ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ನಗರದ ಜೀವನಭೀಮಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜುಲೈ 13 ರಂದು ಈ ದಾರುಣ ಘಟನೆ ನಡೆದಿದ್ದು, ಮೂರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿದ ನಾಲ್ಕನೇ ವರ್ಷದ ಕಾನೂನು ವಿದ್ಯಾರ್ಥಿನಿ ಅಮೃತಾ ಸದ್ಯ ಕೊನೆಯುಸಿರೆಳೆದಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ಧನುಷ್ ಹಾಗೂ ಆತನ ಸಹೋದರ ಸೂರ್ಯ ಎಂಬಿಬ್ಬರನ್ನು ಬಂಧಿಸಿದ್ದಾರೆ.
ವಂಚನೆ ತಿಳಿದು ದೂರಾಗಿದ್ದ ಯುವತಿ
ಮೃತ ಅಮೃತಾ ಹಾಗೂ ಧನುಷ್ ನಡುವೆ ಕುಟುಂಬದ ಪರಿಚಯದ ಮೂಲಕ ಸ್ನೇಹ ಬೆಳೆದು, ಅದು ಪ್ರೇಮಕ್ಕೆ ತಿರುಗಿತ್ತು. ಆದರೆ, ಧನುಷ್ ತನಗೆ ಮೊದಲೇ ಮದುವೆಯಾಗಿ ವಿಚ್ಛೇದನವಾಗಿದೆ ಎಂಬ ರಹಸ್ಯವನ್ನು ಹಾಗೂ ತನಗೊಂದು ಮಗುವಿದೆ ಎಂಬ ಸತ್ಯವನ್ನು ಅಮೃತಾಳಿಂದ ಮುಚ್ಚಿಟ್ಟಿದ್ದ. ಈ ವಂಚನೆಯ ವಿಷಯ ತಿಳಿದ ತಕ್ಷಣ ಅಮೃತಾ ಧನುಷ್ ಜೊತೆಗಿನ ಸಂಬಂಧವನ್ನು ಸಂಪೂರ್ಣವಾಗಿ ಕೊನೆಗೊಳಿಸಿದ್ದರು.
ಸಂಬಂಧ ಮುರಿದುಕೊಂಡ ಅಮೃತಾಳ ನಿರ್ಧಾರದಿಂದ ಆಕ್ರೋಶಗೊಂಡಿದ್ದ ಧನುಷ್ ಸಹೋದರ ಸೂರ್ಯ, ಆಕೆಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಜುಲೈ 13 ರಂದು ಅಮೃತಾಳ ಮನೆಯ ಬಳಿಯೇ ಬಂದ ಸೂರ್ಯ, ಆಕೆಯೊಂದಿಗೆ ತೀವ್ರ ಜಗಳ ತೆಗೆದಿದ್ದಾನೆ. ವಾಗ್ದಾಳಿ ವಿಕೋಪಕ್ಕೆ ತಿರುಗಿದಾಗ, ಸೂರ್ಯ ತಾನು ತಂದಿದ್ದ ಚಾಕುವಿನಿಂದ ಅಮೃತಾಳ ಎದೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಇರಿದು ಸ್ಥಳದಿಂದ ಪರಾರಿಯಾಗಿದ್ದ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಮೃತಾಳನ್ನು ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತೀವ್ರ ಗಾಯಗೊಂಡಿದ್ದ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೂರು ದಿನಗಳ ನಂತರ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿ.ವಿ. ರಾಮನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಜೀವನಭೀಮಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಯುವತಿಯೊಬ್ಬಳು ವಂಚಕ ಪ್ರಿಯಕರನಿಂದ ದೂರ ಸರಿದಿದ್ದಕ್ಕೇ ಆಕೆಯ ಜೀವವನ್ನೇ ಬಲಿಪಡೆದಿರುವ ಈ ಘಟನೆ ನಗರದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.


