ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ ಕೇವಲ ಎರಡರಿಂದ ಮೂರು ದಿನಗಳ ಅವಧಿಯಲ್ಲಿ ಮೂವರು ನೌಕರರು ಜೀವ ಕಳೆದುಕೊಂಡಿರುವುದು ಕಂದಾಯ ಇಲಾಖೆ ಹಾಗೂ ಬಿಎಲ್ಓ (BLO) ಸಿಬ್ಬಂದಿ ವಲಯವನ್ನು ತಲ್ಲಣಗೊಳಿಸಿದೆ. ಮೇಲಧಿಕಾರಿಗಳ ಈ ಕಠಿಣ ಧೋರಣೆಯ ವಿರುದ್ಧ ನೌಕರರು ಈಗ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ‘ದಿ ಫೆಡರಲ್ ಕರ್ನಾಟಕ’ ವರದಿ ಮಾಡಿದೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಎಲ್ಓ ಆಗಿ ಕಾರ್ಯನಿರ್ವಹಿಸುತ್ತಿದ್ದ ನಟರಾಜ್ ಇತ್ತೀಚೆಗೆ ಜಾರಿಯಾದ ಕಡ್ಡಾಯ ಎಸ್ಐಆರ್ ಪ್ರಕ್ರಿಯೆಯ ಟಾರ್ಗೆಟ್ ಮುಗಿಸಲು ಹಗಲಿರುಳು ಶ್ರಮಿಸುತ್ತಿದ್ದರು. ತಡರಾತ್ರಿವರೆಗೂ ನಿಗದಿತ ಕೆಲಸ ಮುಗಿಸಿ ಮನೆಗೆ ಬಂದು ಮಲಗಿದ್ದ ಅವರು, ತೀವ್ರ ಮಾನಸಿಕ ಹಾಗೂ ದೈಹಿಕ ಒತ್ತಡದಿಂದಾಗಿ ರಾತ್ರಿಯೇ ಹೃದಯಾಘಾತಕ್ಕೊಳಗಾಗಿದ್ದು, ಮುಂಜಾನೆ ಎದ್ದೇಳಲೇ ಇಲ್ಲ. ಕರ್ತವ್ಯನಿರತ ಅಧಿಕಾರಿಯ ಈ ದಿಢೀರ್ ಸಾವು ಅವರ ಕುಟುಂಬವನ್ನು ತೀವ್ರ ಆಘಾತಕ್ಕೀಡು ಮಾಡಿದೆ.

ಇದೇ ರೀತಿಯ ಮತ್ತೊಂದು ದಾರುಣ ಘಟನೆ ಬೀದರ್ ಜಿಲ್ಲೆಯ ಅಮಲಾಪುರ ಗ್ರಾಮದಲ್ಲಿ ನಡೆದಿದ್ದು, ಭಾಲ್ಕಿ ತಾಲೂಕಿನ ಮೂಲದ 45 ವರ್ಷದ ಬಿಎಲ್ಒ ಸುನೀಲ್, ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ ಎಸ್ಐಆರ್ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅಮಲಾಪುರ ಗ್ರಾಮದ 33ನೇ ಬೂತ್ನಲ್ಲಿ ಮನೆ ಮನೆಗೆ ತೆರಳಿ ಸರ್ವೆ ನಡೆಸುತ್ತಿದ್ದ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸ್ಟಂಟ್ ಅಳವಡಿಸುವ ಪ್ರಯತ್ನ ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಇತ್ತೀಚೆಗಷ್ಟೇ ತುಮಕೂರಿನ ಗೂಳೂರು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿದ್ದ 26 ವರ್ಷದ ಯುವತಿ ಭುವನಾ, ಶನಿವಾರ ಮುಂಜಾನೆ ಎಸ್ಐಆರ್ ಕೆಲಸದ ಗಡಿಬಿಡಿಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ದುರ್ಮರಣಕ್ಕೀಡಾಗಿದ್ದರು. ಇಲಾಖೆಯ ಅತಿಯಾದ ಒತ್ತಡವೇ ಈ ಸಾವುಗಳಿಗೂ ಕಾರಣ ಎಂದು ಆಕ್ರೋಶಗೊಂಡಿರುವ ಕಂದಾಯ ಇಲಾಖೆ ನೌಕರರು ಸದ್ಯ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಆರಂಭಿಸಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಈ ಎಸ್ಐಆರ್ ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಾಮಿಸಿದೆ ಎಂದು ನೌಕರರ ಸಂಘಟನೆಗಳು ಗಂಭೀರ ಆರೋಪ ಮಾಡಿವೆ. ಈ ಕೆಲಸವನ್ನು ಕಟ್ಟುನಿಟ್ಟಾಗಿ ಮತ್ತು ಅತ್ಯಂತ ವೇಗವಾಗಿ ಮುಗಿಸುವಂತೆ ಉನ್ನತ ಅಧಿಕಾರಿಗಳು ತೀವ್ರ ಒತ್ತಡ ಮತ್ತು ಕಿರುಕುಳ ನೀಡುತ್ತಿರುವುದರಿಂದ ನೌಕರರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ.


