ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ ‘ಪಬ್ಲಿಕ್ ಟಿವಿ’ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ದೂರು ದಾಖಲಾಗಿದೆ.
ಮೈಸೂರು ನಿವಾಸಿಗಳಾದ ಕೆ.ಟಿ. ರಮೇಶ್ ಮತ್ತು ಮನೋಜ್ ಕುಮಾರ್ ಅವರು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಈ ಕುರಿತು ಅಧಿಕೃತ ದೂರು ನೀಡಿದ್ದು, ಮಾಧ್ಯಮದ ಹೆಸರಿನಲ್ಲಿ ಬಹಿರಂಗವಾಗಿ ಜಾತಿವಾದಿ ಪೂರ್ವಾಗ್ರಹ ಬಿತ್ತಿರುವ ನಿರೂಪಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜುಲೈ 25ರಂದು ಪ್ರಸಾರವಾದ ಪಬ್ಲಿಕ್ ಟಿವಿಯ ‘ಬಿಗ್ ಬುಲೆಟಿನ್’ ಕಾರ್ಯಕ್ರಮದಲ್ಲಿ ದೆಹಲಿಯ ವಿದ್ಯಾರ್ಥಿ ಯುವಜನರ ಪ್ರತಿಭಟನೆ ಕುರಿತು ಮಾತನಾಡುತ್ತಾ, ನಿರೂಪಕ ಅರುಣ್ ಬಡಿಗೇರ್ ಅವರು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಇತರ ಹಿಂದುಳಿದ ವರ್ಗಗಳಿಗೆ (OBC) ನೀಡಿರುವ ಸಂವಿಧಾನಬದ್ಧ ಮೀಸಲಾತಿ ವ್ಯವಸ್ಥೆ ಬಗ್ಗೆ ಅತ್ಯಂತ ತುಚ್ಛವಾಗಿ ಮಾತನಾಡಿದ್ದರು.
ಈ ವೀಡಿಯೊ ‘ಪಬ್ಲಿಕ್ ಟಿವಿ’ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಆಗಿದ್ದು, ವೀಡಿಯೊದ 00:05:36 ರಿಂದ 00:06:23ರ ಅವಧಿಯಲ್ಲಿ ಅರುಣ್ ಬಡಿಗೇರ್ ಮೀಸಲಾತಿ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸಿದ್ದರು.
ನಿರೂಪಕನ ಹೇಳಿಕೆ:
ಮೀಸಲಾತಿಯಲ್ಲಿ ಶಿಕ್ಷಣ ಪಡೆದುಕೊಂಡು 50-60% ಅಂಕ ಪಡೆದವರೆಲ್ಲ, ಮೀಸಲಾತಿ ಅಡಿಯಲ್ಲಿ ಶಿಕ್ಷಕರಾಗಿ ಪಾಠ ಮಾಡೋಕೆ ಹೋದ್ರೆ, ವಿದ್ಯಾರ್ಥಿಗಳು ಏನು ಕಲಿತಾವೆ? ನಾಳೆ ಶಿಕ್ಷಣದಲ್ಲಿ ಅದೇ ವಿಚಾರದಲ್ಲಿ ಅವನು 50-60% ಮಾಡಿದವರನ್ನೆಲ್ಲ ಮೇಲ್ಗಡೆಗೆ ಹೋಗಿ ಮೀಸಲಾತಿ ಅಡಿಯಲ್ಲಿ ಬೇರೆ ಬೇರೆ ಪ್ರಮೋಷನ್ ತಗೊಳ್ತಾ ಹೋದ್ರೆ, ಕೆಲಸಗಳು ಹೇಗೆ ಆಗುತ್ತವೆ? ಡಾಕ್ಟರೇ ಹೇಗೆ ಆಗ್ತಾನೆ ಅವನು? ಇಂಜಿನಿಯರ್ ಹೇಗೆ ಆಗ್ತಾನೆ? ಎಲ್ಲ ಕಡೆಯೂ ಮೀಸಲಾತಿ ಅಂತಿದ್ರೆ, ಮೀಸಲಾತಿ ವಿಚಾರದಲ್ಲಿ ಕ್ವಾಲಿಟಿ ಅನ್ನೋದೇ ಇಲ್ಲ. ಮೌಲ್ಯಗಳೇ ಇಲ್ಲದೆ ಇರುವಂತವರು ಪಾಠ ಮಾಡುವ ಪರಿಸ್ಥಿತಿಗೆ ಬರ್ತಾ ಇದೆ. ಎಂದು ನಿರೂಪಕ ಅರುಣ್ ಬಡಿಗೇರ್ ಪ್ರಚೋದನಕಾರಿ ಹಾಗೂ ಪೂರ್ವಾಗ್ರಹ ಪೀಡಿತ ಹೇಳಿಕೆಯನ್ನು ದೂರುದಾರರು ತೀವ್ರವಾಗಿ ಖಂಡಿಸಿದ್ದಾರೆ.
“ಅರುಣ್ ಬಡಿಗೇರ್ ಅವರ ಈ ಹೇಳಿಕೆಗಳು ಶತಶತಮಾನಗಳ ಶೋಷಣೆಯ ನಂತರ ಸಂವಿಧಾನಬದ್ಧ ಮೀಸಲಾತಿ ಪಡೆದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಪಡೆದಿರುವ ಶೂದ್ರ-ಅತಿಶೂದ್ರ ಸಮುದಾಯಗಳ ಅರ್ಹತೆ ಮತ್ತು ಸಾಮರ್ಥ್ಯವನ್ನು ಸಾರ್ವಜನಿಕವಾಗಿ ಪ್ರಶ್ನಿಸುವಂತಿವೆ. ಮೀಸಲಾತಿ ಪಡೆಯುವ ಬಹುಜನ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗ ಪಡೆಯುವ ಯೋಗ್ಯತೆಯೇ ಇಲ್ಲ ಎನ್ನುವಂತೆ ಮಾತನಾಡಿರುವುದು ಮಾಧ್ಯಮ ಧರ್ಮಕ್ಕೆ ಎಸಗಿದ ದ್ರೋಹ. ಇದು ಸಮಾಜದಲ್ಲಿ ದ್ವೇಷ ಮತ್ತು ಜಾತಿವಾದಿ ಪೂರ್ವಾಗ್ರಹವನ್ನು ಹುಟ್ಟುಹಾಕುವ ಆಪಾಯಕಾರಿ ಯತ್ನವಾಗಿದೆ ಎಂದು ದೂರುದಾರರಾದ ಕೆ.ಟಿ. ರಮೇಶ್ ಮತ್ತು ಮನೋಜ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದಿರುವ ಮತ್ತು ಬಹುಜನ ಸಮುದಾಯಗಳನ್ನು ನಿಂದಿಸಿರುವ ಅರುಣ್ ಬಡಿಗೇರ್ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ನಗರ ಪೊಲೀಸ್ ಆಯುಕ್ತರನ್ನು ಅವರು ಆಗ್ರಹಿಸಿದ್ದಾರೆ.


