ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಭಾಗವಾಗಿ ಅನ್ಮ್ಯಾಪ್ಡ್ ಮತ್ತು ಅನಾಮಲಿಸ್ ಮತದಾರರಿಗೆ ನೋಟಿಸ್ ನೀಡಿ, ದಾಖಲೆಗಳ ಪರಿಶೀಲನೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಈಗಾಗಲೇ 23,45,428 ಅನ್ ಮ್ಯಾಪ್ಡ್ (ಪ್ರೊಜೆನಿ ಮ್ಯಾಪಿಂಗ್ ಮಾಡದವರು) ಮತ್ತು 20,35,312 ಅನಾಮಲಿಸ್ ಇರುವ (ಲಾಜಿಕಲ್ ಡಿಸ್ಕ್ರಿಪೆನ್ಸಿ ಅಥವಾ ತಾರ್ಕಿಕ ವೈರುದ್ಯ) ಮತದಾರರು ಸೇರಿ ಕರಡು ಪಟ್ಟಿಯಲ್ಲಿರುವ ಒಟ್ಟು 43,80, 740 ಮತದಾರರ ನೋಟಿಸ್ ನೀಡಲಾಗಿದೆ ಎಂದು ಚುನಾವಣಾ ಆಯೋಗ ಹೇಳಿಕೊಂಡಿದೆ.
ಮತದಾರರಿಗೆ ನೀಡಲಾದ ನೋಟಿಸ್ಗಳಲ್ಲಿ, ಕಾರಣ, ವಿಚಾರಣೆಗೆ ಹಾಜರಾಗಬೇಕಾದ ಸ್ಥಳ, ಸಮಯ ಮತ್ತು ಜಾಗವನ್ನು ತಿಳಿಸಲಾಗಿದೆ.
ಈ ನೋಟಿಸ್ ನೀಡುವ ಮತ್ತು ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆ ಎಸ್ಐಆರ್ನ ಪ್ರಮುಖ ಘಟ್ಟವಾಗಿದೆ. ಇಲ್ಲಿಯೇ ಲಕ್ಷಾಂತರ ಅರ್ಹ ಮತದಾರರು ಸಣ್ಣಪುಟ್ಟ ವ್ಯತ್ಯಾಸಗಳಿಗೆ ದಾಖಲೆಗಳನ್ನು ಒದಗಿಸಲಾಗದೆ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಾರೆ.
ನಾವು ಈ ಹಿಂದೆ ವರದಿ ಮಾಡಿದಂತೆ ಇಡೀ ಎಸ್ಐಆರ್ ಪ್ರಕ್ರಿಯೇ ದೊಡ್ಡ ಸಂಕಷ್ಟ ತಂದಿಟ್ಟಿರುವುದು ಬಡವರು, ದಲಿತರು, ಅಲ್ಪಸಂಖ್ಯಾತರು, ಅಲೆಮಾರಿಗಳು ಮತ್ತು ಕೂಲಿ ಕಾರ್ಮಿಕರಿಗಾಗಿದೆ. ಪ್ರತಿನಿತ್ಯದ ಜೀವನ ಸಾಗಿಸಲೂ ಹೆಣಗಾಡುವ ಈ ಸಮುದಾಯಗಳ ಜನರು ದಾಖಲೆಗಳನ್ನು ಒದಗಿಸುವುದು ಅಸಾಧ್ಯದ ಮಾತಾಗಿದೆ.
ಶಿಕ್ಷಣ, ಆರ್ಥಿಕತೆ, ಜೀವನ ಮಟ್ಟ ಎಲ್ಲವೂ ಚಿಂತಾಜನಕವಾಗಿರುವ ಈ ಸಮುದಾಯಗಳ ಜನರು ಕಚೇರಿಗಳ ಮುಂದೆ, ಅಧಿಕಾರಿಗಳ ಎದುರು ಅಪರಾಧಿಗಳಂತೆ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿಯನ್ನು ಆಡಳಿತದ ಹಲವು ಆದೇಶಗಳು ಈಗಾಗಲೇ ಮಾಡಿವೆ, ಅದಕ್ಕೆ ಎಸ್ಐಆರ್ ಹೊಸ ಸೇರ್ಪಡೆಯಾಗಿದೆ.
ಹಾಗಂತ, ಈ ಸಮುದಾಯಗಳ ಜನರ ಬಳಿ ಯಾವುದೇ ದಾಖಲೆಗಳು ಇಲ್ಲಾ ಎಂದಲ್ಲ. ಈ ದೇಶದ ಪ್ರಾಥಮಿಕ ಅಗತ್ಯ ದಾಖಲೆಗಳಾದ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಹಲವು ಇವರ ಬಳಿಯಿದೆ. ಆದರೆ, ಇವು ಯಾವುವೂ ಚುನಾವಣಾ ಆಯೋಗಕ್ಕೆ ಊರ್ಜಿತವಲ್ಲ. ಹಾಗಾಗಿ, ಇಲ್ಲದ ದಾಖಲೆಗಳನ್ನು ಹೊಂದಿಸಲು ಈ ಜನರು ಅಲೆದಾಡುವಂತಾಗಿದೆ.
ಅಲೆಮಾರಿಗಳ ಅಲೆದಾಟ
ಈ ಸಮಾಜದಲ್ಲಿ ಅತಿ ಸಂಕಷ್ಟದ ಜೀವನ ನಡೆಸುವ ಒಂದು ಸಮುದಾಯವಾಗಿದೆ ಅಲೆಮಾರಿ ಸಮುದಾಯ. ಇವತ್ತು ಎಲ್ಲಿ ನಿದ್ದೆ ಮಾಡೋಣ, ಏನು ತಿನ್ನೋಣ? ಎಂದು ಪ್ರತಿನಿತ್ಯ ಯೋಚಿಸುವ ಈ ಸಮುದಾಯಗಳ ಜನರಿಗೆ ದಾಖಲೆಗಳನ್ನು ತನ್ನಿ ಎಂದರೆ ಎಲ್ಲಿಂದ ತರೋದು?
ಎಸ್ಐಆರ್ನ ಭಾಗವಾಗಿ ನೋಟಿಸ್ ಪಡೆದಿರುವ ಅಲೆಮಾರಿ ಸಮುದಾಯಗಳ ಸಾವಿರಾರರು ಮತದಾರರು ಕಳೆದ ಕೆಲ ದಿನಗಳಿಂದ ರಾಜ್ಯದಾದ್ಯಂತ ಬೂತ್ಗಳಲ್ಲಿ ಸಾಲುಗಟ್ಟಿ ನಿಂತಿರುವುದು ಕಂಡು ಬರುತ್ತಿದೆ.
ಉದಾಹರಣೆಯಾಗಿ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 235ರ ಮಾಹಿತಿಯನ್ನು ನಾವು ಕಲೆ ಹಾಕಿದ್ದೇವೆ. ಇಲ್ಲಿ, ಅಲೆಮಾರಿ ದಕ್ಕಲಿಗ ಸಮುದಾಯಕ್ಕೆ ಸೇರಿದ ಸುಮಾರು 90 ಪೈಕಿ ಅರ್ಧದಷ್ಟು ಮಂದಿಗೆ ದಾಖಲೆ ಸಲ್ಲಿಸಲು ಕೋರಿ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬೂತ್ನಲ್ಲಿ ಒಟ್ಟು 123 ಮತದಾರರಿಗೆ ನೋಟಿಸ್ ನೀಡಲಾಗಿದ್ದು, ಅವರ ಪೈಕಿ ಅಲೆಮಾರಿ ದಕ್ಕಲಿಗ ಸಮುದಾಯದ 28 ಕುಟುಂಬಗಳ 45 ಮಂದಿಗೆ ನೋಟಿಸ್ ಬಂದಿದೆ. ಚಿಕ್ಕನಾಯಕನಹಳ್ಳಿ ನಗರದಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಗಾಂಧಿನಗರ ಪ್ರದೇಶದ ಸ್ಮಶಾನದ ಪಕ್ಕದಲ್ಲಿ ಈ ಕುಟುಂಬಗಳು ವಾಸಿಸುತ್ತಿವೆ. ಸುದೀರ್ಘ ಹೋರಾಟದ ಬಳಿಕ 2009ರಲ್ಲಿ ಸರ್ಕಾರ ಕೆಲವು ಕುಟುಂಬಗಳಿಗೆ ಇದೇ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು ಹಕ್ಕು ಪತ್ರಗಳನ್ನು ನೀಡಿತ್ತು. ಆ ಬಳಿಕ ಹಲವು ಕುಟುಂಬಗಳು ಇಲ್ಲಿಯೇ ನೆಲೆಸಿವೆ ಎಂದು ತಿಳಿದು ಬಂದಿದೆ.
“ನೋಟಿಸ್ ಪಡೆದಿರುವ ಗಾಂಧಿನಗರದ ಅಲೆಮಾರಿ ಸಮುದಾಯಗಳ ಮತದಾರರ ಪೈಕಿ ಒಂದಷ್ಟು ಜನರ ಬಳಿ ಮನೆಯ ಹಕ್ಕು ಪತ್ರ, ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ಮತ್ತು ಜಾತಿ ಪ್ರಮಾಣಪತ್ರ ಇದೆ. ಇನ್ನುಳಿದವರ ಬಳಿ ಇರೋದು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮಾತ್ರ. ಚುನಾವಣಾ ಆಯೋಗ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅನ್ನು ಮಾನ್ಯ ದಾಖಲೆ ಎಂದು ಪರಿಗಣಿಸಿಲ್ಲ. ಹಾಗಾಗಿ, ಈ ಜನರು ಮತದಾನದ ಹಕ್ಕು ಕಳೆದುಕೊಳ್ಳುವುದು ಖಚಿತ” ಎನ್ನುತ್ತಾರೆ ದಕ್ಕಲಿಗ ಸಂಘದ ರಾಜ್ಯಾಧ್ಯಕ್ಷ ಶಾಂತರಾಜು ಡಿ.
“ದಕ್ಕಲಿಗ ಸಂಘ, ನಾಗರಿಕ ಮತಕಾವಲು ಸಮಿತಿ, ಎದ್ದೇಳು ಕರ್ನಾಟಕದಂತಹ ಸಂಘಟನೆಗಳ ಮುಖಾಂತರ ನಾವು ಶ್ರಮಪಟ್ಟ ಹಿನ್ನೆಲೆ ಗಾಂಧಿ ನಗರದ ಕೆಲ ಜನರು ದಾಖಲೆಗಳನ್ನು ಸಿದ್ದಪಡಿಸಿಕೊಂಡಿದ್ದಾರೆ. ತುಮಕೂರಿನ ಇನ್ನುಳಿದ ಅಲೆಮಾರಿಗಳ ಬಳಿ ಯಾವುದೇ ದಾಖಲೆಗಳು ಇಲ್ಲ, ಅವರು ಖಂಡಿತವಾಗಿಯೂ ಮತ ಹಕ್ಕು ಕಳೆದುಕೊಳ್ಳುತ್ತಾರೆ” ಎಂದು ಶಾಂತರಾಜು ಕಳವಳ ವ್ಯಕ್ತಪಡಿಸಿದ್ದಾರೆ.
“ಯಾವುದಾದರು ಅಪರಾಧ ಪ್ರಕರಣಗಳು ನಡೆದಾಗ ಪೊಲೀಸರು ಸುಖಾಸುಮ್ಮನೆ ಠಾಣೆಗೆ ಎಳೆದೊಯ್ದು ಥಳಿಸುವಂತಹ ಶೋಚಣೀಯ ಪರಿಸ್ಥಿತಿ ನಮ್ಮ ಅಲೆಮಾರಿ ಸಮುದಾಯದ ಜನರದ್ದು, ಇನ್ನು ಮುಂದೆ ಮತದಾರರ ಪಟ್ಟಿಯಿಂದ ಹೊರಬಿದ್ದರೆ ನಮ್ಮ ಜನರ ಪರಿಸ್ಥಿತಿ ಊಹಿಸಲೂ ಅಸಾಧ್ಯ. ನಮ್ಮ ಜನರಿಗೆ ಈ ಎಸ್ಐಆರ್ ಬಗ್ಗೆ ಜಾಗೃತಿಯೇ ಇಲ್ಲ, ಇನ್ನು ದಾಖಲೆಳನ್ನು ಹೊಂದಿಸುವುದು ದೂರದ ಮಾತು” ಎನ್ನುತ್ತಾರೆ ಶಾಂತರಾಜು.
“ಅಲೆಮಾರಿ ಸಮುದಾಯಗಳ ಹಲವು ಜನರಿಗೆ ಇದುವರೆಗೆ ಎನ್ಯುಮರೇಷನ್ ಫಾರ್ಮ್ ಬಂದಿಲ್ಲ. ಅನೇಕರಿಗೆ 2002 ಮತದಾರರ ಪಟ್ಟಿಯಲ್ಲಿ ತಮ್ಮ ಪೋಷಕರ ಮಾಹಿತಿ ಸಿಕ್ಕಿಲ್ಲ. ಯಾವುದೇ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಸಹಾಯಕ್ಕೆ ಬಂದಿಲ್ಲ. ಚುನಾವಣೆ ಬರುವಾಗ ವೋಟ್ ಕೇಳಲು ಬರುವ ರಾಜಕೀಯ ಮುಖಂಡರ ಪತ್ತೆಯೇ ಇಲ್ಲ” ಎಂದು ಶಾಂತರಾಜು ಬೇಸರ ವ್ಯಕ್ತಪಡಿಸಿದ್ದಾರೆ.


