2019 ರ ವಿಧಾನಸಭೆ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಗೋಕಾಕ್ನಲ್ಲಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ಗೋಕಾಕ್ ಕ್ಷೇತ್ರದ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಲು, ನಿರ್ದಿಷ್ಟ ಸಮುದಾಯದ ಮತಗಳಿಸಲು ಜಾತಿ ಮತ್ತು ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ ಎಂದು ಪ್ರಥಮ ದರ್ಜೆ ನ್ಯಾಯಾಲಯ ಹೇಳಿದೆ.
ಕಳೆದ ವರ್ಷ ನವೆಂಬರ್ 23 ರಂದು ಗೋಕಕ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದದ್ದ ಯಡಿಯೂರಪ್ಪ, ವೀರಶೈವ-ಲಿಂಗಾಯತ ಸಮುದಾಯಕ್ಕೆ, ‘ತಮ್ಮ ಮತಗಳನ್ನು ವಿಭಜಿಸದಂತೆ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೋಳಿಯನ್ನು ಬೆಂಬಲಿಸುವಂತೆ’ ಮನವಿ ಮಾಡಿದ್ದರು. ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಇದನ್ನು ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೇಳಿ ಪ್ರಕರಣ ದಾಖಲಿಸಿದ್ದರು.
ಗೋಕಾಕ್ ನಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಉಪಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ಉಳಿವಿಗೆ ನಿರ್ಣಾಯಕವಾದ ರಮೇಶ್ ಲಕ್ಷ್ಮಣ್ ಜಾರಕಿಹೋಳಿ ತಮ್ಮ ಸಹೋದರನ್ನು ಕಾಂಗ್ರೆಸ್ನಿಂದ 29,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು.
ತನಿಖಾ ಅಧಿಕಾರಿ ‘ಬಿ ವರದಿ’ ಸಲ್ಲಿಸಿದರೂ ಆರೋಪಗಳನ್ನು ಸಾಬೀತುಪಡಿಸಲು ಸಮರ್ಪಕ ಪುರಾವೆಗಳಿಲ್ಲ ಎಂದು ಪ್ರಕರಣವನ್ನು ವಜಾಗೊಳಿಸಲು ಮೇಲ್ಮನವಿ ಸಲ್ಲಿಸಿದ್ದರು, ಪ್ರಧಾನ ಮ್ಯಾಜಿಸ್ಟ್ರೇಟ್ ವೀರೇಶ್ ಕುಮಾರ್ ಅದನ್ನು ತಿರಸ್ಕರಿಸಿದರು.
ನ್ಯಾಯಾಲಯ ಹೊರಡಿಸಿದ ಸಮನ್ಸ್ಗೆ ಸಿಎಂ ಅಥವಾ ಅವರ ಕಚೇರಿ ಇನ್ನೂ ಸ್ಪಂದಿಸಿಲ್ಲ.
ಇದನ್ನೂ ಓದಿ: ನಾನುಗೌರಿ ಪೇಜ್ ನಿರ್ಭಂಧಿಸಿದ ಫೇಸ್ಬುಕ್: ಗೌರಿ ಮೀಡಿಯಾ ತಂಡ ಖಂಡನೆ