“ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA)ನ ನಾಯಕಿ ದಾನಿಶ್ ಅಲಿ ಕರೆ ನೀಡಿದರು.
ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗೌರಿ ಮೆಮೋರಿಯಲ್ ಟ್ರಸ್ಟ್ ಭಾನುವಾರ (ಸೆ.6) ಹಮ್ಮಿಕೊಂಡಿದ್ದ ‘ಗೌರಿ ದಿನ ಜೆನ್ ಝೀ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನರೇಂದ್ರ ದಾಭೋಲ್ಕರ್, ಎಂಎಂ ಕಲಬುರ್ಗಿ, ಗೋವಿಂದ ಪನ್ಸಾರೆ ಹೇಗೆ ಕೊಲೆಯಾದರು ಎಂಬುದನ್ನು ನಾವು ಈಗ ನೆನಪಿಸಿಕೊಳ್ಳಬೇಕಾಗಿದೆ. ಸ್ಟ್ಯಾನ್ ಸ್ವಾಮಿ ಅವರನ್ನು ಜೈಲಲ್ಲಿ ಹೇಗೆ ಸಾಯುವಂತೆ ಮಾಡಲಾಯಿತು ಎಂಬುದನ್ನೂ ನಾವಿಂದು ನೆನಪು ಮಾಡಿಕೊಳ್ಳಬೇಕಾಗಿದೆ. ಆರ್ಎಸ್ಎಸ್, ಬಿಜೆಪಿ ವಿರುದ್ಧವಾಗಿ ಮಾತನಾಡಿದ್ದಕ್ಕೆ ಇಂದು ಉಮರ್ ಖಾಲಿದ್, ಶರ್ಜೀಲ್ ಇಮಾಮ್ರಂತಹ ಹಲವು ವಿದ್ಯಾರ್ಥಿ ಹೋರಾಟಗಾರರು ಜೈಲಿನಲ್ಲಿದ್ದಾರೆ. ಇಂದು ನಾವು ನಿಂತಿರುವ ಹೋರಾಟದ ವೇದಿಕೆಗೆ ಅಡಿಪಾಯ ಹಾಕಿದವರು ಇವೆರೆಲ್ಲರೂ” ಎಂದು ಹೇಳಿದರು.
ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ನೆನಪಿಸಿಕೊಂಡ ವಿದ್ಯಾರ್ಥಿ ನಾಯಕಿ, “2017ರಲ್ಲಿ ಗೌರಿ ಲಂಕೇಶ್ ಅವರ ಹತ್ಯೆ ನಡೆದಾಗ ನಾನು 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದೆ. ಆದರೆ ಆ ಸುದ್ದಿ ಕೇಳಿ ನಾನು ಆಘಾತಕ್ಕೆ ಒಳಗಾಗಿದ್ದು ನನಗೆ ಇಂದಿಗೂ ನೆನಪಿದೆ. ಯಾಕೆಂದರೆ ಸರ್ಕಾರದ ವಿರುದ್ಧ, ಹಿಂದುತ್ವದ ವಿರುದ್ಧ ಮಾತನಾಡುವುದಕ್ಕೆ ಯಾವ ಬೆಲೆ ತೆರಬೇಕಾದೀತು ಎಂಬುದನ್ನು ಈ ಹತ್ಯೆ ತಿಳಿಸುತ್ತದೆ” ಎಂದರು.
ಗೌರಿ ಅವರು ಫ್ಯಾಶಿಸಂ, ಭಯೋತ್ಪಾದಕರ ವಿರುದ್ಧವಾಗಿ ನಿಂತವರು. ಪ್ರತಿ ವರ್ಷ ನಾವು ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಆಚರಿಸುತ್ತೇವೆ. ಪ್ರತಿ ವರ್ಷ ಸರ್ಕಾರ ಭಾರತವು ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ಎಂಬುದನ್ನು ಹೇಳುವುದನ್ನು ಕೇಳುತ್ತೇವೆ. ಅದೇ ಸಂದರ್ಭದಲ್ಲಿ ಗೌರಿಯಂತಹವರ ಕೊಲೆಯೂ ನಡೆಯುವುದನ್ನು ನಾವು ನೋಡಬಹುದು ಎಂದು ಹೇಳಿದರು.
ನಮ್ಮ ಅಭಿಪ್ರಾಯವನ್ನು ತಿಳಿಸುವುದು ಇಂದು ದೇಶದಲ್ಲಿ ಅತಿ ಕಷ್ಟದ ಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸುತ್ತದೆ. ನೀವು ಧೈರ್ಯದಿಂದ ಧ್ವನಿ ಎತ್ತಿದರೆ ನಿಮ್ಮ ಜೀವವನ್ನೂ ಬಲಿಕೊಡಲು ಸಿದ್ಧವಾಗಿರಬೇಕಾಗುತ್ತದೆ. ಹಿಂದುತ್ವವಾದಿಗಳು ಅತಿ ಪ್ರಬಲರಾಗಿರುವ ಇಂದಿನ ಕಾಲದಲ್ಲಿ ನಮ್ಮನ್ನು ಗುರಿಯಾಗಿಸಲಾಗುತ್ತಿದೆ. ಯಾಕೆಂದರೆ ನಾವು ಇಂತಹ ಶಕ್ತಿಗಳ ವಿರುದ್ಧವಾಗಿ ಮಾತನಾಡುವವರು ಎಂದರು.
ನೀವು ರಾಜಕೀಯದಲ್ಲಿ ಯಾಕಿದ್ದೀರಿ? ಈ ಮೂಲಕ ಅಪಾಯವನ್ನು ಯಾಕೆ ಆಹ್ವಾನಿಸುತ್ತೀರಿ ಎಂದು ನಮ್ಮನ್ನು ಹಲವರು ಪ್ರಶ್ನಿಸುತ್ತಾರೆ. ಗೌರಿ ಅಂತಹ ವ್ಯಕ್ತಿಗಳ ಹತ್ಯೆಯು ನಮ್ಮ ಜನರೇಷನ್ಗೆ ಹೋರಾಟದ ಕಿಚ್ಚು ನೀಡಿದೆ. ಗೌರಿ ಅವರಿಂದ ಸ್ಪೂರ್ತಿ ಪಡೆದ ನಾವು ಇಂದು ಇಲ್ಲಿ ನಿಂತಿದ್ದೇವೆ ಎಂದು ಹೇಳಿದರು.
2016ರಲ್ಲಿ ಜೆಎನ್ಯು ಮೇಲೆ ದಾಳಿ ನಡೆದಿತ್ತು. ಆದರೆ ಅಂದು ಹಲವು ಮಂದಿ ಜೆಎನ್ಯು ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಲು ಹಿಂಜರಿದರು. ಆದರೆ ಗೌರಿ ಲಂಕೇಶ್ ನಮ್ಮ ಪರವಾಗಿ ಧ್ವನಿ ಎತ್ತಿದರು. ವಿದ್ಯಾರ್ಥಿಗಳ ರಾಜಕೀಯವನ್ನು ಅಪರಾಧೀಕರಿಸುವುದರ ವಿರುದ್ಧ ಗೌರಿ ಮಾತನಾಡಿದರು ಎಂದರು.
ಸ್ವಾತಂತ್ರ್ಯ ಸಂಗ್ರಾಮದಿಂದಲೂ ಭಗತ್ ಸಿಂಗ್, ಸುಖ್ದೇವ್, ರಾಜ್ಗುರು ಅವರಂತಹ ಯುವಕರು ಹೋರಾಡಿದರು. 2019ರ ಸಿಎಎ, ಎನ್ಆರ್ಸಿ ವಿರುದ್ಧದ ಪ್ರತಿಭಟನೆಯಲ್ಲೂ ಜಾಮಿಯ ಮೊದಲಾದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧವಾಗಿ ನಿಂತರು. ಅಂದೂ ಪೊಲೀಸರು ಎಷ್ಟೊಂದು ದೌರ್ಜನ್ಯ ಮಾಡಿದ್ದಾರೆ ಎಂಬುದನ್ನು ನಾವು ಇಂದೂ ನೆನಪಿಟ್ಟುಕೊಳ್ಳಬೇಕು. ಇಂದಿಗೂ ಹಲವು ವಿದ್ಯಾರ್ಥಿಗಳ ಮೇಲೆ ಸುಳ್ಳು ಪ್ರಕರಣವಿದೆ. ನಮ್ಮ ಸಂಗಾತಿಗಳು ಇಂದಿಗೂ ಕೋರ್ಟ್ಗೆ ಅಲೆದಾಡುತ್ತಿದ್ದಾರೆ. ರೈತರ ಹೋರಾಟಕ್ಕೆ ಸರ್ಕಾರ ತಲೆಬಾಗಲೇಬೇಕಾಯಿತು. ನಾವು ಇಂತಹ ಚಳವಳಿಗಳನ್ನು ಇಂದು ನೆನೆಯಬೇಕಾಗುತ್ತದೆ. ಯಾಕೆಂದರೆ ನಾವು ಇಂದು ಹೊಸದಾಗಿ ಚಳವಳಿ ಕಟ್ಟುತ್ತಿರುವುದಲ್ಲ, ಈ ಎಲ್ಲ ಹೋರಾಟಗಳು ನಮ್ಮ ಇಂದಿನ ಚಳವಳಿಗೆ ಅಡಿಪಾಯ. ಈ ಹೋರಾಟಗಳೇ ನಮಗೆ ಸ್ಪೂರ್ತಿ, ಪಾಠ ಎಂದು ಹೇಳಿದರು.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬರೀ ಒಬ್ಬರನ್ನು ಸಚಿವ ಸ್ಥಾನದಿಂದ ತೆಗೆದುಹಾಕುವುದಲ್ಲ. ಇಂದು ನಾವು ಎಲ್ಲ ಸಚಿವರ ಹೊಣೆಗಾರಿಕೆಯನ್ನು ಪ್ರಶ್ನಿಸುತ್ತೇವೆ ಎಂಬುದರ ಸಂಕೇತ. ನೀವು ನಿಮ್ಮ ಕೆಲಸ ಮಾಡದಿದ್ದರೆ ಜಾಗ ಖಾಲಿ ಮಾಡಬೇಕಾಗುತ್ತದೆ ಎಂಬ ಪಾಠವನ್ನು ಈ ರಾಜೀನಾಮೆ ಎಲ್ಲ ಸಚಿವರಿಗೆ ನೀಡಿದೆ. ಇದು ಕೇವಲ ಮೊದಲ ಹೆಜ್ಜೆ, ನಮ್ಮ ಹೋರಾಟ ದೊಡ್ಡದಾಗಿದೆ. ಎನ್ಟಿಎ ವಿರುದ್ಧವಾಗಿ, ಹೊಸ ಶಿಕ್ಷಣ ನೀತಿಯ ವಿರುದ್ಧವಾಗಿ ನಮ್ಮ ಹೋರಾಟ ಎಂದು ತಿಳಿಸಿದರು.
ಫ್ಯಾಶಿಸ್ಟ್ಗಳ ಮೊದಲ ದಾಳಿ ಎಂದಿಗೂ ಶಿಕ್ಷಣ ವ್ಯವಸ್ಥೆ ಆಗಿರುತ್ತದೆ. ಯಾಕೆಂದರೆ ಜನರು ಇತಿಹಾಸ ತಿಳಿದರೆ, ಜನರು ದೇಶದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದರೆ ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂಬುದು ಅವರಿಗೆ (ಬಿಜೆಪಿ ಸರ್ಕಾರ/ ಫಾಶಿಸ್ಟ್) ತಿಳಿದಿದೆ. ಈ ಎಲ್ಲ ವಿಚಾರ ತಿಳಿದರೆ, ಶಿಕ್ಷಿತರಾದರೆ ನಾವು ಸರ್ಕಾರದ ವಿರುದ್ಧವಾಗಿ ಮಾತನಾಡುತ್ತೇವೆ ಎಂಬುದು ತಿಳಿದಿದೆ. ಆದ್ದರಿಂದ ಫ್ಯಾಶಿಸ್ಟ್ಗಳ ಮೊದಲ ದಾಳಿ ಎಂದಿಗೂ ಶಿಕ್ಷಣ ವ್ಯವಸ್ಥೆ ಆಗಿರುತ್ತದೆ ಎಂದರು.
ಇಲ್ಲಿರುವ ನಾವು ಬೇರೆ ಬೇರೆ ಸಂಘಟನೆಗೆ ಸೇರಿದವರು. ಸೈದ್ಧಾಂತಿಕ ಭಿನ್ನತೆಯಿಂದಾಗಿ ಬೇರೆ ಬೇರೆ ಸಂಘಟನೆಯಲ್ಲಿದ್ದೇವೆ. ಆದರೆ ನಾವೆಲ್ಲರೂ ಒಂದೇ ಶಕ್ತಿಯ ವಿರುದ್ಧವಾಗಿ ಹೋರಾಡುವವರು. ಈಗ ಎಸ್ಐಆರ್ ಮೂಲಕ ಅಲ್ಪಸಂಖ್ಯಾತರು, ಬಡವರು, ದಲಿತರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಈ ಮೂಲಕ ಅವರು (ಬಿಜೆಪಿ) ಚುನಾವಣೆಯನ್ನು ಗೆಲ್ಲುತ್ತಿದ್ದಾರೆ ಎಂದು ಆರೋಪಿಸಿದರು.
Courtesy : eedina.com


