ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ ಮುಂದಿನ ನಡೆ ಏನು ಎಂಬ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅಲ್ಲದೆ, ಎರಡೂ ಕಡೆಯ ನಾಯಕರಿಗೂ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ ಎಂದು indianexpress.com ವರದಿ ಮಾಡಿದೆ.
ಎನ್ಸಿಪಿ (ಎಸ್ಪಿ) ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಅವರು ಮಂಗಳವಾರ ಸಂಜೆ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದು, ಇದಕ್ಕೂ ಮುನ್ನ, ದಕ್ಷಿಣ ಮುಂಬೈನ ಸಿಲ್ವರ್ ಓಕ್ ನಿವಾಸದಲ್ಲಿ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಇನ್ನು ಆಡಳಿತಾರೂಢ ಎನ್ಸಿಪಿ ನಾಯಕರಾದ ಸುನಿಲ್ ತತ್ಕರೆ ಮತ್ತು ಪ್ರಫುಲ್ ಪಟೇಲ್ ಕೂಡ ಮುಖ್ಯಮಂತ್ರಿಯನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ನಾಯಕರಾಗಲಿ ಅಥವಾ ಮುಖ್ಯಮಂತ್ರಿಯ ಕಚೇರಿಯಾಗಲಿ ಅಲ್ಲಿ ಏನು ಚರ್ಚೆಯಾಗಿದೆ ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಡಳಿತಾರೂಢ ಎನ್ಸಿಪಿ ಮತ್ತು ಎನ್ಸಿಪಿ (ಎಸ್ಪಿ) ಎರಡೂ ಬಣಗಳ ಮೂಲಗಳ ಪ್ರಕಾರ, ಈ ಸಭೆಯ ಕಾರ್ಯಸೂಚಿ (ಅಜೆಂಡಾ) ಏನೆಂಬುದು ತಮಗೂ ತಿಳಿದಿಲ್ಲ ಎಂದು ಹೇಳಿದ್ದಾರೆ.
ಜುಲೈ 2023ರಲ್ಲಿ ಅಜಿತ್ ಪವಾರ್ ಅವರು ಅಖಂಡ ಎನ್ಸಿಪಿಯನ್ನು ಒಡೆದು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಸೇರಿದ ನಂತರ, ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ಪಿ) ಪಕ್ಷವು ಎದುರಿಸುತ್ತಿರುವ ಅತಿ ದೊಡ್ಡ ಕಾರ್ಯತಂತ್ರದ ಸಂದಿಗ್ಧತೆಯ ಸಮಯದಲ್ಲಿಯೇ ಈ ಸಭೆಗಳು ನಡೆದಿವೆ.
ಎನ್ಸಿಪಿ (ಎಸ್ಪಿ) ಪಕ್ಷದ ಒಟ್ಟು 10 ಶಾಸಕರಲ್ಲಿ ಕನಿಷ್ಠ ಅರ್ಧದಷ್ಟು ಶಾಸಕರು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವನ್ನು ಸೇರಲು ಒಲವು ತೋರಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಈ ಹಿಂದೆ indianexpress.com ವರದಿ ಮಾಡಿತ್ತು. ವಿರೋಧ ಪಕ್ಷದಲ್ಲಿಯೇ ಉಳಿಯುವುದರಿಂದ ತಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ಅನುದಾನ ಮತ್ತು ಆಡಳಿತಾತ್ಮಕ ಅನುಮತಿಗಳನ್ನು ಪಡೆಯುವುದು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ ಎಂಬುದು ಈ ಶಾಸಕರ ವಾದವಾಗಿದೆ.
ಜಯಂತ್ ಪಾಟೀಲ್ ಅವರು ಇತ್ತೀಚೆಗೆ ಪಕ್ಷದ ಶಾಸಕರಿಗೆ ಈ ಭಾವನೆಯನ್ನು ತಿಳಿಸಿದ್ದು, ಬಹುಪಾಲು ಶಾಸಕರು ಎನ್ಡಿಎ ಮೈತ್ರಿಕೂಟದತ್ತ ಒಲವು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಶರದ್ ಪವಾರ್ ಅವರು ಈವರೆಗೆ ಮೌನವಾಗಿಯೇ ಉಳಿದಿದ್ದು, ಪಕ್ಷದ ಮುಂದಿನ ನಡೆಯ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಮುನ್ಸೂಚನೆ ನೀಡಿಲ್ಲ ಎಂದು ವರದಿ ಉಲ್ಲೇಖಿಸಿದೆ.
ವಿಧಾನಸಭೆಯಲ್ಲಿ 10 ಶಾಸಕರು ಮತ್ತು ಲೋಕಸಭೆಯಲ್ಲಿ 8 ಸಂಸದರನ್ನು ಹೊಂದಿರುವ ಎನ್ಸಿಪಿ (ಎಸ್ಪಿ) ಮಹಾರಾಷ್ಟ್ರದ ಆರು ಪ್ರಮುಖ ರಾಜಕೀಯ ಪಕ್ಷಗಳಲ್ಲೇ ಅತ್ಯಂತ ಚಿಕ್ಕದಾಗಿದ್ದರೂ, ಮುಂಬರುವ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆ ಸೇರಿದಂತೆ ಪ್ರಮುಖ ಕಾನೂನುಗಳ ಅಂಗೀಕಾರಕ್ಕಾಗಿ ಬಿಜೆಪಿ ನೇತೃತ್ವದ ಎನ್ಡಿಎ ತನ್ನ ಸಂಸದರ ಬಲವನ್ನು ಹೆಚ್ಚಿಸಿಕೊಳ್ಳಲು ನೋಡುತ್ತಿರುವ ಈ ಸಮಯದಲ್ಲಿ ಅದರ ಸಂಸದೀಯ ಶಕ್ತಿ ಮಹತ್ವದ್ದಾಗಿದೆ. ಎನ್ಸಿಪಿ (ಎಸ್ಪಿ) ನಂತಹ ಸಣ್ಣ ಪಕ್ಷಗಳ ಬೆಂಬಲವನ್ನು ಪಡೆಯಲು ಎನ್ಡಿಎ ಸಿದ್ಧವಿರಬಹುದು ಎಂದು ಪಕ್ಷದ ನಾಯಕರು ನಂಬಿದ್ದಾರೆ.
ಆದರೆ, ಈ ರಾಜಕೀಯ ಗೊಂದಲ ಮತ್ತು ಬದಲಾವಣೆಗಳು ಕೇವಲ ಶರದ್ ಪವಾರ್ ಅವರ ಬಣಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಎರಡೂ ಎನ್ಸಿಪಿ ಬಣಗಳ ನಾಯಕರ ಪ್ರಕಾರ, ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ಪಿ) ಪಕ್ಷವು ಮೊದಲಿಗೆ ಅಜಿತ್ ಪವಾರ್ ಬಣದೊಂದಿಗೆ ರಾಜಿಯಾಗುವ ಯಾವುದೇ ಪ್ರಯತ್ನ ನಡೆಸಿಲ್ಲ. ಬದಲಿಗೆ, ಕಾಂಗ್ರೆಸ್ ಜೊತೆ ವಿಲೀನವಾಗುವುದು ಅಥವಾ ಎನ್ಡಿಎ ಮೈತ್ರಿಕೂಟದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಆಯ್ಕೆಗಳ ಬಗ್ಗೆ ಸಾರ್ವಜನಿಕವಾಗಿ ಆಲೋಚಿಸುತ್ತಿದೆ. ಇದು ಆಡಳಿತಾರೂಢ ಅಜಿತ್ ಪವಾರ್ ಅವರ ಎನ್ಸಿಪಿ ಬಣದೊಳಗೂ ತಲ್ಲಣ ಮೂಡಿಸಿದ್ದು, ತಮ್ಮ ರಾಜಕೀಯ ನಿಲುವು ಹಾಗೂ ಸುನೇತ್ರಾ ಪವಾರ್ ಅವರ ನಾಯಕತ್ವದ ಕುರಿತು ಆಂತರಿಕ ಚರ್ಚೆಗಳು ತೀವ್ರಗೊಳ್ಳುವಂತೆ ಮಾಡಿದೆ.
ಮಂಗಳವಾರ ರಾತ್ರಿಯ ಸಭೆಗಳಿಗಿಂತ ಒಂದು ದಿನ ಮುಂಚಿತವಾಗಿ, ಎನ್ಸಿಪಿ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಚ್ಚಿದಾನಂದ ಸಿಂಗ್ ಅವರು ಪಕ್ಷದ ಅಧ್ಯಕ್ಷರಾಗಿ ಸುನೇತ್ರಾ ಪವಾರ್ ಅವರ ಆಯ್ಕೆಯನ್ನು ಪ್ರಶ್ನಿಸಿ ಮತ್ತು ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಕಾನೂನು ನೋಟಿಸ್ ಜಾರಿ ಮಾಡಿದ್ದರು. ಈ ಸಭೆಗಳು ಆ ನೋಟಿಸ್ ಬೆನ್ನಲ್ಲೇ ನಡೆದಿವೆ. ಸೋಮವಾರ ಮಹಾರಾಷ್ಟ್ರ ಎನ್ಸಿಪಿ ಅಧ್ಯಕ್ಷ ಸುನಿಲ್ ತತ್ಕರೆ ಅವರು ಈ ನೋಟಿಸ್ ಅನ್ನು “ಆಧಾರರಹಿತ” ಎಂದು ತಳ್ಳಿಹಾಕಿದ್ದರು, ಪಕ್ಷವು ಸುನೇತ್ರಾ ಪವಾರ್ ಅವರ ನಾಯಕತ್ವದ ಹಿಂದೆ ಒಗ್ಗಟ್ಟಾಗಿದೆ ಎಂದು ಪ್ರತಿಪಾದಿಸಿದ್ದರು ಮತ್ತು ಇದಕ್ಕೆ ಕಾನೂನುಬದ್ಧ ಪ್ರತಿಕ್ರಿಯೆಯನ್ನು ಪಕ್ಷದ ಪ್ರಮುಖ ಸಮಿತಿ (ಕೋರ್ ಕಮಿಟಿ) ನಿರ್ಧರಿಸುತ್ತದೆ ಎಂದು ಹೇಳಿದ್ದರು.
ಆದರೆ ಈ ನೋಟಿಸ್ ಆಡಳಿತಾರೂಢ ಎನ್ಸಿಪಿ ಬಣದೊಳಗಿನ ಅಸಮಾಧಾನವನ್ನು ಬಹಿರಂಗಪಡಿಸಿದೆ. ಪಕ್ಷದ ಸಾಂಸ್ಥಿಕ ವ್ಯವಹಾರಗಳಲ್ಲಿ ರಾಜ್ಯಸಭಾ ಸಂಸದ ಪಾರ್ಥ್ ಪವಾರ್ ಅವರ ಪ್ರಭಾವ ಹೆಚ್ಚುತ್ತಿರುವುದರ ವಿರುದ್ಧ ನಾಯಕರಲ್ಲಿ ಬೆಳೆಯುತ್ತಿರುವ ಅತೃಪ್ತಿಯೇ ಈ ನೋಟಿಸ್ಗೆ ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜುಲೈ 2023ರ ಪಕ್ಷದ ಸೀಳಿನ ನಂತರ ಏರಿಳಿತಗಳನ್ನು ಕಾಣುತ್ತಿರುವ ಈ ರಾಜಕೀಯ ಕಥೆಯಲ್ಲಿ, ಈ ಹೊಸ ಊಹಾಪೋಹಗಳು ಮತ್ತೊಂದು ಪ್ರಮುಖ ತಿರುವನ್ನು ಸೂಚಿಸುತ್ತವೆ. ಈ ವರ್ಷದ ಜನವರಿಯಲ್ಲಿ ನಡೆದ ಬಿಎಂಸಿ ಚುನಾವಣೆ ಫಲಿತಾಂಶಗಳ ಮುನ್ನ ಮತ್ತು ತಕ್ಷಣವೇ, ಎನ್ಸಿಪಿಯ ಎರಡೂ ಬಣಗಳು ಮತ್ತೆ ಒಂದಾಗಬಹುದು ಎಂಬ ವ್ಯಾಪಕ ಚರ್ಚೆಗಳು ನಡೆದಿದ್ದವು. ಆದರೆ, ಜನವರಿ ಅಂತ್ಯದಲ್ಲಿ ಅಜಿತ್ ಪವಾರ್ ಅವರ ನಿಧನದ ನಂತರ ಆ ಚರ್ಚೆಗಳು ತಣ್ಣಗಾಗಿದ್ದವು. ಕಳೆದ ಎರಡು ವಾರಗಳಲ್ಲಿ ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿದ್ದು, ಮೊದಲು ಎನ್ಸಿಪಿ (ಎಸ್ಪಿ) ಪಕ್ಷವು ಕಾಂಗ್ರೆಸ್ನೊಂದಿಗೆ ವಿಲೀನವಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಯಾಯಿತು. ಆದರೆ ಈ ನಡೆಗೆ ರಾಜ್ಯ ಕಾಂಗ್ರೆಸ್ನೊಳಗೆ ವಿರೋಧ ವ್ಯಕ್ತವಾಗಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ, ಚರ್ಚೆಯು ಈಗ ಪಕ್ಷದ ಒಂದು ಬಣವು ಕಾಂಗ್ರೆಸ್ ಬದಲಿಗೆ ಎನ್ಡಿಎ ಮೈತ್ರಿಕೂಟವನ್ನು ಸೇರಬಹುದು ಎಂಬ ಸಾಧ್ಯತೆಯತ್ತ ವೇಗವಾಗಿ ತಿರುಗಿದೆ.
ಒಟ್ಟಿನಲ್ಲಿ ಎನ್ಸಿಪಿಯ ಎರಡೂ ಬಣಗಳ ಆಂತರಿಕ ವಿಚಾರಗಳು ಗೊಂದಲದ ಗೂಡಾಗಿ ಮಾರ್ಪಟ್ಟಿವೆ. ಅಂತಿಮವಾಗಿ ಸಂಪೂರ್ಣ ಎನ್ಸಿಪಿಯನ್ನೇ ತನ್ನತ್ತ ಸೆಳೆದು ಕ್ಷೇತ್ರ ಮರುವಿಂಗಡನೆ ಮಸೂದೆಗೆ (ಸಂವಿಧಾನದ 131ನೇ ತಿದ್ದುಪಡಿ) ಅಂಗೀಕಾರ ಪಡೆಯಲು ಬೇಕಾಗುವ 360 ಸ್ಥಾನಗಳನ್ನು ಎನ್ಡಿಎ ಗಳಿಸಿಕೊಳ್ಳು ಸಾಧ್ಯತೆ ದಟ್ಟವಾಗಿದೆ.
ಇತ್ತೀಚೆಗಷ್ಟೇ ಟಿಎಂಸಿಯ ಸಂಸದರನ್ನು ಎನ್ಡಿಎ ಸೆಳೆದಿತ್ತು. ಅದರ ಬೆನ್ನಿಗೆ ಎನ್ಸಿಪಿಯಲ್ಲಿ ಜಟಾಪಟಿ ಶುರುವಾಗಿದೆ. ಅತ್ತ ತಮಿಳುನಾಡಿನ ಡಿಎಂಕೆಯನ್ನೂ ಬಿಜೆಪಿ ಓಲೈಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಆರೋಪಿಸಿದ್ದಾರೆ.


