ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರವು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಈ ಮಹತ್ವದ ಆದೇಶ ಹೊರಬಿದ್ದಿದೆ.
ಹೈಕೋರ್ಟ್ ನೀಡಿದ್ದ ಆದೇಶವು ‘ತಮಿಳುನಾಡು ಪ್ರಾಣಿ ಸಂರಕ್ಷಣೆ ಕಾಯ್ದೆ 1958’ರ ನಿಬಂಧನೆಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ವಾದಿಸಿತ್ತು.
ತಮಿಳುನಾಡು ಸರ್ಕಾರ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯ (SLP) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತಲ್ಲದೆ ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿತು. ಲೈವ್ಲಾ (LiveLaw) ವರದಿಯ ಪ್ರಕಾರ, ರಾಜ್ಯಾದ್ಯಂತ ನಿಷೇಧ ಹೇರಲು ನಿರ್ದೇಶನ ನೀಡಿದ್ದ ಹೈಕೋರ್ಟ್ ಆದೇಶದ ಅಂತಿಮ ಪ್ಯಾರಾಗ್ರಾಫ್ನಲ್ಲಿ “ತಿದ್ದುಪಡಿ”ಯ ಅಗತ್ಯವಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸುಪ್ರೀಂ ಪೀಠ ಅಭಿಪ್ರಾಯಪಟ್ಟಿದೆ.
ಟಿವಿಕೆ (TVK) ಸರ್ಕಾರದ ಪ್ರಮುಖ ವಾದಗಳೇನು?:
ಮದ್ರಾಸ್ ಹೈಕೋರ್ಟ್ ಮೇ 27 ರಂದು ನೀಡಿದ್ದ ಆದೇಶದಲ್ಲಿ, ಮೇ 28 ರ ಬಕ್ರೀದ್ ಹಬ್ಬದ ಮುನ್ನಾದಿನವಾಗಲಿ ಅಥವಾ ಬೇರೆ ಯಾವುದೇ ದಿನವಾಗಲಿ ರಾಜ್ಯದ ಎಲ್ಲಿಯೂ ಹಸು ಅಥವಾ ಕರುಗಳನ್ನು ಹತ್ಯೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (DGP) ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು. ಇದನ್ನು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಬಲವಾಗಿ ಸವಾಲು ಮಾಡಿದೆ.
“ಪ್ರಾಣಿಗಳನ್ನು ಕೇವಲ ನಿಗದಿತ ಕಸಾಯಿಖಾನೆಗಳಲ್ಲಿ ಮಾತ್ರವೇ ಹತ್ಯೆ ಮಾಡಬೇಕು ಎಂದು ಹೈಕೋರ್ಟ್ ಹೇಳಿರುವುದು ಸರಿಯಾಗಿದೆ. ಆದರೆ, ಅದೇ ಸಂದರ್ಭದಲ್ಲಿ ಬಕ್ರೀದ್ ಅಥವಾ ಬೇರೆ ಯಾವುದೇ ದಿನಗಳಲ್ಲಿ ಹಸು ಅಥವಾ ಕರುಗಳನ್ನು ಹತ್ಯೆ ಮಾಡುವಂತಿಲ್ಲ ಎಂದೂ ಆದೇಶಿಸಿದೆ. ಹೈಕೋರ್ಟ್ನ ಈ ಎರಡೂ ನಿರ್ದೇಶನಗಳು ಪರಸ್ಪರ ವಿರೋಧಾಭಾಸದಿಂದ ಕೂಡಿವೆ” ಎಂದು ರಾಜ್ಯ ಸರ್ಕಾರ ವಾದಿಸಿದೆ.
ಹಾಲಿನ ಉತ್ಪಾದನೆಯನ್ನು ರಕ್ಷಿಸಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬೆಂಬಲಿಸಲು ಹಸುಗಳ ಹತ್ಯೆಯನ್ನು ನಿಷೇಧಿಸಿದ್ದ 1976ರ ಹಳೆಯ ತೀರ್ಪನ್ನು ಆಧರಿಸಿ ಹೈಕೋರ್ಟ್ ಈ ಆದೇಶ ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿರುವ ತಮಿಳುನಾಡು ಸರ್ಕಾರ, “1958ರ ತಮಿಳುನಾಡು ಪ್ರಾಣಿ ಸಂರಕ್ಷಣೆ ಕಾಯ್ದೆಯ ಪ್ರಕಾರ, 10 ವರ್ಷಕ್ಕಿಂತ ಮೇಲ್ಪಟ್ಟ, ಕೆಲಸ ಮಾಡಲು ಅಥವಾ ಸಂತಾನೋತ್ಪತ್ತಿಗೆ ಯೋಗ್ಯವಲ್ಲದ ಹಸುಗಳನ್ನು ಸಕ್ಷಮ ಅಧಿಕಾರಿಯಿಂದ ಸೂಕ್ತ ಪ್ರಮಾಣಪತ್ರ ಪಡೆದ ನಂತರ ಹತ್ಯೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಹೈಕೋರ್ಟ್ ಆದೇಶವು ಈ ಕಾಯ್ದೆಯನ್ನೇ ಉಲ್ಲಂಘಿಸಿದೆ” ಎಂದು ಸ್ಪಷ್ಟಪಡಿಸಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆ:
ಹಿಂದೂ ಮಕ್ಕಳ್ ಕಚ್ಚಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ. ಸೂರ್ಯ ಪ್ರಕಾಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸುವಾಗ ಮದ್ರಾಸ್ ಹೈಕೋರ್ಟ್ ಈ ಆದೇಶ ಹೊರಡಿಸಿತ್ತು. ನಿಗದಿತ ಕಸಾಯಿಖಾನೆಗಳಲ್ಲಿ ಮಾತ್ರವೇ ಪ್ರಾಣಿ ಹತ್ಯೆ ನಡೆಯುವಂತೆ ನಿರ್ದೇಶನ ನೀಡಬೇಕೆಂದು ಆ ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ, ಹೈಕೋರ್ಟ್ ಒಂದು ಹೆಜ್ಜೆ ಮುಂದೆ ಹೋಗಿ ತಮಿಳುನಾಡಿನಾದ್ಯಂತ ಹಸು ಮತ್ತು ಕರುಗಳ ಹತ್ಯೆಯ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ಈಗ ಸುಪ್ರೀಂ ಕೋರ್ಟ್ ತಡೆ ನೀಡಿರುವುದರಿಂದ ಮುಖ್ಯಮಂತ್ರಿ ವಿಜಯ್ ಸರ್ಕಾರಕ್ಕೆ ದೊಡ್ಡ ಕಾನೂನಾತ್ಮಕ ಜಯ ಸಿಕ್ಕಂತಾಗಿದೆ.


