ಬಿಡದಿ ಟೌನ್ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ ಮುಂದೆಯೇ ಬಹಿರಂಗವಾಗಿ ಸಾಬೀತುಪಡಿಸಲಿ ಎಂದು ಸಂಯುಕ್ತ ಹೋರಾಟ – ಕರ್ನಾಟಕ ವೇದಿಕೆ ನೇರ ಪಂಥಾಹ್ವಾನ ನೀಡಿದೆ.
ಯೋಜನೆಗೆ ಎಷ್ಟು ಪ್ರಮಾಣದ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಸ್ವತಃ ಗ್ರಹಿಸಲು ಸರ್ಕಾರ ಹಾಗೂ ಸಂಬಂಧಪಟ್ಟ ಜಿ-ಬಿಡಿ (G-BDA) ಅಧಿಕಾರಿಗಳು ಬಹಿರಂಗ ಜನಸಾಕ್ಷಿ ವಿಚಾರಣೆಯಲ್ಲಿ (Public Hearing) ಖುದ್ದು ಭಾಗವಹಿಸಬೇಕು ಎಂದು ಸಂಘಟನೆಯು ಆಗ್ರಹಿಸಿದೆ.
ರೈತರ ನೈಜ ಅಭಿಪ್ರಾಯ ಹಾಗೂ ಅಳಲುಗಳನ್ನು ದಾಖಲಿಸಲು ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆಯು ಜುಲೈ 23ರಂದು ಬೆಳಿಗ್ಗೆ 10.30ಕ್ಕೆ ಬಿಡದಿ ಹೋಬಳಿಯ ಬೈರಮಂಗಲದಲ್ಲಿ ಬಹಿರಂಗ ಪಬ್ಲಿಕ್ ಹಿಯರಿಂಗ್ ಆಯೋಜಿಸಿದೆ. ನಿವೃತ್ತ ನ್ಯಾಯಮೂರ್ತಿ ಎ. ಗೋಪಾಲಗೌಡ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಪ್ರಕ್ರಿಯೆಯಲ್ಲಿ ನೂರಾರು ರೈತರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಈ ವಿಚಾರಣೆಗೆ ಸರ್ಕಾರ, ಅಧಿಕಾರಿಗಳು ಹಾಗೂ ಯೋಜನೆಗೆ ಬೆಂಬಲ ನೀಡುವವರು ಮುಕ್ತವಾಗಿ ಭಾಗವಹಿಸಿ ತಮ್ಮಲ್ಲೇನಾದರೂ ದಾಖಲೆಗಳಿದ್ದರೆ ಮಂಡಿಸಬಹುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹಾಗೂ ಸಂಯುಕ್ತ ಹೋರಾಟ ಕರ್ನಾಟಕದ ಸಂಚಾಲಕರಾದ ಬಡಗಲಪುರ ನಾಗೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್, ಸರ್ಕಾರ ಮಾಡುತ್ತಿರುವ ಪ್ರತಿಯೊಂದು ಹೇಳಿಕೆಯನ್ನು ಜನರ ಮುಂದೆಯೇ ಪರಿಶೀಲಿಸುವ ಸಮಯ ಬಂದಿದೆ. ಸತ್ಯವನ್ನು ಮುಚ್ಚಿಡುವ ಅಗತ್ಯ ನಮಗಿಲ್ಲ. ವಾಸ್ತವದಲ್ಲಿ 80%ಕ್ಕೂ ಹೆಚ್ಚು ರೈತರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡೆಯನ್ನು ಪ್ರಶ್ನಿಸಿದ ಅವರು, ನೀವು ಮತ್ತೆ ಮತ್ತೆ ಹೆಚ್.ಡಿ. ಕುಮಾರಸ್ವಾಮಿ ಅವರನ್ನೇ ಚರ್ಚೆಗೆ ಕರೆಯುವ ಬದಲು, ನೇರವಾಗಿ ಸಂಕಷ್ಟದಲ್ಲಿರುವ ರೈತರ ಜೊತೆ ಮುಖಾಮುಖಿಯಾಗಿ ಮಾತನಾಡಿ. ರೈತರ ಒಪ್ಪಿಗೆಯಿಲ್ಲದೆ ಭೂಮಿ ಪಡೆಯುವುದಿಲ್ಲ ಎಂದು ಒಂದು ಕಡೆ ಹೇಳುತ್ತಾ, ಇನ್ನೊಂದೆಡೆ ಜಿ-ಬಿಡಿ ಅಧಿಕಾರಿಗಳಿಂದ ಅಂತಿಮ ನೋಟಿಸ್ ಕಳುಹಿಸುತ್ತಿರುವುದು ರೈತರಿಗೆ ಮಾಡುತ್ತಿರುವ ವಂಚನೆ. ಯೋಜನೆ ಪರವಾಗಿ ಮಾತನಾಡುತ್ತಿರುವವರಲ್ಲಿ ಹೆಚ್ಚಿನವರು ನಿಜವಾದ ಕೃಷಿಕರಲ್ಲ, ಬದಲಿಗೆ ಲಾಭದ ಕಣ್ಣಿಟ್ಟಿರುವ ರಿಯಲ್ ಎಸ್ಟೇಟ್ ಹೂಡಿಕೆದಾರರು. ಇದು ರಾಜಕೀಯ ಪಕ್ಷಗಳ ನಡುವಿನ ಯುದ್ಧವಲ್ಲ ಸರ್ಕಾರ ಮತ್ತು ರೈತರ ನಡುವಿನ ಜೀವನ್ಮರಣ ಹೋರಾಟ ಎಂದು ಸ್ಪಷ್ಟಪಡಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಗುರುಪ್ರಸಾದ್ ಕೆರಗೋಡು ಮಾತನಾಡಿ, “ಬಿಡದಿ ಟೌನ್ಶಿಪ್ಗೆ ಗುರುತಿಸಲಾಗಿರುವ ಪ್ರದೇಶವನ್ನು ಬರಡುಭೂಮಿ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ. ಅದು ಅತ್ಯಂತ ಫಲವತ್ತಾದ ಭೂಮಿಯಾಗಿದ್ದು, ದಲಿತರು ಸೇರಿದಂತೆ ನೂರಾರು ಕುಟುಂಬಗಳು ಕೃಷಿಯನ್ನೇ ನಂಬಿ ಬದುಕುತ್ತಿವೆ. ಆ ನೆಲವನ್ನು ಉಳಿಸಿಕೊಳ್ಳುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಾರ್ಪೊರೇಟ್ ಮತ್ತು ಬಂಡವಾಳಶಾಹಿ ಮಾದರಿಯ ವಿರುದ್ಧ ದೇಶದಾದ್ಯಂತ ಜನರ ಪ್ರತಿರೋಧ ಶುರುವಾಗಿದೆ. ಕೊಪ್ಪಳದಲ್ಲಿ ಬಲ್ಡೋಟಾ ಕಂಪನಿ ವಿರುದ್ಧ ನಡೆದ ಚಳುವಳಿಯಂತೆ ಬಿಡದಿಯಲ್ಲೂ ಜನರು ತಮ್ಮ ಹಕ್ಕುಗಳ ರಕ್ಷಣೆಗೆ ನಿಂತಿದ್ದಾರೆ. ಕೇವಲ ಹಣವಿದೆ ಎಂಬ ಕಾರಣಕ್ಕೆ ಕಾರ್ಪೊರೇಟ್ ಕಂಪನಿಗಳಿಗೆ ರೈತರ ಭೂಮಿಯನ್ನು ಕಬಳಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಸ್ಥಳೀಯ ರೈತ ಪ್ರಕಾಶ್ ಮಾತನಾಡಿ, ಮುಖ್ಯಮಂತ್ರಿಗಳ ಭರವಸೆಗೂ ಜಿ-ಬಿಡಿ ಅಧಿಕಾರಿಗಳ ನಡೆಗೂ ಸಂಪೂರ್ಣ ವಿರೋಧಾಭಾಸವಿದೆ. ಅಧಿಕಾರಿಗಳು ಭೂಮಿಯ ವಿಸ್ತೀರ್ಣವನ್ನು ಕಡಿಮೆ ತೋರಿಸಿ ಪರಿಹಾರದಲ್ಲಿ ವಂಚಿಸಲು ಯತ್ನಿಸುತ್ತಿದ್ದಾರೆ. ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು, ಸುಳ್ಳು ಕೇಸ್ ಹಾಕುವ ಬೆದರಿಕೆ ಒಡ್ಡಿ ರೈತರನ್ನು ಮಣಿಸಲು ನೋಡುತ್ತಿದ್ದಾರೆ. ತಜ್ಞರ ಸಲಹಾ ಸಮಿತಿ ವರದಿ ಬರುವವರೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯು ಆಯೋಜಿಸಿರುವ ಈ ಪಬ್ಲಿಕ್ ಹಿಯರಿಂಗ್ನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಹಾಗೂ ಯೋಜನೆ ಪರ-ವಿರೋಧ ಇರುವ ಎಲ್ಲರೂ ಭಾಗವಹಿಸಿ ತಮ್ಮ ದಾಖಲೆಗಳನ್ನು ಜನರ ಮುಂದಿಡಲು ಮುಕ್ತ ಅವಕಾಶ ನೀಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ಬಡಗಲಪುರ ನಾಗೇಂದ್ರ, ಟಿ. ಯಶವಂತ್, ಕೆ. ವಿ. ಭಟ್, ನೂರ್ ಶ್ರೀಧರ್, ಗುರುಪ್ರಸಾದ್ ಕೆರಗೋಡು ಮತ್ತಿತರರು ಉಪಸ್ಥಿತರಿದ್ದರು.


