Homeಅಂತರಾಷ್ಟ್ರೀಯಸೌದಿ ಮೇಲೆ ಯೆಮನ್ ದಾಳಿ: ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದುಬಾರಿ

ಸೌದಿ ಮೇಲೆ ಯೆಮನ್ ದಾಳಿ: ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದುಬಾರಿ

ಮೋದಿ ಅಧಿಕಾರಕ್ಕೆ ಬರುವುದಾದರೆ ಒಂದು ಲೀಟರ್ ಪೆಟ್ರೋಲಿಗೆ 100 ರೂ. ಬೇಕಾದರೂ ಕೊಡುತ್ತೇವೆ ಎಂಬ ಭಕ್ತರ ಭಂಡ ಭವಿಷ್ಯ ಸದ್ಯವೇ ನಿಜವಾಗುವ ಲಕ್ಷಣಗಳಿವೆ.

- Advertisement -
- Advertisement -

ಮೋದಿ ಅಧಿಕಾರಕ್ಕೆ ಬಂದಂದಿನಿಂದಲೂ ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಕಡಿಮೆ ಇದ್ದುದರ ಹೊರತಾಗಿಯೂ ಸರಕಾರ ಭಾರತೀಯ ಗ್ರಾಹಕರಿಗೆ ದುಬಾರಿ ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲನ್ನು ಮಾರುತ್ತಾ ಬಂದಿದೆ. ಅರ್ಧ ದಶಕಕಾಲದಿಂದಲೂ ದಾಖಲೆ ಪ್ರಮಾಣದಲ್ಲಿ ಕಡಿಮೆಯಿದ್ದ ಕಚ್ಛಾ ತೈಲದ ಬೆಲೆಯು ಸೌದಿ ಅರೇಬಿಯಾದಲ್ಲಿ ತೆರೆದುಕೊಳ್ಳುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕಾರಣದಿಂದ ಭಾರೀ ಪ್ರಮಾಣದಲ್ಲಿ ಏರುವ ಸಾಧ್ಯತೆ ಇದೆ.

ಸೌದಿ ಅರೇಬಿಯಾದ ಅಬ್ಖೈಕ್ (ಪ್ರಪಂಚದಲ್ಲಿಯೇ ಅತೀದೊಡ್ಡ) ಮತ್ತು ಖುರೈಸ್‍ನಲ್ಲಿರುವ ಎರಡು ತೈಲ ಸಂಸ್ಕರಣಾ ಘಟಕಗಳ ಮೇಲೆ ಯೆಮೆನ್‍ನ ಹೌಥಿ ಬಂಡುಕೋರರು ಡ್ರೋನ್ ಮೂಲಕ ದಾಳಿ ನಡೆಸಿದ್ದಾರೆ. ಈ ದಾಳಿಗಳ ಪರಿಣಾಮವಾಗಿ ತೈಲಬೆಲೆ ದಾಖಲೆಯ 20 ಶೇಕಡಾ ನೆಗೆತ ಕಂಡಿದೆ. ಕೊಲ್ಲಿ ಯುದ್ಧದ ಸಂದರ್ಭದಲ್ಲಿ, ಅಂದರೆ, ಜನವರಿ 14, 1991ರ ನಂತರ ಇತಿಹಾಸದಲ್ಲಿಯೇ ಎರಡನೇ ಅತಿದೊಡ್ಡ ಪ್ರಮಾಣದ ಏರಿಕೆ ಇದಾಗಿದೆ. ತೈಲ ಬೆಲೆ ಈಗಿರುವ ಬ್ಯಾರಲ್‍ಗೆ 54 ಡಾಲರ್ ಮಟ್ಟದಿಂದ ಬ್ಯಾರಲ್‍ಗೆ 100 ಡಾಲರ್‍ಗೂ ಹೆಚ್ಚಿನ ಮಟ್ಟಕ್ಕೆ ಏರುವ ನಿರೀಕ್ಷೆ ಇದೆ.

ಸೆಪ್ಟೆಂಬರ್ 14ರಂದು ಯೆಮೆನಿ ಹೌಥಿ ಬಂಡುಕೋರರು ಹಾರಿಸಿದ ಡ್ರೋನ್ ಅಥವಾ ಕ್ರೂಸ್ ಕ್ಷಿಪಣಿಗಳಿಂದ ಅಬ್ಖೈಕ್‍ನಲ್ಲಿರುವ ಪ್ರಪಂಚದ ಅತ್ಯಂತ ದೊಡ್ಡ ತೈಲ ಸ್ಥಿರೀಕರಣ ಸೌಲಭ್ಯಕ್ಕೆ ಬೆಂಕಿ ಹತ್ತಿಕೊಂಡಿದೆ. ಸ್ಥಿರೀಕರಣವೆಂದರೆ, ಕಚ್ಛಾ ತೈಲವನ್ನು ಭಾಗಶಃ ಸಂಸ್ಕರಿಸಿ, ಅದರಲ್ಲಿ ಇರುವ ಹೈಡ್ರೋಜನ್ ಸಲ್ಫೈಡ್ ಅಂಶವನ್ನು ತೆಗೆದು, ಆವಿಯ ಒತ್ತಡವನ್ನು ಕಡಿಮೆ ಮಾಡುವ ಪ್ರಕ್ರಿಯೆ. ಇದರಿಂದ ಟ್ಯಾಂಕರ್ ಹಡಗುಗಳಲ್ಲಿ ತೈಲದ ಸಾಗಾಟ ಸುರಕ್ಷಿತವಾಗುತ್ತದೆ.

ಸೌದಿ ಸರಕಾರಿ ಸ್ವಾಮ್ಯದ ‘ಅರಾಮ್ಕೋ’ಗೆ ಸೇರಿದ ಈ ತೈಲ ಮತ್ತು ಅನಿಲ ಸಂಸ್ಕರಣಾ ಕೇಂದ್ರವು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಘಟಕವಾಗಿದ್ದು, ಅದು ಪ್ರಪಂಚದ ಅತ್ಯಂತ ದೊಡ್ಡ ಸಾಂಪ್ರದಾಯಿಕ ತೈಲ ಕ್ಷೇತ್ರವಾದ ಘವರ್ ಕ್ಷೇತ್ರವನ್ನು ನಿರ್ವಹಿಸುತ್ತದೆ. ಅಲ್ಲದೆ ರಫ್ತು ಟರ್ಮಿನಲ್‍ಗಳಾದ ರಾಸ್ ತನುರಾ (ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಸಮುದ್ರ ಮಧ್ಯದ ತೈಲ ಲೋಡಿಂಗ್ ಸೌಲಭ್ಯ) ಮತ್ತು ಜುಆಯಿಮಾಗೆ ತೈಲ ಪೂರೈಸುತ್ತದೆ. ಅಬ್ಖೈಕ್ ಪ್ರತಿದಿನ 68 ಲಕ್ಷ ಬ್ಯಾರಲ್ ತೈಲ ಸಂಸ್ಕರಿಸುತ್ತದೆ. ಸೌದಿಯ ತೈಲ ಮತ್ತು ಅನಿಲ ಉತ್ಪಾದನೆಯ ಮೂರನೇ ಎರಡರಷ್ಟು ಭಾಗ ಈ ಘಟಕದ ಮೂಲಕವೇ ಸಾಗುತ್ತದೆ.


ದಾಳಿಯ ಎರಡನೇ ಗುರಿ – ದೇಶದ ಎರಡನೇ ಅತಿದೊಡ್ಡ ತೈಲ ಕ್ಷೇತ್ರದ ಬಳಿ ಇರುವ, ದಿನಕ್ಕೆ 18 ಲಕ್ಷ ಬ್ಯಾರಲ್ ತೈಲ ಸಂಸ್ಕರಿಸುವ ಖುರೈಸ್ ಘಟಕ. ಈ ಎರಡೂ ಘಟಕಗಳು ಯೆಮೆನ್‍ನಿಂದ 1000 ಕಿ.ಮೀ.ಗೂ ಹೆಚ್ಚು ದೂರದಲ್ಲಿವೆ. ಅಬ್ಖೈಕ್‍ನ 17 ಸ್ಥಳಗಳು ಉರಿಯುತ್ತಿವೆಯಾದರೂ, ಒಟ್ಟು ಎಷ್ಟು ಹಾನಿ, ನಾಶ ಸಂಭವಿಸಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ.

ಪ್ರಪಂಚದ ಅತ್ಯಂತ ಬಡದೇಶಗಳಲ್ಲಿ ಒಂದಾಗಿರುವ ಯೆಮೆನ್, 2015ರಿಂದಲೂ ಸೌದಿ ಮತ್ತು ಯುಎಇ, ಪಾಶ್ಚಾತ್ಯ ಶಸ್ತ್ರಾಸ್ತ್ರಗಳ ಬೆಂಬಲದೊಂದಿಗೆ ನಡೆಸುತ್ತಿರುವ ಬರ್ಬರ ಯುದ್ಧವನ್ನು ಎದುರಿಸುತ್ತಿದೆ. ಹಾಗಾಗಿ ಅದಕ್ಕೆ ಪ್ರತಿರೋಧವಾಗಿ ಈ ದಾಳಿಗಳ ಹೊಣೆಯನ್ನು ಹೊತ್ತುಕೊಂಡಿದೆ. ಸೌದಿಯ ಬಾಂಬ್ ದಾಳಿ ಮತ್ತು ದಿಗ್ಬಂಧನದ ಪರಿಣಾಮವಾಗಿ ಯೆಮೆನ್‍ನ ಮೂರನೇ ಎರಡರಷ್ಟು ಪ್ರಜೆಗಳು ನಿರಾಶ್ರಿತರಾಗಿದ್ದು, ತೀವ್ರ ಅಪೌಷ್ಠಿಕತೆಯ ಹೊಸ್ತಿಲಲ್ಲಿದ್ದಾರೆ.

ಅಮೆರಿಕ ಪ್ರತಿಕ್ರಿಯೆ
ಇರಾನ್ ವಿರುದ್ಧದ ಅಮೆರಿಕ ಮತ್ತು ಸೌದಿ ನೇತೃತ್ವದ ಮಿತ್ರಕೂಟವು ಈ ಅವಕಾಶವನ್ನು ಇರಾನ್ ವಿರುದ್ಧ ದಾಳಿಯನ್ನು ಹೆಚ್ಚಿಸಲು ಬಳಸುತ್ತಿದೆ. ಯುಎಸ್‍ಎಯ ರಾಜ್ಯಾಂಗ ಕಾರ್ಯದರ್ಶಿ ಮೈಕ್ ಪೋಂಪಿಯೋ ನೇರವಾಗಿ ಇರಾನನ್ನು ಹೊಣೆ ಮಾಡಿದ್ದರೆ, ಅಧ್ಯಕ್ಷ ಟ್ರಂಪ್ ಇದನ್ನೇ ಎರಡು ಬಾರಿ ಟ್ವೀಟ್ ಮಾಡಿದ್ದಾರೆ. ಒಬ್ಬ ಸೆನೆಟರ್ ಅಂತೂ ಇರಾನಿನ ತೈಲಕ್ಷೇತ್ರಗಳ ಮೇಲೆ ಬಾಂಬ್ ದಾಳಿ ಮಾಡುವ ಸಲಹೆಯನ್ನೂ ನೀಡಿದ್ದಾರೆ. ಇರಾನಿನ ವಿದೇಶಾಂಗ ಮಂತ್ರಿ ಎಂ.ಜೆ. ಝರೀಫ್, ಪೋಂಪಿಯೋ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಹೌಥಿಗಳು ನಡೆಸಿದ ದಾಳಿಗೆ ಇರಾನನ್ನು ಹೊಣೆ ಮಾಡುವ ಮೂಲಕ ಯುಎಸ್‍ಎ ತನ್ನ ‘ಗರಿಷ್ಟ ಒತ್ತಡ’ದ ವಿಫಲ ಧೋರಣೆಯಿಂದ ಹಿಂದೆ ಸರಿದು, ‘ಗರಿಷ್ಟ ಸಂಚಿನ’ ಧೋರಣೆ ಅನುಸರಿಸುತ್ತಿದೆ ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ.

ಸೌದಿಯ ಮೇಲಿನ ದಾಳಿಗಳ ಕುರಿತು ಆತಂಕ ವ್ಯಕ್ತಪಡಿಸಿರುವ ರಷ್ಯಾ ಮತ್ತು ಚೀನಾ, ಅವಸರದ ತೀರ್ಮಾನಗಳ ಕುರಿತು ಎಚ್ಚರಿಕೆ ನೀಡಿವೆ. ಯಾವುದೇ ತನಿಖೆ ಅಥವಾ ಸಾಕ್ಷ್ಯಾಧಾರಗಳು ಇಲ್ಲದೇ ಯುಎಸ್‍ಎಯ ಬಹಿರಂಗ ಮಿಲಿಟರಿ ಮಾತುಗಳು ಸ್ವೀಕಾರಾರ್ಹವಲ್ಲ ಎಂದು ಎರಡೂ ದೇಶಗಳ ವಿದೇಶಾಂಗ ಖಾತೆಗಳ ವಕ್ತಾರರು ಹೇಳಿಕೆ ನೀಡಿದ್ದಾರೆ. ರಷ್ಯಾದ ವಕ್ತಾರರು ಇನ್ನೂ ಮುಂದುವರಿದು, ಈ ದಾಳಿಗಳು ಯೆಮೆನ್‍ನಲ್ಲಿ ಮುಂದುವರಿಯುತ್ತಿರುವ ಬಿಕ್ಕಟ್ಟಿನ ನೇರ ಪರಿಣಾಮ’ ಎಂದು ಬಣ್ಣಿಸಿದ್ದಾರೆ.

“ಸೌದಿ ಅರೇಬಿಯಾ ನಮ್ಮ ಕ್ಷಿಪಣಿಗಳ ಖರೀದಿ ಪಟ್ಟಿಯು ಅದರ ಭದ್ರತೆಗೆ ಬೆದರಿಕೆ ಎಂಬ ನೆಪವೊಡ್ಡಿ ಯೆಮೆನ್‍ನ ಮೇಲೆ ಯುದ್ಧ ಸಾರಿತು. ಈಗ ನಾವು ಅವರ ತೈಲ ಕ್ಷೇತ್ರಗಳ ಮೇಲೆ ದಾಳಿ ನಡೆಸಿದಾಗ, ಅವರು ಯೆಮೆನನ್ನು ಬಿಟ್ಟು ಬೇರೆಯವರು ಇದನ್ನು ಮಾಡಿದ್ದಾರೆ ಎಂದು ದೂರಿದಾಗ ಆಶ್ಚರ್ಯವಾಗುತ್ತದೆ. ಇದು ಅವರ ಹೇಡಿತನವನ್ನು ತೋರಿಸುತ್ತದೆ” ಎಂದು ಹೌಥಿಗಳ ಅತ್ಯುನ್ನತ ರಾಜಕೀಯ ಮಂಡಳಿಯ ಸದಸ್ಯ ಮೊಹಮ್ಮದ್ ಅಲ್-ಬುಖೈತಿ ಹೇಳಿದ್ದಾರೆ.

ಇರಾನ್ ಮತ್ತು ನಂತರದಲ್ಲಿ ವೆನೆಜ್ಯೂಯೆಲಾ ವಿರುದ್ಧ ಅಮೆರಿಕದ ಏಕಪಕ್ಷೀಯ ಮತ್ತು ಕಾನೂನುಬಾಹಿರ ದಿಗ್ಬಂಧನ ಕಳೆದ ನವೆಂಬರ್‍ನಿಂದಲೇ ಜಾರಿಗೆ ಬಂದಿದೆ. ಅಲ್ಲಿಂದ ನಂತರ ಈ ಎರಡು ಬಿಕ್ಕಟ್ಟುಗಳು ಪ್ರಪಂಚವನ್ನು ಈಗಾಗಲೇ ತೈಲ ಮಾರುಕಟ್ಟೆಯ ಅಸ್ಥಿರತೆಯತ್ತ ತಳ್ಳಿವೆ. ಭಾರತವು ಅಮೆರಿಕದ ಒತ್ತಡಕ್ಕೆ ಮಣಿದು, ಏಪ್ರಿಲ್ 2019ರಿಂದ ಇರಾನಿನಿಂದ ತೈಲ ಖರೀದಿಯನ್ನು ನಿಲ್ಲಿಸಿತು. ಸೌದಿಯಿಂದಲೇ ಹೆಚ್ಚು ಆಮದು ಮಾಡಿಕೊಳ್ಳುತ್ತಿತ್ತು. ಆದುದರಿಂದ, ಒಂದು ಕಡೆ ಸೌದಿ ತೈಲದ ಕುರಿತ ಅಮೆರಿಕದ ಸುಳ್ಳು ಭರವಸೆ ಮತ್ತು ಇನ್ನೊಂದು ಕಡೆ ಇರಾನಿಗೆ ಭಾರತ ಕೈಕೊಟ್ಟ ಪರಿಣಾಮವಾಗಿ ಈ ಬಿಕ್ಕಟ್ಟಿನಿಂದ ಭಾರತವು ಗರಿಷ್ಟ ಬಾಧಿತವಾಗಲಿದೆ. ಭಾರತದ ಜನರು ತೈಲ ಬೆಲೆ ಹೆಚ್ಚಳದ ಜೊತೆಗೆ, ಅದರ ಪರಿಣಾಮವಾಗಿ ಉಂಟಾಗುವ ಸರಕು ಬೆಲೆಯೇರಿಕೆಯ ಪರಿಣಾಮವನ್ನೂ ಎದುರಿಸಲಿದ್ದಾರೆ. ಮೋದಿ ಮತ್ತವರ ಮಂತ್ರಿಗಳನ್ನು ಈ ಕುರಿತ ಪ್ರಶ್ನೆಗಳಿಂದ ರಕ್ಷಿಸಲು ಅತಿರೇಕದ ಉಡಾಫೆಗಳಲ್ಲಿ ಹೆಚ್ಚಳವನ್ನೂ ನಾವು ಕಾಣಬಹುದು.

ಒಟ್ಟಾರೆ ಆರ್ಥಿಕತೆಯು ಕುಂಠಿತಗೊಳ್ಳುತ್ತಿರುವ, ಬೆಳವಣಿಗೆಯ ಸೂಚ್ಯಂಕಗಳು ಕುಸಿಯುತ್ತಿರುವ ಮತ್ತು ಭಾರೀ ಪ್ರಮಾಣದಲ್ಲಿ ನಿರುದ್ಯೋಗ ಹೆಚ್ಚಿರುವ ಈ ಹೊತ್ತಿನಲ್ಲಿ ಭಾರತಕ್ಕೆ ಈ ತೈಲ ಬೆಲೆ ಏರಿಕೆಯು ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದಂತಾಗಬಹುದು!

  • ಭರತ್ ಹೆಬ್ಬಾಳ್
    ಅನುವಾದ: ನಿಖಿಲ್ ಕೋಲ್ಪೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...