ಮತಗಳ್ಳತನ ಕುರಿತ ‘ಹೈಡ್ರೋಜನ್ ಬಾಂಬ್’ ಶೀಘ್ರದಲ್ಲೇ ಬರಲಿದೆ. ಅದು ಬಹಿರಂಗಗೊಂಡ ಬಳಿಕ ಪ್ರಧಾನಿ ಮೋದಿ ದೇಶದ ಜನರಿಗೆ ಮುಖ ತೋರಿಸಲು ಸಾಧ್ಯವಾಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ನಡೆದ ‘ವೋಟರ್ ಅಧಿಕಾರ್’ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತ್ತು 2024 ರ ಸಂಸತ್ ಚುನಾವಣೆಯ ಸಮಯದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮತಗಳತನ ನಡೆದಿದೆ ಎಂಬ ತಮ್ಮ ಆರೋಪಗಳನ್ನು ಪುನರುಚ್ಚರಿಸಿದ್ದಾರೆ.
“ಮತ ಕಳ್ಳತನ ಎಂದರೆ ಹಕ್ಕುಗಳ ಕಳ್ಳತನ. ಪ್ರಜಾಪ್ರಭುತ್ವದ ಕಳ್ಳತನ. ಉದ್ಯೋಗದ ಕಳ್ಳತನ. ಬಿಜೆಪಿಯವರು ನಿಮ್ಮ ಪಡಿತರ ಚೀಟಿ ಹಾಗೂ ಇತರ ಹಕ್ಕುಗಳನ್ನು ಕಸಿದುಕೊಳ್ಳಲಿದ್ದಾರೆ” ಎಂದು ರಾಹುಲ್ ಹೇಳಿದ್ದಾರೆ.
कुर्सी की पेटी बांध लीजिए.. pic.twitter.com/DVFSTgnU68
— Congress (@INCIndia) September 1, 2025
“ಮಹಾತ್ಮ ಗಾಂಧಿ ಅವರ ಹತ್ಯೆಯ ಹಿಂದಿದ್ದ ಶಕ್ತಿಗಳೇ ಇದೀಗ ಸಂವಿಧಾನದ ಹತ್ಯೆಗೂ ಮುಂದಾಗಿವೆ. ನಾವು ಇದಕ್ಕೆ ಅವಕಾಶ ಕೊಡಲ್ಲ. ಅದಕ್ಕಾಗಿಯೇ ಈ ಯಾತ್ರೆ ನಡೆಸಿದ್ದು, ಜನರಿಂದ ಉತ್ತಮ ಸ್ಪಂದನ ಸಿಕ್ಕಿದೆ. ಅಸಂಖ್ಯಾತ ಜನರು ಮತ ಕಳ್ಳತನದ ವಿರುದ್ಧ ತಮ್ಮ ಧ್ವನಿ ಮೊಳಗಿಸಿದ್ದಾರೆ” ಎಂದಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಲೋಕಸಭೆಯ ವಿರೋಧ ಪಕ್ಷದ ನಾಯಕ ‘ಬೇಜವಾಬ್ದಾರಿ’ಯಿಂದ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
“ಸಂಸತ್ತಿನ ಒಳಗೆ ಮತ್ತು ಹೊರಗೆ ರಾಹುಲ್ ಗಾಂಧಿಯವರ ಮಾತುಗಳನ್ನು ಕೇಳಿದಾಗಲೆಲ್ಲ ಅವರು ಏನು ಏನು ಹೇಳಲು ಪ್ರಯತ್ನಿಸುತ್ತಿದ್ದಾರೆಂದು ಅರ್ಥಮಾಡಿಕೊಳ್ಳಲು ನನಗೆ ಸಮಯ ಹಿಡಿಯುತ್ತದೆ. ಪರಮಾಣು ಮತ್ತು ಹೈಡ್ರೋಜನ್ ಬಾಂಬ್ಗಳಿಗೂ ಚುನಾವಣೆಗೂ ಏನು ಸಂಬಂಧ? ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿ ಅವರನ್ನೇ ಅವರು ಏಕೆ ಅವಮಾನಿಸಿಕೊಳ್ಳುತ್ತಿದ್ದಾರೆ?” ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.
ನಮ್ಮ ಪಕ್ಷ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಆರು ತಿಂಗಳು ಪರಿಶೀಲಿಸಿದೆ. ಈ ವೇಳೆ ಒಂದು ಲಕ್ಷಕ್ಕೂ ಹೆಚ್ಚು ಹೆಸರುಗಳಲ್ಲಿ ವ್ಯತ್ಯಾಸಗಳು ಕಂಡುಬಂದಿವೆ ಎಂದು ಆಗಸ್ಟ್ 7ರಂದು ರಾಹುಲ್ ಗಾಂಧಿ ಹೇಳಿದ್ದರು.
ಚುನಾವಣಾ ಆಯೋಗ ಬಿಜೆಪಿ ಜೊತೆ ಕೈ ಜೋಡಿಸಿದೆ ಎಂಬುವುದಕ್ಕೆ ಮಹದೇವಪುರದ ಅಕ್ರಮಗಳು ಸಾಕ್ಷಿಯಾಗಿದೆ ಎಂದಿದ್ದರು.
ಮತದಾರರ ಪಟ್ಟಿಯಲ್ಲಿ 11,965 ನಕಲಿ ನೋಂದಣಿಗಳು, ನಕಲಿ ಅಥವಾ ಅಮಾನ್ಯ ವಿಳಾಸಗಳನ್ನು ಹೊಂದಿರುವ 40,009 ಮತದಾರರು, ಒಂದೇ ವಿಳಾಸದಲ್ಲಿ ನೋಂದಾಯಿಸಲಾದ 10,454 ‘ಬೃಹತ್ ಮತದಾರರು’, ಅಮಾನ್ಯ ಫೋಟೋಗಳನ್ನು ಹೊಂದಿರುವ 4,132 ಮತದಾರರು ಮತ್ತು ಫಾರ್ಮ್ 6 ಅನ್ನು ದುರುಪಯೋಗಪಡಿಸಿಕೊಂಡ ಪ್ರಕರಣಗಳಲ್ಲಿ 33,692 ಮತದಾರರು ಕಂಡು ಬಂದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ಚುನಾವಣಾ ಆಯೋಗದ ನಮೂನೆ 6 ಹೊಸ ಮತದಾರರನ್ನು ನೋಂದಾಯಿಸುವ ಅರ್ಜಿ ದಾಖಲೆಯಾಗಿದೆ.
ನವೆಂಬರ್ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಸಂಸ್ಥೆಗಳನ್ನು ದೊಡ್ಡ ಮಟ್ಟದಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪವನ್ನು ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ.
ಬಿಜೆಪಿ ನೇತೃತ್ವದ ಮೈತ್ರಿಕೂಟವು ಕಾಂಗ್ರೆಸ್ ಒಳಗೊಂಡ ಮಹಾ ವಿಕಾಸ್ ಅಘಾಡಿ ಒಕ್ಕೂಟವನ್ನು ಮಹಾರಾಷ್ಟರ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿತ್ತು.
ಚುನಾವಣಾ ಆಯೋಗವು ರಾಹುಲ್ ಗಾಂಧಿಯವರ ಆರೋಪಗಳನ್ನು ತಿರಸ್ಕರಿಸಿದೆ. ಆಗಸ್ಟ್ 14ರಂದು, ಮಹದೇವಪುರದ ಬಗ್ಗೆ ಮಾಡಿರುವ ಆರೋಪಗಳನ್ನು ‘ಸುಳ್ಳು ಮತ್ತು ದಾರಿತಪ್ಪಿಸುವ’ ಪ್ರಯತ್ನ ಎಂದಿದೆ.
ಇದಕ್ಕೂ ಮೊದಲು ಫೆಬ್ರವರಿಯಲ್ಲಿ, ಚುನಾವಣಾ ಫಲಿತಾಂಶಗಳಿಂದ ನಿರಾಶೆಗೊಂಡ ಪಕ್ಷಗಳು ಆಯೋಗವನ್ನು ದೂಷಿಸುವ ಪ್ರಯತ್ನಗಳನ್ನು ಮಾಡುತ್ತಿರುವುದು ‘ಸಂಪೂರ್ಣ ಅಸಂಬದ್ಧ’ ಎಂದು ಚುನಾವಣಾ ಆಯೋಗ ಹೇಳಿತ್ತು.
ಟಿಎಂಸಿ ಪ್ರತಿಭಟನಾ ವೇದಿಕೆ ತೆರವುಗೊಳಿಸಿದ ಸೇನೆ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ


