ಕಿಚ್ಚ ಸುದೀಪ್ ಸಿನಿಮಾ ಫ್ರೇಮಿನ ಆಚೆಗೂ ತುಂಬಾ ಡೈನಾಮಿಕ್ ವ್ಯಕ್ತಿ. ಹಾಗಾಗಿ ಒಂದಿಲ್ಲೊಂದು ಕಾರಣಕ್ಕೆ ಅವರ ಹೆಸರು ಸುದ್ದಿಯಲ್ಲಿ ಇದ್ದೇ ಇರುತ್ತೆ. ಈಗ ಸುದೀಪ್ ಅಂತಹ ಮತ್ತೊಂದು ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ ಕುಮಾರಣ್ಣನ ಮನೆ ಹೊಕ್ಕು ಬರೋಬ್ಬರಿ ಎರಡು ಗಂಟೆ ಕಾಲಕಳೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಅದಾದ ಬೆನ್ನಿಗೇ ದಿಢೀರ್ ಅಂತ ಸಿಎಂ ಸಿದ್ರಾಮಯ್ಯರನ್ನು ಭೇಟಿ ಮಾಡಿ ಜನರಲ್ಲಿ ಸಿಕ್ಕಾಪಟ್ಟೆ ಕನ್ಫ್ಯೂಶನ್ ಕ್ರಿಯೇಟ್ ಮಾಡಿದ್ದಾರೆ. ಆಂದ್ರವಾಡು ನಟ ಪವನ್ ಕಲ್ಯಾಣ್ ಮೂಲಕ ತೆಲುಗು ಪ್ರಾಬಲ್ಯವಿರುವ ಕ್ಷೇತ್ರಗಳ ಮೇಲೆ ಲಗ್ಗೆ ಹಾಕಲು ಸಜ್ಜಾಗಿರುವ ಕುಮಾರಣ್ಣರನ್ನು ಅದ್ಯಾವಾಗ ಸುದೀಪ್ ಭೇಟಿಯಾಗಿದ್ದರೋ ಆಗ ಸುದೀಪ್ ಜೆಡಿಎಸ್ ಅಭ್ಯರ್ಥಿಯಾಗಿ, ನಾಯಕ ಮತಗಳು ಜೋರಾಗಿರುವ ದುರ್ಗ ಅಥವಾ ಬಳ್ಳಾರಿ ಕಡೆ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿ ಬಂದಿದ್ದವು. ಒಂದೊಮ್ಮೆ ಸ್ಪರ್ಧಿಸದಿದ್ದರೂ, ಜೆಡಿಎಸ್ ಪರ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿ ಇತ್ತು.
ಯಾಕಂದ್ರೆ, ಸುದೀಪ್ ಯಾವತ್ತೂ ರಾಜಕಾರಣದ ಆಯ್ಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದವರಲ್ಲ. ರಾಜಕಾರಣದ ವಿಷಯ ಬಂದಾಗ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿ ಮುಗಿಸಿಬಿಡುತ್ತಿದ್ದರು. ಕುಮಾರಣ್ಣನ ಭೇಟಿಯ ನಂತರ ಇದೀಗ ಸಿದ್ದರಾಮಯ್ಯರನ್ನೂ ಭೇಟಿ ಮಾಡಿರುವ ಸುದೀಪ್ ಮತ್ತಷ್ಟೂ ಟಿಆರ್ಪಿ ಸರಕಾಗಿ ಬದಲಾಗಿದ್ದಾರೆ. ಎರಡು ವಿರುದ್ಧ ಧೃವಗಳ ನಡುವೆ ಸುದೀಪ್ನಂತಹ ನಟ ಅದ್ಯಾವ ಪೊಲಿಟಿಕಲ್ ಗೇಮ್ ನಡೆಸುತ್ತಿದ್ದಾರೆ ಎನ್ನುವ ಕುತೂಹಲ ಜನರನ್ನೂ ಕಾಡುತ್ತಿದೆ. ತಮ್ಮ ಸಾರಥ್ಯದಲ್ಲಿ ನಡೆಯುತ್ತಿರೋ `ಕೆಸಿಸಿ’ ಕ್ರಿಕೆಟ್ ಕಪ್ನ ಉದ್ಘಾಟನೆಗೆ ಆಹ್ವಾನಿಸಲು ಸಿಎಂ ಮನೆಗೆ ಹೋಗಿದ್ದರು ಅಷ್ಟೇ ಎಂಬ ನೆಪ ಕಿಚ್ಚ ಪಾಳಯದಿಂದ ಕೇಳಿಬರುತ್ತಿದೆಯಾದರು, ಮುಂದೆ ಈ ಭೇಟಿಗಳು ಪೊಲಿಟಿಕಲ್ ಪರಿಣಾಮಗಳಾಗಿ ಹೊರಹೊಮ್ಮಿದರೆ ಅಚ್ಚರಿಯೂ ಇಲ್ಲ… ಅಟ್ ದಿ ಸೇಮ್ ಟೈಮ್, ತಪ್ಪೂ ಅಲ್ಲ ಬಿಡಿ!