Homeಮುಖಪುಟಅಯೋಧ್ಯೆ ದೇಣಿಗೆ ಹಗರಣ: ಕೇವಲ 45 ದಿನಗಳಲ್ಲಿ 70 ಬಾರಿ ಕಳ್ಳತನ, SIT ವರದಿ

ಅಯೋಧ್ಯೆ ದೇಣಿಗೆ ಹಗರಣ: ಕೇವಲ 45 ದಿನಗಳಲ್ಲಿ 70 ಬಾರಿ ಕಳ್ಳತನ, SIT ವರದಿ

- Advertisement -
- Advertisement -

ಅಯೋಧ್ಯೆಯ ರಾಮಮಂದಿರಕ್ಕೆ ಬಂದ ಸಾರ್ವಜನಿಕರ ದೇಣಿಗೆ ದುರುಪಯೋಗದ ಆರೋಪದ ಕುರಿತು ವಿಶೇಷ ತನಿಖಾ ತಂಡ (SIT) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಕೇವಲ 45 ದಿನಗಳಲ್ಲಿ ಸುಮಾರು 70 ಸಂಶಯಾಸ್ಪದ ಕಳ್ಳತನಗಳು ನಡೆದಿರುವುದಕ್ಕೆ ಪ್ರಾಥಮಿಕ ಪುರಾವೆಗಳು (Prima facie evidence) ಸಿಕ್ಕಿವೆ. ದೇಣಿಗೆ ಎಣಿಕೆ ವ್ಯವಸ್ಥೆಯೊಳಗೆ ಏನಾಗಿದೆ ಎಂಬುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚುತ್ತಿದ್ದಂತೆ, ಈ ಪ್ರಕರಣ ಕೇವಲ ಕಳ್ಳತನಕ್ಕೆ ಸೀಮಿತವಾಗದೆ ಸಂಸ್ಥೆಯ ಒಟ್ಟಾರೆ ಹೊಣೆಗಾರಿಕೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ. ತನಿಖೆಯ ಪ್ರಕ್ರಿಯೆಯಲ್ಲಿ 5 ಪ್ರಮುಖ ಅಂಶಗಳು ಮುಂಚೂಣಿಗೆ ಬಂದಿವೆ: ಸಿಸಿಟಿವಿಯಲ್ಲಿ ಸೆರೆಯಾದ ಸರಣಿ ನಗದು ಕಳ್ಳತನ, ದುರ್ಬಲ ಮೇಲ್ವಿಚಾರಣೆ, ಭದ್ರತಾ ವೈಫಲ್ಯ, ಎಣಿಕೆ ಪ್ರಕ್ರಿಯೆಯಲ್ಲಿದ್ದ ದೋಷಗಳು ಮತ್ತು ನಿಗದಿಪಡಿಸಿದ ನಿಯಮಗಳನ್ನು ಜಾರಿಗೊಳಿಸುವಲ್ಲಿನ ವೈಫಲ್ಯ.

ಈ ಆಘಾತಕಾರಿ ವರದಿಗಳ ಬೆನ್ನಲ್ಲೇ ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ನಲ್ಲಿ ದೊಡ್ಡ ಬದಲಾವಣೆಗಳಾಗಿದ್ದು, ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಹಿರಿಯ ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಗಳನ್ನು ಅಂಗೀಕರಿಸಲಾಗಿದೆ. ಇದು ಕೇವಲ ಪ್ರಾಥಮಿಕ ವರದಿಯಾಗಿದ್ದರೂ, ತನಿಖೆ ಹೇಗೆ ಮುನ್ನಡೆಯಿತು ಮತ್ತು ಕಳ್ಳತನದ ಆರೋಪದಿಂದ ಶುರುವಾದ ತನಿಖೆ ಸಾಂಸ್ಥಿಕ ಹೊಣೆಗಾರಿಕೆಯತ್ತ ಹೇಗೆ ತಿರುಗಿತು ಎಂಬುದನ್ನು ಈ ವರದಿ ಬಿಚ್ಚಿಡುತ್ತದೆ.

ಜೂನ್ 13: ಎಸ್‌ಐಟಿ (SIT) ರಚನೆ

ದೇಣಿಗೆ ವಿಷಯದಲ್ಲಿ ಅಕ್ರಮಗಳು ನಡೆದಿವೆ ಎಂದು ಸ್ವತಃ ಟ್ರಸ್ಟ್ ತನಿಖೆಗೆ ಕೋರಿದ ನಂತರ, ಉತ್ತರ ಪ್ರದೇಶ ಸರ್ಕಾರವು ಜೂನ್ 13 ರಂದು ಮೂರು ಸದಸ್ಯರ ಎಸ್‌ಐಟಿ (ವಿಶೇಷ ತನಿಖಾ ತಂಡ) ಯನ್ನು ರಚಿಸಿತು. ದೇಣಿಗೆಗಳನ್ನು ಹೇಗೆ ಸಂಗ್ರಹಿಸಲಾಗುತ್ತಿದೆ, ಹೇಗೆ ಎಣಿಕೆ ಮಾಡಲಾಗುತ್ತಿದೆ ಮತ್ತು ಭದ್ರತೆ ಹೇಗಿದೆ ಎಂಬುದನ್ನು ಪರಿಶೀಲಿಸುವ ಜತೆಗೆ, ಕಾಣೆಯಾಗಿದೆ ಎನ್ನಲಾದ ನಗದು ಮತ್ತು ಬೆಲೆಬಾಳುವ ವಸ್ತುಗಳ ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಈ ತಂಡಕ್ಕೆ ನೀಡಲಾಗಿತ್ತು.

ಜೂನ್ 23: ಮೊದಲ ವರದಿ ಸಲ್ಲಿಕೆ

SIT ರಚನೆಯಾದ ಹತ್ತು ದಿನಗಳ ನಂತರ, ತಂಡವು ತನ್ನ ಪ್ರಾಥಮಿಕ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತು. ಸಿಸಿಟಿವಿ ದೃಶ್ಯಾವಳಿಗಳು, ಹಣಕಾಸಿನ ದಾಖಲೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿದ ನಂತರ, 45 ದಿನಗಳ ಅವಧಿಯಲ್ಲಿ ಆರು ಜನ ಆರೋಪಿಗಳು ಸೇರಿ ಸುಮಾರು 70 ಸಂಶಯಾಸ್ಪದ ಕಳ್ಳತನಗಳನ್ನು ಎಸಗಿದ್ದಾರೆ ಎಂಬುದಕ್ಕೆ ಪ್ರಾಥಮಿಕ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದರು. ಇದು ವ್ಯವಸ್ಥಿತವಾಗಿ ನಡೆದಿರುವ ಲೋಪ ಎಂದು ವರದಿ ಬೆಟ್ಟುಮಾಡಿದೆ.

ಎಸ್‌ಐಟಿ (SIT) ತನಿಖೆಯ 5 ಪ್ರಮುಖ ಅಂಶಗಳು:
1. ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ಸರಣಿ ನಗದು ಕಳ್ಳತನ

ಏಪ್ರಿಲ್ 27 ರಿಂದ ಜೂನ್ ಮೊದಲ ವಾರದವರೆಗಿನ ದೇಣಿಗೆ ಎಣಿಕೆ ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಎಸ್‌ಐಟಿಗೆ ಮೊದಲ ದೊಡ್ಡ ಬ್ರೇಕ್‌ಥ್ರೂ ಸಿಕ್ಕಿತು. ಹಣವನ್ನು ಎಣಿಕೆ ಮಾಡುವ ಸಿಬ್ಬಂದಿಯೇ ಕರೆನ್ಸಿ ನೋಟುಗಳ ಕಟ್ಟುಗಳನ್ನು ಮತ್ತು ಚಿಲ್ಲರೆ ಹಣವನ್ನು ರಹಸ್ಯವಾಗಿ ಬಚ್ಚಿಡುತ್ತಿರುವುದು ಸಿಸಿಟಿವಿಯಲ್ಲಿ ಪದೇ ಪದೇ ಕಂಡುಬಂದಿದೆ. ಇದು ಅನಿರೀಕ್ಷಿತವಾಗಿ ನಡೆದ ಕಳ್ಳತನವಲ್ಲ, ಬದಲಿಗೆ ನಿರಂತರವಾಗಿ ನಡೆದುಕೊಂಡು ಬಂದಿರುವ ದಂಧೆ ಎಂಬುದು ಸಾಬೀತಾಯಿತು.

ಆದರೆ ಇಲ್ಲಿ ಮತ್ತೊಂದು ಆತಂಕಕಾರಿ ವಿಷಯ ಬೆಳಕಿಗೆ ಬಂದಿದ್ದು, ಈ ಹಿಂದೆ ನಡೆದ ಆಡಿಟ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಕನಿಷ್ಠ 180 ದಿನಗಳವರೆಗೆ ಸುರಕ್ಷಿತವಾಗಿಡಬೇಕು ಎಂದು ಶಿಫಾರಸು ಮಾಡಲಾಗಿತ್ತು. ಆದರೆ ಇಲ್ಲಿ ಕೇವಲ 45 ದಿನಗಳ ದೃಶ್ಯಗಳು ಮಾತ್ರ ಲಭ್ಯವಿದ್ದವು, ಬಾಕಿ ಉಳಿದ ಹಳೆಯ ದೃಶ್ಯಗಳು ಡಿಲೀಟ್ ಆಗಿದ್ದವು. ಇದರಿಂದಾಗಿ ಇದಕ್ಕಿಂತ ಮುಂಚೆಯೂ ಇಂತಹ ಕಳ್ಳತನಗಳು ನಡೆದಿದ್ದವೇ ಎಂಬುದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳಿಗೆ ಸಾಧ್ಯವಾಗಿಲ್ಲ.

2. ದುರ್ಬಲ ಮೇಲ್ವಿಚಾರಣೆ (Weak Supervision)

ಕಳ್ಳತನದ ಮಾದರಿಯನ್ನು ಪತ್ತೆಹಚ್ಚಿದ ನಂತರ, ಎಣಿಕೆ ಪ್ರಕ್ರಿಯೆಯ ಮೇಲ್ವಿಚಾರಣೆಯ ಹೊಣೆ ಯಾರದ್ದಾಗಿತ್ತು ಎಂಬುದನ್ನು ಎಸ್‌ಐಟಿ ಪರಿಶೀಲಿಸಿತು. ಯಾವುದೇ ಲಿಖಿತ ಅನುಮತಿಯಿಲ್ಲದೆ ರಾಮ್ ಶಂಕರ್ ಯಾದವ್ ಅಲಿಯಾಸ್ ತಿನ್ನು ಎಂಬ ವ್ಯಕ್ತಿ ದೇಣಿಗೆ ಪೆಟ್ಟಿಗೆಯ (ಹುಂಡಿ) ಕೀಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದು ಹೇಗೆ ಎಂದು ವರದಿ ಪ್ರಶ್ನಿಸಿದೆ. ಅಲ್ಲದೆ, ಎಣಿಕೆ ಕೊಠಡಿಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಸುಭಾಷ್ ಶ್ರೀವಾಸ್ತವ ಅವರು ಈ ನಿಯಮಬಾಹಿರ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿರುವುದನ್ನು ವರದಿ ತಪ್ಪು ಎಂದು ಹೇಳಿದೆ.

ಹಣಕಾಸಿನ ವಿಷಯಗಳನ್ನು ನೋಡಿಕೊಳ್ಳುತ್ತಿದ್ದ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜೊತೆಗೂಡಿ ದೇಣಿಗೆ ಎಣಿಕೆಯ ನಿಯಮಾವಳಿಗಳನ್ನು ರೂಪಿಸಿದ್ದ ಹಿರಿಯ ಟ್ರಸ್ಟಿ ಅನಿಲ್ ಮಿಶ್ರಾ ಅವರತ್ತ ತನಿಖೆ ತಿರುಗಿತು. ಅಕ್ರಮಗಳ ಸುಳಿವು ಸಿಕ್ಕ ಮೇಲೂ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಥವಾ ಮರುಪರಿಶೀಲಿಸಲು ಅನಿಲ್ ಮಿಶ್ರಾ ವಿಫಲರಾಗಿದ್ದಾರೆ ಎಂದು ಎಸ್‌ಐಟಿ ಹೇಳಿದೆ.

3. ಗಂಭೀರ ಭದ್ರತಾ ಲೋಪಗಳು

ಎಣಿಕೆ ಕೊಠಡಿಯನ್ನು ರಕ್ಷಿಸಲು ಇದ್ದ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಕೊಠಡಿಯೊಳಗೆ ಹೋಗುವ ಮತ್ತು ಹೊರಬರುವ ಸಿಬ್ಬಂದಿಯನ್ನು ಸರಿಯಾಗಿ ತಪಾಸಣೆ (Frisking) ಮಾಡುತ್ತಿರಲಿಲ್ಲ. ನಿಗದಿಪಡಿಸಿದ ಸಮವಸ್ತ್ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ ಮತ್ತು ಸೂಕ್ಷ್ಮ ಪ್ರದೇಶಗಳಿಗೆ ಸಿಬ್ಬಂದಿ ತಮ್ಮ ವೈಯಕ್ತಿಕ ವಸ್ತುಗಳನ್ನು ಕೊಂಡೊಯ್ಯುವುದನ್ನು ತಡೆಯುವಲ್ಲಿ ಭದ್ರತಾ ವಿಭಾಗ ವಿಫಲವಾಗಿತ್ತು.

ಅದರಲ್ಲೂ ಸೆಪ್ಟೆಂಬರ್ 2024 ರ ನಿಯಮಾವಳಿ ಪ್ರಕಾರ ಎಣಿಕೆ ಕೊಠಡಿಗೆ ಬರುವ ಮತ್ತು ಹೋಗುವ ಪ್ರತಿಯೊಬ್ಬರನ್ನೂ ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಬೇಕಿತ್ತು. ಆದರೆ ಫೆಬ್ರವರಿ 2025 ರಲ್ಲಿ ಈ ನಿಯಮವನ್ನು ಬದಲಾಯಿಸಿ ಕೇವಲ ‘ಯಾಂತ್ರಿಕ’ (Random/Periodic) ತಪಾಸಣೆ ನಡೆಸಿದರೆ ಸಾಕು ಎಂದು ಸಡಿಲಗೊಳಿಸಲಾಯಿತು.ತನಿಖಾಧಿಕಾರಿಗಳ ಪ್ರಕಾರ, ಆ ಸಡಿಲವಾದ ತಪಾಸಣೆಯನ್ನೂ ಸಹ ಸರಿಯಾಗಿ ಮಾಡಲಾಗಿರಲಿಲ್ಲ. ಇದು ಮೂರನೇ ಪ್ರಮುಖ ಭದ್ರತಾ ಲೋಪವಾಗಿದೆ.

4. ಎಣಿಕೆ ಪ್ರಕ್ರಿಯೆಯಲ್ಲಿದ್ದ ದೋಷಗಳು

ದೇಣಿಗೆ ಹಣ ಎಣಿಕೆ ಕೊಠಡಿಯೊಳಗೆ ಬಂದ ನಂತರ ಅದನ್ನು ನಿರ್ವಹಿಸುವ ವಿಧಾನದಲ್ಲೂ ದೋಷವಿತ್ತು. ಪ್ರತಿ ಹುಂಡಿಯಿಂದ ಬಂದ ಹಣವನ್ನು ಪ್ರತ್ಯೇಕವಾಗಿ ದಾಖಲಿಸುವ ಬದಲು, ಎಣಿಕೆಗೆ ಮುಂಚಿತವಾಗಿ ವಿವಿಧ ಪೆಟ್ಟಿಗೆಗಳ ಹಣವನ್ನು ಒಟ್ಟಿಗೆ ಮಿಶ್ರಣ ಮಾಡಲಾಗುತ್ತಿತ್ತು. ಅಲ್ಲದೆ, ಯಾವ ಪೆಟ್ಟಿಗೆಯನ್ನು ಸಾಗಿಸಲಾಗಿದೆ, ಯಾವುದನ್ನು ಎಣಿಕೆ ಮಾಡಲಾಗಿದೆ ಅಥವಾ ಯಾವುದು ಇನ್ನೂ ಬಾಕಿ ಇದೆ ಎಂಬುದನ್ನು ಟ್ರ್ಯಾಕ್ ಮಾಡಲು ಯಾವುದೇ ವಿಶ್ವಾಸಾರ್ಹ ವ್ಯವಸ್ಥೆ ಇರಲಿಲ್ಲ. ಇದು ಪಾರದರ್ಶಕತೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿದೆ.

5. ಸಾಂಸ್ಥಿಕ ವೈಫಲ್ಯ

ತನಿಖೆಯ ಅಂತಿಮ ಹಂತದಲ್ಲಿ, ಈ ಕಳ್ಳತನಗಳು ಕೇವಲ ಕೆಲವು ವ್ಯಕ್ತಿಗಳಿಂದಾಗಿದೆಯೇ ಅಥವಾ ಇಡೀ ಸಂಸ್ಥೆಯ ವ್ಯವಸ್ಥೆಯೇ ವಿಫಲವಾಗಿದೆಯೇ ಎಂದು ಎಸ್‌ಐಟಿ ಪರಿಶೀಲಿಸಿತು. ಹಣದ ಎಣಿಕೆಯ ಸಂದರ್ಭದಲ್ಲಿ ಬ್ಯಾಂಕ್ ಪ್ರತಿನಿಧಿಗಳು ಉಪಸ್ಥಿತರಿದ್ದರೂ, ಸಿಬ್ಬಂದಿ ರೊಟೇಷನ್ ಮತ್ತು ಅನುಸರಣೆ ಪರಿಶೀಲನೆ ಸೇರಿದಂತೆ ಒಪ್ಪಿಕೊಂಡ ಭದ್ರತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದ ಬ್ಯಾಂಕ್ ಅಧಿಕಾರಿಗಳ ಲೋಪವನ್ನು ಎಸ್‌ಐಟಿ ಎತ್ತಿ ತೋರಿಸಿದೆ.

ಆರೋಪಿಗಳ ಕಡೆಯಿಂದ ವಶಪಡಿಸಿಕೊಂಡ ನಗದು, ಬೆಲೆಬಾಳುವ ವಸ್ತುಗಳು ಮತ್ತು ಅವರ ಆದಾಯಕ್ಕೆ ಮೀರಿದ ಬ್ಯಾಂಕ್ ಠೇವಣಿಗಳನ್ನು ನೋಡಿದರೆ, ಈ ಕಳ್ಳತನ ಸಿಸಿಟಿವಿ ಲಭ್ಯವಿರುವ 45 ದಿನಗಳಿಗಿಂತಲೂ ಹಿಂದಿನಿಂದಲೂ ನಡೆದಿರಬಹುದು ಎಂಬ ಬಲವಾದ ಅನುಮಾನ ತನಿಖಾಧಿಕಾರಿಗಳಿಗೆ ಬಂದಿದೆ. ಆದರೆ ಹಳೆಯ ಸಿಸಿಟಿವಿ ದೃಶ್ಯಗಳು ಲಭ್ಯವಿಲ್ಲದ ಕಾರಣ ಒಟ್ಟು ನಷ್ಟದ ನಿಖರ ಪ್ರಮಾಣವನ್ನು ಅಂದಾಜಿಸಲು ಸಾಧ್ಯವಾಗಿಲ್ಲ.

ಬೆಳ್ಳಿ ಇಟ್ಟಿಗೆಗಳ ನಾಪತ್ತೆ ಆರೋಪ ಸುಳ್ಳು:

ಇದೇ ವೇಳೆ, ಭಕ್ತರು ನೀಡಿದ್ದ ಕೋಟ್ಯಂತರ ಮೌಲ್ಯದ ಬೆಳ್ಳಿ ಇಟ್ಟಿಗೆಗಳು ಮತ್ತು ಬೆಳ್ಳಿಯ ವಸ್ತುಗಳು ನಾಪತ್ತೆಯಾಗಿವೆ ಎಂಬ ಆರೋಪಗಳನ್ನೂ ಎಸ್‌ಐಟಿ ಪರಿಶೀಲಿಸಿತು. ಆದರೆ, ಭೌತಿಕ ಪರಿಶೀಲನೆ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರ, ಬೆಳ್ಳಿಯ ಇಟ್ಟಿಗೆಗಳು ಮತ್ತು ಇತರ ಬೆಲೆಬಾಳುವ ವಸ್ತುಗಳು ಸುರಕ್ಷಿತವಾಗಿವೆ ಮತ್ತು ಅವುಗಳ ಲೆಕ್ಕ ಸರಿಯಾಗಿದೆ ಎಂದು ವರದಿ ಸ್ಪಷ್ಟಪಡಿಸಿದೆ. ಆ ಮೂಲಕ ಬೆಳ್ಳಿ ನಾಪತ್ತೆ ಆರೋಪಗಳು ಸುಳ್ಳು ಎಂದು ಸಾಬೀತಾಗಿದೆ.

ಈ ಪ್ರಾಥಮಿಕ ವರದಿಯನ್ನು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಮುಂದೆ ಮಂಡಿಸಿದ ತಕ್ಷಣ, ಟ್ರಸ್ಟ್ ಪ್ರಮುಖ ನಿರ್ಧಾರ ಕೈಗೊಂಡು ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ರಾಜೀನಾಮೆಗಳನ್ನು ಸ್ವೀಕರಿಸಿತು. ಇದರೊಂದಿಗೆ ಭದ್ರತಾ ಲೋಪ ಮತ್ತು ಕಳ್ಳತನಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣರಾದ ಮೇಲ್ವಿಚಾರಕ ಸಿಬ್ಬಂದಿ ಹಾಗೂ ಇತರರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ಎಸ್‌ಐಟಿ ಶಿಫಾರಸು ಮಾಡಿದೆ. ಸದ್ಯಕ್ಕೆ ತನಿಖೆ ಮುಂದುವರಿದಿದ್ದು, ಈ ಪ್ರಾಥಮಿಕ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳು ಜರುಗಲಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬರುಯಿಪುರ ಅತ್ಯಾಚಾರ-ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಎನ್‌ಕೌಂಟರ್; ‘ನನ್ನ ಮಗನ ಶವ ನನಗೆ ಬೇಡ’ ಎಂದ ಹೆತ್ತ ತಾಯಿ!

ಬರುಯಿಪುರ/ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕ್ರೂರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ್ ಮೊಂಡೋಲ್ ಬುಧವಾರ...

ವಯನಾಡ್ ಭೂಕುಸಿತ: ಕಾಣೆಯಾದ ಐವರಿಗಾಗಿ ಮುಂದುವರೆದ ಹುಡುಕಾಟ

ಬೆಟ್ಟದ ಜಿಲ್ಲೆಯ ವಯನಾಡ್‌ನಲ್ಲಿ ನಡೆಯುತ್ತಿರುವ ಸುರಂಗ ರಸ್ತೆ ನಿರ್ಮಾಣ ಸ್ಥಳದಲ್ಲಿ ಭೂಕುಸಿತ ಸಂಭವಿಸಿ ಮೂರು ಜೀವಗಳು ಬಲಿಯಾದ ಒಂದು ದಿನದ ನಂತರ, ಕಾಣೆಯಾಗಿರುವ ಐವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ವಯನಾಡ್...

ನನ್ನನ್ನು ಕೊಂಡುಕೊಳ್ಳಲು ಯಾರ ಕೈಲೂ ಸಾಧ್ಯವಿಲ್ಲ: ಮಹುವಾ ಮೋಯಿತ್ರಾ ವಿಶೇಷ ಸಂದರ್ಶನ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಯಭೇರಿ ಬಾರಿಸಿದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಧೂಳೀಪಟವಾಗಿದೆ. ಚುನಾವಣಾ ಸೋಲಿನ ನಂತರ ಸಾಲು...

ಕೋರ್ಟ್ ರಾಜಕೀಯ ಅಖಾಡ ಅಲ್ಲ: ಸಿಎಂ ವಿಜಯ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಡಿಎಂಕೆಗೆ ಸುಪ್ರೀಂ ತರಾಟೆ

ತಮಿಳುನಾಡಿನ ಕರೂರ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡದಂತೆ ಮುಖ್ಯಮಂತ್ರಿ ವಿಜಯ್ ಅವರಿಗೆ ನಿರ್ಬಂಧ ಹೇರಬೇಕೆಂದು ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಜನರಿಂದ...

ಸುರಂಗ ರಸ್ತೆ ಕಾಮಗಾರಿ ವೇಳೆ ವಯನಾಡಿನಲ್ಲಿ ಭೂಕುಸಿತ: ಜನರು ಜೀವ ಉಳಿಸಿಕೊಳ್ಳಲು ಓಡಿದ ಭಯಾನಕ ದೃಶ್ಯ ಸೆರೆ

ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿಯಲ್ಲಿ ಮಂಗಳವಾರ (ಇಂದು) ಭೀಕರ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದ್ದು, ಈ...

ಒಟಿಟಿಗೆ ಬಂದ ಎರಡೇ ದಿನಕ್ಕೆ ದಿಲ್ಜಿತ್ ದೋಸಾಂಜ್ ನಟನೆಯ ‘ಸಟ್ಲಜ್’ ಸಿನಿಮಾ ಔಟ್! ಜೀ5 ವಿರುದ್ಧ ಆಕ್ರೋಶ, ಕಾನೂನು ಹೋರಾಟದ ಭರವಸೆ

ತೀವ್ರ ವಿವಾದ ಹಾಗೂ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗದ ನಡುವೆಯೂ ಕೊನೆಗೂ ಒಟಿಟಿ ಪರದೆಯ ಮೇಲೆ ಬಿಡುಗಡೆಯಾಗಿದ್ದ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ 'ಸಟ್ಲಜ್' (ಮೂಲ ಶೀರ್ಷಿಕೆ: ಪಂಜಾಬ್ 95) ಚಿತ್ರವನ್ನು...

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...