ಬರುಯಿಪುರ/ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕ್ರೂರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ್ ಮೊಂಡೋಲ್ ಬುಧವಾರ ಮುಂಜಾನೆ ಪೊಲೀಸ್ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ. ಆದರೆ, ಈ ಘಟನೆಯ ನಂತರ ಆತನ ಹೆತ್ತ ತಾಯಿ ನೀಡಿರುವ ಹೇಳಿಕೆ ಹಾಗೂ ಆಕೆಯ ನಿರ್ಧಾರ ಇಡೀ ದೇಶವನ್ನೇ ದಿಗ್ಭ್ರಮೆಗೊಳಿಸಿದೆ. “ನನ್ನ ಮಗ ಮಾಡಿದ ರಾಕ್ಷಸ ಕೃತ್ಯಕ್ಕೆ ಆತನಿಗೆ ಸೂಕ್ತ ಶಿಕ್ಷೆಯಾಗಿದೆ. ನಾನು ಆತನ ಮೃತದೇಹವನ್ನು ಸ್ವೀಕರಿಸುವುದಿಲ್ಲ” ಎಂದು ತಾಯಿ ಸಂಧ್ಯಾ ಮಂಡಲ್ ದೃಢವಾಗಿ ಹೇಳಿದ್ದು, ಕ್ರೂರ ಅಪರಾಧವೆಸಗಿದ ಮಗನಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದಾರೆ.
ಬರುಯಿಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪಲಾಶ್ ಚಂದ್ರ ದಾಲಿ ನೀಡಿದ ಮಾಹಿತಿಯಂತೆ, ಬುಧವಾರ ಮುಂಜಾನೆ ಸುಮಾರು 12:45ರ ವೇಳೆಗೆ ಪ್ರಕರಣದ ತನಿಖೆಯ ಭಾಗವಾಗಿ ಅಪರಾಧ ನಡೆದ ಸ್ಥಳದ (ಸೂರ್ಯಪುರ) ಪುನರ್ನಿರ್ಮಾಣ (Reconstruction of crime scene) ಕಾರ್ಯಕ್ಕಾಗಿ ಆರೋಪಿ ಪ್ರಭಾಸ್ ಮೊಂಡೋಲ್ನನ್ನು ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಆರೋಪಿಯು ತನಿಖೆಗೆ ಸಹಕರಿಸದೆ ಅಧಿಕಾರಿಗಳನ್ನು ದಾರಿತಪ್ಪಿಸಲು ಯತ್ನಿಸಿದ್ದನು.
ಸ್ಥಳಕ್ಕೆ ತಲುಪುತ್ತಿದ್ದಂತೆಯೇ, ಪ್ರಭಾಸ್ ದಿಢೀರನೆ ಪೊಲೀಸ್ ಅಧಿಕಾರಿಯೊಬ್ಬರ ಸೇವಾ ಪಿಸ್ತೂಲನ್ನು ಕಸಿದುಕೊಂಡು, ಪೊಲೀಸ್ ತಂಡದ ಮೇಲೆ ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಪ್ರತಿಯಾಗಿ ಗುಂಡು ಹಾರಿಸಿದ್ದಾರೆ. ಎನ್ಕೌಂಟರ್ನಲ್ಲಿ ಗಂಭೀರವಾಗಿ ಗಾಯಗೊಂಡ ಪ್ರಭಾಸ್ನನ್ನು ತಕ್ಷಣವೇ ಬರುಯಿಪುರ ಸಬ್-ಡಿವಿಷನಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
‘ಶವ ಮನೆಗೆ ತರಲ್ಲ, ಏನು ಬೇಕಾದರೂ ಮಾಡಿ’: ತಾಯಿಯ ಪ್ರತಿಕ್ರಿಯೆ
ಮಗನ ಎನ್ಕೌಂಟರ್ ಸುದ್ಧಿ ತಿಳಿದ ನಂತರ ಪ್ರಮುಖ ಆರೋಪಿ ಪ್ರಭಾಸ್ನ ತಾಯಿ ಸಂಧ್ಯಾ ಮಂಡಲ್ ಸುದ್ದಿ ಸಂಸ್ಥೆ (ANI) ಜೊತೆ ಮಾತನಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬುಧವಾರ ಬೆಳಿಗ್ಗೆ ನಾನು ಎಚ್ಚರಗೊಳ್ಳುತ್ತಿದ್ದಂತೆಯೇ ಇಬ್ಬರು ಪೊಲೀಸರು ಮನೆಗೆ ಬಂದರು. ‘ನಿಮ್ಮ ಮಗ ಸತ್ತಿದ್ದಾನೆ, ಆಸ್ಪತ್ರೆಗೆ ಬರುತ್ತೀರಾ?’ ಎಂದು ಕೇಳಿದರು. ನನ್ನ ಪತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ನಾನು ಬರುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದೆ. ಆತ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ. ಆತ ಎಸಗಿದ ಭಯಾನಕ ಅಪರಾಧಕ್ಕೆ ಆತನಿಗೆ ತಕ್ಕ ಶಿಕ್ಷೆಯಾಗಿದೆ. ನಾನು ಆತನ ಮೃತದೇಹವನ್ನು ಮನೆಗೆ ತರುವುದಿಲ್ಲ ಮತ್ತು ಸ್ವೀಕರಿಸುವುದೂ ಇಲ್ಲ. ಆತನ ಶವವನ್ನು ಪೊಲೀಸರು ಏನು ಬೇಕಾದರೂ ಮಾಡಿಕೊಳ್ಳಲಿ, ನನಗೆ ಯಾವುದೇ ಅಭ್ಯಂತರವಿಲ್ಲ” ಎಂದು ಅತ್ಯಂತ ಕಠಿಣ ಧ್ವನಿಯಲ್ಲಿ ಸಂಧ್ಯಾ ಮಂಡಲ್ ಪ್ರತಿಪಾದಿಸಿದ್ದಾರೆ.
ಈ ಪ್ರಕರಣವು ಪಶ್ಚಿಮ ಬಂಗಾಳ ಮಾತ್ರವಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಕಳೆದ ಶನಿವಾರ (ಜುಲೈ 4) ಕಾಣೆಯಾಗಿದ್ದ 12 ವರ್ಷದ ಅಪ್ರಾಪ್ತ ಬಾಲಕಿಯ ಮೃತದೇಹವು ಭಾನುವಾರ ಬೆಳಿಗ್ಗೆ ಬರುಯಿಪುರದ ಸೂರ್ಯಪುರ ಹಾಟ್ ಬಳಿಯ ಕೊಳವೊಂದರಲ್ಲಿ ಪತ್ತೆಯಾಗಿತ್ತು.
ಬಾಲಕಿಯ ಶವ ಸಿಗುತ್ತಿದ್ದಂತೆಯೇ ಸ್ಥಳೀಯರು ರೊಚ್ಚಿಗೆದ್ದು, ರಸ್ತೆ ತಡೆ ನಡೆಸಿ, ಪೊಲೀಸ್ ವಾಹನಗಳನ್ನು ಜಖಂಗೊಳಿಸಿ ತೀವ್ರ ಪ್ರತಿಭಟನೆ ನಡೆಸಿದ್ದರು.
ಆಸ್ಪತ್ರೆಯಿಂದ ಬಂದ ಪ್ರಥಮ ಮರಣೋತ್ತರ ಪರೀಕ್ಷೆಯ (Autopsy) ವರದಿಯು ಅಪರಾಧದ ಕ್ರೂರತೆಯನ್ನು ಬಿಚ್ಚಿಟ್ಟಿತ್ತು. ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯ ದೇಹಕ್ಕೆ ಸುಟ್ಟ ಗಾಯಗಳನ್ನು ಉಂಟುಮಾಡಿ, ತಲೆಯ ಹಿಂಭಾಗಕ್ಕೆ ಬಲವಾದ ವಸ್ತುವಿನಿಂದ ಹೊಡೆದು ಹಿಂಸಿಸಲಾಗಿತ್ತು. ಅಷ್ಟೇ ಅಲ್ಲದೆ, ಬಾಲಕಿ ಜೀವಂತವಾಗಿದ್ದಾಗಲೇ ಆಕೆಯನ್ನು ಕೊಳಕ್ಕೆ ಎಸೆಯಲಾಗಿತ್ತು ಎಂಬುದು ಆಕೆಯ ಶ್ವಾಸಕೋಶದಲ್ಲಿ ಸಿಕ್ಕ ಕೆಸರು ನೀರಿನಿಂದ ದೃಢಪಟ್ಟಿತ್ತು. ಅತಿಯಾದ ರಕ್ತಸ್ರಾವ ಮತ್ತು ನೀರಿನಲ್ಲಿ ಮುಳುಗಿದ್ದೇ ಬಾಲಕಿಯ ಸಾವಿಗೆ ಕಾರಣವೆಂದು ವೈದ್ಯರು ದೃಢಪಡಿಸಿದ್ದರು.
ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬಾಲಕಿ ಕಾಣೆಯಾಗುವ ಮೊದಲು ಆಕೆಯೊಂದಿಗೆ ಪ್ರಭಾಸ್ ಮೊಂಡೋಲ್ ಇರುವುದು ಕಂಡುಬಂದಿತ್ತು. ಪೊಲೀಸರು ತಕ್ಷಣವೇ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಇತರ ಸಹ-ಆರೋಪಿಗಳಾದ ಆನಂದ್ ಸರ್ದಾರ್, ದಿವಾಕರ್ ಸರ್ದಾರ್ ಮತ್ತು ಕಬೀರ್ ಮೊಲ್ಲಾ ಎಂಬುವವರ ಹೆಸರುಗಳು ಹೊರಬಂದಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪೋಕ್ಸೋ (POCSO) ಕಾಯ್ದೆ, ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಸಾಕ್ಷ್ಯ ನಾಶದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದರು.
ಈ ಎನ್ಕೌಂಟರ್ ಘಟನೆಯು ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲೂ ಭಾರಿ ಸಂಚಲನ ಮೂಡಿಸಿದೆ. ರಾಜ್ಯ ಸರ್ಕಾರವು ಅಪರಾಧಗಳ ವಿರುದ್ಧ ‘ಝೀರೋ ಟಾಲರೆನ್ಸ್’ ನೀತಿ ಅನುಸರಿಸುವುದಾಗಿ ಸ್ಪಷ್ಟಪಡಿಸಿದ್ದರೆ, ಮತ್ತೊಂದೆಡೆ ಎನ್ಕೌಂಟರ್ ಪ್ರಕ್ರಿಯೆಯ ಕುರಿತು ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.
ತನ್ನ ಮಗನೇ ಆದರೂ ಆತ ಎಸಗಿದ ಮನುಷ್ಯತ್ವವಿಲ್ಲದ ಕೃತ್ಯಕ್ಕೆ ಆತನ ಹೆತ್ತ ತಾಯಿಯೇ ಮೃತದೇಹವನ್ನು ನಿರಾಕರಿಸಿ, ಶಿಕ್ಷೆಯನ್ನು ಬೆಂಬಲಿಸಿರುವುದು ಸಮಾಜದಲ್ಲಿ ಅಪರಾಧಿಗಳ ವಿರುದ್ಧ ವ್ಯಕ್ತವಾಗುತ್ತಿರುವ ತೀವ್ರ ಆಕ್ರೋಶಕ್ಕೆ ಸಾಕ್ಷಿಯಾಗಿದೆ.


