ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರಿಗೆ ಆಮ್ ಆದ್ಮಿ ಪಾರ್ಟಿ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುರುವಾರ ನೇರ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ವಾಂಗ್ಚುಕ್ ಅವರ ಹೋರಾಟಕ್ಕೆ ಸಾಥ್ ನೀಡಿದ ಕೇಜ್ರಿವಾಲ್, ಸೋನಮ್ ವಾಂಗ್ಚುಕ್ ದೇಶದ ದೊಡ್ಡ ಶಿಕ್ಷಣ ತಜ್ಞ. ಅವರು ಹಿಂದೆ ಲಡಾಖ್ ಹಕ್ಕುಗಳಿಗಾಗಿಯೂ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇಂದು ಈ ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡಲು ಸಿದ್ಧರಾಗಿದ್ದಾರೆ ಎಂದು ಪ್ರಶಂಸಿಸಿದರು.
ವಾಂಗ್ಚುಕ್ ಅವರಿಗೆ ಸಲಾಂ ಹೊಡೆದ ಕೇಜ್ರಿವಾಲ್, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಸೋನಮ್ ವಾಂಗ್ಚುಕ್ ಅವರನ್ನು ದೇಶದ ಮುಂದಿನ ಶಿಕ್ಷಣ ಸಚಿವನ್ನಾಗಿ ಮಾಡಬೇಕು,” ಎಂದು ಪ್ರಧಾನಿ ಮೋದಿಯವರನ್ನು ಆಗ್ರಹಿಸಿದರು.
2011 ರಲ್ಲಿ ಅಣ್ಣಾ ಹಜಾರೆ ಜೊತೆ ನಡೆಸಿದ್ದ ಭ್ರಷ್ಟಾಚಾರ ವಿರೋಧಿ ಸುದೀರ್ಘ ಹೋರಾಟವನ್ನು ನೆನಪಿಸಿಕೊಂಡ ಮಾಜಿ ದೆಹಲಿ ಸಿಎಂ, ವಾಂಗ್ಚುಕ್ ಅವರು ಎಲ್ಲಿ ಮತ್ತೆ ಕ್ರಾಂತಿಕಾರಿ ಹೋರಾಟಕ್ಕೆ ನಾಂದಿ ಹಾಡುತ್ತಾರೋ ಎಂಬ ಭಯ ಪ್ರಧಾನಿಯವರನ್ನು ಕಾಡುತ್ತಿದೆ ಎಂದರು.
ಜಂತರ್ ಮಂತರ್ನಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, “ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆಗಳು ದೇಶದ ಯುವಜನತೆಯ ಆತ್ಮವಿಶ್ವಾಸವನ್ನೇ ಕುಗ್ಗಿಸಿವೆ. ನಾನು ಕೂಡ ಐಐಟಿ (IIT) ಪರೀಕ್ಷೆ ಬರೆದು ಉತ್ತೀರ್ಣನಾಗಿದ್ದೆ, ನನ್ನ ಇಬ್ಬರು ಮಕ್ಕಳೂ ಅದೇ ಸಂಸ್ಥೆಯಲ್ಲಿ ಓದಿದ್ದಾರೆ. ಪ್ರವೇಶ ಪರೀಕ್ಷೆಗಳು ವಿದ್ಯಾರ್ಥಿಗಳ ಪಾಲಿಗೆ ಕಟ್ಟಕಡೆಯ ಕನಸಾಗಿರುತ್ತವೆ. ತಮ್ಮ ಕಠಿಣ ಪರಿಶ್ರಮದಿಂದ ಭವಿಷ್ಯ ರೂಪಿಸಿಕೊಳ್ಳಬಹುದು ಎಂಬ ಭರವಸೆಯಿಂದ ಅವರು ಪರೀಕ್ಷಾ ಹಾಲ್ಗೆ ಹೋಗುತ್ತಾರೆ. ಆದರೆ ಇಂತಹ ಅಕ್ರಮಗಳು ದೇಶದ ಭವಿಷ್ಯಕ್ಕೇ ಅತ್ಯಂತ ಅಪಾಯಕಾರಿ,” ಎಂದು ಕಳವಳ ವ್ಯಕ್ತಪಡಿಸಿದರು.
ಅಲ್ಲದೆ, 2024ರ ಪೇಪರ್ ಲೀಕ್ ಪ್ರಕರಣದ ಮುಖ್ಯ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುತ್ತಿರುವುದನ್ನು ಅವರು ತೀವ್ರವಾಗಿ ಟೀಕಿಸಿದರು. ವಿದ್ಯಾರ್ಥಿಗಳ ಸಾಲು ಸಾಲು ಆತ್ಮಹತ್ಯೆಗಳನ್ನು ತಡೆಯಲು ಹಾಲಿ ಪರೀಕ್ಷಾ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಬೇಕಿದೆ ಎಂದ ಕೇಜ್ರಿವಾಲ್ಸ ರ್ಕಾರ ಯುವಜನರ ಧ್ವನಿಗೆ ಮತ್ತು ಈ ‘ಕಾಕ್ರೋಚ್’ಗಳ ಪ್ರತಿಭಟನೆಗೆ ತಕ್ಷಣವೇ ಕಿವಿಗೊಡಬೇಕು, ಎಂದು ಆಗ್ರಹಿಸಿದರು. ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಆಯೋಜಿಸಿರುವ ಜುಲೈ 20 ರ ಬೃಹತ್ ‘ಸಂಸತ್ ಚಲೋ’ ಪಾದಯಾತ್ರೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ಜನರು ಭಾಗವಹಿಸಬೇಕೆಂದು ಅವರು ಕರೆ ನೀಡಿದರು.
ಕೇಜ್ರಿವಾಲ್ ಅವರೊಂದಿಗೆ ಆಗಮಿಸಿದ್ದ ಆಪ್ ನಾಯಕ ಹಾಗೂ ದೆಹಲಿ ಮಾಜಿ ಸಚಿವ ಸೌರಭ್ ಭಾರದ್ವಾಜ್ ಕೂಡ ಜುಲೈ 20 ರ ಸಂಸತ್ ಮುತ್ತಿಗೆಗೆ ಬೆಂಬಲ ನೀಡಿದರು. ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಾ ಬಿಜೆಪಿ ಸರ್ಕಾರಕ್ಕೆ ಟಾಂಗ್ ನೀಡಿದ ಅವರು, ಒಂದು ವೇಳೆ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವಸ್ಥಾನದಿಂದ ತೆಗೆದುಹಾಕಿದರೆ, ದಯವಿಟ್ಟು ಅವರ ಜಾಗಕ್ಕೆ ಮತ್ತೆ ಸ್ಮೃತಿ ಇರಾನಿ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಬೇಡಿ ಎಂದು ವ್ಯಂಗ್ಯವಾಡಿದ್ದಾರೆ.


