ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಈ ನಡುವೆ, ತಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ತಿರುಗಿಬಿದ್ದಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, “ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ,” ಎಂದು ಆರೋಪಿಸಿದ್ದು, ದೇಶದಾದ್ಯಂತ ಸಾರ್ವಜನಿಕರಿಂದ ಹಾಗೂ ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಚರ್ಚೆಯನ್ನು ಬದಿಗೆ ಸರಿಸಿ, ರಾಜಕೀಯ ಲಾಭಕ್ಕಾಗಿ ಸದನವನ್ನು ಅಸ್ತವ್ಯಸ್ತಗೊಳಿಸುತ್ತಿವೆ ಎಂದು ಸಚಿವರು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಸಚಿವ ಧರ್ಮೇಂದ್ರ ಪ್ರಧಾನ್, ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸವಾದ ‘7 ಲೋಕ ಕಲ್ಯಾಣ ಮಾರ್ಗ’ದ ಹೊರಗೆ ಕಾಂಗ್ರೆಸ್ ನಾಯಕರು ಧರಣಿ ನಡೆಸಿರುವುದನ್ನು ಕಟುವಾಗಿ ವಿರೋಧಿಸಿದ್ದಾರೆ. “ಈ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಭದ್ರತಾ ನಿಯಮಗಳನ್ನು ಉಲ್ಲಂಘಿಸಲಾಗಿದೆ.
ಸರ್ಕಾರವು ವಿದ್ಯಾರ್ಥಿಗಳ ಪ್ರತಿಯೊಂದು ಸಮಸ್ಯೆಯ ಕುರಿತು ಸಂಸತ್ತಿನಲ್ಲಿ ಶೇಕಡಾ 100 ರಷ್ಟು ಸಮಗ್ರ ಚರ್ಚೆಗೆ ಸಿದ್ಧವಾಗಿದೆ. ಆದರೆ ಕಾಂಗ್ರೆಸ್ ಉದ್ದೇಶ ಸಮಸ್ಯೆ ಬಗೆಹರಿಸುವುದಲ್ಲ, ಬರಿ ಸುದ್ದಿ ಮಾಡುವುದು ಮತ್ತು ಸಂಘರ್ಷದ ವಾತಾವರಣ ಸೃಷ್ಟಿಸುವುದಾಗಿದೆ,” ಎಂದು ಪ್ರಧಾನ್ ಪ್ರತಿಪಾದಿಸಿದ್ದಾರೆ.
ಮುಂದುವರಿದು, “ವಿದ್ಯಾರ್ಥಿಗಳಿಗೆ ಗೊಂದಲಕ್ಕಿಂತ ಭರವಸೆ ಬೇಕು, ಬರಿ ಘೋಷಣೆಗಳಿಗಿಂತ ನೈಜ ಪರಿಹಾರ ಬೇಕು, ಅಡ್ಡಿಪಡಿಸುವುದಕ್ಕಿಂತ ಜವಾಬ್ದಾರಿಯುತ ನಡೆ ಬೇಕು. ಯುವಜನತೆಗೆ ಕೇವಲ ಆಕ್ರೋಶವಲ್ಲ, ಬದಲಾಗಿ ಉತ್ತರಗಳು, ಸುಧಾರಣೆಗಳು ಮತ್ತು ಹೊಣೆಗಾರಿಕೆ ನೀಡುವುದು ನಮ್ಮ ಕರ್ತವ್ಯ. ಅದನ್ನೇ ನಮ್ಮ ಸರ್ಕಾರ ಮಾಡುತ್ತಿದೆ,” ಎಂದು ಹೇಳುವ ಮೂಲಕ ತಮ್ಮ ಆಡಳಿತವನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರಧಾನ್ ಪೋಸ್ಟ್ಗೆ ಜನಸಾಮಾನ್ಯರಿಂದ ಕಟು ಆಕ್ರೋಶ – “ನಾಚಿಕೆಗೇಡಿನ ಪರಮಾವಧಿ”
ತಮ್ಮ ಕಟ್ಟುಕಥೆಗಳ ಮೂಲಕ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪೋಸ್ಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಾವಿರಾರು ಜನರು ಸಚಿವರ ವಿರುದ್ಧ ಕಿಡಿಕಾರಿದ್ದಾರೆ. ನೆಟ್ಟಿಗರು ಸಚಿವರ ಫೋಟೋಗಳನ್ನು ಲಗತ್ತಿಸಿ, “ನಾಚಿಕೆಗೆ ಏನಾದರೂ ಮುಖವಿದ್ದರೆ ಅದು ಇದೇ ಇರಬೇಕು” (If besharam had a face) ಎಂದು ಪೋಸ್ಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಮತ್ತೊಬ್ಬ ಬಳಕೆದಾರರು, “ಅಪಾರ ಪ್ರಮಾಣದ ನಾಚಿಕೆಗೆ ಒಂದು ಬ್ರ್ಯಾಂಡ್ ಎನ್ನುವುದಿದ್ದರೆ, ಈ ವ್ಯಕ್ತಿಯೇ ಅದಕ್ಕೆ ಅಸಲಿ ಬ್ರ್ಯಾಂಡ್ ಅಂಬಾಸಡರ್!” (If Shameless is a brand then this man is the brand ambassador) ಎಂದು ವ್ಯಂಗ್ಯವಾಡಿದ್ದಾರೆ.
ನೀಟ್ ಅಕ್ರಮದಿಂದ ಮನನೊಂದು ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಸಾವುಗಳನ್ನು ನೆನಪಿಸಿದ ಸಾರ್ವಜನಿಕರು ಸಚಿವರನ್ನು ಕಠಿಣ ಶಬ್ದಗಳಲ್ಲಿ ತೊಳೆಯುತ್ತಿದ್ದಾರೆ. “ಹೇ ನೀನು!! 21 ಮುಗ್ಧ ವಿದ್ಯಾರ್ಥಿಗಳ ಕೊಲೆಗಾರ!! ಅವರು ತಮ್ಮ ಸಾವಿಗೂ ಮುನ್ನ ‘ನನ್ನನ್ನು ಕ್ಷಮಿಸಿ’ ಎಂದು ಪತ್ರ ಬರೆದಿಟ್ಟು ಹೋಗಿದ್ದಾರೆ! ನಿಮ್ಮ ಭ್ರಷ್ಟಾಚಾರ ಮತ್ತು ಅಸಮರ್ಥತೆಯನ್ನು ಮುಚ್ಚಿಟ್ಟುಕೊಳ್ಳಲು ಇತರರನ್ನು ಹೊಣೆಗಾರರನ್ನಾಗಿ ಮಾಡಲು ನಿಮಗಷ್ಟು ಧೈರ್ಯವೇ?” ಎಂದು ಅತ್ಯಂತ ಆಕ್ರೋಶದಿಂದ ಪ್ರಶ್ನಿಸಿದ್ದಾರೆ.
ಮತ್ತಷ್ಟು ನೆಟ್ಟಿಗರು, “ಏನೂ ಆಗಿಲ್ಲ ಎನ್ನುವಂತೆ ನೀವು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುತ್ತಿದ್ದೀರಲ್ಲ, ನಿಮಗೆ ಕೊಂಚವೂ ನಾಚಿಕೆಯಾಗುವುದಿಲ್ಲವೇ? ದೇಶದ ಶಿಕ್ಷಣ ವ್ಯವಸ್ಥೆಯನ್ನು ಹಾಳುಮಾಡಿದ್ದಕ್ಕಾಗಿ ನೀವು ತಕ್ಷಣವೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಈ ಎಲ್ಲಾ ಪ್ರತಿಭಟನೆಗಳಿಗೆ ಅಂತ್ಯ ಹಾಡಬೇಕು,” (You should resign immediately and end all this protest but you are shameless posting on X as if Nothing happened) ಎಂದು ನೇರವಾಗಿ ಆಗ್ರಹಿಸಿದ್ದಾರೆ.
ಸೋಮವಾರ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳು ನಡೆಸಿದ ಶಾಂತಿಯುತ ಪ್ರತಿಭಟನೆಯ ಮೇಲೆ ಪೊಲೀಸರು ಅತಿಯಾದ ಬಲಪ್ರಯೋಗ ಮತ್ತು ಹಲ್ಲೆ ನಡೆಸಿದ್ದನ್ನು ಖಂಡಿಸಿ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕರು ಮಂಗಳವಾರ ಪ್ರಧಾನಿ ನಿವಾಸದ ಹೊರಗೆ ಧರಣಿ ನಡೆಸಿದ್ದರು.
ಈ ವೇಳೆ ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದರಾದರೂ, ಯಾವುದೇ ಸಕಾರಾತ್ಮಕ ಫಲಿತಾಂಶ ಹೊರಬರಲಿಲ್ಲ.
ತದನಂತರ ದೆಹಲಿ ಪೊಲೀಸರು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ವಿಪಕ್ಷ ನಾಯಕರನ್ನು ಬಲವಂತವಾಗಿ ವಶಕ್ಕೆ ಪಡೆದು, ಕೆಲವು ಗಂಟೆಗಳ ನಂತರ ಬಿಡುಗಡೆ ಮಾಡಿದ್ದರು.
ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಾಯಕರನ್ನು ಬಂಧಿಸಿ, ಸ್ವತಃ ಆಡಳಿತಾತ್ಮಕ ವೈಫಲ್ಯ ಎಸಗಿರುವ ಶಿಕ್ಷಣ ಸಚಿವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಸಾರ್ವಜನಿಕರ ತೀವ್ರ ಕೆಂಗಣ್ಣಿಗೆ ಗುರಿಯಾಗಿದೆ.


