಸಂಸದೆಯಾಗಿರುವ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ರಾಜ್ಯ ಬಿಜೆಪಿ ಸರ್ಕಾದ ಮೇಲೆ ಒತ್ತಡ ಹಾಕಿ, ತಪ್ಪಿತಸ್ಥ ಪೊಲೀಸರ ವಿರುದ್ದ ಕಠಿಣ ಕ್ರಮ ಜರುಗುವಂತೆ ನೋಡಿಕೊಳ್ಳಬೇಕು. ನೊಂದವರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೊರಗರ ಮೇಲೆಯೆ ಪ್ರಕರಣ: ಬಿಜೆಪಿಯ ಗುಪ್ತ ಅಜೆಂಡವೇ ಎಂದ ಸಿದ್ದರಾಮಯ್ಯ