Homeಮುಖಪುಟಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

- Advertisement -
- Advertisement -

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿದ್ದು, 6.6 ಕೋಟಿಗೂ ಹೆಚ್ಚು ನೋಂದಣಿಗಳನ್ನು ನಿರ್ವಹಿಸಿದೆ. ಕೇವಲ 2026ರ ಒಂದೇ ವರ್ಷದಲ್ಲೇ 12 ಪರೀಕ್ಷೆಗಳನ್ನು ನಡೆಸಿ 65 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ನೋಂದಣಿಯನ್ನು ಕೈಗೆತ್ತಿಕೊಂಡಿದೆ.

ಪಾರದರ್ಶಕ ಮತ್ತು ನ್ಯಾಯಸಮ್ಮತ ಪರೀಕ್ಷೆಗಳನ್ನು ನಡೆಸಿ ಅರ್ಹ ವಿದ್ಯಾರ್ಥಿಗಳನ್ನು ಅತ್ಯುತ್ತಮ ಸಂಸ್ಥೆಗಳಿಗೆ ತಲುಪಿಸುವುದೇ ತನ್ನ ಮೂಲ ಗುರಿ ಎಂದು ಎನ್‌ಟಿಎ ಹೇಳಿಕೊಳ್ಳುತ್ತದೆ. ಆದರೆ, ಮಾಹಿತಿ ಹಕ್ಕು ಕಾಯ್ದೆ, ಸಂಸತ್ತಿನ ಅಧಿಕೃತ ವರದಿಗಳು ಮತ್ತು ಸಂಸದೀಯ ಕಾಯಂ ಸಮಿತಿಗಳ ಸಂಶೋಧನೆಗಳು ತೆರೆದಿಡುವ ಸತ್ಯವೇ ಬೇರೆಯಾಗಿದೆ. ಹಳಹಿಡಿದ ಆಡಳಿತ ವ್ಯವಸ್ಥೆ, ಕಾಗದದಲ್ಲಷ್ಟೇ ಉಳಿದ ನಿಯಮಗಳು, ಖಾಲಿ ಹುದ್ದೆಗಳು ಮತ್ತು ಸಂಸತ್ತಿಗೆ ನೀಡುವ ಮಾಹಿತಿಗೂ ಆರ್‌ಟಿಐ ಮೂಲಕ ಸಿಗುವ ಉತ್ತರಕ್ಕೂ ಇರುವ ಅಂತರವನ್ನು ಈ ದಾಖಲೆಗಳು ಸ್ಪಷ್ಟವಾಗಿ ಬಯಲುಮಾಡುತ್ತಿವೆ.

ಈ ಬೃಹತ್ ಸಂಸ್ಥೆಯ ಸರ್ವೋಚ್ಚ ಆಡಳಿತ ಮಂಡಳಿಯಾದ ‘ಗವರ್ನಿಂಗ್ ಬಾಡಿ’ಯ ಕಾರ್ಯವೈಖರಿಯೇ ಸಂಸ್ಥೆಯ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಆರ್‌ಟಿಐ ನೀಡಿದ ಮಾಹಿತಿಯ ಪ್ರಕಾರ, 2024ರ ಜನವರಿಯಿಂದ 2026ರ ಜೂನ್‌ವರೆಗಿನ 30 ತಿಂಗಳ ಸುದೀರ್ಘ ಅವಧಿಯಲ್ಲಿ ಈ ಆಡಳಿತ ಮಂಡಳಿ ಸಭೆ ಸೇರಿದ್ದು ಕೇವಲ ಎರಡೇ ಎರಡು ಬಾರಿ. ಲಕ್ಷಾಂತರ ಯುವಕರ ಭವಿಷ್ಯವನ್ನು ಬೀದಿಗೆ ತಳ್ಳಿದ ನೀಟ್ (NEET-UG) ಪರೀಕ್ಷೆ ರದ್ದಾದ ನಂತರ ಮತ್ತು ದೇಶಾದ್ಯಂತ ವಿದ್ಯಾರ್ಥಿ ಪ್ರತಿಭಟನೆಗಳು ಭುಗಿಲೆದ್ದು ಶಿಕ್ಷಣ ಸಚಿವರೇ ರಾಜೀನಾಮೆ ನೀಡುವಂತ ವಾತಾವರಣ ಸೃಷ್ಟಿಯಾದಾಗಲೂ ಈ ಆಡಳಿತ ಮಂಡಳಿ ಒಂದೇ ಒಂದು ಅತ್ಯಂತ ತುರ್ತು ಸಭೆಯನ್ನೂ ನಡೆಸಲಿಲ್ಲ. ಅದಕ್ಕಿಂತಲೂ ಮಿಗಿಲಾಗಿ, ಈ ಸಭೆಗಳಲ್ಲಿ ಏನು ಚರ್ಚಿಸಲಾಯಿತು ಎನ್ನುವ ಸಭೆಯ ನಡಾವಳಿಗಳನ್ನು (Minutes) ಕೇಳಿದರೆ, ಇದು ಪರೀಕ್ಷೆಯ ಗೌಪ್ಯತೆಗೆ ಧಕ್ಕೆ ತರುತ್ತದೆ ಎಂಬ ನೆಪವೊಡ್ಡಿ ಆರ್‌ಟಿಐ ಅಡಿಯಲ್ಲಿ ಮಾಹಿತಿ ನೀಡಲು ಎನ್‌ಟಿಎ ಸಂಪೂರ್ಣವಾಗಿ ನಿರಾಕರಿಸಿದೆ.

ಪರೀಕ್ಷಾ ಅಕ್ರಮ ಮತ್ತು ಪೇಪರ್ ಸೋರಿಕೆಗಳನ್ನು ತಡೆಯಲು ಸರ್ಕಾರ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ-2024’ ಅನ್ನು ಜಾರಿಗೆ ತಂದಿದ್ದರೂ, ಅದರ ಅನುಷ್ಠಾನದಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಆರ್‌ಟಿಐ ಮೂಲಕ ಕೇಳಲಾದ ಪ್ರಶ್ನೆಗಳಿಗೆ, ಅಕ್ರಮ ಪ್ರಕರಣಗಳ ಬಗ್ಗೆ ತಾನು ವಿವರವಾದ ದಾಖಲೆಗಳನ್ನೇ ನಿರ್ವಹಿಸುತ್ತಿಲ್ಲ ಎಂದು ಎನ್‌ಟಿಎ ಉತ್ತರಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಾಗ ಕಡ್ಡಾಯವಾಗಿ ಭರ್ತಿ ಮಾಡಬೇಕಾದ ದಾಖಲೆಗಳನ್ನು ಹಸ್ತಾಂತರಿಸಲು ತನಿಖೆಯ ನೆಪ ಹೇಳಿ ನಿರಾಕರಿಸಲಾಗಿದೆ. ಸರ್ಕಾರ ಈಗ ಅಕ್ರಮ ಎಸಗುವವರಿಗೆ 10 ಕೋಟಿ ರೂಪಾಯಿ ದಂಡ ಮತ್ತು 10 ವರ್ಷಗಳ ಜೈಲು ಶಿಕ್ಷೆಯಂತಹ ಕಠಿಣ ಕಾನೂನು ತಂದಿರಬಹುದು, ಆದರೆ ಅಕ್ರಮಗಳನ್ನು ತಡೆಯಬೇಕಾದ ಮತ್ತು ದಾಖಲಿಸಬೇಕಾದ ಸಂಸ್ಥೆಯೇ ಮಾಹಿತಿಯನ್ನು ಮುಚ್ಚಿಡುತ್ತಿರುವಾಗ ಈ ಕಠಿಣ ಕಾನೂನುಗಳು ಕೇವಲ ಕಾಗದದ ಮೇಲಷ್ಟೇ ಉಳಿಯುತ್ತವೆ.

ಎನ್‌ಟಿಎ ಆರ್‌ಟಿಐಗೆ ನೀಡುವ ಮಾಹಿತಿಗೂ ಸಂಸತ್ತಿನ ದಾಖಲೆಗಳಿಗೂ ಅಂತರವಿರುವುದು ಮತ್ತೊಂದು ಆತಂಕಕಾರಿ ಸಂಗತಿಯಾಗಿದೆ. 2024 ರಿಂದ 2026ರ ನಡುವೆ ರದ್ದುಗೊಂಡ ಅಥವಾ ಮುಂದೂಡಲ್ಪಟ್ಟ ಪರೀಕ್ಷೆಗಳ ಪಟ್ಟಿ ಕೇಳಿದಾಗ ಎನ್‌ಟಿಎ ನೀಡಿದ್ದು ಕೇವಲ ಎರಡು ಪರೀಕ್ಷೆಗಳ ಹೆಸರು ಮಾತ್ರ. ಆದರೆ ಸಂಸದೀಯ ಕಾಯಂ ಸಮಿತಿಯ ವರದಿಯ ಪ್ರಕಾರ, 2024ರಲ್ಲಿ ಎನ್‌ಟಿಎ ನಡೆಸಿದ 14 ಪ್ರಮುಖ ಪರೀಕ್ಷೆಗಳಲ್ಲಿ ಯುಜಿಸಿ-ನೆಟ್, ಸಿಎಸ್ಐಆರ್-ನೆಟ್, ನೀಟ್-ಪಿಜಿ ಮುಂದೂಡಲ್ಪಟ್ಟಿದ್ದವು, ನೀಟ್-ಯುಜಿ ಪೇಪರ್ ಸೋರಿಕೆಯಾಗಿತ್ತು ಮತ್ತು ಸಿಯುಇಟಿ ಪರೀಕ್ಷೆಯ ಫಲಿತಾಂಶಗಳು ಅಸಹಜವಾಗಿ ವಿಳಂಬವಾಗಿದ್ದವು. ಅಲ್ಲದೆ, ಜೆಇಇ ಮೇನ್ 2025ರ ಪರೀಕ್ಷೆಯ ಅಂತಿಮ ಕೀಲಿಕೈನಲ್ಲಿ ಸಾಲು ಸಾಲು ತಪ್ಪುಗಳಿದ್ದುದರಿಂದ 12 ಪ್ರಶ್ನೆಗಳನ್ನೇ ಹಿಂಪಡೆಯಲಾಗಿತ್ತು. ಹೀಗೆ ಸಂಸತ್ತಿನ ಮುಂದೆ ಬಯಲಾದ ವೈಫಲ್ಯಗಳನ್ನು ಆರ್‌ಟಿಐ ಉತ್ತರಗಳಲ್ಲಿ ಮುಚ್ಚಿಡುವ ಪ್ರಯತ್ನವನ್ನು ಎನ್‌ಟಿಎ ಮಾಡಿದೆ.

ಶಿಕ್ಷಣ ಕ್ಷೇತ್ರವನ್ನು ‘ಪರೀಕ್ಷಾ ಮಾಫಿಯಾ’ದಿಂದ ಮುಕ್ತಗೊಳಿಸುತ್ತೇವೆ ಎಂದು ಅಂದಿನ ಶಿಕ್ಷಣ ಸಚಿವರು ನೀಡಿದ್ದ ಭರವಸೆಗಳು ಸಹ ಅನುಷ್ಠಾನಕ್ಕೆ ಬಂದಿಲ್ಲ. ಪೇಪರ್ ಸೋರಿಕೆ ಮತ್ತು ಅಕ್ರಮಗಳಲ್ಲಿ ಭಾಗಿಯಾಗಿ ಕಪ್ಪುಪಟ್ಟಿಗೆ ಸೇರಿದ ಖಾಸಗಿ ಕಂಪನಿಗಳು ಮತ್ತೆ ಬೇರೆ ಹೆಸರುಗಳಲ್ಲಿ ಗುತ್ತಿಗೆ ಪಡೆಯುವುದನ್ನು ತಡೆಯಲು ದೇಶಾದ್ಯಂತ ಒಂದೇ ‘ಏಕೀಕೃತ ಕಪ್ಪುಪಟ್ಟಿ’ (Blacklist) ತಯಾರಿಸಬೇಕೆಂದು ಸಂಸದೀಯ ಸಮಿತಿ ಶಿಫಾರಸು ಮಾಡಿತ್ತು. ಆದರೆ 2026ರ ಜೂನ್ ವರೆಗೂ ಅಂತಹ ಯಾವುದೇ ಕಪ್ಪುಪಟ್ಟಿಯನ್ನು ಶಿಕ್ಷಣ ಸಚಿವಾಲಯ ತಯಾರಿಸಿಯೇ ಇಲ್ಲ ಎಂಬುದು ಆರ್‌ಟಿಐನಿಂದ ತಿಳಿದುಬಂದಿದೆ. ಹಾಗೆಯೇ ಎನ್‌ಟಿಎ ಪ್ರತಿವರ್ಷ ಸಂಸತ್ತಿಗೆ ತನ್ನ ಪೂರ್ಣಪ್ರಮಾಣದ ‘ವಾರ್ಷಿಕ ವರದಿ’ ಸಲ್ಲಿಸಬೇಕೆಂಬ ಆದೇಶವಿದ್ದರೂ, ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ವರದಿ ಲಭ್ಯವಿಲ್ಲ.

ಇನ್ನೊಂದೆಡೆ, ಅಕ್ರಮಗಳ ಹಿನ್ನೆಲೆಯಲ್ಲಿ 47 ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿರುವುದಾಗಿ ಸರ್ಕಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಆದರೆ ಆಂತರಿಕವಾಗಿ ಸಂಸ್ಥೆಯಲ್ಲಿ ಕೆಲಸ ಮಾಡಲು ಆಡಳಿತಾತ್ಮಕ ಸಾಮರ್ಥ್ಯವೇ ಇಲ್ಲದಿರುವುದು ದೊಡ್ಡ ದುರಂತ. ಎನ್‌ಟಿಎಗೆ ಅನುಮೋದನೆಯಾಗಿರುವ ಒಟ್ಟು ಖಾಯಂ ಹುದ್ದೆಗಳ ಸಂಖ್ಯೆ ಕೇವಲ 39, ಇದರಲ್ಲಿ ಶೇಕಡಾ 38ರಷ್ಟು ಹುದ್ದೆಗಳು ಖಾಲಿಯಿವೆ. ಇಡೀ ಪರೀಕ್ಷಾ ವ್ಯವಸ್ಥೆಯನ್ನು ಉಸ್ತುವಾರಿ ನೋಡಿಕೊಳ್ಳಬೇಕಾದ 13 ಹಿರಿಯ ನಿದೇಶಕರ (Director) ಹುದ್ದೆಗಳಲ್ಲಿ 9 ಹುದ್ದೆಗಳು ಖಾಲಿಯಿದ್ದು, ಕೇವಲ 4 ನಿರ್ದೇಶಕರಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ ಶೇಕಡಾ 70ರಷ್ಟು ಹಿರಿಯ ಹುದ್ದೆಗಳು ಖಾಲಿಯಿದ್ದರೂ, ಕೋಟ್ಯಂತರ ಮಕ್ಕಳ ಭವಿಷ್ಯವನ್ನು ತತ್ಕಾಲಿಕ ನೌಕರರ ಹೆಗಲಿಗೆ ಹಾಕಿ ಸಂಸ್ಥೆ ನಡೆಸಲಾಗುತ್ತಿದೆ.

ವಿಪರ್ಯಾಸವೆಂದರೆ, ಕೆಲಸ ಮಾಡಲು ನೌಕರರಿಲ್ಲದೆ ಒದ್ದಾಡುತ್ತಿರುವ ಎನ್‌ಟಿಎ ಬಳಿ ಹಣಕ್ಕೇನೂ ಕೊರತೆಯಿಲ್ಲ. ಕಳೆದ ಐದು ವರ್ಷಗಳಲ್ಲಿ (2019 ರಿಂದ 2024) ಎನ್‌ಟಿಎ ತಾನು ಖರ್ಚು ಮಾಡಿದ್ದಕ್ಕಿಂತ ಬರೋಬ್ಬರಿ 520 ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಿ ಲಾಭದಲ್ಲಿದೆ. ವಿದ್ಯಾರ್ಥಿಗಳಿಂದ ಸಾವಿರಾರು ಕೋಟಿ ರೂಪಾಯಿ ಅರ್ಜಿ ಶುಲ್ಕ ಸಂಗ್ರಹಿಸುವ ಈ ಸಂಸ್ಥೆಯು, ಆ ಹೆಚ್ಚುವರಿ ಹಣವನ್ನು ಸ್ವಂತ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಅಥವಾ ಖಾಯಂ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಬಳಸದೆ ಬ್ಯಾಂಕ್‌ನಲ್ಲಿ ಬಡ್ಡಿ ಕಾಯುತ್ತಾ ಕುಳಿತಿದೆ.

ಈಗ ನೀಟ್-2026ರ ಹೊಸ ಪೇಪರ್ ಸೋರಿಕೆಯ ದುರಂತದ ನಂತರ ಪ್ರಧಾನಿಯವರು ನಂದನ್ ನಿಲೇಕಣಿ ನೇತೃತ್ವದಲ್ಲಿ ಎನ್‌ಟಿಎ ಸುಧಾರಣೆಗೆ ಮತ್ತೊಂದು ಹೊಸ ತಜ್ಞರ ಸಮಿತಿಯನ್ನು ಘೋಷಿಸಿದ್ದಾರೆ. ಆದರೆ, ಕೇವಲ ಎರಡು ವರ್ಷಗಳ ಹಿಂದಷ್ಟೇ (2024ರಲ್ಲಿ) ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್ ನೇತೃತ್ವದಲ್ಲೂ ಇದೇ ರೀತಿಯ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ನೀಡಿರುವ ಶಿಫಾರಸುಗಳ ಪೈಕಿ ಎಷ್ಟು ಜಾರಿಯಾಗಿವೆ, ಎಷ್ಟು ಬಾಕಿಯಿವೆ ಎನ್ನುವುದಕ್ಕೆ ಉತ್ತರವೇ ಇಲ್ಲ. ಹಳೆಯ ಸಮಿತಿಯ ವರದಿಗಳನ್ನೇ ಅನುಷ್ಠಾನಗೊಳಿಸದೆ, ಹೊಸ ಹೊಸ ಸಮಿತಿಗಳನ್ನು ರಚಿಸುವುದು ಕೇವಲ ಕಾಲಹರಣದ ತಂತ್ರವೇ ಎಂಬ ಪ್ರಶ್ನೆ ಮೂಡುತ್ತದೆ.

ಶಿಕ್ಷಣ ಸಚಿವರ ರಾಜೀನಾಮೆ, ಕಠಿಣ ಕಾನೂನುಗಳ ಜಾರಿ, ಹೊಸ ತನಿಖಾ ಸಮಿತಿಗಳ ರಚನೆ ಇವೆಲ್ಲವೂ ಕೇವಲ ಮೇಲ್ನೋಟದ ತಾತ್ಕಾಲಿಕ ಉಪಶಮನಗಳಷ್ಟೇ. ಅಪರೂಪಕ್ಕೊಮ್ಮೆ ಸಭೆ ಸೇರುವ ಆಡಳಿತ ಮಂಡಳಿ, ಆರ್‌ಟಿಐನಿಂದ ಸತ್ಯ ಮರೆಮಾಚುವ ರಹಸ್ಯ ಧೋರಣೆ, ಖಾಲಿಯಿರುವ ಉನ್ನತ ಹುದ್ದೆಗಳು ಹಾಗೂ ಕೋಟ್ಯಂತರ ರೂಪಾಯಿ ನಿಧಿ ಇದ್ದರೂ ಮೂಲಸೌಕರ್ಯ ಅಭಿವೃದ್ಧಿಪಡಿಸದ ವೈಫಲ್ಯ – ಇವು ಎನ್‌ಟಿಎ ಎನ್ನುವ ಸಂಸ್ಥೆಯ ರೋಗಗ್ರಸ್ಥ ವ್ಯವಸ್ಥೆಯಾಗಿದೆ. ಈ ಸಾಂಸ್ಥಿಕ ಲೋಪಗಳನ್ನು ತಳಮಟ್ಟದಿಂದ ಸರಿಪಡಿಸದಿದ್ದರೆ, ಕೇವಲ ಕಾನೂನುಗಳನ್ನು ಕಠಿಣಗೊಳಿಸುವುದರಿಂದಾಗಲಿ ಅಥವಾ ಹೊಸ ಸಮಿತಿಗಳನ್ನು ಮಾಡುವುದರಿಂದಾಗಲಿ ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಪೇಪರ್ ಸೋರಿಕೆಯಾಗುವುದನ್ನು ಮತ್ತು ಯುವಜನರ ಭವಿಷ್ಯ ಹಾಳಾಗುವುದನ್ನು ತಡೆಯಲು ಸಾಧ್ಯವಿಲ್ಲ.

Inputs: The Quint

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...