ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, “ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು ‘ಪರಿಣಿತ ತಾಯಿ’ ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ ಶಾಹು ಜಿ ಮಹಾರಾಜ್ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಾ, ನೀವು ಐಎಎಸ್ ಅಧಿಕಾರಿಯೇ ಆಗಿ ಅಥವಾ ಶಿಕ್ಷಕಿಯೇ ಆಗಿ, ಮೊದಲು ಪರಿಪೂರ್ಣ ತಾಯಿಯಾಗಿ. ಹಾಗೆಯೇ ಪ್ರತಿಯೊಬ್ಬರಿಗೂ ಮನೆಯಲ್ಲಿ ಅಡುಗೆ ಮಾಡುವುದು ಗೊತ್ತಿರಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದ್ದರು.
ಇದೇ ಸಂದರ್ಭದಲ್ಲಿ ಎದುರಾಗುವ ಪ್ರಶ್ನೆಯೆಂದರೆ “ಇದೇ ಸಲಹೆ ಪುರುಷರಿಗೇಕೆ ಅನ್ವಯಿಸುವುದಿಲ್ಲ? ಮಗುವನ್ನು ಸಾಕುವುದು ಕೇವಲ ತಾಯಿಯ ಜವಾಬ್ದಾರಿಯೇ? ತಂದೆಗೂ ಅದರಲ್ಲಿ ಸಮಾನ ಪಾಲಿಲ್ಲವೇ? ಇಂದು ಪುರುಷರು ತಮ್ಮ ಮಗುವಿಗಾಗಿ ಪಿತೃತ್ವ ರಜೆ (Paternity leave) ಪಡೆಯುತ್ತಾ, ಡೈಪರ್ ಬದಲಾಯಿಸುತ್ತಾ, ಟಿಫಿನ್ ಬಾಕ್ಸ್ ಪ್ಯಾಕ್ ಮಾಡುತ್ತಾ, ಅಡುಗೆಮನೆಯಲ್ಲಿ ನೆರವಾಗುತ್ತಾ ತಮ್ಮ ಪತ್ನಿಯ ವೃತ್ತಿಬದುಕಿಗೆ ಆಸರೆಯಾಗಿ ನಿಲ್ಲುತ್ತಿರುವುದನ್ನು ದೇಶ ಸಂಭ್ರಮಿಸುತ್ತಿದೆ. ಇಂತಹ ಸಮಯದಲ್ಲಿ, ನಿಮ್ಮ ವೃತ್ತಿಪರ ಆಕಾಂಕ್ಷೆಗಳಿಗಿಂತ ತಾಯ್ತನವೇ ಮೊದಲು ಎಂದು ಮಹಿಳೆಯರಿಗೆ ತಾಕೀತು ಮಾಡುವುದನ್ನು ನೋಡಿದರೆ ಕಾಲ ಚಕ್ರವನ್ನು ಮತ್ತೆ ಹಿಂದಕ್ಕೆ ಒಯ್ಯುತ್ತಿರುವಂತೆ ಭಾಸವಾಗುತ್ತದೆ.
ಯಾವುದೇ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಯುವಕರಿಗೆ, “ನೀವು ಸಿವಿಲ್ ಸರ್ವೆಂಟ್ ಆಗುವ ಮೊದಲು ಪರಿಣಿತ ತಂದೆಯಾಗಿ, ಅಥವಾ ಸರ್ಕಾರಿ ನೌಕರಿಯ ಕನಸು ಕಾಣುವ ಮುನ್ನ ಮಗುವನ್ನು ಸಾಕುವುದು ಹೇಗೆಂದು ಕಲಿಯಿರಿ ಎಂದು ಯಾರಾದರೂ ಸಾಂವಿಧಾನಿಕ ಹುದ್ದೆಯಲ್ಲಿದ್ದವರಿಂದ ಈ ರೀತಿ ಹೇಳಿಕೆ ಬಂದಿದೆಯೇ ಎಂದು ನೋಡಿದರೆ ಖಂಡಿತಾ ಇಲ್ಲ.
ಏಕೆಂದರೆ, ನಮ್ಮ ಸಮಾಜದಲ್ಲಿ ಪುರುಷನ ವೃತ್ತಿಜೀವನ ಯಾವುದೇ ಕಾರಣಕ್ಕೂ ರಾಜಿಯಾಗದ ಅಂತಿಮ ಸತ್ಯ. ತಂದೆಯಾಗುವುದು ಅವನ ವೃತ್ತಿಬದುಕಿನ ಜೊತೆಜೊತೆಗೇ ತಾನಾಗಿಯೇ ನಡೆದುಹೋಗುವ ಪ್ರಕ್ರಿಯೆ. ಮಕ್ಕಳನ್ನು ಬೆಳೆಸುವ ಮತ್ತು ಕುಟುಂಬ ನಿರ್ವಹಣೆಯ ದೊಡ್ಡ ಜವಾಬ್ದಾರಿಯನ್ನು ಮಹಿಳೆಯೇ ಹೊರಬೇಕು ಎಂಬಂತಹ ಅಲಿಖಿತ ನಿಯಮಗಳು. ಆದರೆ ಇಂದಿಗೂ ಮಹಿಳೆಯರು ತಮ್ಮ ಆಸೆ, ಕನಸುಗಳನ್ನು ಬೆನ್ನಟ್ಟಲು ಸಮಾಜದ ಅನುಮತಿ ಪಡೆಯಬೇಕಾದ ಪರಿಸ್ಥಿತಿಯಿದೆ.
‘ಪರಿಪೂರ್ಣ ತಂದೆ’ ಎಂದಾಕ್ಷಣ, ಈ ಪ್ರಶ್ನೆಯೇ ನಮ್ಮ ಸಮಾಜದಲ್ಲಿ ದ್ವಂದ್ವ ನೀತಿಯನ್ನು ಬಿಚ್ಚಿಡುತ್ತದೆ. ನಮ್ಮ ಸಾಂಸ್ಕೃತಿಕ ಕಲ್ಪನೆಯಲ್ಲೇ ‘ಪರಿಣಿತ ತಂದೆ’ (Expert Father) ಎಂಬ ಪರಿಕಲ್ಪನೆಯೇ ಇಲ್ಲಎಂದು ವಾದಿಸುತ್ತಾ, ಯಾವುದೇ ವೇದಿಕೆಯ ಮೇಲಿಂದ ರಾಜ್ಯಪಾಲರು ಯುವಕರಿಗೆ ‘ಮೊದಲು ಜವಾಬ್ದಾರಿಯುತ ತಂದೆಯಾಗಿ ಆಮೇಲೆ ಅಧಿಕಾರಿಯಾಗಿ ಎಂದು ಕರೆ ನೀಡುವುದಿಲ್ಲ.
ಚಾರಿತ್ರಿಕವಾಗಿಯೂ ಮಹಿಳೆಯರನ್ನು ಕೇವಲ ಮನೆಗೆಲಸ ಮತ್ತು ಮಗು ಸಾಕುವ ಚೌಕಟ್ಟಿನೊಳಗೆ ಕಟ್ಟಿಹಾಕಲಾಗಿದೆ, ಪುರುಷರನ್ನು ನಾಯಕತ್ವ ಮತ್ತು ವೃತ್ತಿಬದುಕಿಗೆ ಸೀಮಿತಗೊಳಿಸಲಾಗಿದೆ. ಇದರ ಪರಿಣಾಮವಾಗಿ, ತಂದೆಯಾದವನು ಮಗುವಿನ ಜೊತೆ ಸ್ವಲ್ಪ ಸಮಯ ಕಳೆದರೆ ಸಾಕು, ಸಮಾಜ ಅವನನ್ನು ಕೊಂಡಾಡುತ್ತದೆ. ಆದರೆ, ತಾಯಿಯಾದವಳು ತನ್ನ ವೃತ್ತಿಜೀವನದಲ್ಲೂ ಶ್ರೇಷ್ಠತೆ ಮೆರೆಯಬೇಕು, ಜೊತೆಗೆ ಮಗುವನು ಪೋಷಿಸುವ ಮತ್ತು ಮನೆಕೆಲಸದ ಜವಾಬ್ದಾರಿಯನ್ನು ಒಂಟಿಯಾಗಿ ಹೊರಲೇಬೇಕು.
ಸಮಾಜಶಾಸ್ತ್ರಜ್ಞರು ಇದನ್ನು “ಸೆಕೆಂಡ್ ಶಿಫ್ಟ್” ಎಂದು ಕರೆಯುತ್ತಾರೆ. ಅಂದರೆ, ಮಹಿಳೆ ಆಫೀಸ್ನಲ್ಲಿ ತನ್ನ ಎಂಟು ಗಂಟೆಗಳ ದುಡಿಮೆಯನ್ನು ಮುಗಿಸಿ ಮನೆಗೆ ಬಂದ ಮೇಲೆಯೂ, ಕಂಟಿನ್ಯೂ ಆಗುವ ಸಂಬಳವಿಲ್ಲದ ಮನೆಯ ಕೆಲಸದ ಎರಡನೇ ಪಾಳಿ. ತಾಯಿಯಾಗುವ ಬಹುಮುಖ್ಯ ಘಟ್ಟಕ್ಕೂ ಮುನ್ನವೇ, ಅಂದರೆ ಬಾಲ್ಯದಲ್ಲೇ ಹೆಣ್ಣುಮಕ್ಕಳಿಗೆ ಈ ಪಾಠ ಶುರುವಾಗುತ್ತದೆ. 11-12 ವರ್ಷ ತುಂಬುತ್ತಿದ್ದಂತೆಯೇ ಹೆಣ್ಣುಮಕ್ಕಳಿಗೆ ನೀನು ಬೇರೆ ಮನೆಗೆ ಹೋಗಬೇಕಾದವಳು, ಸಂಸಾರ ತೂಗಿಸಬೇಕಾದವಳು, ಮಕ್ಕಳನ್ನು ಸಾಕಿ ಸಲಹಬೇಕಾದವಳು” ಎಂಬ ಸೂತ್ರಗಳನ್ನು ಬೋಧಿಸಲಾಗುತ್ತದೆ.
ಆದರೆ, ಗಂಡುಮಕ್ಕಳಿಗೆ ನೀಡಲಾಗುವ ಸಂದೇಶವೇ ಬೇರೆ ಚೆನ್ನಾಗಿ ಓದು, ದೊಡ್ಡ ಕಾಲೇಜು ಸೇರು, ಒಳ್ಳೆಯ ಕೆರಿಯರ್ ರೂಪಿಸಿಕೊ ಹೀಗೆ. ಅವರು ವಯಸ್ಕರಾಗುವಷ್ಟರಲ್ಲಿ ಈ ತಾರತಮ್ಯದ ಆಲೋಚನೆಗಳು ರಕ್ತದಲ್ಲೇ ಬೆರೆತುಹೋಗಿರುತ್ತವೆ. ಹಾಗಾಗಿಯೇ, ಮಹಿಳೆಯೇ ತಾಯ್ತನಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬ ರಾಜ್ಯಪಾಲರ ಹೇಳಿಕೆ ಸಮಾಜಕ್ಕೆ ವಿಚಿತ್ರವಾಗಿ ಕಾಣದೆ, ತೀರಾ ‘ಸಾಮಾನ್ಯ’ ಮಾತಿನಂತೆ ಒಪ್ಪಿತವಾಗುವುದೂ ಅಪಾಯವೇ..
ಈ ಅಸಮಾನತೆಯ ನಿರೀಕ್ಷೆಗಳು ಕೇವಲ ಮಹಿಳೆಯರನ್ನಷ್ಟೇ ಅಲ್ಲ, ಪುರುಷರನ್ನೂ ತೀವ್ರವಾಗಿ ಸಂಕಟಕ್ಕೆ ಈಡುಮಾಡುತ್ತವೆ. ಮಗುವನ್ನು ಸಾಕುವ ಜವಾಬ್ದಾರಿಯಿಂದ ಪುರುಷನನ್ನು ದೂರವಿಟ್ಟಾಗ, ಕುಟುಂಬಕ್ಕೆ ದುಡಿದು ಹಾಕುವ ದೊಡ್ಡ ಹೊಣೆಗಾರಿಕೆ ಆತನೊಬ್ಬನ ಮೇಲೆಯೇ ಬೀಳುತ್ತದೆ. ಕೆಲಸ ಕಳೆದುಕೊಂಡಾಗ ಆತ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ ಅನುಭವಿಸುತ್ತಾನೆ. ಜೊತೆಗೆ, ಸಮಾಜದ ಕಟ್ಟುಪಾಡುಗಳಿಂದಾಗಿ ತನ್ನ ಮಾನಸಿಕ ಮತ್ತು ಭಾವನಾತ್ಮಕ ಒತ್ತಡಗಳನ್ನು ಯಾರ ಬಳಿಯಾದರೂ ಹಂಚಿಕೊಳ್ಳಲು ಆತನಿಗೆ ಸಾಧ್ಯವಾಗುವುದಿಲ್ಲ. ಅಂದರೆ, ಈ ಪಿತೃ ಪ್ರದಾನ ಧೋರಣೆ ಗಂಡು- ಹೆಣ್ಣಿಬ್ಬರನ್ನೂ ಭಿನ್ನ ರೀತಿಯಲ್ಲೇ ಪೀಡಿಸುತ್ತಿದೆ. ಆದರೆ ಹೆಚ್ಚು ಬಾಧಿತರಾಗುವುದು ಮಹಿಳೆ ಎಂಬುದರಲ್ಲಿ ಎರಡು ಮಾತಿಲ್ಲ.
“ಮಗುವಿನ ಜನನ ಇಬ್ಬರಿಂದ ಸಾಧ್ಯವಾಗುತ್ತದೆ. ಆದರೆ ‘ಪರಿಣಿತ ಪೋಷಕತ್ವ’ದ ಪರೀಕ್ಷೆಯನ್ನು ಕೇವಲ ಮಹಿಳೆಯಿಂದ ಮಾತ್ರ ನಿರೀಕ್ಷಿಸಲಾಗುತ್ತದೆ. ತಂದೆಯಾದವನು ಮಗುವಿನ ಬೆಳೆವಣಿಗೆಯಲ್ಲಿ ಭಾಗವಹಿಸಿದರೆ ಅದನ್ನೊಂದು ದೊಡ್ಡ ಸಾಧನೆ ಎಂದು ಕೊಂಡಾಡಲಾಗುತ್ತದೆ. ಆದರೆ ತಾಯಿಯಾದವಳು ಈ ಕಷ್ಟದ ಕೆಲಸವನ್ನು ನಿಶ್ಯಬ್ದವಾಗಿ, ಯಾವುದೇ ಚಕಾರವೆತ್ತದೆ ಮಾಡಬೇಕಾಗುತ್ತದೆ.
ಹಾಗಂತ ನಮ್ಮಲ್ಲಿ ಹೆಣ್ಣಿನಷ್ಟೆ ಮಕ್ಕಳನ್ನು ಪೋಷಿಸು ಗಂಡಸರು ಇಲ್ಲವೇ ಇಲ್ಲ ಎಂದೇನಿಲ್ಲ, ಅಂತಹ ಗಂಡಸರು ಇದ್ದಾರೆ. ಹೆಂಡತಿಯನ್ನು ಕೆಲಸಕ್ಕೆ ಕಳುಹಿಸಿ, ಮನೆ ಮತ್ತು ಮಗುವಿನ ಜವಬ್ದಾರಿಯನ್ನು ನಿರ್ವಹಿಸುತ್ತ, ಪ್ರತಿಯೊಂದು ಆಯ್ಕೆಯಲ್ಲಿಯೂ ಸಮಾನವಾಗಿ ಜವಬ್ದಾರಿ ಹಂಚಿಕೊಳ್ಳುವ ಅನೇಕ ಪುರುಷರು ಇದ್ದಾರೆ. ಆದರೆ ಅದರ ಸಂಖ್ಯೆ ತೀರಾ ಕಡಿಮೆ. ಆದರೆ ಅದನ್ನೆ ಉದಾಹರೆಣೆಯಾಗಿಟ್ಟುಕೊಂಡು ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಥವಾ ಸಂವಿಧಾನಿಕ ಹುದ್ದೆಯಲ್ಲಿರುವ ಯಾರಾದರೂ ನೀವು ಏನಾಗುವ ಮೊದಲು ಪರಿಪೂರ್ಣ ತಂದೆ ಅಥವಾ ಪರಿಣಿತ ತಂದೆಯಾಗಿ ಎಂದು ಕರೆ ನೀಡಿರುವ ಉದಾಹರಣೆ ಇಲ್ಲ.
ಮಕ್ಕಳನ್ನು ಬೆಳೆಸುವುದು ಅತ್ಯಂತ ಜವಾಬ್ದಾರಿಯ ಕೆಲಸ ಎಂದಾದರೆ, ಅದನ್ನು ತಾಯಿಯೊಬ್ಬಳ ಅಗ್ನಿಪರೀಕ್ಷೆ ಮತ್ತು ತಂದೆಯೊಬ್ಬನ ಆಯ್ಕೆ ಎಂದು ಏಕೆ ನೋಡಬೇಕು. ನಾವು ಮಹಿಳೆಯರನ್ನು ‘ಪರಿಣಿತ ತಾಯಿ’ಯಾಗಲು ಕೋರುವ ಬದಲು ಸಮಾಜವನ್ನು ‘ಪರಿಣಿತ ಸಮಾಜ’ ವನ್ನಾಗಿ ಮಾಡಬೇಕಿದೆ. ಮಹಿಳೆಯು ತಾಯ್ತನವನ್ನು ಆಯ್ಕೆ ಮಾಡಿಕೊಳ್ಳಲಿ ಅಥವಾ ಮಾಡದಿರಲಿ ಆಕೆಯ ಆಶಯಗಳನ್ನು ಗೌರವಿಸುವ ಮತ್ತು ತಂದೆಯಾದವನನ್ನು ಸಹಾಯಕನಂತೆ ನೋಡದೆ ಸಮಾನ ಪೋಷಕನನ್ನಾಗಿ ನೋಡುವ ವಾತಾವರಣ ನಿರ್ಮಾಣ ಮಾಡಬೇಕಿದೆ.
ವಾಸ್ತವವಾಗಿ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿರುವುದು ಪರಿಪೂರ್ಣ ಎಂಬುದೇ ಒಂದು ಮಿತ್, ಇಲ್ಲಿ ಯಾರೂ ಮತ್ತು ಯಾವುದೂ ಪರಿಪೂರ್ಣ ಅಲ್ಲ. ಪರಿಪೂರ್ಣ ಎಂದು ಹೇಳುವ ಮೂಲಕ ಈ ವ್ಯವಸ್ಥೆ ಹೆಣ್ಣು ಮತ್ತು ಗಂಡಿನ ಮೇಲೆ ಒಂದು ರೀತಿಯ ಹೇರಿಕೆಯನ್ನು ಹುಟ್ಟುಹಾಕುತ್ತಾ ಮಾನಸಿಕ ಒತ್ತಡಕ್ಕೆ ಸಿಲುಕುವಂತೆ ಮಾಡುತ್ತಿದೆ.
ನಾವು ಮಹಿಳೆಯರನ್ನು ‘ಪರಿಣಿತ ತಾಯಿ’ಯಾಗಲು ಬಲವಂತಪಡಿಸುವ ಬದಲು, ಸಮಾಜವನ್ನು ‘ಪರಿಣಿತ ಸಮಾಜ‘ ವನ್ನಾಗಿ ಮಾಡಬೇಕಿದೆ. ಮಹಿಳೆ ತಾಯ್ತನವನ್ನು ಆಯ್ಕೆ ಮಾಡಿಕೊಳ್ಳಲಿ ಅಥವಾ ವೃತ್ತಿ ಬದುಕನ್ನು ಆಯ್ದುಕೊಳ್ಳಲಿ, ಆಕೆಯ ಆಶಯಗಳನ್ನು ಗೌರವಿಸುವ ಮತ್ತು ಪುರುಷನನ್ನು ಕೇವಲ ‘ಸಹಾಯಕರನನ್ನಾಗಿ’ ನೋಡದೆ ‘ಸಮಾನ ಪೋಷಕ’ನನ್ನಾಗಿ ನೋಡುವ ವಾತಾವರಣವನ್ನು ನಿರ್ಮಿಸಬೇಕಿದೆ.


