Homeಮುಖಪುಟವೀರಪ್ಪನ್ ಹೇಳಿದ ಕಥೆಗೆ 30 ವರ್ಷಗಳ ಬಳಿಕ ಕ್ಲೈಮ್ಯಾಕ್ಸ್ : ಸನ್ ಟಿವಿ ವಿರುದ್ಧ ಕಾನೂನು...

ವೀರಪ್ಪನ್ ಹೇಳಿದ ಕಥೆಗೆ 30 ವರ್ಷಗಳ ಬಳಿಕ ಕ್ಲೈಮ್ಯಾಕ್ಸ್ : ಸನ್ ಟಿವಿ ವಿರುದ್ಧ ಕಾನೂನು ಸಮರದಲ್ಲಿ ಗೆದ್ದ ನಟಿ ಸುಕನ್ಯಾ​

- Advertisement -
- Advertisement -

ತೊಂಬತ್ತರ ದಶಕದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ನಟರೊಂದಿಗೆ ನಟಿಸಿ, ಅಪಾರ ಜನಪ್ರಿಯತೆ ಗಳಿಸಿದ್ದ ನಟಿ ಸುಕನ್ಯಾ ರಮೇಶ್, ಪ್ರಸ್ತುತ ಕೆಲವು ಅಪರೂಪದ ಪಾತ್ರಗಳನ್ನು ಹೊರತುಪಡಿಸಿದರೆ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಈ ನಡುವೆ 2024ರಲ್ಲಿ ‘ಶಕ್ತಿ ಐಪಿಎಸ್’ ಎಂಬ ಧಾರವಾಹಿ ಮೂಲಕ ಅವರು ಕಿರುತೆರೆಗೆ ಭರ್ಜರಿ ಪುನರಾಗಮನ ಮಾಡಿದ್ದಾರೆ.

ಆದರೆ, ಮದ್ರಾಸ್ ಹೈಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪೊಂದರ ಮೂಲಕ ಸುಕನ್ಯಾ ಮತ್ತೆ ಸುದ್ದಿಯಲ್ಲಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದಂತೆ, ಕುಖ್ಯಾತ ಕಾಡುಗಳ್ಳ ಹಾಗೂ ದಂತಚೋರ ವೀರಪ್ಪನ್, ಸನ್‌ಟಿವಿ ಮತ್ತು ಸುಕನ್ಯಾ ಅವರ ನಡುವಿನ 30 ವರ್ಷಗಳ ಹಳೆಯ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮದ್ರಾಸ್‌ ಹೈಕೋರ್ಟ್‌ನಿಂದ ಮಹತ್ವದ ಆದೇಶ ಹೊರಬಿದ್ದಿದೆ.

1996ರ ಸಂದರ್ಶನ, ಮಾನಹಾನಿ ಮತ್ತು 30 ವರ್ಷಗಳ ಕಾನೂನು ಸಮರ

ಸನ್‌ಟಿವಿ ಪ್ರಸಾರ ಮಾಡಿದ್ದ ವೀರಪ್ಪನ್ ಸಂದರ್ಶನದಲ್ಲಿ, ವೀರಪ್ಪನ್ ತನ್ನ ವಿರುದ್ದ ಮಾನಹಾನಿಕರ ಹೇಳಿಕೆ ನೀಡಿದ್ದರು ಎಂದು 1996ರಲ್ಲಿ ಸುಕನ್ಯಾ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಚೆನ್ನೈನ ಸಿಟಿ ಸಿವಿಲ್ ನ್ಯಾಯಾಲಯ 2015ರಲ್ಲಿ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ. ಮೊಕದ್ದಮೆ ಹೂಡಿ 30 ವರ್ಷಗಳ ಬಳಿಕ ಸುಕನ್ಯಾ ಅವರಿಗೆ 10.01 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸನ್‌ಟಿವಿಗೆ ಆದೇಶಿಸಿದೆ.

ವರದಿಗಳ ಪ್ರಕಾರ, ವೀರಪ್ಪನ್ ಸುಕನ್ಯಾ ವಿರುದ್ಧ ಮಾಡಿದ್ದ ಮಾನಹಾನಿಕರ ಹಾಗೂ ಅವಹೇಳನಕಾರಿ ಆರೋಪಗಳನ್ನು ಪರಿಶೀಲಿಸುವ ಮತ್ತು ಅವುಗಳನ್ನು ತೆಗೆದುಹಾಕುವ ಸಂಪೂರ್ಣ ಅಧಿಕಾರ ಹಾಗೂ ಅವಕಾಶ ಸನ್‌ಟಿವಿಗೆ ಇತ್ತು. ಆದರೂ ಸಹ, ಸನ್ ಟಿವಿ ಆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತೀರ್ಪು ನೀಡುವಾಗ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಏನಿದು ಸಂದರ್ಶನ ವಿವಾದ?

1996ರಲ್ಲಿ ‘ನಕ್ಕೀರನ್’ ತಮಿಳು ನಿಯತಕಾಲಿಕೆಯ ಸಂಪಾದಕರಾದ ಆರ್. ರಾಜಗೋಪಾಲ್ (ನಕ್ಕೀರನ್ ಗೋಪಾಲ್) ಅವರು ದಟ್ಟ ಕಾಡಿಗೆ ಹೋಗಿ ವೀರಪ್ಪನ್‌ನ ಅತ್ಯಂತ ಪ್ರಸಿದ್ಧ ಹಾಗೂ ವಿಶೇಷ ವಿಡಿಯೋ ಸಂದರ್ಶನವನ್ನು ಮಾಡಿದ್ದರು. 

ನಕ್ಕೀರನ್ ಪತ್ರಿಕೆ ಮತ್ತು ಸನ್ ಟಿವಿ ನೆಟ್‌ವರ್ಕ್ ನಡುವೆ ಇದ್ದ ಒಪ್ಪಂದದ ಪ್ರಕಾರ, ಆ ಸಂದರ್ಶನದ ವಿಡಿಯೋ ತುಣುಕುಗಳನ್ನು ಸನ್ ಟಿವಿಗೆ ನೀಡಲಾಗಿತ್ತು. ಅದರಂತೆ, ಸನ್ ಟಿವಿ ವಾಹಿನಿಯು 1996ರ ಏಪ್ರಿಲ್ 17ರಂದು ತನ್ನ ‘ನೆರುಕ್ಕು ನೇರ್’ ಕಾರ್ಯಕ್ರಮದಲ್ಲಿ ಸಂದರ್ಶನವನ್ನು ಪ್ರಸಾರ ಮಾಡಿತ್ತು. ಆ ಸಂದರ್ಶನದಲ್ಲಿ ವೀರಪ್ಪನ್ ನಟಿ ಸುಕನ್ಯಾ ಅವರ ವಿರುದ್ಧ ಅವಹೇಳನಕಾರಿ ಸುಳ್ಳು ಆರೋಪಗಳನ್ನು ಮಾಡಿದ್ದರು.

ಸುಕನ್ಯಾ ಅವರ ಸಿನಿಮಾ ವೃತ್ತಿಜೀವನ ಉತ್ತುಂಗದಲ್ಲಿದ್ದಾಗ ಸಂದರ್ಶನ ಪ್ರಸಾರವಾಗಿತ್ತು. ಸಂದರ್ಶನದ ಸಂಭಾಷಣೆಯಲ್ಲಿ ವೀರಪ್ಪನ್, ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಮಗನಿಗೆ ಸಂಬಂಧಿಸಿದ ರಾಜಕೀಯ ಹಗರಣವೊಂದರ ಜೊತೆ ಸುಕನ್ಯಾ ಅವರ ಹೆಸರನ್ನು ಜೋಡಿಸಿದ್ದರು.

ಈ ಆರೋಪಗಳು ಸಂಪೂರ್ಣ ಸುಳ್ಳು ಎಂದು ಪ್ರತಿಪಾದಿಸಿದ್ದ ಸುಕನ್ಯಾ, ವೀರಪ್ಪನ್ ಹೇಳಿಕೆ ತನ್ನ ಘನತೆಗೆ ತೀವ್ರ ಧಕ್ಕೆ ತಂದಿದೆ. ಸ್ನೇಹಿತರು, ಕುಟುಂಬ ಹಾಗೂ ಸಾರ್ವಜನಿಕ ವಲಯದಲ್ಲಿ ತನ್ನ ಗೌರವವನ್ನು ಕುಂದಿಸಿವೆ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದರು.

1996ರಲ್ಲಿ ಸುಕನ್ಯಾ ಅವರು, ಸನ್‌ಟಿವಿ, ನಕ್ಕೀರನ್ ಗೋಪಾಲ್ ಮತ್ತು ವೀರಪ್ಪನ್ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ವಿಚಾರಣೆಯ ವೇಳೆ ಪತ್ರಕರ್ತ ಗೋಪಾಲ್ ಅವರು, ತಾವು 9 ಗಂಟೆಗಳ ಸಂಪೂರ್ಣ ಧ್ವನಿಮುದ್ರಣವನ್ನು ಸನ್‌ಟಿವಿಗೆ ನೀಡಿದ್ದು, ಅದರಲ್ಲಿನ ಆಕ್ಷೇಪಾರ್ಹ ಭಾಗಗಳನ್ನು ಕತ್ತರಿಸುವ (ಎಡಿಟ್ ಮಾಡುವ) ಸಂಪೂರ್ಣ ಹಕ್ಕು ವಾಹಿನಿಗೆ ಇತ್ತು ಎಂದು ಕೋರ್ಟ್‌ಗೆ ತಿಳಿಸಿದ್ದರು. ಇದನ್ನು ಪುರಸ್ಕರಿಸಿದ ಚೆನ್ನೈನ ಸಿಟಿ ಸಿವಿಲ್ ನ್ಯಾಯಾಲಯ ಅಂತಿಮವಾಗಿ ಸನ್ ಟಿವಿ ನೆಟ್‌ವರ್ಕ್ ಸಂಸ್ಥೆಯೇ ಈ ಮಾನಹಾನಿಗೆ ಸಂಪೂರ್ಣ ಹೊಣೆ ಎಂದು ತೀರ್ಪಿತ್ತು, 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿತ್ತು.

ಇದರ ವಿರುದ್ದ ಸನ್‌ಟಿವಿ ನೆಟ್‌ವರ್ಕ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

ಸುಕನ್ಯಾ ಸಿನಿಮಾ ಪಯಣ

ನಟಿ ಸುಕನ್ಯಾ ಅವರು ಖ್ಯಾತ ತಮಿಳು ನಿರ್ದೇಶಕ ಭಾರತಿರಾಜ ಅವರ ‘ಪುದು ನೆಲ್ಲು ಪುದು ನಾತು’ (1991) ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅದೇ ವರ್ಷ, ಅವರು ಮಲಯಾಳಂ ನಿರ್ಮಾಪಕ-ನಿರ್ದೇಶಕ ಆಲಪ್ಪುಝ ಅಶ್ರಫ್ ನಿರ್ದೇಶನದ ‘ಎಮ್‌ಜಿಆರ್ ನಗರಿಯಲ್ಲಿ’ ಮುಖ್ಯ ಪಾತ್ರದಲ್ಲಿ ನಟಿಸಿದರು; ಇದು ಸಿದ್ದಿಕ್-ಲಾಲ್ ಜೋಡಿಯ ಬ್ಲಾಕ್‌ಬಸ್ಟರ್ ಕಾಮಿಡಿ ಥ್ರಿಲ್ಲರ್ ಮಲಯಾಳಂ ಚಿತ್ರ ‘ಇನ್ ಹರಿಹರ್ ನಗರ’ (1990) ಚಿತ್ರದ ತಮಿಳು ರಿಮೇಕ್ ಆಗಿತ್ತು.

1992ರಲ್ಲಿ ಸುಕನ್ಯಾ ಅವರ ವೃತ್ತಿಜೀವನವು ಭಾರಿ ಯಶಸ್ಸನ್ನು ಕಂಡಿತು. ವಿಜಯಕಾಂತ್ ನಾಯಕತ್ವದ ‘ಚಿನ್ನ ಗೌಂಡರ್’ ಚಿತ್ರದ ಅತ್ಯುತ್ತಮ ನಟನೆಗಾಗಿ ಅವರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು (ಅತ್ಯುತ್ತಮ ನಟಿ) ಮುಡಿಗೇರಿಸಿಕೊಂಡರು. ಅಷ್ಟೇ ಅಲ್ಲದೆ, ಅದೇ ವರ್ಷ ರೆಹಮಾನ್ ನಟನೆಯ ‘ಅಪಾರಥಾ’, ಜಗಪತಿ ಬಾಬು ಅವರ ‘ಪೆದ್ದರಿಕಂ’ ಮತ್ತು ವಿ. ರವಿಚಂದ್ರನ್ ಅವರ ‘ಗುರು ಬ್ರಹ್ಮ’ ಚಿತ್ರಗಳ ಮೂಲಕ ಕ್ರಮವಾಗಿ ಮಲಯಾಳಂ, ತೆಲುಗು ಹಾಗೂ ಕನ್ನಡ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದರು.

ಆ ನಂತರ ಸುಕನ್ಯಾ ಅವರ ವೃತ್ತಿಜೀವನವು ಉತ್ತುಂಗಕ್ಕೇರಿತು. ಅವರು ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳೊಂದಿಗೆ ಹಲವು ಪ್ರಮುಖ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದರು.

ಕಮಲ್ ಹಾಸನ್ ಜೊತೆಗೆ ‘ಮಹಾನದಿ’ ಮತ್ತು ‘ಇಂಡಿಯನ್’, ಮೋಹನ್ ಲಾಲ್ ಜೊತೆಗೆ ‘ಚಂದ್ರಲೇಖಾ’ ಮತ್ತು ‘ರಕ್ತಸಾಕ್ಷಿಕಳ್ ಝಿಂದಾಬಾದ್’, ಮಮ್ಮುಟ್ಟಿ ಜೊತೆಗೆ ‘ಸಾಗರಂ ಸಾಕ್ಷಿ’, ವಿಜಯಕಾಂತ್ ಜೊತೆಗೆ ‘ಸಕ್ಕರೈ ದೇವನ್’ ಹಾಗೂ ಜಯರಾಮ್ ಜೊತೆಗೆ ‘ತೂವಲ್ ಕೊಟ್ಟಾರಂ’ ಚಿತ್ರಗಳಲ್ಲಿ ನಟಿಸಿದರು. ಇದರೊಂದಿಗೆ ಪ್ರಭು ಜೊತೆ ‘ಸೇಂತಮಿಳ್ ಪಾಟ್ಟು’, ‘ಮಿಸ್ಟರ್ ಮದ್ರಾಸ್’, ‘ಚಿನ್ನ ಮಾಪಿಳ್ಳೈ’, ಆರ್. ಶರತ್‌ಕುಮಾರ್ ಜೊತೆ ‘ಇಳವರಸನ್’, ‘ಮಹಾಪ್ರಭು’, ‘ರಾಜ ಪಾಂಡಿ’, ಸತ್ಯರಾಜ್ ಜೊತೆ ‘ವಾಲ್ಟರ್ ವೆಟ್ರಿವೇಲ್’, ‘ವಂಡಿಚೋಲೈ ಚಿನ್ ರಾಸು’, ‘ಸೇನಾತಿಪತಿ’, ‘ಉಡನ್ ಪಿರಪ್ಪು’ ಹಾಗೂ ರೆಹಮಾನ್ ಜೊತೆ ‘ಕರುಪ್ಪು ವೆಳ್ಳೈ’ ಮತ್ತು ‘ಕೊಟ್ಟೈ ವಾಸಲ್’ ನಂತಹ ಗಮನಾರ್ಹ ಸಿನಿಮಾಗಳಲ್ಲಿ ಅಭಿನಯಿಸಿದರು.

ಇದೇ ಅವಧಿಯಲ್ಲಿ, ಅವರು ತಮಿಳುನಾಡು ರಾಜ್ಯದ ಅತ್ಯುನ್ನತ ನಾಗರಿಕ ಗೌರವವಾದ ‘ಕಲೈಮಾಮಣಿ’ ಪ್ರಶಸ್ತಿಗೂ ಭಾಜನರಾದರು.

ವೃತ್ತಿ ಜೀವನಕ್ಕೆ ಕಲ್ಲು ಹಾಕಿದ ವೀರಪ್ಪನ್ ಆರೋಪ

ಸುಕನ್ಯಾ ಯಶಸ್ಸಿನ ಉತ್ತುಂಗದಲ್ಲಿದ್ದಾಗ ವೀರಪ್ಪನ್ ಮಾಡಿದ ಆರೋಪ, ಅವರ ಸಿನಿಮಾ ವೃತ್ತಿ ಜೀವನಕ್ಕೆ ಕಲ್ಲು ಹಾಕಿತು. ಸನ್‌ಟಿವಿ ಪ್ರಸಾರ ಮಾಡಿ ವೀರಪ್ಪನ್ ಸಂದರ್ಶನದ ಬಳಿಕ ಸುಕನ್ಯಾ ಯಾವುದೇ ‘ಎ’ ಲಿಸ್ಟ್ ನಟರೊಂದಿಗೆ ನಟಿಸಿಲ್ಲ ಎಂದು ವರದಿಗಳು ಹೇಳುತ್ತವೆ.

ನಂತರ, ಸುಕನ್ಯಾ ಅವರು ಕ್ರಮೇಣ ಚಲನಚಿತ್ರಗಳಿಗೆ ಮರಳಿದರು. ಅವರು ಹೆಚ್ಚಾಗಿ ಸಣ್ಣ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡರು. 2000ರ ದಶಕದ ಆರಂಭದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ, ಯಾವುದೂ ಅವರ ಖ್ಯಾತಿಯನ್ನು ಮರಳಿ ತರಲಿಲ್ಲ.

ಸುಕನ್ಯಾ ವೈಯಕ್ತಿಕ ಬದುಕಿನಲ್ಲೂ ಸಂಕಷ್ಟ

ಈ ಮಧ್ಯೆ, ಸುಕನ್ಯಾ ಏಪ್ರಿಲ್ 2002ರಲ್ಲಿ ನ್ಯೂಜೆರ್ಸಿ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಆರ್ ಶ್ರೀಧರ್ ಅವರನ್ನು ವಿವಾಹವಾದರು. ನಂತರ ಅವರು ಸಣ್ಣ ಅವಧಿಗೆ ಯುಎಸ್‌ಗೆ ತೆರಳಿದರು. ಎನ್‌ಡಿಟಿವಿ ವರದಿ ಮಾಡಿದಂತೆ ಅವರು ಜನವರಿ 2003ರಲ್ಲಿ ಭಾರತಕ್ಕೆ ಮರಳಿದರು. ನಂತರ ಶ್ರೀಧರ್‌ನಿಂದ ಕೌಟುಂಬಿಕ ದೌರ್ಜನ್ಯವನ್ನು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ನಂತರ ಅವರು ಮರುಮದುವೆಯಾಗಿಲ್ಲ.

ಸುಕನ್ಯಾ ಮತ್ತು ಆಕೆಯ ಸಹೋದರಿ ಗೀತಾ ಶ್ರೀಧರ್ ಇಬ್ಬರೂ ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದಾರೆ. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ವಿದ್ಯಾರ್ಥಿವೇತನವನ್ನು ಪಡೆದ ಸುಕನ್ಯಾ ಅವರು, ಚೆನ್ನೈನ ಕಲಾಕ್ಷೇತ್ರ ಫೌಂಡೇಶನ್‌ನಲ್ಲಿ ಪ್ರಖ್ಯಾತ ಬೋಧಕರ ಅಡಿಯಲ್ಲಿ ನೃತ್ಯ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಗೀತಾ ಕೂಡ ಯುಕೆ ಮೂಲದ ನಾಟ್ಯಶ್ರೀ ಎಂಬ ನೃತ್ಯ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

Courtesy : indianexpress.com







 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...