Homeಅಂಕಣಗಳುನಡುಗಡ್ಡೆಗಳ ನಾಯಕ ಡುಟಾರ್ಟೆಯ ಮುಖದಲ್ಲಿ ಈ ನೆಲದ ನೆರಳುಗಳು

ನಡುಗಡ್ಡೆಗಳ ನಾಯಕ ಡುಟಾರ್ಟೆಯ ಮುಖದಲ್ಲಿ ಈ ನೆಲದ ನೆರಳುಗಳು

- Advertisement -
- Advertisement -

ಸುಮಾರು ಆರೇಳು ಸಾವಿರ ಪುಟ್ಟ ದ್ವೀಪಗಳ ಒಕ್ಕಲು ರಾಶಿಯಂತೆ ಜಮೆಗೊಂಡ ದೇಶ ಫಿಲಿಫೈನ್ಸ್. ಫೆಸಿಫಿಕ್ ಸಾಗರದ ಪಶ್ಚಿಮ ಭಾಗದೊಳಗೆ, ದಕ್ಷಿಣ ಚೀನಾ ಸಮುದ್ರದ ಕೊಂಚ ಪೂರ್ವಕ್ಕೆ ಚದುರಿಕೊಂಡಿರುವ ಈ ನಡುಗಡ್ಡೆಗಳು ನಕಾಶೆಯಲ್ಲಿ, ಕ್ಷುದ್ರ ಗ್ರಹವೊಂದು ಅಪ್ಪಳಿಸಿ, ಛಿದ್ರಗೊಂಡ ಭೂಮಿಯ ತುಣುಕುಗಳಂತೆ ಮೋಜು ಹುಟ್ಟಿಸುತ್ತವೆ. ಇಲ್ಲಿನ ಜನರ ಬದುಕು ಅಷ್ಟೇ ಧಾರುಣವಾದದ್ದು. ಮಾದಕ ವ್ಯಸನದ ಬಲೆಯಲ್ಲಿ ಸಿಲುಕಿ ನರಳಾಡಿದಂತದ್ದು. ಕೆಥೋಲಿಕ್ ಕ್ರಿಶ್ಚಿಯನ್ನರೇ ಬಹುಸಂಖ್ಯಾತರಾಗಿರುವ ಇಲ್ಲಿ ಮೋರೋ ಮುಸ್ಲಿಮರದ್ದು ಎರಡನೇ ಅತಿದೊಡ್ಡ ಜನಸಮುದಾಯ. ಬೌದ್ಧರು, ಸಿಖ್ಖರು, ಹಿಂದೂಗಳಂತಹ ಧರ್ಮಗಳು ತಮ್ಮ ಅಸ್ತಿತ್ವವನ್ನು ಪ್ರದರ್ಶಿಸುತ್ತವಾದರು ಅವು ನಗಣ್ಯ. ಸಾಗರದ ನಟ್ಟನಡುವೆ ಸಿಕ್ಕಿಕೊಂಡಿರುವ ಈ ಜನರಿಗೆ ಕೈಗಾರಿಕೆಗಳೇ ಪ್ರಧಾನ ಆಸರೆ. ಕೃಷಿ, ಮೀನುಗಾರಿಕೆಗಳೂ ತಕ್ಕಮಟ್ಟಿಗೆ ಬದುಕು ರೂಪಿಸುತ್ತಿವೆ. ಈ ಪುಟ್ಟ ದೇಶದ ಬಗ್ಗೆ ಹೀಗೊಂದು ಟಿಪ್ಪಣಿ ಬರೆಯುವಂತಹ ಜರೂರತ್ತು ಸೃಷ್ಟಿಸಿದ್ದು ಅದರ ಅಧ್ಯಕ್ಷ ರ್ಯೋಡ್ರಿಗೋ ಡುಟರ್ಟೆ ಎಂಬ ತಿಕ್ಕಲು ಮನುಷ್ಯ!
ಡುಟಾರ್ಟೆಯ ಬದುಕಿನ ಪುಟಗಳನ್ನು ತೆರೆದು ಕೂತರೆ ಅಲ್ಲಿ ನಮ್ಮ ದೇಶದ ಬಹಳಷ್ಟು ರಾಜಕಾರಣಿಗಳ ಛಾಯೆ ಹಾದುಹೋಗುತ್ತದೆ. ವಿಚಿತ್ರವೆಂದರೆ ಕ್ರೂರಿಗಳು, ಅವಿವೇಕಿಗಳು ಎಂದು ನಾವು ತೆಗಳುವ ರಾಜಕಾರಣಿಗಳಲ್ಲದೆ ಬಹಳವಾಗಿ ಮೆಚ್ಚಿಕೊಳ್ಳುವ, ಪ್ರಗತಿಪರರೆಂದು ಅಚ್ಚಿಕೊಳ್ಳುವ ರಾಜಕೀಯ ನಾಯಕರ ನೆರಳೂ ಅಲ್ಲಿ ಸರಿದಾಡಿದಂತಾಗುತ್ತೆ. ಬಹುಶಃ ಈ ಗೋಜಲು ವ್ಯಕ್ತಿತ್ವವೇ ಡುಟಾರ್ಟೆಯನ್ನು ತಿಕ್ಕಲು ಮನುಷ್ಯನನ್ನಾಗಿ ರೂಪಿಸಿದೆ ಅನಿಸುತ್ತೆ. ಸೆಕ್ಯುಲರ್ ದೇಶವೊಂದರ ಅಧ್ಯಕ್ಷನಾಗಿ ಸರ್ವಾಧಿಕಾರಿ ಪಡಸಾಲೆಯ ಬಲು ಸನಿಹದಲ್ಲಿ ಸುಳಿದಾಡುವ ಈತನ ಆಳ್ವಿಕೆ ತಮಗೆ ಒಳ್ಳೆಯದೊ, ಕೆಡುಕಿನದೊ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲೇ ಫಿಲಿಫೈನಿಗರು ಗೊಂದಲದಲ್ಲಿದ್ದಾರೆ. ಅದಕ್ಕೆ ಕಾರಣಗಳುಂಟು.
ಭೌಗೋಳಿಕ ನಂಟೇ ಇಲ್ಲದಂತೆ ಸಹಸ್ರ ಸಂಖ್ಯೆಯಲ್ಲಿ ಛಿದ್ರಗೊಂಡ ದ್ವೀಪಗಳನ್ನು ಇಡಿಯಾಗಿ ಒಂದು ದೇಶವೆಂದು ಕರೆದು ಆಳ್ವಿಕೆ ಮಾಡಲು ಇಲ್ಲಿನ ರಾಜಕಾರಣಿಗಳು ಇವುಗಳನ್ನು ಮೂರು ದ್ವೀಪ ಸಮೂಹಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಉತ್ತರದ್ದು ಲುಜಾನ್ ಪ್ರಾಂತ್ಯ. ಇದು ದಕ್ಷಿಣ ಏಷ್ಯಾದ ಪ್ರಭಾವದಲ್ಲಿದೆ. ತೀರಾ ದಕ್ಷಿಣದ್ದು ಮಿಂಡಿನಾಒ ಸಮೂಹ. ಇವೆರಡರ ಮಧ್ಯೆ ಇರೋದು ವಿಸಾಯ ನಡುಗಡ್ಡೆಗಳ ಕೂಟ. 1945ರಲ್ಲಿ ಜಪಾನಿಯರ ತೆಕ್ಕೆಯಿಂದ ಸ್ವತಂತ್ರಗೊಂಡಾಗಿನಿಂದ ಇಲ್ಲಿಯವರೆಗೆ ಫಿಲಿಫೈನ್ಸ್‍ನ ಅಧ್ಯಕ್ಷರಾಗಿ ಲುಜಾನ್ ಮತ್ತು ವಿಸಾಯ ಪ್ರಾಂತ್ಯದವರೇ ಆಯ್ಕೆಯಾಗುತ್ತಾ ಬಂದಿದ್ದರು. ಅದನ್ನು ಛಿದ್ರಗೊಳಿಸಿದ ಮಿಂಡಿನಾಒ ಮೂಲದ ಮೊದಲ ವ್ಯಕ್ತಿ ಈ ಡುಟಾರ್ಟೆ. ತನಗೆ ಸರಿ ಅನ್ನಿಸಿದ್ದನ್ನು ಜನರ ಮೇಲೆ ಹೇರಲು ಯಾವ ಮುಜುಗರವೂ ಇಲ್ಲದ, ತನ್ನ ಸಕಲಷ್ಟು ದೌರ್ಜನ್ಯಗಳು ದೇಶಕ್ಕೆ ಒಳಿತನ್ನೇ ಮಾಡುತ್ತವೆ ಮತ್ತು ಅವು ಈ ದೇಶಕ್ಕೆ ಅನಿವಾರ್ಯ ಎಂಬ ಭ್ರಮೆಯಲ್ಲಿರುವ ಡುಟಾರ್ಟೆ ಮಾನವ ಹಕ್ಕುಗಳಿಗೆ ನಯಾಪೈಸೆ ಬೆಲೆ ಕೊಟ್ಟವನಲ್ಲ. ಈತನ ಅನಧಿಕೃತ ಕುಮ್ಮಕ್ಕಿನಿಂದ `ಡಾವೋ ಡೆತ್ ಸ್ಕ್ವಾಡ್’ ಎಂಬ ಅಸಂಘಟಿತ ಹಂತಕರ ಗುಂಪು ನಡೆಸಿದ ಹತ್ಯಾಕಾಂಡವೇ ಇದಕ್ಕೆ ಸಾಕ್ಷಿ. ಪೊಲೀಸರು, ಮಿಲಿಟರಿಯಿಂದ ಮೊದಲ್ಗೊಂಡು ದೇಶದ ಸಾಮಾನ್ಯ ನಾಗರಿಕರು ಸಹಾ ಮಹತ್‍ಕಾರ್ಯದ ಭ್ರಮೆಯಲ್ಲಿ ಡುಟಾರ್ಟೆಯ ಉನ್ಮಾದಕ್ಕೆ ಒಳಗಾಗಿ ಸಾವಿರಾರು ಜನರನ್ನು ನಡುರಸ್ತೆಯಲ್ಲೇ ಬಡಿದುಕೊಂದದ್ದು ಮನುಷ್ಯ ಇತಿಹಾಸ ಎಂದೆಂದೂ ಕ್ಷಮಿಸದ ಘೋರ ಕೃತ್ಯ.
ಈತ ಅಧ್ಯಕ್ಷನಾಗುವುದಕ್ಕೂ ಮುನ್ನ, ಸುಮಾರು ಇಪ್ಪತ್ತು ವರ್ಷಗಳ ಕಾಲ ಮಿಂಡಿನಾಒ ಪ್ರಾಂತ್ಯದ ಡಾವೋ ಸಿಟಿಯ ಮೇಯರ್ ಆಗಿದ್ದ. ಕಡಲಿನ ಮಧ್ಯೆದಲ್ಲಿದ್ದ ಈ ನಡುಗಡ್ಡೆಗಳು ಸಮುದ್ರಯಾನದ ಟರ್ಮಿನಲ್‍ಗೆ ಹೇಳಿ ಮಾಡಿಸಿದಂತಿದ್ದವು. ನೂರಾರು ವ್ಯಾಪಾರಿ ಹಡಗುಗಳು ಇಲ್ಲಿ ವಿಶ್ರಮಿಸಿಕೊಂಡೋ, ತಂದ ಸರಕನ್ನು ಬದಲಾಯಿಸಿಕೊಂಡೊ ಹೋಗುತ್ತಿದ್ದವು. ಸಹಜವಾಗೇ ಬ್ಲ್ಯಾಕ್ ಮಾರುಕಟ್ಟೆಗಳು ಗರಿಗೆದರಿದವು. ಡ್ರಗ್ಸ್ ವಹಿವಾಟು ವಿಪರೀತವಾಯ್ತು. ನೋಡನೋಡುತ್ತಿದ್ದಂತೆಯೇ ಮಿಂಡಿನಾಒ ಪ್ರಾಂತ್ಯವೇ ಡ್ರಗ್ಸ್ ಹಾವಳಿಗೆ, ಮತ್ತದರ ಉಪಟಳಗಳಿಗೆ ತವರು ಮನೆಯಂತಾಯ್ತು. ಮದ್ಯವ್ಯಸನಿ ಕ್ರಿಮಿನಲ್‍ಗಳು ವಿಜೃಂಭಿಸಲು ಶುರುವಾಯಿತು. ಇದರಿಂದಾಗಿ ಪ್ರವಾಸೋದ್ಯಮ ಕುಸಿದು ಬಿತ್ತು, ವಿದೇಶಿ ಹೂಡಿಕೆ ಸ್ತಬ್ಧವಾಯ್ತು. ಅಂತಹ ಸಮಯದಲ್ಲಿ ಉದಯಿಸಿದವನೇ ಡುಟಾರ್ಟೆ.
ಸಂವಿಧಾನದ ಕಾನೂನುಗಳಿಂದ ಇಂತಹ ವಿಪರೀತಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಕಂಡಕಂಡಲ್ಲಿ ಈ ಮದ್ಯವ್ಯಸನಿಗಳನ್ನು ಹೊಡೆದು ಕೊಲ್ಲುವುದೊಂದೇ ಪರಿಹಾರ ಎನ್ನುವುದು ಡುಟಾರ್ಟೆಯ ಸಿದ್ಧಾಂತ. ಮದ್ಯವ್ಯಸನಿಗಳಿಂದ ಬೇಸತ್ತಿದ್ದ ಜನರಿಗೂ ಈತ ಬದಲಾವಣೆಯ, ರಕ್ತಕ್ರಾಂತಿಯ ಹರಿಕಾರನಂತೆ ಕಂಡ.
ಇದರಲ್ಲಿ ಅಚ್ಚರಿಯೇನಿಲ್ಲ. ಯಾಕೆಂದರೆ ನಮ್ಮ ಜನರ ದೌರ್ಬಲ್ಯವೇ ಇದು!
ಮೊದಮೊದಲು ಪೊಲೀಸರನ್ನು ಮುಂದಿಟ್ಟುಕೊಂಡು ಮದ್ಯವ್ಯಸನಿಗಳನ್ನು, ಡ್ರಗ್ ದಂಧೆಕೋರರನ್ನು ಕಾನೂನುಬಾಹಿರ ಕೊಲೆ ಮಾಡಿಸಿದ. ಅಂತಹ ಪೊಲೀಸರಿಗೆ ಸಿಗುತ್ತಿದ್ದ ರಕ್ಷಣೆ ಮತ್ತು ಸನ್ಮಾನಗಳನ್ನು ಕಂಡ ಜನರೇ ಮದ್ಯವ್ಯಸನಿ ಕ್ರಿಮಿನಲ್‍ಗಳನ್ನು ಕೊಲೆ ಮಾಡಲು ಶುರು ಮಾಡಿದರು. ಹಾಗೆ ಹುಟ್ಟಿಕೊಂಡ ಡಾವೊ ಡೆತ್ ಸ್ಕ್ವಾಡ್‍ಗೆ ಡುಟಾರ್ಟೆಯ ಸಂಪೂರ್ಣ ಬೆಂಬಲವಿತ್ತು.
2016ರಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಿಂತಾಗಲು, ನನ್ನನ್ನು ಗೆಲ್ಲಿಸಿ, ಕೇವಲ ಆರು ತಿಂಗಳಲ್ಲಿ ಫಿಲಿಫೈನ್ಸ್ ದೇಶದ ಕ್ರಿಮಿನಲ್‍ಗಳನ್ನೆಲ್ಲ ನಿರ್ನಾಮ ಮಾಡುತ್ತೇನೆ ಎಂಬ ಉನ್ಮಾದವನ್ನು ಮುಂದಿಟ್ಟೇ ಜನರ ಬಳಿ ಮತ ಕೇಳಿದ್ದ. ದುರಂತವೆಂದರೆ, ಜಗತ್ತಿನ ಎಲ್ಲದನ್ನೂ ಒಳ್ಳೆಯದು ಅಥವಾ ಕೆಟ್ಟದು ಎಂಬ ಎರಡೇ ಗುಂಪಿನಲ್ಲಿ, ಗೆರೆ ಕೊರೆದು ವಿಂಗಡಿಸಲು ಬಯಸುವ ಜನ ಒಳ್ಳೆಯದರ ರೂಪದಲ್ಲಿ ಬಂದೆರಗುವ ಕೆಟ್ಟ ಭವಿಷ್ಯವನ್ನು, ಕೆಟ್ಟದರ ತೆಕ್ಕೆಯಿಂದ ಕಳಚಿಕೊಳ್ಳಲು ಇರುವ ಒಳ್ಳೆಯ ಹಾದಿಗಳನ್ನು ಸಮಚಿತ್ತದಿಂದ ಯೋಚಿಸುವುದೇ ಇಲ್ಲ. ಫಿಲಿಫೈನ್ಸ್‍ನಲ್ಲಿ ಆದದ್ದು ಅದೇ. ಡ್ರಗ್ಸ್ ಮತ್ತು ಕ್ರಿಮಿನಲ್‍ಗಳ ಮೇಲಿನ ಸಿಟ್ಟಿನಿಂದ ಜನ ಡುಟಾರ್ಟೆಯನ್ನು ಆಯ್ಕೆ ಮಾಡಿದರು. ಮಿಂಡಿನಾಒಗೆ ಸೀಮಿತವಾಗಿದ್ದ ಆ ಕಾನೂನುಬಾಹಿರ ಹತ್ಯೆಗಳು ಇಡೀ ದೇಶಕ್ಕೆ ವ್ಯಾಪಿಸಿದವು. ಕೇವಲ ಕೆಲವೇ ತಿಂಗಳಲ್ಲಿ 7000 ಜನರನ್ನು ಹತ್ಯೆ ಮಾಡಲಾಯ್ತು. ಆ ಶವಗಳಿಗೆ ಕ್ರಿಮಿನಲ್‍ಗಳು ಅಥವಾ ಮದ್ಯವ್ಯಸನಿಗಳು ಎಂದು ಲೇಬಲ್ ಅಂಟಿಸಿ ರಸ್ತೆ ಬದಿಯಲ್ಲಿ ಎಸೆಯಲಾಗುತ್ತಿತ್ತು. ಜನ ಆ ಕೊಲೆಗಳನ್ನು ತಮ್ಮ ದಿಗ್ವಿಜಯಗಳೆಂದೇ ಸಂಭ್ರಮಿಸಿದರು. ಆದರೆ ಕೊಲ್ಲುವ ಮನಸ್ಥಿತಿಯವನಿಗೆ, ಕೊಲ್ಲುವ ಎಲ್ಲಾ ಕೆಟ್ಟದ್ದು (ಆತನ ದೃಷ್ಟಿಯಲ್ಲಿ) ಮುಗಿದ ಮೇಲೆ ಸುಮ್ಮನೆ ಕೂರಬೇಕು ಅಂತನ್ನಿಸುವುದಿಲ್ಲ. ಹಿಟ್ಲರ್ ಹುಟ್ಟಿದ್ದು ಇಂತದ್ದೇ ಘಳಿಗೆಯಲ್ಲಿ!
ಡುಟಾರ್ಟೆ ಆ ಹಾದಿಯಲ್ಲಿ ಇರುವ ಮನುಷ್ಯ. ಒಮ್ಮೆ ಮಾನವಹಕ್ಕು ಆಯೋಗವು, `ಹೀಗೆ ವಿಚಾರಣೆ ಇಲ್ಲದೆ, ಸಂವಿಧಾನದ ನಿಯಮಗಳನ್ನು ಪರಿಗಣಿಸದೆ ಮನುಷ್ಯರನ್ನು ಕೊಲ್ಲುವುದು ಅಪರಾಧವಲ್ಲವೇ?’ ಅಂತ ಡುಟಾರ್ಟೆಗೆ ಪ್ರಶ್ನೆ ಕೇಳಿತ್ತು. ಅದಕ್ಕಾತ ಕೊಟ್ಟ ಉತ್ತರ ಹೀಗಿತ್ತು, `ಮನುಷ್ಯರನ್ನು ಕೊಲ್ಲುವುದು ಅಪರಾಧ. ಆದರೆ ಮನುಷ್ಯರು ಅಂದರೆ ಯಾರು? ಇವರನ್ನೆಲ್ಲ ನೀವು ಮನುಷ್ಯರು ಅಂತ ಕರೀತೀರಾ?’!
ಅಚ್ಚರಿಯಿಲ್ಲ. ಯಾಕಂದ್ರೆ ಡುಟಾರ್ಟೆ ಬೆಳೆದು ಬಂದದ್ದೇ ಇಂತಹ ಪ್ರಕ್ಷುಬ್ಧ ವಾತಾವರಣಗಳಲ್ಲಿ. ಆತ ಸಣ್ಣ ವಯಸ್ಸಿನಲ್ಲಿರುವಾಗಲೇ ಚರ್ಚ್‍ನ ಪಾದ್ರಿಯೊಬ್ಬ ಅವನ ಮೇಲೆ ನಿರಂತರ ಲೈಂಗಿಕ ಅತ್ಯಾಚಾರ ನಡೆಸಿದ್ದ. ಅದು ಅವನನ್ನು ಕ್ರೂರಿಯನ್ನಾಗಿಸಿತ್ತು. ಅತ್ಯಾಚಾರ ಹೀನಕೃತ್ಯವಲ್ಲ ಎಂಬ ಮನಸ್ಥಿತಿಗೆ ಅವನನ್ನು ತಳ್ಳಿತ್ತು. ಗತಿಸಿಹೋದ 1989ರ ಡಾವೋ ಅತ್ಯಾಚಾರ ಹತ್ಯಾಕಾಂಡವನ್ನು ನೆನಪು ಮಾಡಿಕೊಳ್ಳುತ್ತಾ ಅಧ್ಯಕ್ಷ ಗಾದಿಯಲ್ಲಿ ಕೂತು ಡುಟಾರ್ಟೆ ಕೊಟ್ಟ ಪ್ರತಿಕ್ರಿಯೆ ಆತನ ಮಾನಸಿಕ ವಿಲಕ್ಷಣವನ್ನು ಬಿಚ್ಚಿಡುತ್ತದೆ. ಕ್ರಿಮಿನಲ್‍ಗಳ ತಂಡವೊಂದು ಜೈಲಿನಿಂದ ಪರಾರಿಯಾಗಿ ಬಂದು ಚರ್ಚಿನ 16 ಜನ ಸಿಬ್ಬಂದಿಗಳನ್ನು ಒತ್ತೆಯಾಳಾಗಿಟ್ಟುಕೊಂಡ ಘಟನೆ ಅದು. ಅದರಲ್ಲಿ ಆಸ್ಟ್ರೇಲಿಯಾದ ಸಿಸ್ಟರ್ ಒಬ್ಬಳನ್ನು ರೇಪ್ ಮಾಡಿ ಹತ್ಯೆ ಮಾಡಲಾಗಿತ್ತು. ಪೊಲೀಸರ ಗುಂಡಿಗೆ ಬಲಿಯಾಗುವ ಮುನ್ನ, ಆಕೆಯಂತೆ ಇನ್ನೂ ಮೂವರನ್ನು ಕ್ರಿಮಿನಲ್‍ಗಳು ಕೊಂದುಹಾಕಿದ್ದರು. ಆಗ ಡುಟಾರ್ಟೆ ಮೇಯರ್ ಆಗಿದ್ದ. ಸ್ಥಳಕ್ಕೆ ಭೇಟಿ ನೀಡಿದ ಆತನಿಗೆ ಆ ಸಿಸ್ಟರ್ ಹೆಣ ನೋಡಿ ವಿಪರೀತ ಕೋಪ ಬಂದಿತಂತೆ. ಮುಂದೆ ಆತನದೇ ಮಾತುಗಳಲ್ಲಿ ಕೇಳಿ,
`ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಜಾಕ್ವೆಲಿನ್ ಹೆಮಿಲಿ ಮುಖ ನೋಡಿ ನನಗೆ ಸಿಟ್ಟು ಬಂತು. ಆಕೆಯನ್ನು ಕೊಂದು ಬಿಟ್ಟರಲ್ಲಾ ಅಂತ ಅಲ್ಲ! ನೋಡಲು ಥೇಟು ಅಮೆರಿಕಾದ ಸಿನಿಮಾ ನಟಿಯಷ್ಟು ಚೆಂದವಾಗಿದ್ದ ಆಕೆಯನ್ನು ಅವರು ರೇಪ್ ಮಾಡಿದರಂತೆ. ಆ ಚೆಂದುಳ್ಳಿಯನ್ನು ರೇಪ್ ಮಾಡುವಾಗ ಈ ಸಿಟಿಯ ಮೇಯರ್ ಆದ ನನಗೆ ಮೊದಲ ಅವಕಾಶ ಕೊಡ್ಬೇಕು ಅಂತ ಅವರಿಗೆ ಗೊತ್ತಾಗಲಿಲ್ಲವೇ? ಛೇ, ಅಂಥಾ ಸೌಂದರ್ಯ ಎಂಥಾ ವೇಸ್ಟ್ ಆಯ್ತು’…!!!
ಟೀಕಾಕಾರರ ಹೊರತಾಗಿ ಜನ ಆತನ ವಿರುದ್ಧ ತಿರುಗಿ ಬೀಳಲಿಲ್ಲ. ಸ್ವತಃ ಡುಟಾರ್ಟೆಯ ಮಗಳು, `ನಾನೂ ರೇಪ್ ಸಂತ್ರಸ್ತೆ. ಆದಾಗ್ಯೂ, ನಾನು ನನ್ನಪ್ಪನ ಪರವಾಗಿ ನಿಲ್ಲುವೆ..’ ಎಂದು ಸಮರ್ಥಿಸಿಕೊಂಡಳು. ಜನ ಗೊಂದಲಗೊಂಡರು. ದೇಶಕ್ಕೆ ಏನೋ ಒಳ್ಳೆಯದಾಗುತ್ತಿದೆ ಎಂಬ ಭ್ರಮೆಗೆ ಕಟ್ಟುಬಿದ್ದರು.
ಡುಟಾರ್ಟೆಯ ತಿಕ್ಕಲುತನಗಳನ್ನು ಗಮನಿಸುತ್ತಿದ್ದರೆ, ನಮಗೆ ಈ ದೇಶದ ಹಲವು ಪ್ರಸ್ತುತ ರಾಜಕಾರಣಿಗಳು ಮನಸಿನಲ್ಲಿ ಮೂಡುತ್ತಾರೆ. ಕ್ರೂರತನ, ಜನರನ್ನು ಅವರ ಕೆಟ್ಟದಿನಗಳಿಗೆ ಸಮ್ಮತಿಸಿ ಕರೆದೊಯ್ಯುವ ಚಕ್ಯತೆಗಳು ನಮ್ಮ ಹೋಲಿಕೆಯ ಸರಕುಗಳಾಗುತ್ತವೆ. ಆದರೆ ನಮ್ಮ ರಾಜಕಾರಣಿಗಳಂತೆ ಡುಟಾರ್ಟೆ ಸತ್ಯ ಮುಚ್ಚಿಟ್ಟು, ಮೌಢ್ಯದ ಮರೆಯಲ್ಲಿ ಜನರನ್ನು ಯಾಮಾರಿಸುತ್ತಿಲ್ಲ. ತಾನು ಸರಿ ಎಂದು ಭ್ರಮಿಸಿರುವ `ತಪ್ಪ’ನ್ನು ಮುಂದಿಟ್ಟೇ ದೇಶವನ್ನು ಹಾಳುಗೆಡವುತ್ತಿದ್ದಾನೆ. ಅಂದಹಾಗೆ, ದೇವರನ್ನು ಮಹಾ ಮುಟ್ಠಾಳ ಎಂದು ಕರೆದಿದ್ದ ಈತ ಮೊನ್ನೆ, `ಆ ದೇವರು ಇರೋದನ್ನು ಯಾರಾದ್ರೂ ಪ್ರೂವ್ ಮಾಡಿದ್ರೆ, ಈ ಕ್ಷಣವೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ. ಹೆಚ್ಚೇನು ಬೇಡ, ದೇವರ ಜೊತೆ ತೆಗೆಸಿಕೊಂಡ ಒಂದು ಸೆಲ್ಫಿ ತನ್ನಿ, ನನ್ನ ರಾಜೀನಾಮೆ ತಗೊಂಡು ಹೋಗಿ…’ ಎಂದು ಸವಾಲು ಹಾಕಿದ್ದಾನೆ.
ನಮ್ಮ ರಾಜಕೀಯ ಕ್ರೂರಿಗಳಿಗು, ಈ ಕ್ರೂರ ರಾಜಕಾರಣಿಗೂ ಇರುವ ವ್ಯತ್ಯಾಸ ಇದು…

– ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...