Homeಅಂಕಣಗಳುಪುಟಕ್ಕಿಟ್ಟ ಪುಟಗಳುನಿರೀಶ್ವರವಾದದ ತಿಳಿವನ್ನು ಪಸರಿಸುತ್ತಿರುವ ’ದೇವರು ಎಂಬುದೇಕಿಲ್ಲ?’ ಪುಸ್ತಕ

ನಿರೀಶ್ವರವಾದದ ತಿಳಿವನ್ನು ಪಸರಿಸುತ್ತಿರುವ ’ದೇವರು ಎಂಬುದೇಕಿಲ್ಲ?’ ಪುಸ್ತಕ

- Advertisement -
- Advertisement -

ಸ್ಟೀಫನ್ ಹಾಕಿಂಗ್ ಹೇಳುವಂತೆ, “ದೇವರು ಇಲ್ಲ. ಯಾರೊಬ್ಬರೂ ವಿಶ್ವವನ್ನು ಸೃಷ್ಟಿಸಿಲ್ಲ. ಯಾರೊಬ್ಬರೂ ನಮ್ಮ ಹಣೆಬರಹವನ್ನು ನಿರ್ಧರಿಸಿಲ್ಲ.”

ಭಾರತವನ್ನೂ ಒಳಗೊಂಡಂತೆ ವಿಶ್ವಕ್ಕೆ ನಿರೀಶ್ವರವಾದವೇನೂ ಹೊಸತಲ್ಲ. ಆದರೆ, ನಾಸ್ತಿಕರು ಅಥವಾ ನಿರೀಶ್ವರವಾದಿಗಳೆಂದರೆ ಧಾರ್ಮಿಕರಿಗೆ, ಪುರೋಹಿತರಿಗೆ, ಮೌಲ್ವಿಗಳಿಗೆ, ಪಾದ್ರಿಗಳಿಗೆ ಅತ್ಯಂತ ಭಯ. ಅವರು ಯಾವುದರ ಆಧಾರದಿಂದ ಜನರ ಮೇಲೆ ಪ್ರಭುತ್ವ ಸಾಧಿಸಿರುತ್ತಾರೋ ಅದನ್ನೇ ಅಲ್ಲಗಳೆಯುವ ಮಂದಿ.

ದೇವರು ಸರ್ವಜ್ಞ, ಸರ್ವಶಕ್ತ ಮತ್ತು ಸರ್ವಾಂತರ್ಯಾಮಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಲೋಕದಲ್ಲಿ ಪ್ರಭುತ್ವದ ವಿಷಯದಲ್ಲಿ ದೇವರ ಸ್ಥಾನ ಅತ್ಯುನ್ನತ ಮತ್ತು ಅದ್ವಿತೀಯ. ಸರ್ವಶ್ರೇಷ್ಟವೆನ್ನುವ ಅವನ ಸ್ವಾಮಿತ್ವವನ್ನೇ ಧಿಕ್ಕರಿಸುತ್ತಿರುವವರೆಂದರೆ, ಅವರು ಇನ್ನು ಯಾವ ಪುರೋಹಿತ, ಮೌಲ್ವಿ ಮತ್ತು ಪಾದ್ರಿಯ ಯಜಮಾನಿಕೆಯನ್ನು ಒಪ್ಪುತ್ತಾರೆ?

ಹಾಗಾಗಿ ಧಾರ್ಮಿಕರಿಗೆ ಅಥವಾ ಅದರ ಲಾಂಛನದಲ್ಲಿ ಸರ್ವ ವ್ಯವಹಾರಗಳಲ್ಲಿ ನಿರತರಾಗಿರುವವರಿಗೆ, ಸಮಾಜದಲ್ಲಿ ಸ್ಥಾನಮಾನಾದಿಗಳಿಂದ ಮೆರೆಯುತ್ತಿರುವವರಿಗೆ ನಿರೀಶ್ವರವಾದಿಗಳು ಅಥವಾ ನಾಸ್ತಿಕರೆಂದೆನಿಸಿಕೊಂಡವರು ಅತ್ಯುಗ್ರಗಾಮಿಗಳಾಗಿ ಕಾಣುತ್ತಾರೆ.

ದೇವರ ಭಯವನ್ನೇ ಬಿಟ್ಟವನಿಗೆ ಇನ್ನಾವುದರ ಭಯ? ಸ್ವರ್ಗದ ಆಸೆಯಿಲ್ಲ, ನರಕದ ಅಂಜಿಕೆಯಿಲ್ಲ, ದೇವರ ನಂಬುಗೆ ಇಲ್ಲ; ಈ ಮನುಷ್ಯ ತನ್ನ ದೇವರು ಇಲ್ಲ ಹೇಗೆ ಎಂಬ ವಿಚಾರವನ್ನು ಮುಗ್ಧರಿಗೆ ಮುಟ್ಟಿಸುತ್ತಾನೆ. ಮೂರ್ಖರಿಗೆ ಎಚ್ಚರಿಸುತ್ತಾನೆ. ಈ ದೇವರ ಹೆಸರಿನಲ್ಲಿ ತಾವೆಷ್ಟು ಮೋಸ ಹೋಗುತ್ತಿದ್ದೇವೆ ಎಂದು ಅವರಿಗೆ ಅರಿವಾದರೆ ಧಾರ್ಮಿಕ ಡಂಭಾಚಾರಿಗಳ ವಿರುದ್ಧ ಸೆಟೆದು ನಿಲ್ಲುತ್ತಾರೆ. ಅವರ ಸುಳ್ಳುಕಂತೆಗಳನ್ನು ಸಾರಾಸಗಟಾಗಿ ಒಗೆದುಬಿಡುತ್ತಾರೆ. ದೇವರ ಹೆಸರಿನಲ್ಲಿ ನಿರ್ಮಾಣವಾಗಿರುವ ಇಡೀ ವ್ಯವಸ್ಥೆಯೇ ಕುಸಿದು ಬೀಳುತ್ತದೆ. ಅವರ ಧಾರ್ಮಿಕ ವ್ಯವಸ್ಥೆಯೇ ದೇವರ ತಳಹದಿಯ ಮೇಲೆ ನಿಂತಿರುವಾಗ ದೇವರೇ ಇಲ್ಲವೆಂಬುದು ಮನವರಿಕೆಯಾಗಿಬಿಟ್ಟರೆ, ಎಲ್ಲವೂ ಪತನಹೊಂದಿಬಿಡುತ್ತದೆ.

ಈಗ ಹಿಂದೂ ಪುರೋಹಿತರು, ಜ್ಯೋತಿಷಿಗಳು, ಸುಬ್ರಹ್ಮಣ್ಯ ಪೂಜೆ, ಗಣ ಹೋಮ, ನಾಗ ಶಾಂತಿ, ನವಗ್ರಹ ಶಾಂತಿಗಳೆಂಬುದೆಲ್ಲಾ ಮಾಡುವಾಗ, ಆ ಮೂಲ ಸಾಮಗ್ರಿಯಾದ ದೇವರೆಂಬ ಪರಿಕಲ್ಪನೆಯು ನಿರಾಕರಣೆಗೆ ಒಳಗಾಗಿಬಿಟ್ಟರೆ, ಇಷ್ಟು ದಿನ ಯಾವುದನ್ನು ನಿಜವೆಂದು ನಂಬಿಸಿಕೊಂಡು ಬಂದಿದ್ದರೋ ಅವೆಲ್ಲಾ ಹುಸಿ ಎಂದೂ, ಅದನ್ನು ನಂಬಿದ್ದವನೂ, ಆಚರಿಸಿದ್ದವನು ಮೂರ್ಖನೆಂದೂ, ಅವನ್ನು ಮಾಡಿಸಿದ್ದೆಲ್ಲವೂ ಶೋಷಣೆಯ ಒಂದು ಭಾಗವೆಂದೂ ಜ್ಞಾನೋದಯವಾಗಿಬಿಟ್ಟರೆ ಗತಿಯೇನು?

ಇನ್ನು ಕ್ರೈಸ್ತರಲ್ಲಿ ಕ್ರಿಸ್ತನೇ ತಾನು ದೇವರ ಮಗನೆಂದು ಹೇಳಿದ್ದಾನೆ. ದೇವರನ್ನು ತಂದೆಯೆಂದು ಹೇಳಿದ್ದಾನೆ. ಮನುಷ್ಯರ ಬಗ್ಗೆ ದೇವರ ಮುಂದಿನ ನಿರ್ಣಾಯಕ ದಿನದ ಬಗ್ಗೆ ಮಾತಾಡುತ್ತಾನೆ. ಆತ ಹುಟ್ಟಿದ್ದೂ ದೇವದೂತನ ಸಂದೇಶ ತಲುಪಿದ ಮೇಲೆ. ಮರಿಯಾ ಎಂಬ ಪವಿತ್ರ ಮತ್ತು ಅಕಳಂಕಿತ ಹೆಣ್ಣು ಸಂಭೋಗ ಎಂಬುವ ಪಾಪದ ಕೆಲಸವಿಲ್ಲದೆಯೇ ದೇವರ ವಾಕ್ಯದಿಂದಲೇ ಗರ್ಭ ಧರಿಸಿರುತ್ತಾಳೆ. ಮನುಷ್ಯ ದೇಹವನ್ನು ಹೊತ್ತ ಯೇಸು ಸತ್ತ ಮೇಲೆ ದೇವರ ಮಗನೂ ಆಗಿರುವ ಅವನು ಪುನರುತ್ಥಾನಗೊಳ್ಳುತ್ತಾನೆ. ಹೀಗೆಲ್ಲಾ ಇರುವಾಗ ದೇವರು ಇಲ್ಲವೆಂದು ಸಾಬೀತಾಗಿಬಿಟ್ಟರೆ ಪವಿತ್ರ ಮಾತೆ ಮರಿಯಾಳ ಚಾರಿತ್ರ್ಯದ ಬಗ್ಗೆ ಪ್ರಶ್ನೆ ಏಳುತ್ತದೆ. ಯೇಸುಕ್ರಿಸ್ತನು ಮಾತು ಮಾತಿಗೂ ತಂದೆ ತಂದೆ ಎಂದು ಹೇಳಿದ ದೇವರು ಇಲ್ಲವೆಂದಾಗ, ಆತನ ಇತರ ಮಾತುಗಳೆಲ್ಲಾ ಶುದ್ಧ ಬಕವಾಸ್ ಎಂದು ತೋರಿಬಿಡಬಹುದು. ಇಷ್ಟು ವರ್ಷಗಳು ಅತ್ಯಂತ ದೊಡ್ಡ ಸಮೂಹವೊಂದು ಯಾವುದೋ ಸುಳ್ಳನ್ನು ಪ್ರತಿಪಾದಿಸಿಕೊಂಡು ಬಂದಿದ್ದರು ಎಂದು ಅನ್ನಿಸಿಬಿಡಬಹುದು. ಆಗ ಕ್ರೈಸ್ತ ಧರ್ಮವೇ ಪತನಹೊಂದಿಬಿಡುತ್ತದೆ.

ಇನ್ನು ಇಸ್ಲಾಂನಲ್ಲಿ ರೂಪರಹಿತ, ನಿರಾಕಾರನಾದ ಅಲ್ಲಾಹ್ ಒಬ್ಬನೇ ದೇವರು. ಅವನಿಂದಲೇ ಅವತೀರ್ಣವಾದಂತಹ ಧರ್ಮಗ್ರಂಥ ಕುರಾನ್. ಅಲ್ಲಾಹನ ಬಿಟ್ಟರೆ ದೇವರಿಲ್ಲ. ದೇವರ ವಾಕ್ಯವನ್ನು ಸ್ವೀಕರಿಸಿದ ಮಹಮದ್ ಪೈಗಂಬರ್ ಕೊನೆಯ ಪ್ರವಾದಿ ಎಂತೆಲ್ಲಾ ಇದೆ. ಹಾಗಿರುವಾಗ ಒಬ್ಬ ಮುಸ್ಲಿಂ ದೇವರನ್ನು ನಿರಾಕರಿಸಿದರೆ ಅವನು ಮುಸ್ಲಿಮರ ಮೂಲಭೂತ ಶ್ರದ್ಧೆಯನ್ನೇ ಧಿಕ್ಕರಿಸಿದಂತಾಗುತ್ತದೆ. ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕಾದ ಬಗೆಯಾದ ನಮಾಜ಼್ ಎಂಬ ಪ್ರಾರ್ಥನಾ ವಿಧಿಯ ಬಗ್ಗೆ ನಿಷ್ಕ್ರಿಯನಾಗಬೇಕಾಗುತ್ತದೆ. ಜೊತೆಗೆ ಮಹಮದರಿಗೆ ಅವತೀರ್ಣವಾದ ದೇವರ ವಾಕ್ಯವನ್ನು ನಿರಾಕರಿಸಬೇಕಾಗುತ್ತದೆ. ಅಂದರೆ ಕುರಾನ್ ಅವನಿಗೆ ಪವಿತ್ರವಾಗಿ ಉಳಿಯುವುದಿಲ್ಲ.

ದೇವರ ಅಸ್ತಿತ್ವವನ್ನು ನಿರಾಕರಿಸಿದಂತಹ ಬೌದ್ಧ ಮತ್ತು ಜೈನ ಧರ್ಮಗಳನ್ನು ಕಂಡರೆ ವೈದಿಕರಿಗೆ ಅದಕ್ಕೇ ಅಷ್ಟೊಂದು ಸಿಟ್ಟು. ಶಂಕರಾಚಾರ್ಯ ಚಾರ್ವಾಕವೇ ಮೊದಲಾದ ಬೌದ್ಧ ಮತ್ತು ಜೈನ ಧರ್ಮಗಳನ್ನು ಖಂಡಾತುಂಡವಾಗಿ ನಿರಾಕರಿಸುತ್ತಾನೆ. ಅವುಗಳನ್ನು ಧಿಕ್ಕರಿಸುತ್ತಾನೆ. ಅವನದೇ ನೇತೃತ್ವದಲ್ಲಿ ನಾಗಾರ್ಜುನದಲ್ಲಿ ಬೌದ್ಧರ ಮಾರಣ ಹೋಮಕ್ಕೆ ಕಾರಣನಾಗುತ್ತಾನೆ. ಬೌದ್ಧರ ಅವೈದಿಕ ಮಾತ್ರವಲ್ಲ ನಿರೀಶ್ವರವಾದದ ವಿಚಾರಧಾರೆ ಅತ್ಯಂತ ವೈಜ್ಞಾನಿಕವಾಗಿಯೂ ಮತ್ತು ವೈಚಾರಿಕವಾಗಿಯೂ ಮುಂದಿರುವಾಗ, ತನ್ನ ಅಹಂ ಬ್ರಹ್ಮಾಸ್ಮಿ ಎಂಬ ವಿಚಾರವೂ, ಎರಡಿಲ್ಲ ಎಂಬ ವಿಚಾರವಾದ ಅದ್ವೈತವೂ, ತಾನು ರಚಿಸಿರುವ ದೇವಾನುದೇವತೆಗಳ ಮೇಲಿನ ಸ್ತುತಿ, ಶ್ಲೋಕಗಳೆಲ್ಲವೂ ಸುಳ್ಳಾಗಿಬಿಡುತ್ತದೆ. ಹಾಗಾಗಿಯೇ ಶಂಕರನಿಗೂ ಬೌದ್ಧರನ್ನು, ಜೈನರನ್ನು ಮತ್ತು ಇತರ ಅವೈದಿಕರನ್ನು ಸಹಿಸಲು ಸಾಧ್ಯವಾಗಲಿಲ್ಲ.

ಏನೇ ಆಗಲಿ ಆಸ್ತಿಕರೇ ಈ ಜಗತ್ತಿನಲ್ಲಿ ಬಹುಜನ. ಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟರೆ ಆಸ್ತಿಕರೇ ಗೆಲ್ಲುವರು. ನಾಸ್ತಿಕರು ಅಲ್ಪ ಸಂಖ್ಯಾತರು. ಆದರೆ, ಅವರ ವಿಚಾರಧಾರೆಗಳು ಬಹಳ ತೀಕ್ಷ್ಣ ಮತ್ತು ಕಠೋರ. ಬಹುಸಂಖ್ಯಾತರು ಯಾವುದನ್ನು ಗೌರವಿಸುವರೋ ಅದರ ಮೇಲೆ ಮಾರಣಾಂತಕ ಹಲ್ಲೆ ಮಾಡುವ ಅತ್ಯುಗ್ರವಾದಿಗಳು.

ಜೈನ ಧರ್ಮವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಬಹುಜನರೊಂದಿಗೆ ಮೆಲ್ಲನೆ ರಾಜಿಯಾಗಿಬಿಟ್ಟಿತು. ದಿಗಂಬರರಾಗಲಿ, ಶ್ವೇತಾಂಬರರಾಗಲಿ ಲಕ್ಷ್ಮಿ ಮಾತಾ, ಗಣೇಶ್ ಜೀ ಇತ್ಯಾದಿ ದೇವ ದೇವಿಯರನ್ನು ಮೆಲ್ಲನೆ ಒಳಕ್ಕೆ ಬಿಟ್ಟುಕೊಂಡರು. ಅವರೂ ಅರಿಹಂತರೊಂದಿಗೆ, ತೀರ್ಥಂಕರರೊಂದಿಗೆ ವಿರಾಜಮಾನವಾಗಿಬಿಟ್ಟರು. ಮಹಾವೀರನ ಮೂಲ ತತ್ವವೇ ಈ ಮೂಲಕ ಮಸುಕಾಗಿಬಿಟ್ಟಿತು. ಅವರ ’ಬಾಳು ಬಾಳಗೊಡು’ ಎನ್ನುವಂತಹ ಪರಮ ಅಹಿಂಸಾ ತತ್ವವನ್ನು ಸಾಂಕೇತಿಕವಾಗಿ ಆಚರಿಸುವುದನ್ನು ಬಿಟ್ಟರೆ ಇನ್ನು ನಿಜವಾದ ಮಹಾವೀರ ತತ್ವಗಳನ್ನು ಹೇಗೆ ಅನುಷ್ಟಾನಕ್ಕೆ ತರುತ್ತಿದ್ದಾರೋ, ಹೊರಗಣ್ಣಿಗಂತೂ ಏನೂ ಕಾಣುತ್ತಿಲ್ಲ.

ಅದೇನೇ ಇರಲಿ, ನಾಸ್ತಿಕವಾದಿಗಳ ಬಗ್ಗೆ ಇರುವ ಭಯ ಇಂದು ನಿನ್ನೆಯದಲ್ಲ. ಶತಶತಮಾನಗಳಿಂದ ಇವರ ಬಗ್ಗೆ ಹೆದರಿರುವ ಆಸ್ತಿಕವೃಂದವು ದೇವರ ಮೇಲಿನ ಹೆಚ್ಚಿನ ಭಯವನ್ನು ಇವರ ಬಗ್ಗೆ ಹೊಂದಿದ್ದಾರೆ. ಆದರೆ ಅವರು ತಮ್ಮ ದಿಗಿಲನ್ನು ಹೆದರಿಕೆ ಎಂದು ಒಪ್ಪಿಕೊಳ್ಳದೇ ಬೇರೊಂದು ರೀತಿಯಲ್ಲಿ ಸಾಧಿಸಹೋಗುತ್ತಾರೆ. ಅದಕ್ಕೆ ಶ್ರದ್ಧೆ, ನಂಬಿಕೆಗಳ ಧಕ್ಕೆ, ಧಾರ್ಮಿಕ ಉಲ್ಲಂಘನೆ ಇತ್ಯಾದಿಗಳಿಂದ ಕರೆಯುತ್ತಾ ಅವರನ್ನು ನಾಶಪಡಿಸಲು ನೋಡುತ್ತಾರೆ.

ಕ್ರೈಸ್ತರು, ಮುಸಲ್ಮಾನರು, ವೈದಿಕರು; ಹೀಗೆ ಪುರೋಹಿತಶಾಹಿ ಗಟ್ಟಿಯಾಗಿರುವ ಯಾವ ಸಮುದಾಯವೂ ಹಿಂದೆ ಬಿದ್ದಿಲ್ಲ.

ಕರ್ನಾಟಕದಲ್ಲಿ ಬಸವಣ್ಣನವರೂ ಕೂಡಾ ಅನ್ವೇಷಣೆ, ಆತ್ಮಾವಲೋಕನ ಪ್ರಕ್ರಿಯೆಗಳಿಗೆ ಇಂಬುಕೊಟ್ಟವರು. ನನ್ನ ಗ್ರಹಿಕೆಯಲ್ಲಿ ನಿರೀಶ್ವರ ವಸ್ತುಸ್ಥಿತಿಯನ್ನು ಅವರು ಗ್ರಹಿಸಿದರೂ, ಸಾವಿರಾರು ವರ್ಷಗಳಿಂದ ದೇವರನ್ನು ಆಧರಿಸಿ ಬದುಕನ್ನು ನಡೆಸುತ್ತಿರುವ ಜನರಿಂದ ದೇವರನ್ನು ಕಿತ್ತೆಸೆಯುವ ಬದಲು ಪರ್ಯಾಯವಾಗಿ ದೇವರನ್ನು ತಾವೇ ಕಂಡುಕೊಳ್ಳುವ ವಿಧಾನವನ್ನು ಕಲಿಸಿದರು. ಬೆಟ್ಟದ ಲಿಂಗದಿಂದ ಅಂಗೈ ಮೇಲಿನ ಇಷ್ಟಲಿಂಗಕ್ಕೆ ದೇವರು ರೂಪಾಂತರಗೊಂಡಿತು. ಕುರುಹಿನ ಲಿಂಗದಿಂದ ಅರುಹಿನ ಲಿಂಗದ ಪ್ರಕ್ರಿಯೆಯಲ್ಲಿ ಸಾಗುತ್ತಿದ್ದ ವಚನ ಚಳವಳಿ ಮತ್ತು ಶರಣ ಸಂಸ್ಕೃತಿ ಕಲ್ಯಾಣ ಕ್ರಾಂತಿಯಿಂದಾಗಿ ಬಸವಣ್ಣನವರ ಆಶಯದ ಸಮಾಜೋಧಾರ್ಮಿಕ ಆಂದೋಲನ ಪೂರ್ತಿಗೊಳ್ಳಲಿಲ್ಲ.

ದೈವಿಕ ಶ್ರದ್ಧೆ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಬಸವಣ್ಣ ಅಂದು ಪ್ರಶ್ನಿಸಿ, ಸವಾಲೆಸೆದು ಪರ್ಯಾಯವಾಗಿ ಚಳವಳಿ ಕಟ್ಟದೇ ಇದ್ದಿದ್ದರೆ ಅವರು ನಮಗಿಂದು ದಕ್ಕುತ್ತಲೇ ಇರಲಿಲ್ಲ.
ಇರಲಿ, ಧರ್ಮ ದಾರಿಯೇ ಹೊರತು ಗುರಿಯಲ್ಲ ಎಂಬುದು ಧರ್ಮಾಂಧರಿಗೆ ತಿಳಿಯುವುದೇ ಇಲ್ಲ. ಗುರಿಯನ್ನು ಬಿಟ್ಟು ದಾರಿಗಾಗಿಯೇ ಹೊಡೆದಾಡಿಕೊಂಡಿರುವ ಅವರದ್ದು ಕಠೋರ ಚೌಕಟ್ಟಿನ ಮನಸ್ಥಿತಿ. ನಿಜ ಹೇಳಬೇಕೆಂದರೆ ಅವರ ಹೋರಾಟಕ್ಕೆ ಕಾರಣ ಧರ್ಮವೆಂಬುದು ಅಲ್ಲವೇ ಅಲ್ಲ. ಅದೊಂದು ಬ್ಯಾನರ್ ಅಷ್ಟೇ. ಕೋಮುವಾದಿಗಳಿಗೆ ಯಾವುದೇ ಧರ್ಮಗಳಿಲ್ಲ. ಇಂತಹ ಮನಸ್ಥಿತಿಗಳೊಡನೆ ಹೋರಾಟವನ್ನು ಮಾಡಿಕೊಂಡು ಬಂದಿರುವ ಮಾನವತಾವಾದಿಗಳು, ವಿಚಾರವಂತರು, ಮುಕ್ತ ಚಿಂತಕರು ನಾನಾ ರೀತಿಯಲ್ಲಿ ತೊಂದರೆಗಳಿಗೆ ಒಳಗಾಗಿದ್ದಾರೆ ಮತ್ತು ಜೀವವನ್ನೂ ತೆತ್ತಿದ್ದಾರೆ.

ಇಂತಹ ಇಪ್ಪತ್ತು ನಿರೀಶ್ವರವಾದದ ಸಾಮಾನ್ಯ ಚರ್ಚೆಗಳನ್ನು ’ವೈ ದೇರ್ ಈಸ್ ನೋ ಗಾಡ್ ಎಂಬ ಕೃತಿಯಲ್ಲಿ ಅರ್ಮಿನ್ ನವಾಬಿ ಬೆಳಕಿಗೆ ತರುತ್ತಾರೆ.

ವಿಜ್ಞಾನವೆನ್ನುವುದು ನಮ್ಮ ಜೀವನದ ಮತ್ತು ವಿಶ್ವದ ಕ್ರಮದ ಸಂಕೀರ್ಣತೆಯನ್ನು ವಿವರಿಸಲು ಸೋಲುವುದು. ಆದ್ದರಿಂದಲೇ ದೇವರೆಂಬುವನು ಈ ವಿಶ್ವವನ್ನು ಸೃಷ್ಟಿಸಿದ್ದಾನೆ ಎನ್ನುವುದು ಎಷ್ಟರಮಟ್ಟಿಗೆ ಹಾಸ್ಯಾಸ್ಪದ ಎಂದು ಅರ್ಮಿನ್ ನವಾಬಿ ವಿವರಿಸುತ್ತಾರೆ. ಅವರನ್ನು ಮಾಜೀ ಮುಸಲ್ಮಾನ ಎಂದು ಕರೆಯಲಾಗುತ್ತದೆ. ಇರಾನಿನವರಾಗಿದ್ದು ನಾಸ್ತಿಕನಾಗಿ ಏಥಿಸ್ಟ್ ರಿಪಬ್ಲಿಕ್ ಸ್ಥಾಪಿಸುವುದು ಸುಲಭದ ಮಾತಲ್ಲ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ದೇಶದಲ್ಲಿ ಹುಟ್ಟಿ, ಸಾಂಪ್ರದಾಯಕ ಮುಸ್ಲಿಂ ಕುಟುಂಬದಲ್ಲಿ ಬೆಳೆದವರು. ದೇವರ ಅನುಗ್ರಹಕ್ಕೆಂದೇ ಹೆಚ್ಚೂ ಕಡಿಮೆ ತಮ್ಮ ಜೀವವನ್ನೇ ಪಣಕ್ಕಿಟ್ಟು ದೈವಾನ್ವೇಷಣೆಯನ್ನು ಮಾಡಿ, ಮಹಾನ್ ಧಾರ್ಮಿಕ ಶ್ರದ್ಧೆಯುಳ್ಳವನಾಗಿದ್ದು ನಂತರ ಅವರ ನಿರಂತರ ಅನ್ವೇಷಣೆ ಇಸ್ಲಾಂ ಧರ್ಮವನ್ನು ತೊರೆಯುವಂತೆ ಮಾಡಿತು ಮತ್ತು ನಾಸ್ತಿಕನಾಗಿ ಬದಲಾಗುವಂತಾಯಿತು.

ಇದು ನಿಜ. ದೇವರ ಭಕ್ತರಾಗಿ ನಂಬಿಕೆ ಶ್ರದ್ಧೆಗಳಿಂದ ಆರಾಧಿಸಿಕೊಂಡುಬಿಟ್ಟಿದ್ದರೆ ಅವರಿಗೆ ದೇವರ ಬಗ್ಗೆ ಯಾವ ಗೊಂದಲವೂ ಇರುವುದಿಲ್ಲ. ಯಾವಾಗ ದೇವರನ್ನು ಭಕ್ತಿ ಶ್ರದ್ಧೆ ಇದ್ದರೂ, ವೈಜ್ಞಾನಿಕವಾಗಿ, ವೈಚಾರಿಕವಾಗಿ ಮತ್ತು ತಮ್ಮ ಜೀವನದ ಅನುಭವಗಳನ್ನು ಒರೆಗೆ ಹಚ್ಚಿ ನೋಡುವ ಮಾನದಂಡಗಳ ಆಧಾರವಾಗಿ ನೋಡಲು ಹೋದರೆ ಆತ ನಾಸ್ತಿಕನಾಗುವುದು ಸಹಜವೆನಿಸುತ್ತದೆ. ಏಕೆಂದರೆ ದೇವರೆಂಬುದೇ ಒಂದು ಪರಿಕಲ್ಪನೆ. ಅದು ಮನುಷ್ಯನ ಪರಿಕಲ್ಪನೆಯಲ್ಲಿ ಇರುವುದೇ ಹೊರತು, ಭೌತಿಕ ಅಸ್ತಿತ್ವದಲ್ಲಿ ಇಲ್ಲ. ಬೈಬಲ್ಲಿನಲ್ಲಿ ಹೇಳುವಂತೆ ದೇವರು ತನ್ನ ಪ್ರತಿರೂಪವಾಗಿ ಮನುಷ್ಯನನ್ನು ಸೃಷ್ಟಿಸಿದ ಎಂದು. ಆದರೆ ವಾಸ್ತವವಾಗಿ ಮನುಷ್ಯ ತನ್ನ ಪ್ರತಿರೂಪವಾಗಿ ದೇವರನ್ನು ಸೃಷ್ಟಿಸಿದ. ದೇವರು ಎಂಬುದು ಮಾನುಷ ಸೃಷ್ಟಿ. ಈ ಜಗತ್ತು ಆ ದೇವರ ಸೃಷ್ಟಿ. ಸರಿ ಬಿಡಿ, ಈಗ ಅರ್ಮಿನ್ ನವಾಬಿಯವರ ವಿಷಯಕ್ಕೆ ಬಂದರೆ, ದೇವರಿಲ್ಲ ಎಂದು ತಾವು ಕಂಡುಕೊಂಡ ಸತ್ಯವನ್ನು ತಮ್ಮಂತೆಯೇ ಇರುವ ಇತರರಿಗೆ ವಿಷಯವನ್ನು ಹಂಚಿಕೊಳ್ಳಲು ಸರ್ವಥಾ ಹೆಣಗುತ್ತಿದ್ದಾರೆ. ಶೈಕ್ಷಣಿಕ ಚರ್ಚೆಗಳಿಂದ ನಿರೀಶ್ವರವಾದದ ಅರಿವನ್ನು ಹಂಚಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: ಲಿಪಿ, ಲಿಪಿಕಾರನ ಇತಿಹಾಸ ಹಿಡಿದಿಡುವ ಷ. ಶೆಟ್ಟರ್ ಅವರ ’ಹಳಗನ್ನಡ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...