Homeಸಾಮಾಜಿಕಜೋಯಿಸರ ‘ವರ್ಚುವಲ್’ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ಮು!

ಜೋಯಿಸರ ‘ವರ್ಚುವಲ್’ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ಮು!

- Advertisement -
- Advertisement -

ನಕಲಿ ಜೋಯಿಸರ ಬುರುಡೆ ಶಾಸ್ತ್ರಗಳು ಹೇಗೆ, ಜನ್ಮದಿಂದ ಸುತ್ತಿಕೊಂಡು, ಹೆಸರಿನಿಂದ ಗಟ್ಟಿಗೊಂಡು, ಪಂಚಾಂಗಗಳೆಂಬ ಬಾಹುಗಳಿಂದ ಕಟ್ಟಿಹಾಕುತ್ತವೆಂಬುದನ್ನು ನೋಡಿದೆವು. ಕಳೆದ ಬಾರಿ ವಿವರಿಸಿದ ಹಲ್ಲಿ ಶಕುನ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಸೂಚಿಸಲು ಓದುಗರಾದ ಪುಷ್ಪಾ ಸುರೇಂದ್ರ ಅವರು ಕಾಂಚಿಪುರಂ ದೇವಾಲಯದ ಉದಾಹರಣೆ ಕೊಟ್ಟಿದ್ದಾರೆ. ಅಲ್ಲೊಂದು ಕಲ್ಲಿನ ಹಲ್ಲಿಯಿದೆಯಂತೆ. ಈ ಹಲ್ಲಿಪತನ ಫಲದಿಂದ ಭಯಗೊಂಡವರು ಬೇರೆಬೇರೆ ರಾಜ್ಯಗಳಿಂದ ಪರಿಹಾರಾರ್ಥ ಇಲ್ಲಿ ಬಂದು ಅದರ ಮೇಲೆ ಎಣ್ಣೆ ಸುರಿಯುತ್ತಾರಂತೆ! ಅಂದರೆ ಈ ಹಲ್ಲಿಯನ್ನೇ ಜನರ ಮೇಲೆಸೆದು ಬೆದರಿಸಿ ದೋಚುವ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದೆ ಎಂದಾಯಿತು! ಅದಿರಲಿ, ನಾವೀಗ ಹುಟ್ಟಿನಿಂದ ನೇರವಾಗಿ ಸಾವಿಗೆ ಹೋಗಿ ಅಲ್ಲಾಗಿರುವ ಮಹಾನ್ ಆವಿಷ್ಕಾರಗಳನ್ನು ನೋಡೋಣ. ನಂತರ ವಿಸ್ತಾರವಾದ ಜೀವನಕ್ಕೆ ಬರೋಣ.
ಕೆಲ ವರ್ಷಗಳ ಹಿಂದೆ ನನ್ನ ದೊಡ್ಡಪ್ಪ ಮುಂಬಯಿಯಲ್ಲಿ ತೀರಿಕೊಂಡಾಗ ಅವರ ಮತ್ತು ಅದಕ್ಕೆ ಕೇವಲ ಒಂದು ವಾರ ಮೊದಲು ತೀರಿಕೊಂಡಿದ್ದ ಅವರ ಪತ್ನಿ- ದೊಡ್ಡಮ್ಮನ ಶವಸಂಸ್ಕಾರವನ್ನು ಅವರ ಗೆಳೆಯರು ವಿದ್ಯುತ್ ಚಿತೆಯಲ್ಲಿ ಯಾವುದೇ ಧಾರ್ಮಿಕ ಕ್ರಿಯಾಕರ್ಮ ಇಲ್ಲದೇ ಮಾಡಿದ್ದರು. ಅವರಿಗೆ ಮಕ್ಕಳಿರಲಿಲ್ಲ.
ನಾಸ್ತಿಕರಾಗಿದ್ದ ಅವರ ಪಿಂಡ ಪ್ರಧಾನವನ್ನೂ ಯಾರೂ ಮಾಡಿಲ್ಲ ಎಂದು ಬಹುವಾಗಿ ನೊಂದ ಮುಂಬಯಿಯಲ್ಲೇ ಇದ್ದ ಅವರ ತಂಗಿ, ಅಂದರೆ ನನ್ನ ಅತ್ತೆ ಪಿಂಡ ಬಿಡಲು ನನ್ನನ್ನು ಕರೆಸಿದರು. ಹಿಂದೂ ಆಚರಣೆಗಳ ಬಗ್ಗೆ ಅತೀವ ಶ್ರದ್ಧೆ ಇದ್ದ ಅತ್ತೆ ಮದುವೆಯಾದದ್ದು ಕ್ರೈಸ್ತರನ್ನು ಎಂದರೆ ನಿಮಗೆ ಆಶ್ಚರ್ಯ ಆಗಬಹುದು!
ದೊಡ್ಡಪ್ಪನ ಶಿಷ್ಯನೂ, ದೇವ-ಧರ್ಮ ನಿರ್ಲಿಪ್ತನೂ ಅದ ನಾನು, ಅವರ ಮನ ನೋಯಿಸಲು ಇಚ್ಛಿಸದೇ ಒಪ್ಪಿಕೊಂಡಿದ್ದೆ. ಮುಂಬಯಿಯಲ್ಲೇ ಕೆಲ ವರ್ಷ ಇದ್ದ ನನಗೆ ಜನ ನಿಭಿಡ ಮೆರೀನ್ ಲೈನ್ಸ್ನಲ್ಲಿ ಎತ್ತರವಾದ ಗೋಡೆಗಳ ಹಿಂದೆ ಅಷ್ಟೊಂದು ದೊಡ್ಡ ಸ್ಮಶಾನವಿದೆ ಎಂದು ಗೊತ್ತೇ ಇರಲಿಲ್ಲ. ಅದೊಂದು ಹಳ್ಳಿಯೇ ಅಗಿದ್ದು, ಬೇರೆ ಬೇರೆ ಜಾತಿಗಳವರು ನೂರಾರು ವರ್ಷಗಳ ಹಿಂದೆಯೇ ಕ್ರಿಯಾಕರ್ಮಗಳಿಗೆಂದು ಕಟ್ಟಿಸಿದ್ದ ದೊಡ್ಡ ದೊಡ್ಡ ಪುರಾತನ ಮನೆಗಳಿದ್ದವು. ಅಲ್ಲಿ ಅದಕ್ಕಾಗಿಯೇ ಹಲವಾರು ಅರ್ಚಕ ಕುಟುಂಬಗಳೂ ವಾಸಿಸುತ್ತಿದ್ದವು! ಅದೊಂದು ಬ್ರಾಹ್ಮಣ ಗ್ರಾಮವಾಗಿದ್ದು, ಇವೆಲ್ಲಾ ಬೇಕಾಬಿಟ್ಟಿ ಹಣ ಮಾಡುವ ಅಧಿಕೃತ ಏಜೆನ್ಸಿಗಳು!
ನನ್ನ ಸಂಬಂಧಿಯೊಬ್ಬರು ಕ್ರಿಯೆಗೆ ಕೂತುದರಿಂದ ನನಗೆ ಸಂಕಷ್ಟ ತಪ್ಪಿತು. ನಮಗೆ ಸಿಕ್ಕಿದ ಭಟ್ರು ಮಂತ್ರದ ಅರ್ಥ ಮಾತ್ರವಲ್ಲದೆ, ಆ ಪದ್ಧತಿ ಬಂದುದರ ಹಿನ್ನೆಲೆ, ಆಚರಣೆಯ ವೈದಿಕ ಅರ್ಥ, ಕಾಲಾನುಕ್ರಮದಲ್ಲಿ ಆದ ಬದಲಾವಣೆಗಳು ಎಲ್ಲವನ್ನೂ ವಿವರಿಸಿ ಹೇಳುತ್ತಿದ್ದರು. “ನಿಮಗೆ ಅರ್ಧವಾಗದೆ ನೀವಿದನ್ನು ಮಾಡಿ ಏನು ಪ್ರಯೋಜನ?” ಎಂಬ ಅವರ ಮಾತನ್ನು ಈಗಿನ ಸುಲಿಗೆಕೋರರಿಗೂ, ಅವರ ಬಕ್ರಾಗಳಿಗೂ ಕೇಳಬೇಕು!
ಹಿಂದೂ ಧರ್ಮ ಪ್ರಕಾರ ನನ್ನ ದಿವಂಗತ ದೊಡ್ಡಪ್ಪ ಮತ್ತು ದೊಡ್ಡಮ್ಮನಿಗೆ ಸ್ಥಾನಮಾನ ಬೇರೆ ಬೇರೆಯಾಗಿದ್ದುದರಿಂದ ಪಿತೃ ಪ್ರಧಾನ ಸಂಸ್ಕೃತಿಯಂತೆ ಗಂಡು-ಹೆಣ್ಣು ತಾರತಮ್ಯದ ಕ್ರಿಯೆಗಳು ನಡೆದವು. ಅದು ಯಾಕೆ ಇತ್ಯಾದಿಗಳನ್ನೂ ಅವರು ‘ವೇದಾಧಾರದಲ್ಲಿ’ ವಿವರಿಸಿದರು.
ಇದನ್ನು ಯಾಕೆ ಹೇಳಿದೆನೆಂದರೆ ಈಗ ನಿಮ್ಮನ್ನು ಹುಸಿಮಂತ್ರಗಳ ಭಯದ ಕತ್ತಲಲ್ಲಿಟ್ಟು ನೀವು ಬೆರಳು ತೋರಿಸದೆಯೇ ಹಸ್ತ ಮಾತ್ರವಲ್ಲ, ಇಡೀ ದೇಹವನ್ನೇ ನುಂಗುವ ಜೋಯಿಸರುಗಳು ಟಿವಿಗಳಲ್ಲೇ ವಕ್ಕರಿಸುತ್ತಿರುವಾಗ ಇಂತವರು ‘ನವಗ್ರಹ’ ಯೋಗದಂತೆ ತಾತಾ ಅಪರೂಪ!
ವಿಶೇಷವೆಂದರೆ ಸರಳವಾಗಿದ್ದ ಈ ವ್ಯಕ್ತಿ ‘ಶಾಸ್ತ್ರ’ದಲ್ಲಿ ಎಷ್ಟು ಹೇಳಿದೆಯೋ ಅಷ್ಟೇ- ಅಂದರೆ, ಪೈಸೆ, ಅಣೆ ಲೆಕ್ಕದಲ್ಲಿ ಚಿಲ್ಲರೆ ಹಣ ಮಾತ್ರ ಪಡೆಯುತ್ತಿದ್ದರು!
“ನಿಮ್ಮಲ್ಲಿ ಚಿಲ್ಲರೆ ಇರಲಿಕ್ಕಿಲ್ಲವಾದುದರಿಂದ ಅದನ್ನೂ ನಾನೇ ತಂದಿದ್ದೇನೆ” ಎಂದು ಜೋಳಿಗೆಯಿಂದ ಹಳೆಯ ನಾಣ್ಯಗಳನ್ನು ತೆಗೆದರು. “ನಿಮಗೆ ನಾನು ಸಾಲ ಕೊಡುತ್ತೇನೆ. ಅದನ್ನು ನೀವು ಶಾಸ್ತ್ರದಂತೆ ನನಗೆ ದಾನ ಮಾಡಬೇಕು. ನಂತರ ನನ್ನ ಸಾಲವನ್ನು ಒಟ್ಟಿಗೆ ತೀರಿಸಿ. ಶಾಸ್ತ್ರದ ಪ್ರಕಾರ ನೀವು ನನಗೆ ಗೋದಾನ ಮಾಡಬೇಕು. ಈಗ ಈ ನಗರದಲ್ಲಿ ಗೋವನ್ನು ಎಲ್ಲಿಂದ ತರುತ್ತೀರಿ? ನಾನೆಲ್ಲಿ ಸಾಕಲಿ? ಗೋವು ಇಲ್ಲದಿದ್ದಲ್ಲಿ ಶಾಸ್ತ್ರದಲ್ಲಿ ಚಿನ್ನದ ಪ್ರತಿಮೆ ದಾನ ಮಾಡಬಹುದೆಂದಿದೆ. ನಾನು ಅದನ್ನೂ ತಂದಿದ್ದೇನೆ” ಎಂದು ಜೋಳಿಗೆಯಿಂದ ಚಿನ್ನದ ಚಿಕ್ಕ ದನದ ಪ್ರತಿಮೆ ತೆಗೆದರು.
“ನಾನು ನಿಮಗೆ ಹಣ ಸಾಲಕೊಟ್ಟು ಇದನ್ನು ಮಾರುತ್ತೇನೆ. ಆ ಕಾಲದ ರೇಟು ಒಂದೂ ಕಾಲು ರೂಪಾಯಿ. ಹಣ ನಂತರ ಕೊಡಿ” ಎಂದು ಚಿನ್ನದ ದನವನ್ನು ಅತ್ತೆಗೆ ಮಾರಿದರು. ನಂತರ ಅದನ್ನೇ ದಾನವಾಗಿ ಪಡೆದರು ಎನ್ನಿ! ಮಾರಿದ ಹಣ ಬೇರೆ, ದಾನ ಲಾಭ ಪ್ರತ್ಯೇಕ! ಅದರೂ ಅವರು ದನದ ಪ್ರಸ್ತುತ ರೇಟು ಪಡೆಯಲಿಲ್ಲ! ಅದೇ ರೀತಿ ಜೋಳಿಗೆಯಿಂದ ಮಣ್ಣನ್ನು ತೆಗೆದು ತಾವೇ ಮಾರಿ, ಭೂದಾನವನ್ನೂ ಪಡೆದರು. ಎಲ್ಲವನ್ನೂ ಅಣೆ ಪೈ ಲೆಕ್ಕದಲ್ಲಿ ದಕ್ಷಿಣೆ ಪಡೆದರು. ನಾನು ಈ ವರ್ಚುವಲ್ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ ನೋಡಿ ಅಚ್ಚರಿಪಟ್ಟೆ.
ನನ್ನ ಅತ್ತೆಯವರಿಗಂತೂ ಖುಷಿಯಾಗಿ ಕೊನೆಗೆ ಉದಾರ ದಕ್ಷಿಣೆ ಕೊಟ್ಟ ರೂ, ಅವರು ಅದರಲ್ಲಿ ಈಗಿನ ಲೆಕ್ಕಾಚಾರ ಹಾಕಿ ಸ್ವಲ್ಪವನ್ನೇ ತೆಗೆದುಕೊಂಡರು! “ನಿಮಗಿದು ಈಗ ಕಡಿಮೆ ಕಾಣಬಹುದು. ಹಿಂದಿನ ಕಾಲದಲ್ಲಿ ಇದು ಭಾರೀ ದೊಡ್ಡ ಹಣ!” ಎಂದು ನೆನಪಿಸಿದರು ಬೇರೆ!!
ಇವೆಲ್ಲಾ ನಮಗೆ ಜೀವನದ ಅರ್ಥ ಮಾಡಿಸುವ ಸಾಂಕೇತಿಕ ಕ್ರಿಯೆಗಳು ಮಾತ್ರ ಅವುಗಳಿಗೆ ಪ್ರಸ್ತುತತೆ ಅರ್ಥ ಇಲ್ಲ. ಹಿಂದಿನವರ ಜೀವನಕ್ರಮ, ಅವರು ಕಂಡುಕೊಂಡ ಅರ್ಥವನ್ನು ನೆನಪಿಸುವುದು ಇವುಗಳ ಉದ್ದೇಶ ಎಂದೂ ವಿವರಿಸಿದರು.
ನಾನು ಒಂದು ಕಡೆ ಬೆರಗಾಗುತ್ತಾ, ಇನ್ನೊಂದು ಕಡೆ ಮನಸ್ಸಿನಲ್ಲೇ ನಗುತ್ತಾ ಇದ್ದೆ! ಯಾಕೆಂದರೆ, ಕ್ರಿಯೆ ನಡೆಯುತ್ತಿದ್ದಾಗ ನಾನು ಈ ರೀತಿಯ ಪಿಂಡ ಪ್ರಧಾನ ನಡೆಯುವ ಕೆಲವು ಕಡೆಗೆಲ್ಲ ಹೋಗಿ ಇಣುಕ್ಕಿದ್ದೆ! ಕಾಟಾಚಾರಕ್ಕೆ ಕ್ರಿಯೆಗಳು ಅವಸರವಸರದಲ್ಲಿ ನಡೆದು, ಕಂತೆ ಕಂತೆ ನೋಟುಗಳು ಕೈಬದಲಿಸುತ್ತಿದ್ದವು! ದಂಧೆ ಜೋರಾಗಿ ನಡೆಯುತ್ತಿತ್ತು.
ನಮಗೆ ಸಿಕ್ಕಂತಹ ಪ್ರಾಮಾಣಿಕ ಅರ್ಚಕನನ್ನು ನಾನು ಜನ್ಮದಲ್ಲಿ ನೋಡಿಲ್ಲ. ಸುಲಿಯುವವರೇ ಹೆಚ್ಚು!
ನನಗೆ ಸಂಸ್ಕೃತ ಅರೆಬರೆ ಅರ್ಥ ಅಗುವುದರಿಂದ ತಪ್ಪು ಮಂತ್ರ ಹೇಳಿದ್ದಕ್ಕೆ ಹಿಂದೆ ನಾನು ಒಂದಿಬ್ಬರು ಪರಿಚಯದ ಅರ್ಚಕರನ್ನು ಪ್ರಶ್ನಿಸಿದ್ದೆ! ನನ್ನ ವಿಷಯ ಗೊತ್ತಿದ್ದುದರಿಂದ ‘ನಮ್ಮದು ಬಾಯಿಪಾಠ ಮಾರಾಯ್ರೆ, ಎಲ್ಲರೆದುರು ಮರ್ಯಾದೆ ತೆಗೆಯಬೇಡಿ’ ಅಂದಿದ್ದರು!
ನಂಬಿಕೆ ಸಂಕೀರ್ಣವಾದ ವಿಷಯ. ನುಂಗುವಂತಿಲ್ಲ, ಉಗುಳುವಂತಿಲ್ಲ! ಅದಕ್ಕಾಗಿ ಸುಮ್ಮನಿದ್ದೆ! ಇಂತವರನ್ನು ನಾವು ದೇವರ ಕಮೀಷನ್ ಏಜೆಂಟರಾಗಿ ಒಪ್ಪಿಕೊಂಡು ಬಕ್ರಾಗಳಾಗುತ್ತಿದ್ದೇವೆ.
ಮೇಲೆ ಹೇಳಿದ ಅರ್ಚಕರಿಗೆ ವ್ಯತಿರಿಕ್ತವಾಗಿ ಈಗಿನ ವಂಚಕರು ಗೋದಾನ, ಭೂದಾನ, ಸುವರ್ಣ ದಾನ ಎಂದು ಅವರೇ ಮಾರಿ, ಅವರೇ ಪಡೆದು ಎಂತಹ ದರೋಡೆ ಮಾಡುತ್ತಿದ್ದಾರೆಂಬುದಕ್ಕೆ ಹಿನ್ನೆಲೆಯಾಗಿ ಈ ಘಟನೆಯನ್ನು ವಿವರಿಸಿದೆ. ಇವರಲ್ಲಿ ಕೆಲವರು ‘ಕನ್ಯಾದಾನ’ ಪಡೆಯಲು ಹೋಗಿ ಏಟುತಿಂದ, ಕೇಸು ಸುತ್ತಿಸಿಕೊಂಡ ಮಹಾನುಭಾವರೂ ಇದ್ದಾರೆಂಬುದನ್ನು ನೆನಪಿಸಿಕೊಳ್ಳಿ! ಸಾವಿನಂತಹ ದುಃಖದ ಘಟನೆಯಿಂದಲೂ ಹಿಂಡಲು ಎಂತಹಾ ಮಹಾ ಭಯಂಕರ ಆವಿಷ್ಕಾರಗಳನ್ನು ಮಾಡಲಾಗಿದೆ ಎಂಬುದನ್ನು ಮುಂದೆ ನೋಡೋಣ. ಅದಕ್ಕಿದು ಪೀಠಿಕೆ ಅಷ್ಟೇ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...