Homeಮುಖಪುಟವಿಶ್ವ ಪರಿಸರ ದಿನ: ಸಸ್ಯಯಾನದ ಅಮೃತ ಬಿಂದು ಹಿಂದೆ - ಡಾ. ಟಿ.ಎಸ್. ಚನ್ನೇಶ್

ವಿಶ್ವ ಪರಿಸರ ದಿನ: ಸಸ್ಯಯಾನದ ಅಮೃತ ಬಿಂದು ಹಿಂದೆ – ಡಾ. ಟಿ.ಎಸ್. ಚನ್ನೇಶ್

- Advertisement -
- Advertisement -

ವಿಶ್ವ ಪರಿಸರ ದಿನದ ಅಂಗವಾಗಿ ಡಾ. ಟಿ.ಎಸ್. ಚನ್ನೇಶ್ ರವರ ಸಸ್ಯಯಾನದ ಅಮೃತ ಬಿಂದು ಪುಸ್ತಕಕ್ಕೆ ಅವರೇ ಬರೆದು ಮುನ್ನುಡಿಯನ್ನು ನಾನುಗೌರಿ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

ಹೀಗೆ ಒಂದು ದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದಲ್ಲಿ ಆಪ್ತ ಗೆಳೆಯ ಆಕಾಶ್ ಸಿಗುವವರಿದ್ದರು. ನಾವು ಸಾಮಾನ್ಯವಾಗಿ ಅಲ್ಲಿನ ಕ್ಯಾಂಟೀನಿನ ಕಾಫಿ ಹೀರುತ್ತಾ, ನಮ್ಮ ಬಹುತೇಕ ಬೌದ್ಧಿಕ ಚರ್ಚೆಗಳನ್ನು ಒರೆಹಚ್ಚಿ, ಸಾಣೆಹಿಡಿದು ಒಪ್ಪ ಮಾಡಿದ್ದಿದೆ. ಆ ದಿನ ಮೇಯಿನ್ ಗೇಟಿನಿಂದ ಹಾಯ್ದು ಹೋಗುವಾಗ ಕಣ್ಣಿಗೆ ಬಿದ್ದ ಬಿಲ್ವಾರ ಮರವೊಂದು ಹಳೆಯ ನೆನಪನ್ನು ಕೆದಕಿತು. ಬಾಗೆ (Albizia lebbeck), ಬಿಲ್ವಾರ (Albizia odoratissima) ಹಾಗೂ ಚಿಗರೆ ಅಥವಾ ಚುಜ್ಜುಲು (Albizia amara) ಮರಗಳು ಅಕ್ಕ ತಂಗಿಯರಿದ್ದಂತೆ! ಎಲೆಗಳ ವಿನ್ಯಾಸ, ಮರದ ನೋಟ, ಇತ್ಯಾದಿಗಳಲ್ಲಿ ಒಂದಕ್ಕೊಂದು ಸಾಮ್ಯತೆ ಇರುತ್ತದೆ. ಎಲೆಗಳ ಸೈಜಿನಲ್ಲಿ ಬಾಗೆ ದೊಡ್ಡದು, ಚುಜ್ಜುಲು ಚಿಕ್ಕದು. ಕಾಯಿಗಳೂ ಅಷ್ಟೆ. ಇವನ್ನೆಲ್ಲಾ ಹೇಳಿ ನನ್ನ ಮನಸ್ಸಿನಲ್ಲಿ ಪರ್ಮನೆಂಟಾಗಿಸಿದ್ದ ಕೃಷಿ ಕಾಲೇಜಿನಲ್ಲಿ ಫಾರೆಸ್ಟ್ರಿ ಕಲಿಸಿದ್ದ ಖಾನ್ ಸಾಹೇಬರು, ಪ್ರೊ.ಬಿ.ಜಿ.ಎಲ್. ಸ್ವಾಮಿಯವರ ಶಿಷ್ಯರು. ಇವನ್ನೆಲ್ಲಾ ಜೋಡಿಸಿ ಹಂಚಿಕೊಳ್ಳಲು ಹಾಗೂ ಈ ಮೂರೂ ಮರಗಳ ಸಂಬಂಧಗಳ ಕಥನವನ್ನು ಹೇಳುವಂತೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದ ಬಿಲ್ವಾರ ಮರವೊಂದು ಒತ್ತಾಯ ಮಾಡಿತು ಎನ್ನಬೇಕು. ಅದಕ್ಕೆಲ್ಲಾ ಮತ್ತೊಂದು ಮುಖ್ಯ ಕಾರಣ ನನ್ನೂರಿನಲ್ಲಿ ಕಳೆದ ಸರಿ ಸುಮಾರು 35-40 ವರ್ಷಗಳಿಂದಲೂ ನಿಂತ ಬಿಲ್ವಾರದ ಸಂಬಂಧಿಯಾದ ಬಾಗೆ (Albizia lebbeck) ಮರದ ಕಾಯಿಗಳ ಗಿಲ-ಗಿಲ ಸದ್ದು ಬಾಲ್ಯದಿಂದಲೂ ನನ್ನೊಳಗೆ ಉಳಿದೇ ಇತ್ತು. ಹಾಗಾಗಿ ಬಾಗೆ-ಬಿಲ್ವಾರಗಳ ನೆಪದಿಂದಾಗಿ ನಮ್ಮ ಸಾಂಸ್ಕೃತಿಕ ಮುಖಾಮುಖಿಯಾದ ಗಿಡ-ಮರಗಳ ಕಥನಗಳ ಬರೆಯುವ ಉತ್ಸಾಹ ಮೂಡಿತ್ತು. ಇದನ್ನೆಲ್ಲಾ ಮಾಮೂಲಿಯಂತೆ ಗೆಳೆಯ ಆಕಾಶ್ ಜೊತೆ ಮೊದಲ ಬಾರಿಗೆ ಚರ್ಚೆ ನಡೆಸಿದಾಗ ಅವರಿಂದ ನಿರೀಕ್ಷಿಸಿದ್ದ ಬೆಂಬಲವೇನೂ ಸಿಗಲಿಲ್ಲ.

ಅದರ ಜೊತೆಯಲ್ಲೇ ಹತ್ತಾರು ವರ್ಷಗಳ ಹಿಂದೆ ಖ್ಯಾತ ವಿಮರ್ಶಕರಾದ ಕೀರ್ತಿನಾಥ ಕುರ್ತಕೋಟಿಯವರ “ನೂರು ಮರ, ನೂರ ಸ್ವರ” ಪುಸ್ತಕದ ಕೆಲವು ಪುಟಗಳನ್ನು ತಿರುವಿ ಹಾಕಿದಾಗ ಹೆಚ್ಚು ಆಕರ್ಷಕವಾಗಿದ್ದು, ಅದರ ಶೀರ್ಷಿಕೆ. ಅದರ ನೆನಪಲ್ಲಿ ಗಟ್ಟಿಯಾಗಿ ಉಳಿದದ್ದು “ನೂರು ಮರ”! ಈಗ ಕೀರ್ತಿನಾಥರೂ ಇಲ್ಲ, ಖಾನ್ ಸಾಹೇಬರೂ, ಇಲ್ಲ, ನನಗೆ ಸಸ್ಯವಿಜ್ಞಾನದ ಪ್ರೀತಿಗೆ ಕಾರಣವಾಗಿರುವ ಮೂಲ ಪಾಠಗಳನ್ನು ಮಾಡಿದ್ದ ಕೃಷಿಕಾಲೇಜಿನ ಸತ್ಯವತಿಯವರೂ ಇಲ್ಲ. ಸುತ್ತಲೂ ಸದಾ ಕಾಣುವ ಗಿಡ-ಮರಗಳ ಕಾರಣದಿಂದ ನನ್ನ ಮನಸ್ಸಿನಿಂದ ದೂರವಾಗಿರದ “ನೂರು ಮರ” ಶೀರ್ಷಿಕೆಯ ನೆಪದಲ್ಲಿ ನೂರು ಮರಗಳ ಕಥನಗಳನ್ನು ಅವುಗಳ ವೈಜ್ಞಾನಿಕ, ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯಿಂದ ದಾಖಲಿಸಿ ಆ ಮೂಲಕ ಪ್ರೊ. ಬಿ.ಜಿ.ಎಲ್. ಸ್ವಾಮಿಯವರ ಜನ್ಮ ಶತಮಾನದ ಗೌರವವನ್ನು ಸಲ್ಲಿಸುವ ಮನಸ್ಸಾಯಿತು. ಹಾಗಾಗಿ ಸಸ್ಯ ಸಂಕುಲಗಳು ಮಾನವ ಕುಲದ ಜೊತೆಗಿನ ಸಾಹಚರ್ಯದ ಸಂಗತಿಗಳನ್ನು ಸಂಕಥನಗಳನ್ನಾಗಿಸುವ ಬಗೆಗಿನ ಮಾತುಗಳು ಗೆಳೆಯ ಆಕಾಶ್ ಅವರ ಅನುಮಾನದ ಜೊತೆಗಿನ ಚರ್ಚೆಯನ್ನೂ ಮೀರಿ, ನನ್ನ ಫೇಸ್ ಬುಕ್ಕಿನ ಗೋಡೆಯಲ್ಲಿ “ಸ್ವರ್ಗದ ಮರ”ದ ಮೂಲಕ ಕಾಣಿಸಿಕೊಂಡು ಆರಂಭವಾದವು. ಆರಂಭದಿಂದಲೇ “ಸ್ವರ್ಗ”ದ ಮರವೇರಿದ ಮೇಲೆ ಕಥನಗಳ ಕಟ್ಟುವ ಹಾಗೂ ಹಂಚಿಕೊಳ್ಳುವ ಸಂಕಷ್ಟಗಳ ಪರಿಹಾರ ಸುಲಭವೇ ಆಯಿತು.
“ಸ್ವರ್ಗ”ದ ಮರದಿಂದ ಆರಂಭಸಿದ ಮೇಲೆ ಅಲ್ಲಿನ “ಅಮೃತ” ಸಿಗುವ ತನಕವಾದರೂ ಪ್ರಯತಿಸಬೇಕೆಂದು ಅಮೃತಬಳ್ಳಿಯವರೆಗೂ ಮೊದಲ ಪ್ರಯತ್ನವಾಗಿ ಹತ್ತು ಸಸ್ಯಗಳ ಕಥನಗಳಿಂದ ಯಾನವು ಆರಂಭವಾಯಿತು. ಈ ಹತ್ತು ಸಸ್ಯಗಳ ಪುಟ್ಟ ಪರಿಚಯದ ಯಾನಕ್ಕೆ ಸ್ವೀಡನ್ ದೇಶದವರಾದ ಕಾರ್ಲ್ ಲಿನೆಯಾಸ್ ಕಾಲದ ಮಾಹಿತಿಗಳಿಂದ ಹಾಗೂ ಇದೀಗ ಫೇಸ್ ಬುಕ್ಕಿನಲ್ಲ್ಲಿಯವರೆಗಿನ ಕಥಾನಕಗಳ ಪ್ರೀತಿಯ ಓದುಗರತನಕ ಧಾರಾಳವಾದ ಬೆಂಬಲವು ಮುಂದಿನ ಸಸ್ಯಯಾನಕ್ಕೆ ಒತ್ತಾಸೆ ಸಿಕ್ಕಿತು. ಮಾನವಕುಲದ ಇತಿಹಾಸವು ಇಂತಹಾ ಸಸ್ಯಪ್ರೇಮದ ಅನಂತ ಪಯಣಗಳನ್ನು ಸವೆಸಿದೆ. ಸಹಸ್ರಾರು ಐತಿಹಾಸಿಕ ವ್ಯಕ್ತಿಗಳ ಸಾಹಸ, ಆಸಕ್ತಿ ಎಲ್ಲವನ್ನೂ ಸಸ್ಯಪ್ರೀತಿಯ ಚರಿತ್ರೆಯು ಹೊಂದಿದೆ. ಅನೇಕರಿಗೆ ನೆನಪಿರಬಹುದು, ನಮ್ಮ ತಾಯಂದಿರು, ಅಜ್ಜಿಯರೂ, ತಮ್ಮ ಸ್ನೇಹಿತರ ಕೈತೋಟಗಳಿಂದ ಆಕರ್ಷಿತರಾದ ಸಸ್ಯಗಳ ಬೀಜ, ಸಸಿ, ಬೇರುಬಿಡಬಲ್ಲ ಕಾಂಡದ ತುಂಡನ್ನು ಊರಿಂದ-ಊರಿಗೆ ತುಂಬು ಪ್ರೀತಿಯಿಂದ ತರುತ್ತಿದ್ದರಲ್ಲವೇ? ಹೀಗೆ ಸಸ್ಯಯಾನದ ಹಿಂದೆ ಅನಂತ ಕೈಗಳೂ, ಮನಸ್ಸುಗಳೂ ದುಡಿದಿವೆ. ಇಂತಹ ಸಣ್ಣ-ಪುಟ್ಟ ಸಂಗತಿಗಳೇ ಅಲ್ಲದೇ ಹಲವು ಬೃಹತ್ತಾದ ದಶಕಗಳ-ಶತಕಗಳ ಹುಡುಕಾಟ, ಕುತೂಹಲ ಹಾಗೂ ಮಾನವ ಶ್ರಮ-ದುಡಿಮೆಗಳನ್ನು ಒಳಗೊಂಡಿವೆ. ಜೀವದ ಹಂಗು ತೊರೆದು ಸಾಗರಗಳ ಜಾಲಾಡಿ ಖಂಡ-ಖಂಡಗಳ ಅಲೆದು ನೆಲದಿಂದ-ನೆಲಕ್ಕೆ ಪರಿಚಯಸಿದ ಸಹಸ್ರಾರು ವಿಚಾರಗಳಿವೆ. ಮಾನವ ಮಾತ್ರರಲ್ಲಿ ಮುಗಿಯಲಾರದ ಈ ಅನಂತ ಪಯಣಯದ “ಅಮೃತ ಬಿಂದು”ವಾಗಿ ಹುಟ್ಟಿಕೊಂಡ ಸಸ್ಯಯಾನದ ಕಥನಗಳು ಇವು.

ಮರಗಳೇ ಎನಿಸಿಕೊಳ್ಳದ ಬಿಲ್ವಾರ, ಚುಜ್ಜುಲುಗಳು ನಮಗೆ ಮರದ ಆಸೆಯ ಚರ್ಚೆಗೆ ಹಚ್ಚಿ ಆಕಾಶ್ ಜೊತೆ ಮಾತಿಗೆ ಮೊದಲು ಮಾಡಿದ್ದು ನಿಜ. ಕೀರ್ತಿನಾಥರ ನೂರು ಮರದ ಸ್ವರದ ದನಿಯು ನನ್ನ ಸಸ್ಯವಿಜ್ಞಾನದ ಗುರುಗಳಾದ ಸತ್ಯವತಿಯವರ ಮೂಲಕ ಬಿ.ಜಿ.ಎಲ್. ಸ್ವಾಮಿಯವರ ನೆನಪಿನಲ್ಲಿ ಹಾಯ್ದು ಹೋಯಿತು. ಗಿಡ-ಮರಗಳ ಸಂಕಥನಗಳು ನಮ್ಮ ಸಾಂಸ್ಕೃತಿಕ ಮುಖಾಮುಖಿಯಾಗುವಲ್ಲಿ ಅವುಗಳನ್ನು ಗುರುತಿಸುವ ಹಿನ್ನೆಲೆಯಲ್ಲಿ ವಿವರಿಸುವುದರಿಂದ ಆರಂಭಗೊಂಡು, ಹೆಸರಿಸಿ, ವರ್ಗೀಕರಿಸಿ, ಪೋಷಿಸಿ, ಅಗತ್ಯ ಬಿದ್ದಲ್ಲಿ ಬೆಳೆಸಿ, ಬಳಸಿಕೊಳ್ಳುವರೆಗೂ ಅವುಗಳ ಸಂಗತಿಗಳು ಒಳಗೊಂಡಿರುತ್ತವೆ. ಕೆಲವೊಮ್ಮೆ ಅನೇಕ ವಿಸ್ಮಯಕಾರಿ, ಕ್ರಾಂತಿಕಾರಕ, ಐತಿಹಾಸಿಕ ಸಂಗತಿಗಳನ್ನೂ ತಳುಕು ಹಾಕಿಕೊಂಡಿರುತ್ತವೆ. ಬಿಡಿ, ಬಿಡಿಯಾಗಿ ಹಂಚಿ ಹೋಗಿರುವ ಇವೆಲ್ಲವನ್ನೂ ವಿವಿಧ ಮೂಲಗಳಿಂದ ಒಟ್ಟು ಮಾಡಿ ಕಲೆಹಾಕಿ 15-20 ನಿಮಿಷಗಳ ಓದಿನ ಟಿಪ್ಪಣಿಗಳಾಗಿಸಿ ಒಂದೊಂದೇ ಪ್ರಭೇದವನ್ನು ವಿವರಿಸುವ ಪ್ರಯತ್ನಗಳಿವು. ಇಷ್ಟು ಸಂಗತಿಗಳೇನು ಸುಮ್ಮನೆ ನಡೆದವೇನಲ್ಲ. ಸಂಕೀರ್ಣವಾದ ಆಗುಹೋಗುಗಳನ್ನು ಒಳಗೊಂಡ ಪರ್ಯಟನೆಗಳನ್ನೂ, ಸಂಗ್ರಹಗಳನ್ನೂ, ಹಂಚಿಕೆಗಳನ್ನೂ ಒಳಗೊಂಡಿವೆ. ಜೊತೆಗೆ ಅಷ್ಟೆಲ್ಲಾ ಸಾಧ್ಯವಾಗಲು ಅವಶ್ಯಕ ವೈಧಾನಿಕತೆಗಳ ಸೃಜಿಸುವ ಸಂಕಟಗಳನ್ನೂ ಒಳಗೊಂಡಿವೆ.

ಕಾರ್ಲ್ ಲಿನೆಯಾಸ್ ಇಡೀ ಜೀವಿಜಗತ್ತಿಗೆ ಜಾಗತಿಕ ಮನ್ನಣೆಯ ಹೆಸರನ್ನು ಕೊಡುವ ವೈಧಾನಿಕತೆಯನ್ನು ಕೊಟ್ಟರಲ್ಲ! ಅವರ ಜೊತೆಯಲ್ಲೇ ಮಾಹಾನ್ ಮೇಧಾವಿಗಳು ತಮ್ಮ ಸಾಹಸ ಹಾಗೂ ಆಸಕ್ತಿಯನ್ನೂ ಜೀವಪರವಾಗಿಸಿ, ಇದನ್ನೆಲ್ಲಾ ಕಾಪಿಟ್ಟುಕೊಳ್ಳಲು ಕಾರಣಮಾಡಿ ಜೀವಿಪ್ರೀತಿಯನ್ನು ಮೆರೆದಿದ್ದಾರೆ. ಬಹುಪಾಲು ಇಂತಹಾ ಜೀವಿಪ್ರೇಮಿಗಳು ಸಸ್ಯಗಳ ಹುಡುಕಾಟದ ಮೂಲಕ ಜಗತ್ತಿನ ಮೂಲೆ ಮೂಲೆಗಳನ್ನು ಕಾಡು-ಮೇಡೆನ್ನದೆ ಸುತ್ತಾಡಿದ್ದಾರೆ. ಭಾರತದ ನೆಲದಲ್ಲೂ ವಿಲಿಯಂ ರಾಕ್ಸ್ಬರ್ಗ್, ಬುಕನನ್, ಹೆಂಡ್ರಿಕ್ ವಾನ್ ರ‍್ಹೀಡ್ ಮುಂತಾದವರಿಂದ ಸಸ್ಯಯಾನದ ಅಸಂಖ್ಯಾತ ಪ್ರಭಾವಳಿಯು ದಟ್ಟವಾಗಿದೆ. ವಾನ್ ರ‍್ಹೀಡ್ ಡಚ್ ಈಸ್ಟ್ ಇಂಡಿಯಾ ಕಂಪನಿಯ ಸೇವೆಯಲ್ಲಿ ಮಲಬಾರಿನ ಗವರ್ನರ್ ಆಗಿದ್ದವರು. ಇವರ ಮಲಬಾರಿನ ಸಸ್ಯಸಾಮ್ರಾಜ್ಯದ ಕಥಾನಕವು ಒಂದು ಅಪ್ರತಿಮ ದಾಖಲೆ. ಇದನ್ನು ರಚಿಸಲು ಅವರಿಗೆ ಮಲಬಾರಿನ ಬುಡಕಟ್ಟುಗಳು ನೆರವಾಗಿದ್ದರಂತೆ. ಜೊತೆಗೆ ರಾಕ್ಸ್ಬರ್ಗ್ ಅವರಂತೂ ಕರ್ನಾಟಕವೂ ಸೇರಿದಂತೆ ಭಾರತದಾದಂತ ಸುತ್ತಾಡಿ ಸಸ್ಯಸಂಕುಲಗಳ ಹುಡುಕಾಟ ನಡೆಸಿದರು. ಇವರು ಕೊಲ್ಕತ್ತಾದ ಸಸ್ಯವಿಜ್ಞಾನ ಪಾರ್ಕಿನ ಮುಖ್ಯಸ್ಥರೂ ಆಗಿದ್ದರು. ಇವರ ನಂತರ ಫ್ರಾನ್ಸಿಸ್ ಬುಕನನ್ ಮುಖ್ಯಸ್ಥರಾಗಿದ್ದರು. ಇವರೆಲ್ಲರೂ, ಜೊತೆಯಲ್ಲಿ ಇಂತಹಾ ನೂರಾರು-ಸಹಸ್ರಾರು ಹೆಸರುಗಳಿಂದ ದಾಖಲಾಗದವರೂ ಸೇರಿ ಸಸ್ಯಲೋಕವನ್ನು “ಅ-ಮೃತ”ವಾಗಿಸಿದ್ದಾರೆ. ಇವರ ಸಂಬಂಧಗಳನ್ನೆಲ್ಲಾ ಗಿಡ-ಮರಗಳ ಆಸಕ್ತಿಯಲ್ಲಿ ಜೊತೆಗೂಡಿಸಿ ಸಸ್ಯಯಾನವನ್ನು ಮಾಡುವು ಹಿತವು ಇಲ್ಲಿದೆ.

ಪ್ರೊ.ಬಿ.ಜಿ.ಎಲ್. ಸ್ವಾಮಿಯವರಂತೂ ತಮ್ಮ ಸಸ್ಯವೈಜ್ಞಾನಿಕ ಕಥನಗಳ ಮೂಲಕ ನಮ್ಮೊಳಗೂ ಅಮೃತದ ಸವಿಯನ್ನು ಹಂಚಿದ್ದಾರೆ. ಮಾತ್ರವಲ್ಲ ಸವಿಯನ್ನು ಶಾಶ್ವತವಾಗಿ ಉಳಿಸಿ ಹೋಗಿದ್ದಾರೆ. 2018ನೆಯ ವರ್ಷ ಪ್ರೊ.ಬಿ.ಜಿ.ಎಲ್. ಸ್ವಾಮಿಯವರ ಜನ್ಮ ಶತಮಾನೋತ್ಸವ ವರ್ಷ. ಅವರಿಂದು ನಮ್ಮೊಡನಿದ್ದಿದ್ದರೆ ನೂರೊಂದು ವಸಂತಗಳನ್ನು ಪೂರೈಸಿರುತ್ತಿದ್ದರು. ಅವರ ನೆನಪಿನಲ್ಲಿ ಕೀರ್ತಿನಾಥರ ಪುಸ್ತಕದ ಶೀರ್ಷಿಕೆಯಿಂದ ಮೈದೆಳೆದ “ನೂರು ಮರ”ಗಳ ಸ್ವರಮೇಳದ ಆರಂಭವಾದ ಈ ಸಸ್ಯಸಂಗೀತವು ಸಸ್ಯಪ್ರಿಯರಾದ ತಮ್ಮೆಲ್ಲರಿಗೂ ಇಂಪಾಗಿ, ಹಿತವಾಗಿಸಲು ಗಿಡ-ಮರಗಳ ಕಥನಗಳಲ್ಲಿ ಆಲಾಪನೆಯಿಂದ ಮುಂದುವರೆಯುತ್ತದೆ. ಇಲ್ಲಿನ ಬಡಿ ಪ್ರಬಂಧಗಳನ್ನು ಸಸ್ಯಸಂಕುಲದ ಸಂಗತಿಗಳ ಬಂದಿಶ್ ಎನ್ನಿ, ಪದ್ಯಗಳೆನ್ನಿ, ಕವನಗಳೆನ್ನಿ, ಮಾತುಗಳೆನ್ನಿ, ಏನಾದರೂ ಕರೆಯಿರಿ ಇಲ್ಲಿ ಏನೂ ವರ್ಗೀಕರಣದ ತರ್ಕಗಳಿಲ್ಲ. ವೈಜ್ಞಾನಿಕ-ತಾಂತ್ರಿಕ ಅತಿರೇಕದ ತೊಡಕುಗಳೂ ಇಲ್ಲಿಲ್ಲ. ನಿಮಗೆ ನೀವೆ ನಿಮ್ಮ ಸುತ್ತ ಮುತ್ತಲಿನ ಗಿಡ-ಮರಗಳ ಕಥೆಗಳ ಅನುರಣಿಸಲು ಸಾಧ್ಯವಾಗುವ ಆಸಕ್ತ ಮನಸ್ಸಿದ್ದರೆ ಸಾಕು. ಈ ಸಂಕಲದ ಮೊದಲೆರಡು ಅಧ್ಯಾಯಗಳು ವರ್ಗೀಕರಣ ಮೂಲ ಪಾಠಗಳ ಮೂಲಕ ಪ್ರವೇಶವನ್ನು ಒದಗಿಸುತ್ತವೆ. ನಂತರದ ಅಧ್ಯಾಯಗಳನ್ನು ಒಂದೊಂದೇ ಬಿಡಿಯಾಗಿಯೂ ಓದಬಲ್ಲ ಆಶಯಕ್ಕೆ ಬದ್ಧವಾಗಿವೆ. ಮೊದಲೆರಡು ಅಧ್ಯಾಯಗಳು ಮುಂದಿನ ಪ್ರತೀ ಅಧ್ಯಾಯದಲ್ಲೂ ಸೀಮಿತವಾಗುವ ಒಂದು ಪ್ರಭೇದದ ವಿವರಗಳನ್ನು ಆನಂದಿಸಲು ಬೇಕಾದ ಸರಕುಗಳನ್ನು ಕೊಡುತ್ತವೆ. ಆರಂಭದ ಚರ್ಚೆಯಲ್ಲಿ ಅನುಮಾನದಿಂದಿದ್ದ ನನ್ನ ಪ್ರೀತಿಯ ಗೆಳೆಯ ಆಕಾಶ್ ಮುಂದೆ ಪ್ರತೀ ಪ್ರಭೇದದ ಸಂಕಥನಗಳನ್ನೂ ಮೊದಲ ಓದುಗರಾಗಿ ಅವಶ್ಯಕ ತಿದ್ದುಪಡಿಗಳಿಗೆ ಸಹಾಯವಾಗುತ್ತಾ ಉತ್ಸಾಹವನ್ನು ಬೆಳೆಸುತ್ತಲೇ ಬೆನ್ನು ತಟ್ಟುವ (ಬೆನ್ನುಡಿ) ಮಾತುಗಳಿಂದ ಜೊತೆಯಾಗಿದ್ದಾರೆ.

ಫೇಸ್‌ಬುಕ್ಕಿನಲ್ಲಿ ಆರಂಭವಾದ ಈ ಸಸ್ಯಯಾನದ ಮೊದಲ ಎಂಟು-ಹತ್ತು ಪ್ರಬಂಧಗಳನ್ನು ಓದಿದ ಆಪ್ತ ಗೆಳತಿಯೊಬ್ಬಳು ಪ್ರೀತಿಯಿಂದ ಹೀಗೆ ಬರೆದಿದ್ದಳು. “ಸ್ವರ್ಗದ ಮರ”ದಿಂದ ಆರಂಭಗೊಂಡ ಸಸ್ಯಯಾನ, ಅಲ್ಲಿಂದ ಧರೆಗಿಳಿದ “ಪಾರಿಜಾತ”ದ ಪರಿಮಳವನ್ನು ಪಸರಿಸಿ, ಮುಂದೆ ಸಾಹಸದಿಂದ ಮುನ್ನುಗ್ಗಿ ಪಿರಂಗಿಗುಂಡಿನ “ಕ್ಯಾನನ್ ಬಾಲಿನ” ನಾಗಲಿಂಗ ಪುಷ್ಪದಲ್ಲಿ ಅರಳಿ, ಮನೋಲ್ಲಾಸಕ್ಕೆಂದು ನೇರವಾಗಿ ಆಫ್ರಿಕಾಗೆ ಟಿಕೆಟ್-ರಹಿತ ಪ್ರಯಾಣದಲ್ಲಿ (ಸವಣೂರಿನ) ಬೊಬಾಬ್ ದರ್ಶನ ಮಾಡಿಸಿದವು. ಆಗ ಅಲ್ಲಿನ (ಆಫ್ರಿಕಾ) ಬಿಸಿಲಿಗೆ ದಣಿದ ಮನಸ್ಸಿಗೆ ತಂಪುಕೊಡಲು ಮುಂದೆ ಬಾಗೆ, ಮಳೆ ಮರದ ನೆರಳನ್ನು ಪರಿಚಯಿಸುತ್ತಲೇ, ಮುಂದೆ ಪರೀಕ್ಷೆಯ ದಿನಗಳನ್ನು ನೆನಪಿಸಲು ಮಕ್ಕಳಿಗೆ ಸ್ಪರ್ಧೆಗಿಳಿದು ಬೆಳೆದ “ಟುಲಿಪ್” ಮರಗಳ ತೇರಿನ ಸುಂದರ ದರ್ಶನವನ್ನು ಕೊಟ್ಟವು. ಆಗ ಖುಷಿಯಲ್ಲಿ ಓಡುವ ಭರದಲ್ಲಿ ನೆಲನೋಡಿ ನಡೆವ ಎಚ್ಚರಕ್ಕೆ ಕಾಲಕೆಳಗಿನ “ಗರಿಕೆ”ಯ ನೆನಪಿಸುತ್ತಲ್ತೇ, ಬೇಸಿಗೆಯ ಕಾರಣದಿಂದ “ಬೇಲ”ದ ಪಾನಕದ ರುಚಿಯನ್ನು “ಅಮೃತ”(ಬಳ್ಳಿ)ದ ಸವಿಯಾಗಿಸಿದವು”. ಇಲ್ಲಿನ ಪ್ರಬಂಧಗಳಲ್ಲಿ ನೀವು ಓದುವ ಸ್ವರ್ಗದಮರ, ಪಾರಿಜಾತ, ನಾಗಲಿಂಗ ಪುಷ್ಪ, ಬೊ-ಬಾಬ್ ಮರ (ಸವಣೂರಿನ ದೊಡ್ಡ-ಹುಣಸೆಮರ), ಬಾಗೆ, ಮಳೆ ಮರಗಳಲ್ಲದೆ, ಆಫ್ರಿಕನ್ ಟುಲಿಪ್ ಮರ, ನೆಲಕ್ಕೆ ಅಂಟಿಕೊಂಡಂತೆ ಬೆಳೆವ “ಗರಿಕೆ” ಜೊತೆಗೆ ಬೇಲದ ಮರ ಹಾಗೂ ಅಮೃತಬಳ್ಳಿಯ ಕುರಿತಾಗಿ ಆಕೆಯ ಪ್ರತಿಕ್ರಿಯೆಯಿಂದ ಸಸ್ಯಯಾನದ ಒಟ್ಟಾರೆಯ ಮುಂದಿನ ಓಟಕ್ಕೆ ಪ್ರೇರಣೆಗಳು.

ಇಂತಹ ಆಪ್ತ ಮಾತುಗಳಿಂದ, ಜೊತೆಗೆ ಹತ್ತಾರು ಗೆಳೆಯ-ಗೆಳತಿಯರ ಪ್ರೀತಿಯ ಓದಿನ ಹಿತದಿಂದ ಹುಟ್ಟಿಕೊಂಡ ಸಸ್ಯಕಥನಗಳು ಪ್ರೊ.ಬಿ.ಜಿ.ಎಲ್. ಸ್ವಾಮಿಯವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಅವರ ನೆನಪಿನ ಸಸ್ಯಯಾನವಾಗಿದೆ. ಅವುಗಳ ಜೊತೆಗೆ ನಮ್ಮ ದಿನ ನಿತ್ಯದ ಕಾಫಿ, ಚಹಾ, ಅಡಿಕೆ-ಎಲೆ, ಹೊಟ್ಟೆ ತುಂಬುವ ಅನ್ನ, ಸಾಂಬಾರಿನ ಬೇಳೆ-ಕಾಳುಗಳು, ಒಗ್ಗರಣೆಯ ಕರಿಬೇವು ಅಲ್ಲದೆ, ಹೂವು-ಹಣ್ಣು ಗಿಡ-ಮರಗಳ ಬಗೆಗಿನ ಸಂಗತಿಗಳೆಲ್ಲಾ ಸೇರಿ ಸದ್ಯಕ್ಕಿನ್ನೂ “ಸಸ್ಯಯಾನದ ಅಮೃತ ಬಿಂದು” ವಾಗಿ ನಿಮ್ಮ ಕೈಯಲ್ಲಿದೆ. ನಮ್ಮ ನಿಮ್ಮನ್ನೆಲ್ಲಾ ಒಂದಲ್ಲ ಒಂದು ಬಗೆಯಲ್ಲಿ ಮುಖಾಮುಖಿಯಾಗುವ ಈ ಸಸ್ಯ ಪ್ರಭೇದಗಳ ಬೃಹತ್ತಾದ ಕಥನಗಳ ಅರಿಯುವ ಕುತೂಹಲಕ್ಕೆ ಪುಟ್ಟ ಮೆಟ್ಟಿಲಾಗುವ ಆಶಯ ನನ್ನದು. ಇದು ಲಕ್ಷ-ಲಕ್ಷ ಸಂಖ್ಯೆಯಲ್ಲಿರುವ ಸಸ್ಯ ಸಂಪತ್ತಿನ ಸಾಂಸ್ಕೃತಿಕ ಲೋಕಕ್ಕೆ ನಮ್ಮೆಲ್ಲರನ್ನೂ ತೆರೆದುಕೊಳ್ಳುವ ಕಿಟಕಿಯಾಗುವ ಪುಟ್ಟ ಆಸೆಯಷ್ಟೇ ನನ್ನದು. ನಮಸ್ಕಾರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...