Homeಮುಖಪುಟಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

- Advertisement -
- Advertisement -

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ ಸಂಸದರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರಿಗೆ ಜಂಟಿ ಪತ್ರ ಬರೆದಿದ್ದಾರೆ. ಪ್ರಸ್ತುತ ಮೋದಿ ಸರ್ಕಾರದ ಆಡಳಿತದಲ್ಲಿ ಭಾರತದ ಪ್ರಜಾಪ್ರಭುತ್ವವು “ಅಪಾಯದಲ್ಲಿದೆ” ಎಂದು ಆತಂಕ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು, ಚುನಾವಣಾ ಆಯೋಗದ ನಿಷ್ಪಕ್ಷಪಾತ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸಲು ಸುಪ್ರೀಂ ಕೋರ್ಟ್ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿವೆ. ಜೂನ್ 28 ರಂದು ಬರೆಯಲಾಗಿದ್ದ ಈ ಸುದೀರ್ಘ ಪತ್ರವನ್ನು ಶುಕ್ರವಾರ ಸಾರ್ವಜನಿಕಗೊಳಿಸಲಾಗಿದೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖರು ಸಹಿ ಮಾಡಿರುವ ಈ ಪತ್ರದಲ್ಲಿ, “ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಇಂದು ತೀವ್ರ ನಿರಾಸೆ ಮತ್ತು ಅಪಾಯದ ಸುಳಿಗೆ ಸಿಲುಕಿದೆ. ಈ ಗಂಭೀರ ಪರಿಸ್ಥಿತಿಯ ಹಿನ್ನೆಲೆಯಲ್ಲಿಯೇ ನಾವು ಮುಖ್ಯ ನ್ಯಾಯಮೂರ್ತಿಗಳಿಗೆ ನೇರವಾಗಿ ಪತ್ರ ಬರೆಯುವ ಇಂತಹ ಅಸಾಮಾನ್ಯ ಮಾರ್ಗವನ್ನು ಆರಿಸಿಕೊಳ್ಳಬೇಕಾಯಿತು,” ಎಂದು ನಾಯಕರು ವಿಷಾದಿಸಿದ್ದಾರೆ. ಒಟ್ಟಾರೆ ಚುನಾವಣಾ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ಕುಶಲತೆಯಿಂದ ನಿಯಂತ್ರಿಸಲಾಗುತ್ತಿದ್ದು, ಹಲವಾರು ಸಂದರ್ಭಗಳಲ್ಲಿ ಹೊರಬೀಳುವ ಫಲಿತಾಂಶಗಳು ಜನರ ನೈಜ ಇಚ್ಛೆಯನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ವಿಪಕ್ಷಗಳು ಗಂಭೀರವಾಗಿ ಆರೋಪಿಸಿವೆ.

ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಆಡಳಿತ ಪಕ್ಷದ ನಾಯಕರು ಮಾಡುತ್ತಿರುವ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಚುನಾವಣಾ ಆಯೋಗವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪತ್ರದಲ್ಲಿ ದೂರಲಾಗಿದೆ. ಈ ಮೂಲಕ ಆಯೋಗವು ತನ್ನ ಸಾಂವಿಧಾನಿಕ ನಡವಳಿಕೆಗೆ ತದ್ವಿರುದ್ಧವಾಗಿ “ತಪ್ಪಾದ ಪಕ್ಷಪಾತದ ಧೋರಣೆ”ಯನ್ನು ಪ್ರದರ್ಶಿಸುತ್ತಿದೆ ಮತ್ತು “ಆಡಳಿತಾರೂಢ ಬಿಜೆಪಿಗೆ ಬಹಿರಂಗ ಹಾಗೂ ನಾಚಿಕೆಯಿಲ್ಲದ ಬೆಂಬಲ” ನೀಡುತ್ತಿದೆ ಎಂದು ನಾಯಕರು ಪತ್ರದಲ್ಲಿ ನೇರವಾಗಿ ಬರೆದಿದ್ದಾರೆ.

ಆಯೋಗದ ಸ್ವಾಯತ್ತತೆಯನ್ನು ಪ್ರಶ್ನಿಸಿರುವ ಸಹಿದಾರರು, 2014 ರಿಂದೀಚೆಗೆ ಚುನಾವಣಾ ಆಯೋಗಕ್ಕೆ ನಡೆದಿರುವ ಪ್ರತಿಯೊಂದು ನೇಮಕಾತಿಯೂ ಸರ್ಕಾರದೊಂದಿಗೆ “ನಿಕಟ ಸಂಬಂಧ ಹೊಂದಿರುವ” ವ್ಯಕ್ತಿಗಳದ್ದೇ ಆಗಿದೆ ಎಂದು ಬೆಟ್ಟು ಮಾಡಿದ್ದಾರೆ. ಈ ಹಿಂದೆ ‘ಅನುಪ್ ಬರನ್ವಾಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪನ್ನು ಇಲ್ಲಿ ಸ್ಮರಿಸಲಾಗಿದೆ. ಆದರೆ, ಸಂಸತ್ತು ತರುವಾಯ ಕಾನೂನೊಂದನ್ನು ತರುವ ಮೂಲಕ, ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿದ್ದ ‘ಭಾರತದ ಮುಖ್ಯ ನ್ಯಾಯಮೂರ್ತಿಗಳ’ ಸ್ಥಾನವನ್ನು ಕೇಂದ್ರ ಸಚಿವರೊಬ್ಬರಿಂದ ಬದಲಾಯಿಸಿತು. ನೇಮಕಾತಿ ಪ್ರಕ್ರಿಯೆಯನ್ನೇ ಬುಡಮೇಲು ಮಾಡಿರುವ ಈ ನೂತನ ಕಾನೂನನ್ನು ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಸವಾಲು ಮಾಡಲಾಗಿದೆ ಎಂದು ವಿಪಕ್ಷಗಳು ನೆನಪಿಸಿವೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳೇ ಪ್ರಜಾಪ್ರಭುತ್ವದ ಅಡಿಪಾಯ ಎಂದಿರುವ ವಿರೋಧ ಪಕ್ಷಗಳು, “ಚುನಾವಣಾ ಪ್ರಕ್ರಿಯೆಯ ಸಮಗ್ರತೆ, ಹೊಣೆಗಾರಿಕೆ ಮತ್ತು ವ್ಯವಸ್ಥೆಯ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಪುನಃಸ್ಥಾಪಿಸಲು ಅಗತ್ಯವಿರುವ ದೃಢ ಹಾಗೂ ಕಠಿಣ ಕ್ರಮಗಳನ್ನು ನ್ಯಾಯಾಲಯವು ತುರ್ತಾಗಿ ತೆಗೆದುಕೊಳ್ಳಬೇಕು,” ಎಂದು ವಿನಂತಿಸಿವೆ. ದೇಶದ ಇತರ ಪ್ರಜಾಸತ್ತಾತ್ಮಕ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ವಿಫಲವಾಗಿರುವ ಕಾರಣಕ್ಕೇ ತಾವು ನ್ಯಾಯಾಂಗದ ಮೊರೆ ಹೋಗುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಸ್ವತಂತ್ರವಾಗಿರಬೇಕಾದ ಸಾಂಸ್ಥಿಕ ವ್ಯವಸ್ಥೆಗಳೇ ಇಂದು “ದಬ್ಬಾಳಿಕೆಯ ಸಾಧನಗಳಾಗಿ ಮಾರ್ಪಟ್ಟಿವೆ” ಮತ್ತು ಕೇವಲ “ಸರ್ಕಾರದ ಅಜೆಂಡಾಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿವೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮಾಧ್ಯಮಗಳ ಪ್ರಸ್ತುತ ಸ್ಥಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿರುವ ನಾಯಕರು, “ದೇಶದ ಸಾಂಪ್ರದಾಯಿಕ ಮುಖ್ಯವಾಹಿನಿ ಮಾಧ್ಯಮಗಳು (Mainstream Media) ಬಹುತೇಕ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಿವೆ. ಆದರೆ ಕೆಲವು ಸ್ವತಂತ್ರ ಮಾಧ್ಯಮ ವೇದಿಕೆಗಳು ಮಾತ್ರ ಇಂದಿಗೂ ಅಧಿಕಾರದಲ್ಲಿರುವವರ ಮುಂದೆ ಸತ್ಯವನ್ನು ಧೈರ್ಯವಾಗಿ ಬಿಚ್ಚಿಡುವ ಕೆಲಸ ಮಾಡುತ್ತಿವೆ,” ಎಂದು ಶ್ಲಾಘಿಸಿದ್ದಾರೆ.

ದೇಶದ ಜನತೆ ಇಂದಿಗೂ ಅತ್ಯಂತ ಭರವಸೆಯಿಂದ ನೋಡುವ ಏಕೈಕ ಮತ್ತು ಅಂತಿಮ ಆಶಾದೀಪ ನ್ಯಾಯಾಂಗ ಮಾತ್ರ ಎಂದು ನಾಯಕರು ಒತ್ತಿ ಹೇಳಿದ್ದಾರೆ. “ವ್ಯವಸ್ಥೆಯ ಉಳಿದೆಲ್ಲಾ ಅಂಗಗಳು ವಿಫಲವಾದಾಗಲೂ ಜನರು ನ್ಯಾಯಾಂಗದ ಮೇಲೆ ಅಪಾರ ನಂಬಿಕೆ ಇಡುತ್ತಾರೆ. ಒಂದು ವೇಳೆ ಇಂತಹ ಸಂದರ್ಭದಲ್ಲಿ ನ್ಯಾಯಾಂಗವೇ ದೇಶದ ಸ್ಥಿತಿಗೆ ಸ್ಪಂದಿಸಲು ವಿಫಲವಾದರೆ, ಅದು ಇಡೀ ಗಣರಾಜ್ಯದ ಸಂಪೂರ್ಣ ಕುಸಿತವನ್ನು ಸೂಚಿಸುತ್ತದೆ,” ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

“ನಾವು ಯಾವುದೇ ಕಾರಣಕ್ಕೂ ನ್ಯಾಯಾಂಗದ ನಡವಳಿಕೆಯನ್ನು ಪ್ರಶ್ನಿಸುತ್ತಿಲ್ಲ. ಬದಲಿಗೆ, ಪ್ರತಿಯೊಂದು ಸಾಂವಿಧಾನಿಕ ಕಾರ್ಯವಿಧಾನಗಳು ವಿಫಲವಾದಾಗ ನಾವು ನ್ಯಾಯಾಲಯಗಳ ಕಡೆಗೆ ಧಾವಿಸುತ್ತೇವೆ,” ಎಂದು ಸ್ಪಷ್ಟಪಡಿಸಿರುವ ವಿಪಕ್ಷಗಳು, ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸಾರ್ವಜನಿಕರ ನಂಬಿಕೆ ಸದಾ ಜೀವಂತವಾಗಿರುವಂತೆ ನೋಡಿಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿವೆ. ವ್ಯವಸ್ಥೆಯಲ್ಲಿ “ಪಾರದರ್ಶಕತೆಯ ಹಿತದೃಷ್ಟಿಯಿಂದ” ಮತ್ತು ಭಾರತದ ಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವದ ಚೌಕಟ್ಟನ್ನು ರಕ್ಷಿಸುವಲ್ಲಿ ನ್ಯಾಯಾಲಯವು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ದೃಢ ವಿಶ್ವಾಸದೊಂದಿಗೆ ಈ ಪತ್ರವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತಿರುವುದಾಗಿ ಕಾಂಗ್ರೆಸ್ ತಿಳಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...