ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್ ಫೋನ್ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು ಆರೋಪಿಸಲಾಗಿದೆ. ನಿರಂತರ ಆನ್ಲೈನ್ ಕಿರುಕುಳ, ಬೆದರಿಕೆಗಳು ಮತ್ತು ಸಾಮಾಜಿಕ ಒತ್ತಡವನ್ನು ಎದುರಿಸುತ್ತಿರುವುದಾಗಿ ಆಕೆಯ ಕುಟುಂಬ ನೋವು ತೋಡಿಕೊಂಡಿದೆ.
ನಿಶು ಅವರ ತಂದೆ ಸಂಜಯ್ ಕುಮಾರ್ ಅವರು, “ತಮ್ಮ ಕುಟುಂಬದ ಸದಸ್ಯರ ಮೊಬೈಲ್ ಫೋನ್ಗಳಿಗೆ ನಿಂದನಾತ್ಮಕ ಸಂದೇಶಗಳು, ಅಸಭ್ಯ ಭಾಷೆ ಮತ್ತು ಬೆದರಿಕೆಗಳು ಬರುತ್ತಿವೆ. ಅಪ್ರಾಪ್ತೆಯಾಗಿರುವ ನಿಶು ಮತ್ತು ಕುಟುಂಬದ ಇತರ ಸದಸ್ಯರನ್ನು ಗುರಿಯಾಗಿಸಲಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.
ಈ ಸಮಸ್ಯೆಯು ಕೇವಲ ಸಾಮಾಜಿಕ ಜಾಲತಾಣಗಳ ಟ್ರೋಲಿಂಗ್ಗಿಂತ ಆಚೆಗೂ ಸಾಗಿದ್ದು, ಆರ್ಥಿಕ ಒತ್ತಡವನ್ನೂ ಸೃಷ್ಟಿಸಿದೆ ಎಂದು ಕುಟುಂಬ ಹೇಳಿದೆ.
“ನಿಶು ಕುಟುಂಬದ ಹಲವು ನಂಬರ್ಗಳಿಗೆ ಬೆದರಿಕೆ ಸಂದೇಶ”
ಬೆದರಿಕೆಗಳಿಗೆ ಸಂಬಂಧಿಸಿದ ಹಲವಾರು ಮೊಬೈಲ್ ಸಂಖ್ಯೆಗಳಿಂದ ಬಂದಿರುವ ಸಂದೇಶಗಳು, ಕಾಲ್ ರೆಕಾರ್ಡ್ಗಳು ಮತ್ತು ಸ್ಕ್ರೀನ್ಶಾಟ್ಗಳೊಂದಿಗೆ ಡಿಜಿಟಲ್ ಸಾಕ್ಷ್ಯವಾಗಿ ಸಂರಕ್ಷಿಸಲಾಗಿದೆ ಎಂದು ಸಂಜಯ್ ಕುಮಾರ್ ತಿಳಿಸಿದ್ದಾರೆ.
ಈ ವಿಷಯವನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸುವಂತೆ, ಜವಾಬ್ದಾರರನ್ನು ಗುರುತಿಸಿ ಕಾನೂನಿನನ್ವಯ ಕ್ರಮಕೈಗೊಳ್ಳುವಂತೆ ಅವರು ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆಯೂ ಅವರು ಕೋರಿದ್ದಾರೆ.
ಕೆಲವರು ತನ್ನ ಆರೋಪಗಳನ್ನು ಪ್ರಶ್ನಿಸುತ್ತಿದ್ದರೂ, ತನಗೆ ನಿಂದನಾತ್ಮಕ ಸಂದೇಶಗಳು ಮತ್ತು ಬೆದರಿಕೆಗಳು ಬರುವುದು ಮುಂದುವರೆದಿದೆ ಎಂದು ನಿಶು ಹೇಳಿದ್ದಾರೆ.
“ಕೆಲ ವ್ಯಕ್ತಿಗಳು ಫೋನ್ ಕರೆಗಳು ಮತ್ತು ಸಂದೇಶಗಳ ಮೂಲಕ ನನ್ನೊಂದಿಗೆ ಇಂತಹ ನಿಂದನಾತ್ಮಕ ಮತ್ತು ಅಸಭ್ಯ ಭಾಷೆಯನ್ನು ಬಳಸಬಹುದಾದರೆ, ನಾನು ಎಂದಾದರೂ ಅವರೊಂದಿಗೆ ನೇರವಾಗಿ ಮುಖಾಮುಖಿಯಾದರೆ ನನ್ನ ಸುರಕ್ಷತೆಯ ಬಗ್ಗೆ ನನಗೆ ಸ್ವಾಭಾವಿಕವಾಗಿಯೇ ಆತಂಕವಾಗುತ್ತದೆ” ಎಂದು ಅವರು ಹೇಳಿದ್ದಾರೆ ಎಂದು ‘ದಿ ಮೂಕ್ನಾಯಕ್’ ವರದಿ ಮಾಡಿದೆ.
ಬ್ಯಾಂಕ್ ಖಾತೆ ಸ್ಥಗಿತ: ನಿಶು ಆರೋಪ
ತಮ್ಮ ತಂದೆಯ ಬ್ಯಾಂಕ್ ಖಾತೆಯ ತನಿಖೆಗೆ ಕೆಲವರು ಒತ್ತಾಯಿಸಿದ ನಂತರ ತಮ್ಮ ಕುಟುಂಬವು ಆರ್ಥಿಕ ಒತ್ತಡವನ್ನು ಎದುರಿಸಬೇಕಾಯಿತು ಎಂದೂ ನಿಶು ಆರೋಪಿಸಿದ್ದಾರೆ.
ಅವರ ಪ್ರಕಾರ, ಅದೇ ವ್ಯಕ್ತಿಗಳಲ್ಲಿ ಕೆಲವರು ನಂತರ ಸೈಬರ್ ಅಪರಾಧ ದೂರು ದಾಖಲಿಸಿದ್ದಾರೆ, ಇದರ ಪರಿಣಾಮವಾಗಿ ಕುಟುಂಬವು ಬಳಸುತ್ತಿದ್ದ ಎಸ್ಬಿಐ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಕುಟುಂಬಕ್ಕೆ ಬೆಂಬಲ ನೀಡುವವರಿಂದ ಈ ಖಾತೆಗೆ ಆರ್ಥಿಕ ನೆರವು ಬರುತ್ತಿತ್ತು ಎಂದು ಅವರು ಹೇಳಿದ್ದಾರೆ.
ತಮ್ಮ ಕುಟುಂಬದ ಮೇಲೆ ಮಾನಸಿಕ ಮತ್ತು ಆರ್ಥಿಕ ಒತ್ತಡ ಹೇರುವ ಮತ್ತೊಂದು ಪ್ರಯತ್ನವಾಗಿ ಈ ಕೃತ್ಯ ನಡೆದಿದೆ ಎಂದು ನಿಶು ಬಣ್ಣಿಸಿದ್ದಾರೆ.


