Homeಅಂತರಾಷ್ಟ್ರೀಯಆಸ್ಕರ್ ನಾಮನಿರ್ದೇಶಿತ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಿತ್ರ ಪ್ರದರ್ಶನಕ್ಕೆ ಭಾರತದಲ್ಲಿ ನಿರ್ಬಂಧ!

ಆಸ್ಕರ್ ನಾಮನಿರ್ದೇಶಿತ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರ ಪ್ರದರ್ಶನಕ್ಕೆ ಭಾರತದಲ್ಲಿ ನಿರ್ಬಂಧ!

- Advertisement -
- Advertisement -

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ಳನ್ನು ಇಸ್ರೇಲಿ ಸೈನಿಕರು ಸುಮಾರು 300 ಸುತ್ತು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿರುವ ಕಥೆಯನ್ನು ಹೇಳುವ, ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಲನಚಿತ್ರದ ಪ್ರದರ್ಶನಕ್ಕೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಸಿನಿಮಾ ಇಸ್ರೇಲ್ ಸೈನಿಕರ ದೌರ್ಜನ್ಯವನ್ನು ವಿವರಿಸುವ ಕಾರಣ, ಇಸ್ರೇಲ್‌ನೊಂದಿಗೆ ಭಾರತ ಹೊಂದಿರುವ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕದಿಂದ ಅದರ ಪ್ರದರ್ಶನವನ್ನು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ತಡೆಹಿಡಿದಿದೆ ಎಂದು ವರದಿಗಳು ವಿವರಿಸಿವೆ.

ಟ್ಯುನೀಶಿಯಾದ ಚಲನಚಿತ್ರ ನಿರ್ದೇಶಕಿ ಕೌತರ್ ಬೆನ್ ಹನಿಯಾ ಅವರು ನಿರ್ದೇಶಿಸಿರುವ ‘ದಿ ವಾಯ್ಸ್ ಆಫ್ ಹಿಂದ್ ರಜಬ್ ಡಾಕ್ಯುಡ್ರಾಮಾ (ಸಾಕ್ಷ್ಯಚಿತ್ರ ಮತ್ತು ನಾಟಕದ ಮಿಶ್ರಣ)’ ಈ ವರ್ಷದ ಆಸ್ಕರ್ ಪ್ರಶಸ್ತಿಯ (ಅಕಾಡೆಮಿ ಅವಾರ್ಡ್‌) ಅಂತಿಮ ಪಟ್ಟಿಗೆ ಆಯ್ಕೆಯಾಗಿತ್ತು.

ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ (Best International Feature Film) ವಿಭಾಗದಲ್ಲಿ ಟುನೀಶಿಯಾ ದೇಶದಿಂದ ಅಧಿಕೃತವಾಗಿ ಚಿತ್ರವು ಆಸ್ಕರ್‌ಗೆ ಪ್ರವೇಶ ಪಡೆದಿತ್ತು.

ಸೆಪ್ಟೆಂಬರ್ 3, 2025ರಂದು ವೆನಿಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೂಡ ಈ ಚಿತ್ರ ಪ್ರದರ್ಶನಗೊಂಡಿತ್ತು. ಆಗ ಪ್ರೇಕ್ಷಕರು ಸುಮಾರು 23 ನಿಮಿಷಗಳ ಕಾಲ ಎದ್ದು ನಿಂತು ಚಿತ್ರಕ್ಕೆ ಗೌರವ ಸೂಚಿಸಿದ್ದರು. ಈ ಮೂಲಕ ಚಿತ್ರ ಹೊಸ ದಾಖಲೆ ಬರೆದಿತ್ತು.

ಅಲ್ಲದೆ, ಗ್ರ್ಯಾಂಡ್ ಜ್ಯೂರಿ ಪ್ರಶಸ್ತಿ ಮತ್ತು ಇತರ ಆರು ಸಮಾನಾಂತರ ಬಹುಮಾನಗಳನ್ನು ಗೆದ್ದುಕೊಂಡಿತ್ತು. 2025ರ ಸೆಪ್ಟೆಂಬರ್ 10ರಂದು ಟುನೀಶಿಯಾದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರ, ನಂತರ ನವೆಂಬರ್ 26 ರಂದು ದಿ ಪಾರ್ಟಿ ಫಿಲ್ಮ್ ಸೇಲ್ಸ್‌ನಿಂದ ಫ್ರಾನ್ಸ್‌ನಲ್ಲಿ ಬಿಡುಗಡೆಗೊಂಡಿತ್ತು.

ಹಿಂದ್ ರಜಬ್ ಗಾಝಾದ ಆರು ವರ್ಷದ ಫ್ಯಾಲೆಸ್ತೀನ್ ಬಾಲಕಿ. 2024ರ ಜನವರಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದ ಸಂದರ್ಭದಲ್ಲಿ ಈಕೆ ಜಗತ್ತಿನಾದ್ಯಂತ ಸುದ್ದಿಯಾಗಿದ್ದಳು.

ಜನವರಿ 29, 2024ರಂದು ಹಿಂದ್ ರಜಬ್ ತನ್ನ ಕುಟುಂಬದೊಂದಿಗೆ ಗಾಝಾ ನಗರದಿಂದ ಪಲಾಯನ ಮಾಡುವಾಗ, ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಇಸ್ರೇಲ್ ಸೇನೆ ಸುಮಾರು 300 ಸುತ್ತು ಗುಂಡುಗಳ ಭೀಕರ ದಾಳಿ ನಡೆಸಿತ್ತು.

ದಾಳಿಯಲ್ಲಿ ಕಾರಿನಲ್ಲಿದ್ದ ಕುಟುಂಬದ ಇತರ ಆರು ಸದಸ್ಯರು ತಕ್ಷಣ ಮೃತಪಟ್ಟಾಗ, ಬಾಲಕಿ ಹಿಂದ್ ಮಾತ್ರ ಬದುಕುಳಿದಿದ್ದಳು. ಸುಮಾರು ಮೂರು ಗಂಟೆಗಳ ಕಾಲ ಆಕೆ ತನ್ನವರ ಶವಗಳ ನಡುವೆ ಕಾರಿನಲ್ಲಿ ಸಿಲುಕಿಕೊಂಡಿದ್ದಳು. ಈ ಸಂದರ್ಭದಲ್ಲಿ ಆಕೆ ಪ್ಯಾಲೆಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿಗೆ (ಪಿಆರ್‌ಸಿಎಸ್‌) ಫೋನ್ ಮಾಡಿ ತನ್ನನ್ನು ರಕ್ಷಿಸುವಂತೆ ಅಳುತ್ತಾ ಬೇಡಿಕೊಂಡಿದ್ದಳು.

ಆಕೆಯನ್ನು ರಕ್ಷಿಸಲು ಹೋದ ಪಿಆರ್‌ಸಿಎಸ್‌ನ ಇಬ್ಬರು ಅರೆವೈದ್ಯಕೀಯ ಸಿಬ್ಬಂದಿ ಕೂಡಾ ದಾಳಿಯಲ್ಲಿ ಮೃತಪಟ್ಟಿದ್ದರು. ಸುಮಾರು 12 ದಿನಗಳ ನಂತರ ಹಿಂದ್ ರಜಬ್‌ಳ ಶವ ಗುಂಡಿನ ದಾಳಿಯಿಂದ ನಜ್ಜುಗುಜ್ಜಾಗಿದ್ದ ಕಾರಿನಲ್ಲಿ ಪತ್ತೆಯಾಗಿತ್ತು.

ಈ ಘಟನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಸ್ರೇಲ್ ಸೇನೆಯ ಆಕ್ರಮಣವನ್ನು ಪ್ರತಿಭಟಿಸಿ ತಮ್ಮ ಹ್ಯಾಮಿಲ್ಟನ್ ಹಾಲ್‌ಗೆ ‘ಹಿಂದ್ ಹಾಲ್’ ಎಂದು ಮರುನಾಮಕರಣ ಮಾಡಿದ್ದರು.

ಹಿಂದ್ ರಜಬ್ ಇಂದು ಗಾಝಾದ ನಾಗರಿಕರ, ವಿಶೇಷವಾಗಿ ಮಕ್ಕಳ ಸಂಕಷ್ಟದ ಸಂಕೇತವಾಗಿ ಗುರುತಿಸಲ್ಪಡುತ್ತಿದ್ದಾಳೆ.

ಮಾರ್ಚ್ ಮಧ್ಯಭಾಗದಲ್ಲಿ, ಅಂದರೆ 2026ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆಗೆ ಈ ಚಿತ್ರವು ಭಾರತದಲ್ಲಿ ಬಿಡುಗಡೆಯಾಗಬೇಕಿತ್ತು. ಈಗ ತಡವಾಗಿ ಬಿಡುಗಡೆಗೆ ಮುಂದಾದರೂ ನಿರ್ಬಂಧ ವಿಧಿಸಲಾಗಿದೆ. ಚಿತ್ರದ ವಿತರಕರಾದ ಮನೋಜ್ ನಂದವಾನ ಅವರು ‘ವೆರೈಟಿ’ ನಿಯತಕಾಲಿಕೆಗೆ ಮಾಹಿತಿ ನೀಡುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಇಸ್ರೇಲ್ ಪ್ರವಾಸ ಮುಗಿಸಿ ಮರಳಿದ ಮರುದಿನವೇ, ಅಂದರೆ ಫೆಬ್ರವರಿ 27ರಂದು ತಾವು ಸಿಬಿಎಫ್‌ಸಿ ಸದಸ್ಯರಿಗಾಗಿ ಚಿತ್ರದ ಪ್ರದರ್ಶನವನ್ನು ಏರ್ಪಡಿಸಿದ್ದಾಗಿ ತಿಳಿಸಿದ್ದಾರೆ.

ಆದರೆ, ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಅನುಮತಿ ನೀಡಿದರೆ, ಅದು “ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಹಾಳುಗೆಡವುತ್ತದೆ” ಎಂದು ಅವರಿಗೆ ನಂತರ ತಿಳಿಸಲಾಯಿತು ಎಂದಿದ್ದಾರೆ.

ಕಳೆದ ಒಂದು ದಶಕದಲ್ಲಿ ರಕ್ಷಣೆ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಇಸ್ರೇಲ್ ಅತ್ಯಂತ ಬಲವಾದ ಸಂಬಂಧವನ್ನು ಬೆಳೆಸಿಕೊಂಡಿವೆ ಎಂಬುದು ರಹಸ್ಯವಾಗೇನೂ ಉಳಿದಿಲ್ಲ.

ಗಾಝಾ ಸಂಘರ್ಷದ ಕುರಿತಾದ ವಿಶ್ವಸಂಸ್ಥೆಯ ನಿರ್ಣಯಗಳಲ್ಲಿ ಭಾರತವು ಇಸ್ರೇಲ್ ಅನ್ನು ನೇರವಾಗಿ ಖಂಡಿಸುವುದರಿಂದ ದೂರ ಉಳಿದಿದೆ. ಇರಾನ್ ಯುದ್ಧದ ಅವಧಿಯಲ್ಲೂ ಸಹ, ಭಾರತವು ಸಮತೋಲಿತ ನಿಲುವನ್ನು ಕಾಯ್ದುಕೊಂಡಿದೆ ಮತ್ತು ಯಾವುದೇ ಒಂದು ಪಕ್ಷದ ಪರವಾಗಿ ನಿಂತಿಲ್ಲ. ಅದೇ ಸಮಯದಲ್ಲಿ, ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಗಳನ್ನು ಕೂಡ ಭಾರತ ಖಂಡಿಸಿಲ್ಲ.

ಚಿತ್ರ ನಿರ್ದೇಶಕಿಯಿಂದ ಟೀಕೆ

ಭಾರತದಲ್ಲಿ ಚಲನಚಿತ್ರದ ಬಿಡುಗಡೆಯನ್ನು ಸ್ಥಗಿತಗೊಳಿಸಿರುವ ಕ್ರಮವು ಕೇವಲ ವಿರೋಧ ಪಕ್ಷಗಳಿಂದ ಮಾತ್ರವಲ್ಲದೆ, ಪ್ರಶಸ್ತಿ ವಿಜೇತ ಚಿತ್ರದ ನಿರ್ದೇಶಕಿಯಿಂದಲೂ ತೀವ್ರ ಟೀಕೆಗೆ ಗುರಿಯಾಗಿದೆ.

“ನಾನು ಭಾರತವನ್ನು ಪ್ರೀತಿಸುತ್ತಾ ಬೆಳೆದವಳು. ಬಾಲಿವುಡ್ ನನ್ನ ಬಾಲ್ಯದ ಒಂದು ಭಾಗವಾಗಿತ್ತು. ಒಂದು ಹಂತದಲ್ಲಂತೂ, ನನ್ನನ್ನು ನಾನು ವಿಶೇಷವಾಗಿ ಭಾವಿಸಿಕೊಳ್ಳಲು ನನಗೂ ಭಾರತೀಯ ಮೂಲದ ನಂಟಿದೆ ಎಂದು ಊಹಿಸಿಕೊಳ್ಳುತ್ತಿದ್ದೆ. ‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ’ ಮತ್ತು ‘ಮಧ್ಯಪ್ರಾಚ್ಯದ ಏಕೈಕ ಪ್ರಜಾಪ್ರಭುತ್ವ’ ರಾಷ್ಟ್ರಗಳ ನಡುವಿನ ಈ ಸಂಬಂಧದ ಅವಧಿ ಎಷ್ಟು ದುರ್ಬಲವಾಗಿದೆಯೆಂದರೆ, ಒಂದು ಚಲನಚಿತ್ರ ಅದನ್ನು ಮುರಿದುಬಿಡಬಹುದೇ?” ಎಂದು ಚಿತ್ರದ ನಿರ್ದೇಶಕಿ ಬೆನ್ ಹನಿಯಾ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಗಮನಾರ್ಹ ವಿಷವೆಂದರೆ, ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರವು ಅಮೆರಿಕ, ಬ್ರಿಟನ್, ಇಟಲಿ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಇವುಗಳಲ್ಲಿ ಹೆಚ್ಚಿನ ರಾಷ್ಟ್ರಗಳು ಇಸ್ರೇಲ್‌ನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿವೆ. ಕುತೂಹಲಕಾರಿ ವಿಷಯವೆಂದರೆ, ಸ್ವತಃ ಇಸ್ರೇಲ್‌ನಲ್ಲಿ ಟೆಲ್ ಅವಿವ್ ನ್ಯಾಯಾಲಯವು ಈ ಚಿತ್ರದ ಮೇಲಿದ್ದ ನಿಷೇಧವನ್ನು ತೆರವುಗೊಳಿಸಿದ ನಂತರವೂ ಚಿತ್ರ ಬಿಡುಗಡೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ವಿಪಕ್ಷ ನಾಯಕರಿಂದ ಟೀಕೆ

ಮಧ್ಯಪ್ರಾಚ್ಯದ ಬಿಕ್ಕಟ್ಟನ್ನು ನಿಭಾಯಿಸುತ್ತಿರುವ ರೀತಿಯ ಬಗ್ಗೆ ಈಗಾಗಲೇ ಟೀಕೆಗಳನ್ನು ಎದುರಿಸುತ್ತಿರುವ ನರೇಂದ್ರ ಮೋದಿ ಸರ್ಕಾರವು, ಇದೀಗ ಜಗತ್ತಿನಾದ್ಯಂತ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿರುವ ಚಲನಚಿತ್ರವನ್ನು ನಿಷೇಧಿಸಿರುವುದಕ್ಕಾಗಿ ವಿರೋಧ ಪಕ್ಷಗಳಿಂದ ಮತ್ತೊಮ್ಮೆ ತೀವ್ರ ಟೀಕೆಗೆ ಗುರಿಯಾಗಿದೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಈ ವಿಚಾರದಲ್ಲಿ ಮೊದಲ ಸಾಲಿನಲ್ಲಿದ್ದಾರೆ. ಇದು “ಅಪಮಾನಕರ” ಮತ್ತು “ಪರಿಪಕ್ವ ಪ್ರಜಾಪ್ರಭುತ್ವಕ್ಕೆ ಅಯೋಗ್ಯವಾದ” ನಡೆ ಎಂದು ಕರೆಯುವ ಮೂಲಕ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.

“ಒಂದು ಪ್ರಜಾಪ್ರಭುತ್ವದಲ್ಲಿ, ಚಲನಚಿತ್ರದ ಪ್ರದರ್ಶನವು ನಮ್ಮ ಸಮಾಜದ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಬಿಂಬವಾಗಿದೆ. ಅದಕ್ಕೂ ಸರ್ಕಾರಗಳ ನಡುವಿನ ಸಂಬಂಧಕ್ಕೂ ಯಾವುದೇ ಸಂಬಂಧವಿಲ್ಲ. ವಿದೇಶಗಳಿಗೆ ಅಸಮಾಧಾನವಾಗಬಹುದು ಎಂಬ ಕಾರಣಕ್ಕೆ ಚಲನಚಿತ್ರ ಅಥವಾ ಪುಸ್ತಕಗಳನ್ನು ನಿಷೇಧಿಸುವ ಈ ಪದ್ಧತಿಯು ತಕ್ಷಣವೇ ನಿಲ್ಲಬೇಕು” ಎಂದು ತರೂರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇತ್ ಕೂಡ ಸಿನಿಮಾವನ್ನು ತಡೆ ಹಿಡಿದಿದ್ದಕ್ಕಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎನ್‌ಸಿಪಿ ನಾಯಕ ಅನೀಶ್ ಗವಾಂಡೆ ಈ ಕ್ರಮವನ್ನು “ನಮ್ಮ ಸಾಮೂಹಿಕ ವಿವೇಕಕ್ಕೆ ಅಂಟಿದ ಕಪ್ಪು ಚುಕ್ಕೆ” ಎಂದು ಕರೆದಿದ್ದಾರೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಡಿಶಾ ಬುಡಕಟ್ಟು ಶಾಲೆಯಲ್ಲಿ ಊಟ ಸೇವಿಸಿ 5ನೇ ತರಗತಿ ವಿದ್ಯಾರ್ಥಿನಿ ಸಾವು, 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಸರ್ಕಾರಿ ಬುಡಕಟ್ಟು ವಸತಿ ಶಾಲೆಯಲ್ಲಿ ಊಟ ಸೇವಿಸಿದ ನಂತರ 5 ನೇ ತರಗತಿಯ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಕಾಕಬಂಧ ​​ಆಶ್ರಮ ಶಾಲೆಯಲ್ಲಿ ಭಾನುವಾರ ಬೆಳಿಗ್ಗೆ...

ಡೆಹ್ರಾಡೂನ್‌| ಮುಸ್ಲಿಂ ಯುವಕನ ಮೇಲೆ ಕಾಳಿ ಸೇನಾ ನಾಯಕನಿಂದ ಹಲ್ಲೆ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಆರೋಪಿ

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಮುಸ್ಲಿಂ ಯುವಕನ ಮೇಲೆ ಹಿಂದುತ್ವ ನಾಯಕನೊಬ್ಬ ಹಲ್ಲೆ ನಡೆಸಿದ್ದಾನೆ ಎಂಬ ಆತಂಕಕಾರಿ ಘಟನೆ ವರದಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ, ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ಮಾಹಿತಿಯ ಪ್ರಕಾರ, ಕಾಳಿ...

ಎಎಪಿ ಸಂಸದ ಅಶೋಕ್ ಮಿತ್ತಲ್‌ಗೆ ಸೇರಿದ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ, ಲವ್ಲಿ ಸಮೂಹ ಸಂಸ್ಥೆಗಳ ಮೇಲೆ ಇಡಿ ದಾಳಿ

ಜಾರಿ ನಿರ್ದೇಶನಾಲಯ (ಇಡಿ) ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ಮತ್ತು ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (ಎಲ್‌ಪಿಯು) ಸಂಸ್ಥಾಪಕ-ಚಾನ್ಸಲರ್ ಅಶೋಕ್ ಮಿತ್ತಲ್ ಅವರಿಗೆ ಸೇರಿದ ವಿವಿಧ ಆಸ್ತಿಗಳ ಮೇಲೆ ಬುಧವಾರ (ಏ.15) ದಾಳಿ ನಡೆಸಿದೆ ಎಂದು ವರದಿಯಾಗಿದೆ. ವಿದೇಶಿ...

ಅಂಡಮಾನ್ ಸಮುದ್ರದಲ್ಲಿ ದೋಣಿ ಮುಳುಗಡೆ : 200ಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ಕಣ್ಮರೆ

ಬಾಂಗ್ಲಾದೇಶದಿಂದ ಮಲೇಷ್ಯಾಗೆ ಹೊರಟಿದ್ದ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶದ ಪ್ರಜೆಗಳನ್ನು ಹೊತ್ತಿದ್ದ ದೋಣಿಯೊಂದು ಅಂಡಮಾನ್ ಸಮುದ್ರದಲ್ಲಿ ಮುಳುಗಡೆಯಾಗಿದೆ ಎಂದು ವರದಿಯಾಗಿದೆ. ದೋಣಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ಇದ್ದರು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ (ಯುಎನ್‌ಹೆಚ್‌ಸಿಆರ್‌)...

ಬಿಹಾರ ಮುಖ್ಯಮಂತ್ರಿಯಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಪ್ರಮಾಣ ವಚನ ಸ್ವೀಕಾರ: ರಾಜಕೀಯ ವೃತ್ತಿಜೀವನದ ಕಾಲಾನುಕ್ರಮ

ಪಾಟ್ನಾ: ಭಾರತೀಯ ಜನತಾ ಪಕ್ಷದ ನಾಯಕ ಸಾಮ್ರಾಟ್ ಚೌಧರಿ ಬುಧವಾರ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಕೇಸರಿ ಪಕ್ಷದಿಂದ ರಾಜ್ಯದಲ್ಲಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ರಾಜಭವನದಲ್ಲಿ...

ಛತ್ತೀಸ್‌ಗಢ | ವೇದಾಂತ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ: ಮೃತರ ಸಂಖ್ಯೆ 14ಕ್ಕೆ ಏರಿಕೆ

ಛತ್ತೀಸ್‌ಗಢದ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಮತ್ತು 40ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ. ಮಂಗಳವಾರ (ಏ.14) ಮಧ್ಯಾಹ್ನ ಸುಮಾರು 2:30ರ ವೇಳೆ ಕಾರ್ಮಿಕರು ಊಟ ಮಾಡುತ್ತಿದ್ದ ಸಮಯದಲ್ಲಿ ಈ...

ಕ್ಷೇತ್ರ ಮರುವಿಂಗಡಣೆ ವಿವಾದ : ಡಿಎಂಕೆ ಸಂಸದರ ತುರ್ತು ಸಭೆ ಕರೆದ ಸಿಎಂ ಸ್ಟಾಲಿನ್

ಕೇಂದ್ರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಿಂದ ರಾಜ್ಯದ ಮೇಲೆ ಉಂಟಾಗುವ ಸಂಭಾವ್ಯ ಪರಿಣಾಮಗಳ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಬುಧವಾರ (ಏ.15) ಡಿಎಂಕೆ ಸಂಸದರ ತುರ್ತು ಸಭೆ ಕರೆದಿದ್ದಾರೆ. ಸ್ಟಾಲಿನ್ ಚುನಾವಣೆ...

ತಮಿಳುನಾಡು: ಕ್ಷೇತ್ರ ಪುನರ್ವಿಂಗಡೆ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ: ಕೇಂದ್ರ ಸರ್ಕಾರಕ್ಕೆ ಎಂ.ಕೆ. ಸ್ಟಾಲಿನ್ ಎಚ್ಚರಿಕೆ

ಚೆನ್ನೈ: ಏಪ್ರಿಲ್ 16 ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿರುವ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗಳ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷರು ಮಂಗಳವಾರ ಬಿಜೆಪಿ...

ಪಶ್ಚಿಮ ಏಷ್ಯಾ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನಕ್ಕೆ ತಳ್ಳುವ ಅಪಾಯವಿದೆ : ವಿಶ್ವಸಂಸ್ಥೆ ವರದಿ

ಪಶ್ಚಿಮ ಏಷ್ಯಾ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನದ ಕೂಪಕ್ಕೆ ತಳ್ಳಬಹುದು ಮತ್ತು ದೇಶದ ಮಾನವ ಅಭಿವೃದ್ಧಿ ಪ್ರಗತಿಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯನ್ನುಂಟು ಮಾಡಬಹುದು ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಹೊಸ...

ಗೋ-ರಕ್ಷಕರ ದಾಳಿಯ ನಂತರ ವ್ಯಕ್ತಿ ನಾಪತ್ತೆ: ಜಮ್ಮುವಿನ ರಾಂಬನ್‌ನಲ್ಲಿ ತೀವ್ರ ಪ್ರತಿಭಟನೆ; ಸಾಮಾಜಿಕ ಮಾಧ್ಯಮಗಳಲ್ಲೂ ಆಕ್ರೋಶ

ಗೋರಕ್ಷಕರ ದಾಳಿಗೆ ಸಂಬಂಧಿಸಿ ಸ್ಥಳೀಯ ನಿವಾಸಿ ತನ್ವೀರ್ ಅಹ್ಮದ್ ಚೋಪನ್ ನಾಪತ್ತೆಯಾದ ನಂತರ ಸೋಮವಾರ ರಾಂಬನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಾವಿರಾರು ಜನರು ಸಂಚಾರ ತಡೆದು ಪ್ರತಿಭಟಿಸಿದ್ದಾರೆ. ಪೊಲೀಸರ ಪ್ರಕಾರ,...