“ಬಿಡದಿ ಟೌನ್ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ” ಎಂದು ‘ಸಂಯುಕ್ತ ಹೋರಾಟ-ಕರ್ನಾಟಕ’ (ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ ಹಾಗೂ ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನೆನ್ನೆ (ಜುಲೈ 13) ಬಿಡದಿಯ ಮಂದಲಹಳ್ಳಿಯಲ್ಲಿ ಪೊಲೀಸ್ ಕಾವಲಿನಲ್ಲಿ ಜೆಎಂಸಿ ಸರ್ವೆ ಮಾಡಲು ಬಂದ ಅಧಿಕಾರಿಗಳನ್ನು ರೈತರು ಪ್ರತಿರೋಧಿಸಿದ ಘಟನೆಯ ಬೆನ್ನಲ್ಲೇ, ಸಮಿತಿಯು ಜುಲೈ 14 ರಂದು ಮಹತ್ವದ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.
ಮಾತು ತಪ್ಪಿದ ಸರ್ಕಾರ: ರೈತರ ಆಕ್ರೋಶಕ್ಕೆ ಕಾರಣವೇನು?
“ಬಿಡದಿ ಸುತ್ತಮುತ್ತಲಿನ ಹಳ್ಳಿಗಳ ರೈತರು ಕಳೆದ ಒಂದೂವರೆ ವರ್ಷದಿಂದ (18 ತಿಂಗಳು) ‘ನಮ್ಮ ಜಮೀನು ನಮಗೆ ಬೇಕು, ಈ ಯೋಜನೆಗೆ ನಮ್ಮ ಸಮ್ಮತಿ ಇಲ್ಲ’ ಎಂದು ನಿರಂತರವಾಗಿ ಧರಣಿ ನಡೆಸುತ್ತಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ” ಎಂದು ಸಮಿತಿ ನೆನಪಿಸಿದೆ.
ಇತ್ತೀಚೆಗಷ್ಟೇ ಸ್ಥಳೀಯ ಶಾಸಕರು ಸಭೆ ಕರೆದು ಭೂಮಿಗೆ ಎಷ್ಟು ಬೆಲೆ ಬೇಕು ಎಂದು ಕೇಳಿದಾಗಲೂ, ರೈತರು ಅತ್ಯಂತ ಸ್ಪಷ್ಟವಾಗಿ “ನಮಗೆ ಬೆಲೆ ಮುಖ್ಯವಲ್ಲ, ನಾವು ಭೂಮಿ ಮಾರಲು ಸಿದ್ಧರಿಲ್ಲ. ಭೂಸ್ವಾಧೀನವನ್ನು ಸಂಪೂರ್ಣವಾಗಿ ಕೈಬಿಡಬೇಕು” ಎಂಬ ಏಕೈಕ ಬೇಡಿಕೆಯನ್ನು ಇಟ್ಟಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳೇ ಮಧ್ಯಪ್ರವೇಶಿಸಿ, “ಹಾಗಾದರೆ ಈ ವಿಚಾರವನ್ನು ಮುಖ್ಯಮಂತ್ರಿಗಳೇ ತೀರ್ಮಾನಿಸಬೇಕು. ಅವರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೇ ರೈತರ ಸಭೆ ನಿಗದಿಪಡಿಸುತ್ತೇವೆ” ಎಂದು ಭರವಸೆ ನೀಡಿ ಮಾತು ಕೊಟ್ಟಿದ್ದರು.
ಆದರೆ, ಕೊಟ್ಟ ಮಾತನ್ನು ಗಾಳಿಗೆ ತೂರಿ, ಇದ್ದಕ್ಕಿದ್ದಂತೆ ನೂರಾರು ಪೊಲೀಸರನ್ನು ಕರೆತಂದು ಬಲವಂತವಾಗಿ ಜಂಟಿ ಸರ್ವೆಗೆ ಮುಂದಾಗಿರುವುದು ಅತ್ಯಂತ ಅಪ್ರಜಾಪ್ರಭುತ್ವವಾದಿ ನಡೆ ಎಂದು ಸಮಿತಿ ಆಕ್ಷೇಪಿಸಿದೆ.
“ಬಲವಂತದ ಭೂಸ್ವಾಧೀನಕ್ಕೆ ಮುಂದಾದರೆ ರಾಜ್ಯಾದ್ಯಂತ ಹೋರಾಟ“
ಸರ್ಕಾರದ ಈ ದಬ್ಬಾಳಿಕೆಯನ್ನು ಕಟುವಾಗಿ ಟೀಕಿಸಿರುವ ಸಂಯುಕ್ತ ಹೋರಾಟದ ನಾಯಕರು, “ಸರ್ಕಾರ ಒಂದು ವೇಳೆ ಪೊಲೀಸ್ ಬಲ ಬಳಸಿ ಬಲವಂತವಾಗಿ ಭೂಸ್ವಾಧೀನ ಮಾಡಲು ಮುಂದಾದರೆ, ಇದು ಕೇವಲ ಬಿಡದಿ ರೈತರ ಹೋರಾಟವಾಗಿ ಉಳಿಯುವುದಿಲ್ಲ. ಇಡೀ ರಾಜ್ಯದ ರೈತರು ಒಗ್ಗೂಡಿ ಸರ್ಕಾರದ ವಿರುದ್ಧ ಬೀದಿಗಿಳಿಯಲಿದ್ದಾರೆ. ಇದರ ಗಂಭೀರ ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ” ಎಂದು ಕಟು ಎಚ್ಚರಿಕೆ ನೀಡಿದ್ದಾರೆ.
“ಅತ್ಯಂತ ಫಲವತ್ತಾದ, ನೀರಾವರಿ ಸಮೃದ್ಧ ಹಾಗೂ ಬಹುವಾರ್ಷಿಕ ಬೆಳೆಗಳನ್ನು ಬೆಳೆಯುವ ರೈತರ ಜೀವನಾಡಿಯಾದ ಭೂಮಿಯನ್ನು ಕಿತ್ತುಕೊಂಡು, ಅಲ್ಲಿ ಕಾಂಕ್ರೀಟ್ ಟೌನ್ಶಿಪ್ ಮಾಡಲು ಹೊರಟಿರುವ ಈ ವಿನಾಶಕಾರಿ ಯೋಜನೆಯನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಈ ಹಿಂದೆ ರೈತರಿಗೆ ಕೊಟ್ಟ ಭರವಸೆಯಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ತಕ್ಷಣವೇ ಸಭೆ ಕರೆದು ಈ ಸಮಸ್ಯೆಗೆ ಶಾಶ್ವತ ಕೊನೆ ಹಾಡಬೇಕು” ಎಂದು ಸಮಿತಿ ಒತ್ತಾಯಿಸಿದೆ.
ನಿನ್ನೆ ನಡೆದ ಸಂಘರ್ಷದ ವೇಳೆ ಅಧಿಕಾರಿಗಳು ಮತ್ತು ಪೊಲೀಸರು ರೈತರ ಮನೆಗಳಿಗೆ ನುಗ್ಗಿ ಜಮೀನನ್ನು ವಶಪಡಿಸಿಕೊಳ್ಳಬಹುದು ಎಂಬ ಆತಂಕ ಸೃಷ್ಟಿಯಾಗಿದ್ದರಿಂದ ರೈತ ಮಹಿಳೆಯರು ಹಾಗೂ ಹಿರಿಯರು ತೀವ್ರವಾಗಿ ಪ್ರತಿಭಟಿಸಿದ್ದಾರೆ. ಈ ವೇಳೆ ಕೆಲವು ಅಹಿತಕರ ಘಟನೆಗಳು ನಡೆದಿರುವುದನ್ನು ಪ್ರಸ್ತಾಪಿಸಿರುವ ಸಮಿತಿಯು ರೈತರಲ್ಲಿ ವಿಶೇಷ ಮನವಿ ಮಾಡಿದೆ.
“ಯಾವದೇ ಕಾರಣಕ್ಕೂ ನಮ್ಮ ಫಲವತ್ತಾದ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂಬ ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಸರ್ಕಾರದ ದಬ್ಬಾಳಿಕೆಗೆ ನಾವು ತೀವ್ರ ಪ್ರತಿರೋಧ ಒಡ್ಡೋಣ, ಆದರೆ ಯಾವುದೇ ಕಾರಣಕ್ಕೂ ಶಾಂತಿ ಮತ್ತು ಸಂಯಮವನ್ನು ಕಳೆದುಕೊಳ್ಳಬಾರದು. ಕೇವಲ ಶಾಂತಿಯುತ ಹಾಗೂ ಸಂಘಟಿತ ಹೋರಾಟದ ಮೂಲಕವೇ ನಮ್ಮ ಭೂಮಿಯನ್ನು ನಾವು ಉಳಿಸಿಕೊಳ್ಳೋಣ” ಎಂದು ರೈತ ಬಂಧುಗಳಲ್ಲಿ ಸಂಯುಕ್ತ ಹೋರಾಟ ಸಮಿತಿ ವಿನಂತಿಸಿದೆ.
ಈ ಮಾಧ್ಯಮ ಹೇಳಿಕೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಪ್ರೊ. ಆರ್. ಬಸವರಾಜಪ್ಪ, ಕರ್ನಾಟಕ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಯು. ಬಸವರಾಜ್ ಡಾ. ಯಶವಂತ ಸೇರಿದಂತೆ ಇಡೀ ಕರ್ನಾಟಕದ ಪ್ರಮುಖ ರೈತ ಮತ್ತು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಒಮ್ಮತದ ಬೆಂಬಲ ಸೂಚಿಸಿದ್ದಾರೆ.


