ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಒಡಿಶಾದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಆರ್. ಎಸ್. ಗೋಪಾಲನ್ ಅವರು ಮೇ 20ರಂದು ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದಾಗ (ಫ್ರೀಝ್ ಮಾಡಿದಾಗ) ರಾಜ್ಯದಲ್ಲಿ 3.33 ಕೋಟಿ ನೋಂದಾಯಿತ ಮತದಾರರಿದ್ದರು ಎಂದು ತಿಳಿಸಿದ್ದಾರೆ.
ಮೇ 30 ಮತ್ತು ಜೂನ್ 28 ರ ನಡುವೆ ನಡೆದ ಗಣತಿ ಪ್ರಕ್ರಿಯೆಯ ನಂತರ, ಕರಡು ಮತದಾರರ ಪಟ್ಟಿಯು ಈಗ 3.13 ಕೋಟಿ ಮತದಾರರನ್ನು ಹೊಂದಿದೆ. ಇದರಲ್ಲಿ 1.60 ಕೋಟಿ ಪುರುಷರು, 1.53 ಕೋಟಿ ಮಹಿಳೆಯರು ಮತ್ತು 2,775 ತೃತೀಯ ಲಿಂಗಿ ಮತದಾರರು ಸೇರಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯ ಚುನಾವಣಾಧಿಕಾರಿಯ ಪ್ರಕಾರ, ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 20 ಲಕ್ಷಕ್ಕೂ ಹೆಚ್ಚು ಹೆಸರುಗಳಲ್ಲಿ, 8.32 ಲಕ್ಷ ಮೃತಪಟ್ಟವರಾಗಿದ್ದಾರೆ. ಇನ್ನುಳಿದಂತೆ 10.07 ಲಕ್ಷ ಮತದಾರರು ಬೇರೆಡೆಗೆ ವಲಸೆ ಹೋಗಿದ್ದಾರೆ ಅಥವಾ ಗಣತಿ ಪ್ರಕ್ರಿಯೆಯ ಸಮಯದಲ್ಲಿ ಗೈರುಹಾಜರಾಗಿದ್ದರು ಮತ್ತು 1.58 ಲಕ್ಷ ಮತದಾರರು ವಿವಿಧ ಸ್ಥಳಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ನೋಂದಾಯಿಸಿಕೊಂಡಿರುವುದು ಕಂಡುಬಂದಿದೆ.
ಗಣತಿ ಪ್ರಕ್ರಿಯೆಯ ಸಮಯದಲ್ಲಿ ಸುಮಾರು 14,000 ಮತದಾರರು ತಮ್ಮ ಗಣತಿ ನಮೂನೆಗಳನ್ನು (ಫಾರ್ಮ್ಗಳನ್ನು) ಬೂತ್ ಮಟ್ಟದ ಅಧಿಕಾರಿಗಳಿಗೆ ಮರಳಿ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
“ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಮತದಾರರು, ತಮ್ಮ ಹಕ್ಕು ಅಥವಾ ಆಕ್ಷೇಪಣೆಯನ್ನು ಬಿಎಲ್ಒ ಮೂಲಕ ಅಥವಾ ಇಸಿಐನೆಟ್ ಮೊಬೈಲ್ ಆಪ್ ಅಥವಾ voters.eci.gov.in ವೆಬ್ಸೈಟ್ ಮೂಲಕ ಸಲ್ಲಿಸಬಹುದು” ಎಂದು ಗೋಪಾಲನ್ ಸುದ್ದಿಗಾರರಿಗೆ ಹೇಳಿದ್ದಾರೆ.
ಆಗಸ್ಟ್ 4ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು ಹಾಗೂ ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 6ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
“ಯಾರಾದರೂ ತಮ್ಮ ಹೆಸರನ್ನು ಕರಡು ಮತದಾರರ ಪಟ್ಟಿಯಲ್ಲಿ ಹೊಂದಿಲ್ಲದಿದ್ದರೆ, ಅವರು ನಿಗದಿತ ನಮೂನೆಯನ್ನು (ಫಾರ್ಮ್) ಭರ್ತಿ ಮಾಡಿ, ಘೋಷಣಾ ಪತ್ರ ಮತ್ತು ಇತರ ದಾಖಲೆಗಳೊಂದಿಗೆ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು” ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.
ಜುಲೈ 5ರಿಂದ ಆಗಸ್ಟ್ 4ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ಆನಂತರ, 147 ಚುನಾವಣಾ ನೋಂದಣಿ ಅಧಿಕಾರಿಗಳು (EROs) ಮತ್ತು 994 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು (AEROs) ಸೆಪ್ಟೆಂಬರ್ 2 ರೊಳಗೆ ಅರ್ಜಿಗಳನ್ನು ಪರಿಶೀಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
“ನಿಗದಿತ ಸಮಯದೊಳಗೆ ಎಲ್ಲಾ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವುದನ್ನು ಖಚಿತಪಡಿಸಿಕೊಳ್ಳಲು, ಅಗತ್ಯವಿದ್ದರೆ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಲಾಗುವುದು” ಎಂದು ಗೋಪಾಲನ್ ಹೇಳಿದ್ದಾರೆ.


