ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿವೆ.
indianexpress.com ವರದಿಯ ಪ್ರಕಾರ, ಬಾಲಕಿಯ ದೇಹವನ್ನು ಕೆರೆಗೆ ಎಸೆಯುವ ಮುನ್ನ, ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ ಬೆನ್ನಲ್ಲೇ, ಈ ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾದ ಸ್ಥಳೀಯ ವ್ಯಕ್ತಿಯೊಬ್ಬನನ್ನು ಕೆರಳಿದ ಸಾರ್ವಜನಿಕರ ಗುಂಪು ಹೊಡೆದು ಕೊಂದಿದೆ (ಗುಂಪು ಹತ್ಯೆ ಮಾಡಿದೆ).
ಈ ಘಟನೆ ಕೋಲ್ಕತ್ತಾದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಬಾರುಯಿಪುರದ ಗ್ರಾಮವೊಂದರಲ್ಲಿ ನಡೆದಿದೆ. ಆಕ್ರೋಶಗೊಂಡ ಸ್ಥಳೀಯರು ಆರಂಭದಲ್ಲಿ ಬಾಲಕಿಯ ಶವವನ್ನು ಪೊಲೀಸರಿಗೆ ಒಪ್ಪಿಸಲು ನಿರಾಕರಿಸಿದ್ದಲ್ಲದೆ, ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ್ದರು. ಪ್ರತಿಭಟನಾಕಾರರ ಗುಂಪು ಹಲವಾರು ವಾಹನಗಳಿಗೂ ಬೆಂಕಿ ಹಚ್ಚಿತ್ತು. ಈ ಬೆಳವಣಿಗೆಯಿಂದ ಸೀಲ್ದಾ-ನಾಮ್ಖಾನಾ ಮಾರ್ಗದ ರೈಲು ಸೇವೆಗಳು ಸುಮಾರು ಒಂದು ಗಂಟೆಯ ಕಾಲ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಸ್ಥಳೀಯರು ಬಾಲಕಿಯ ಶವದೊಂದಿಗೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಕಾರಣ ಸುಮಾರು ಐದು ಗಂಟೆಗಳ ಕಾಲ ರಸ್ತೆ ಸಂಚಾರವೂ ಸ್ಥಗಿತಗೊಂಡಿತ್ತು. ಈ ಗಲಾಟೆಯಲ್ಲಿ ಗಾಯಗೊಂಡ ಒಬ್ಬ ಪೊಲೀಸ್ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಕೇಂದ್ರ ಪಡೆಗಳು ಸೇರಿದಂತೆ ಭಾರಿ ಪ್ರಮಾಣದ ಭದ್ರತಾ ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ. ಪ್ರಮುಖ ಶಂಕಿತರೊಂದಿಗೆ ಕಾಣಿಸಿಕೊಂಡಿದ್ದನೆಂಬ ಕಾರಣಕ್ಕೆ ಕೆರಳಿದ ಸಾರ್ವಜನಿಕರ ಗುಂಪು 26 ವರ್ಷದ ಯುವಕನನ್ನು ಹೊಡೆದು ಕೊಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದಾಗ್ಯೂ, ಪೊಲೀಸರು ಆ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿಲ್ಲ. ಉನ್ನತ ಅಧಿಕಾರಿಗಳು ಮಧ್ಯಪ್ರವೇಶಿಸಿದ ನಂತರ ರಸ್ತೆ ತಡೆಯನ್ನು ತೆರವುಗೊಳಿಸಲಾಗಿದೆ. ಸರ್ಕಾರದ ಗಮನಕ್ಕೆ ಈ ದುರಂತ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮೆಗಾಫೋನ್ ಬಳಸಿ ಪ್ರತಿಭಟನಾನಿರತ ಸಾರ್ವಜನಿಕರನ್ನು ಸಮಾಧಾನಪಡಿಸಿದ್ದಾರೆ ಎಂದು ವರದಿ ವಿವರಿಸಿದೆ.
“ಸ್ವಲ್ಪ ಹೊತ್ತಿಗೆ ಮುಂಚೆ ಮುಖ್ಯಮಂತ್ರಿ (ಸುವೇಂದು ಅಧಿಕಾರಿ) ನಮ್ಮೊಂದಿಗೆ ನೇರವಾಗಿ ಫೋನ್ನಲ್ಲಿ ಮಾತನಾಡಿದ್ದಾರೆ. ಈ ಅಪರಾಧದಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಯನ್ನು ಬಿಡುವುದಿಲ್ಲ ಎಂದು ಅವರು ನಮಗೆ ಭರವಸೆ ನೀಡಿದ್ದಾರೆ… ತನಿಖೆಯ ಸಮಯದಲ್ಲಿ ಸರ್ಕಾರ ಮತ್ತು ಪೊಲೀಸರೊಂದಿಗೆ ಸಹಕರಿಸಬೇಕಾಗಿ ನಾವು ಪ್ರತಿಯೊಬ್ಬರಲ್ಲೂ ವಿನಂತಿಸುತ್ತೇವೆ. ನಾವು ಪ್ರತಿಯೊಂದು ಹಂತದಲ್ಲೂ ನಿಮ್ಮೊಂದಿಗೆ ಇರುತ್ತೇವೆ” ಎಂದು ಪ್ರೆಸಿಡೆನ್ಸಿ ರೇಂಜ್ ಇನ್ಸ್ಪೆಕ್ಟರ್-ಜನರಲ್ (ಐಜಿ) ಕಂಕರ್ ಪ್ರಸಾದ್ ಬರುಯಿ ಪ್ರತಿಭಟನಾನಿರತ ಜನರಿಗೆ ಸಮಾಧಾನ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಐಜಿ ಬರುಯಿ ಅವರು ಸ್ಥಳೀಯರಿಗೆ, “ನಿಮ್ಮ ಎಲ್ಲಾ ಬೇಡಿಕೆಗಳೊಂದಿಗೆ ಭವಾನಿ ಭವನದಲ್ಲಿರುವ ನಮ್ಮ ಕಚೇರಿಗೆ ಬನ್ನಿ. ನಾವು ಅವುಗಳನ್ನು ಆಲಿಸುತ್ತೇವೆ” ಎಂದು ಹೇಳಿದ್ದಾರೆ. ನಂತರ ಸ್ಥಳೀಯರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಪೊಲೀಸರಿಗೆ ಅನುಮತಿ ನೀಡಿದ್ದು, ಶವವನ್ನು ಬಾರುಯಿಪುರ ಉಪ-ವಿಭಾಗೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಬಾಲಕಿ ಕುಟುಂಬದ ಜೊತೆ ಮಾತನಾಡಿದ ಸಿಎಂ
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಬಾಲಕಿಯ ತಂದೆಯೊಂದಿಗೆ ಮಾತನಾಡಿ, ಮಂಗಳವಾರ ಅವರನ್ನು ಭೇಟಿಯಾಗುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಬಾಲಕಿಯ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಪ್ರಭಾಷ್ ಮೊಂಡಲ್ ಎಂದು ಗುರುತಿಸಲಾದ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪೊಲೀಸರು ಅಪರಾಧಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದು, ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಐಜಿ ತಿಳಿಸಿದ್ದಾರೆ. ಬಾಲಕಿಯ ಕೊಲೆ, ಶಂಕಿತ ಆರೋಪಿಯ ಗುಂಪು ಹತ್ಯೆ ಹಾಗೂ ಪೊಲೀಸರ ಮೇಲಿನ ಹಲ್ಲೆ ಮತ್ತು ಸಾರ್ವಜನಿಕ ಆಸ್ತಿ ಧ್ವಂಸಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಎಫ್ಐಆರ್ ದಾಖಲಿಸಿದ್ದಾರೆ. ಬಾಲಕಿಯ ಕೊಲೆಗೆ ಸಂಬಂಧಿಸಿದ ಎಫ್ಐಆರ್ನಲ್ಲಿ ಪೋಕ್ಸೋ ಅಡಿಯಲ್ಲಿ ಅತ್ಯಾಚಾರದ ಆರೋಪಗಳನ್ನು ಸೇರಿಸಲಾಗಿಲ್ಲ. ಘಟನೆಯ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಆರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
“ಈ ಅಪರಾಧ ಹೇಗೆ ನಡೆಯಿತು ಎಂಬುದನ್ನು ಎಸ್ಐಟಿ ತನಿಖೆ ಮಾಡಲಿದೆ, ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಗುರುತಿಸಲಿದೆ ಮತ್ತು ಘಟನೆಗಳ ಅನುಕ್ರಮದಲ್ಲಿನ ಯಾವುದೇ ಲೋಪದೋಷಗಳನ್ನು ಪರಿಶೀಲಿಸಲಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬಾಲಕಿಯು ಶನಿವಾರ ಸಂಜೆ 4.30 ಕ್ಕೆ ಸ್ನೇಹಿತನ ಮನೆಗೆ ಭೇಟಿ ನೀಡಲು ಮನೆಯಿಂದ ಹೊರಟಿದ್ದಳು. ಅವಳು ಮನೆಗೆ ಹಿಂತಿರುಗದಿದ್ದಾಗ ಆಕೆಯ ಕುಟುಂಬ ಸದಸ್ಯರು ಹುಡುಕಾಟ ಆರಂಭಿಸಿದ್ದರು. ಅವರು ಇಡೀ ರಾತ್ರಿ ಬಾಲಕಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಮರುದಿನ ಬೆಳಿಗ್ಗೆ ಗ್ರಾಮದ ಕೆರೆಯಲ್ಲಿ ಬಾಲಕಿಯ ಶವ ಕಂಡು ಬಂದಿದೆ.
ಈ ನಡುವೆ ರಾಜ್ಯ ಸರ್ಕಾರ ಬಾರುಯಿಪುರಕ್ಕೆ ಭೇಟಿ ನೀಡದಂತೆ ತಡೆಯಲು ತಮ್ಮ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಕಾಳೀಘಾಟ್ ನಿವಾಸದ ಹೊರಗೆ ಭದ್ರತಾ ಪಡೆಗಳನ್ನು ನಿಯೋಜಿಸಿದೆ ಎಂದು ವಿರೋಧ ಪಕ್ಷ ಟಿಎಂಸಿ ಆರೋಪಿಸಿದೆ. ಈ ಮೂಲಕ ಘಟನೆಯು ರಾಜಕೀಯ ತಿರುವು ಪಡೆದುಕೊಂಡಿದೆ.
ಟಿಎಂಸಿ ತನ್ನ ಎಕ್ಸ್ ಪೋಸ್ಟ್ನಲ್ಲಿ “ನಮ್ಮ ಅಧ್ಯಕ್ಷರಾದ ಮಮತಾ ಬ್ಯಾನರ್ಜಿ ಅವರು ಬಾರುಯಿಪುರಕ್ಕೆ ಭೇಟಿ ನೀಡಲು ಬಯಸಿದ್ದರು. ಇದನ್ನು ತಿಳಿದ ತಕ್ಷಣ, ಅವರು ಮನೆಯಿಂದ ಹೊರಹೋಗದಂತೆ ತಡೆಯಲು ಅವರ ಮನೆಯ ಹೊರಗೆ ಭಾರಿ ಪ್ರಮಾಣದ ಪೊಲೀಸ್ ಸಿಬ್ಬಂದಿ ಮತ್ತು ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಅವರನ್ನು ತಡೆಯುವ ಈ ಪ್ರಯತ್ನಗಳ ಹೊರಾಗಿಯೂ, ನಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ: #JusticeForBaruipur, ದೀದಿ ಅವರು ಸಂತ್ರಸ್ತೆಯ ಕುಟುಂಬದೊಂದಿಗೆ ದೃಢವಾಗಿ ನಿಂತಿದ್ದಾರೆ ಮತ್ತು ಅವರಿಗೆ ನ್ಯಾಯ ಸಿಗುವಂತೆ ಮಾಡಲು ಬದ್ಧರಾಗಿದ್ದಾರೆ” ಎಂದು ಬರೆದುಕೊಂಡಿದೆ.
ಇದಕ್ಕೂ ಮುನ್ನ, ಟಿಎಂಸಿ ಶಾಸಕ ಕುನಾಲ್ ಘೋಷ್ ಅವರು ಬಾರುಯಿಪುರ ಘಟನೆಯನ್ನು “ಅತ್ಯಂತ ಭೀಕರ” ಎಂದು ಕರೆದಿದ್ದರು. “ಒಬ್ಬಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಈ ಪ್ರದೇಶವು ಪ್ರಕ್ಷುಬ್ಧಗೊಂಡಿದೆ. ಕೋಪದಲ್ಲಿ ಜನರು ಕಾನೂನನ್ನು ಕೈಗೆತ್ತಿಕೊಳ್ಳುವ ಅಪಾಯಕಾರಿ ಪ್ರವೃತ್ತಿ ಕಾಣಿಸುತ್ತಿದೆ. ಆರೋಪಿಗಳಲ್ಲಿ ಒಬ್ಬಾತ ತಪ್ಪಿಸಿಕೊಂಡಿದ್ದಾನೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಆತ ತಪ್ಪಿಸಿಕೊಂಡನೇ ಅಥವಾ ಆತನಿಗೆ ತಪ್ಪಿಸಿಕೊಳ್ಳಲು ಬಿಡಲಾಯಿತೇ?” ಎಂದು ಕುನಾಲ್ ಘೋಷ್ ತಮ್ಮ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ “ಭಯ್ ಇನ್, ಭೋರ್ಶಾ ಔಟ್ (ಭಯ ಒಳಗೆ ಬಂದಿದೆ, ಭರವಸೆ ಹೊರಹೋಗಿದೆ)” ಎಂದಿದ್ದರು.


