Homeಕರ್ನಾಟಕಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

- Advertisement -
- Advertisement -

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ ವೇದಿಕೆಯ ಒಡನಾಡಿಗಳಾದ ನಾನು, ಪ್ರವೀಣ್ ಶೆಟ್ಟಿ, ವಿಕ್ಟರ್ ಡಿಸಿಲ್ವ, ಗುಲಾಬಿ ಬಿಳಿಮಲೆ, ಶಬೀರ್, ಡಾ.ವಾಸುದೇವ ಬೆಳ್ಳೆ ಮೋಹನ್ ಜೊತೆ ಒಂದು ಚಹಾ ಕುಡಿದು ಒಂದಷ್ಟು ಹರಟೋಣ ಎಂದು ಹೋದೆವು. ಅಲ್ಲಿ ನಾವೆಲ್ಲಾ ಒಂದಷ್ಟು ಹೊತ್ತು ಮಾತನಾಡಿ ಅಲ್ಲಿಂದ ಮಂಗಳೂರಿನ ಬಿಜೈಯಲ್ಲಿರುವ ವೇದಿಕೆಯ ಅಧ್ಯಕ್ಷರೂ ಆಗಿದ್ದ, ಪ್ರಸಿದ್ಧ ಲೇಖಕ, ಹಿರಿಯ ಚೇತನ ಸುರೇಶ್ ಭಟ್ ಬಾಕ್ರಬೈಲ್ ಅವರ ಮನೆಗೂ ಹೋಗಿ ಒಂದಷ್ಟು ಹೊತ್ತು ಇದ್ದು ಮಾತನಾಡಿಸಿಕೊಂಡು ಬಂದೆವು.

ನಮ್ಮ ಭೇಟಿಯ ಫೋಟೋವನ್ನು ನಾನು ಪಜೀರಿನ ಹೈದ ಎಂಬ ನನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದೆ. ಇದನ್ನು ನೋಡಿ ಮಾಜಿ ಆರೆಸ್ಸೆಸ್ಸೂ, ಹಾಲಿ ಕಾಂಗ್ರೆಸ್ಸೂ ಆಗಿರುವ ಸುಳ್ಯದ ಲಕ್ಷ್ಮೀಶ ಗಬ್ಲಡ್ಕ ಎಂಬವರಿಗೆ ಉರಿಯೆದ್ದಿದೆ. ಅವರು ಪ್ರಸ್ತುತ ಕರ್ನಾಟಕ ಸರಕಾರದ ಧಾರ್ಮಿಕ ಪರಿಷತ್ ಸದಸ್ಯರೂ ಹೌದು. ಅವರು ನನ್ನ ಎಫ್.ಬಿ.ವಾಲ್‌ಗೆ ಬಂದು ಸುರೇಶ್ ಭಟ್ ಮತ್ತು ಗೌರಿಲಂಕೇಶರೇ ಜಿಲ್ಲೆಯಲ್ಲಿ ಕೋಮು ಬೆಂಕಿ ಹತ್ತಿಕೊಳ್ಳಲು ಕಾರಣ ಎಂದು ಕಾಮೆಂಟ್ ಮಾಡಿದರು. ಗೌರಿಯಕ್ಕ ಮತ್ತು ಭಟ್ರ ಅತ್ಯಂತ ಆಪ್ತ ಬಳಗದವನಾದ ನನಗೆ ಸಹಜವಾಗಿಯೇ ಸಿಟ್ಟು ಬಂದಿತ್ತು. ಆದರೂ ಅತ್ಯಂತ ಶಾಂತವಾಗಿಯೇ ಪ್ರತಿಕ್ರಿಯಿಸಿದ್ದೆ. ಆದರೆ ಲಕ್ಷ್ಮೀಶರು ತನ್ನ ಮೊಂಡು ವಾದವನ್ನು ಮುಂದುವರಿಸಿ ಪದೇ ಪದೇ ಸುಳ್ಳಾರೋಪ ಮಾಡಿದರು.

ಗೌರಿ ಲಂಕೇಶ್ ಮತ್ತು ಸುರೇಶ್ ಭಟ್ ಮೇಲೆ ಇಂತಹ ಸುಳ್ಳಾರೋಪ ಹೊರಿಸಿದ ಈ ವ್ಯಕ್ತಿ ನಾವು ಮಂಗಳೂರಿನ ಬೀದಿಯಲ್ಲಿ ನಿಂತು ಎಲ್ಲಾ ವಿಧದ ರಿಸ್ಕ್ ಮೈ ಮೇಲೆಳೆದುಕೊಂಡು ಸಂಘ ಪರಿವಾರದ ಕೋಮುವಾದದ ವಿರುದ್ಧ ಶರಂಪರ ಹೋರಾಡುತ್ತಿದ್ದ ಕಾಲದಲ್ಲಿ ಜಿಲ್ಲೆಯ ವಿವಿದೆಡೆ ಕೋಮು ಬೆಂಕಿಗೆ ಹೊತ್ತಿಸುವಂತಹ ಬೆಂಕಿ ಭಾಷಣ ಮಾಡುತ್ತಿದ್ದವರು. ಸುರೇಶ್ ಭಟ್ರ ಮೇಲಿನ ಲಕ್ಷ್ಮೀಶರ ಕೋಪಕ್ಕೆ ಕಾರಣ ಸುರೇಶ್ ಭಟ್ ಮತ್ತು ಲಕ್ಷ್ಮೀಶ ಇಬ್ಬರೂ ಬ್ರಾಹ್ಮಣ ಜಾತಿಯ ಹವ್ಯಕ ಪಂಗಡಕ್ಕೆ ಸೇರಿದವರು. ಹವ್ಯಕ ಪಂಗಡದ ಹೊಸನಗರ ರಾಮಚಂದ್ರಾಪುರ ಮಠದ ಸ್ವಾಮಿಯ ಅವ್ಯವಹಾರ, ಪುತ್ತೂರಿನ ಮಹಿಳೆಯೊಬ್ಬರಿಗೆ ನೀಡಿದ ಲೈಂಗಿಕ ಕಿರುಕುಳ ಇವುಗಳನ್ನು ವಿರೋಧಿಸಿ ಸುರೇಶ್ ಭಟ್ ನಿರಂತರವಾಗಿ ಬರೆದಿದ್ದರು. ತನ್ನ ಜಾತಿಯ ಸ್ವಾಮಿಯೊಬ್ಬನಿಗೆ ಸ್ವತಃ ಜಾತಿ ಬಾಂಧವರೇ ಆದ ಸುರೇಶ್ ಭಟ್ ಯಕ್ಕಾ ಮಕ್ಕಾ ಉಗಿದು ಬರೆದ ಸಿಟ್ಟು ಲಕ್ಷ್ಮೀಶರಿಗೆ ಈಗಲೂ ಇದೆ. ಆ ಕಾರಣವನ್ನೇ ಮುಂದಿಟ್ಟುಕೊಂಡು ಭಟ್ರನ್ನು ನಿಂದಿಸಲು ಈತ ನೆಪ ಕಂಡುಕೊಂಡಿದ್ದಾರೆ.

ಸುರೇಶ್ ಭಟ್ ಮತ್ತು ಗೌರಿಯಕ್ಕ ನಾಸ್ತಿಕರಾಗಿದ್ದರೂ, ಅವರು ಯಾವುದೇ ಧರ್ಮ ಜಾತಿಯನ್ನು ನಿಂದಿಸುವ ಕೆಲಸವನ್ನು ಯಾವತ್ತೂ ಮಾಡಿಲ್ಲ. ಜಾತಿಯ ಹೆಸರಿನ ಅಸಮಾನತೆ ಶೋಷಣೆಗಳ ವಿರುದ್ಧ ಜವಾಬ್ದಾರಿಯುತ ನಾಗರಿಕರಾಗಿ ಧ್ವನಿಯೆತ್ತಿದ್ದಾರಷ್ಟೆ. ಹಾಗೆ ನೋಡಿದರೆ ನಮ್ಮ ಕೋಮು ಸೌಹಾರ್ದ ವೇದಿಕೆಯಲ್ಲಿ ಆಸ್ತಿಕ ಹಿಂದೂಗಳೂ ಇದ್ದರು. ನನಗೆ ತಿಳಿದ ಪ್ರಕಾರ ಗೌರಿಯಕ್ಕನ ಕಚೇರಿಯ ಸಿಬ್ಬಂದಿಯೊಬ್ಬರು ಅಯ್ಯಪ್ಪ ವೃತ ಆಚರಿಸಿ ಮಾಲೆ ಧರಿಸಿ ಕಚೇರಿಗೆ ಬರುತ್ತಿದ್ದರು. ಗೌರಿಯಕ್ಕನಿಗೆ ವಿಶ್ವಾಸವಿರಲಿಲ್ಲವಾದರೂ, ಅವರ ವಿಶ್ವಾಸವನ್ನು ಗೌರವಿಸುತ್ತಿದ್ದರು. ಹಿಂದೂ ಹೆಸರಿಟ್ಟ ಮಾತ್ರಕ್ಕೆ ಆತ ಹಿಂದೂ ಧರ್ಮವನ್ನು ಫಾಲೋ ಮಾಡಲೇಬೇಕೆಂದಿದೆಯೇ..? ಮುಸ್ಲಿಮ್ ಹೆಸರಿಟ್ಟ ಮಾತ್ರಕ್ಕೆ ಆತ ಇಸ್ಲಾಮ್ ಧರ್ಮವನ್ನು ಫಾಲೋ ಮಾಡುತ್ತಾನೆನ್ನಲಾಗುತ್ತದೆಯೇ..? ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಂ ಹೆಸರಿರುವವರಲ್ಲಿ ನಾಸ್ತಿಕರ ಸಂಖ್ಯೆ ಕಡಿಮೆಯಿರಬಹುದು. ಆದರೆ ಧರ್ಮವನ್ನು ಫಾಲೋ ಮಾಡದವರು ಧಾರಾಳವಾಗಿದ್ದಾರೆ.

ಭಾರತದಂತಹ ಧರ್ಮ ನಿರಪೇಕ್ಷ ದೇಶದಲ್ಲಿ ಎಲ್ಲರಿಗೂ ಅವರವರ ಇಷ್ಟದಂತೆ ಬದುಕುವ ಹಕ್ಕಿದೆ.ಆ ಹಕ್ಕನ್ನು ಪ್ರಶ್ನಿಸುವುದು ಕೂಡಾ ಅಪರಾಧವಾಗುತ್ತದೆ. ಆದರೆ ಧರ್ಮ ಮತ್ತು ಜಾತಿಯ ಹೆಸರಲ್ಲಿ ನಡೆಯುವ ಅಮಾನವೀಯ ವಿಚಾರಗಳನ್ನು,_ತಾರತಮ್ಯಗಳನ್ನು, ಶೋಷಣೆಗಳನ್ನು ಪ್ರಶ್ನಿಸಲೇಬೇಕು..ಸ್ವತಃ ನಾನೇ ದೆಹಲಿಯ ಶಾಹಿ ಇಮಾಂ ಬುಖಾರಿಯ ಐಲುಗಳು ಮತ್ತು ಜಾಮಾ ಮಸೀದಿಯ ಆಸ್ತಿಗಳ ದುರ್ಬಳಕೆಗಳ ವಿರುದ್ಧ ಉಗಿದು ಬರೆದಿದ್ದನ್ನೂ ಗೌರಿಯಕ್ಕ ಪ್ರಕಟಿಸಿದ್ದರು. ಗೌರಿಯಕ್ಕ ರಾಜಕೀಯ ಮತ್ತು ಧಾರ್ಮಿಕ ಶೋಷಣೆಯ ಕಡು ವಿರೋಧಿಯಾಗಿದ್ದರು. ಅವರೂ ಈಗಿನ ಮಾರಿಕೊಂಡ ಮಾಧ್ಯಮಗಳಂತೆ ಪತ್ರಿಕೆ ನಡೆಸುತ್ತಿದ್ದರೆ, ಕೋಮುವಾದವನ್ನು ವಿರೋಧಿಸಿ ಬೀದಿಗಿಳಿಯದೇ ಎ‌.ಸಿ ರೂಮಲ್ಲಿ ಕೂತು ಬರೆಯುತ್ತಿದ್ದರೆ ಅವರು ಬೀದಿಯಲ್ಲಿ ಬಿದ್ದು ಕೊನೆಯುಸಿರೆಳೆಯಬೇಕಾಗಿ ಬರುತ್ತಿರಲಿಲ್ಲ.

2013-18ರ ಸಿದ್ಧರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದುದರಲ್ಲಿ ಗೌರಿ ಲಂಕೇಶ್ ಮತ್ತು ಕೋಮು ಸೌಹಾರ್ದ ವೇದಿಕೆಯ ಪ್ರಯತ್ನವೂ ಇತ್ತು. ನಾವು 2013ರ‌‌ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಬೀದಿಗಿಳಿದು ದುಡಿದಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರಿಯಕ್ಕನಿಗೆ ಆಪ್ತರಿದ್ದರು. ಗೌರಿಯಕ್ಕ ಬಯಸುತ್ತಿದ್ದರೆ ಆ ದಿನಗಳಲ್ಲಿ ತನ್ನ ಆರ್ಥಿಕ ಸಂಕಷ್ಟಕ್ಕೆ ಪ್ರಭುತ್ವದಿಂದ ನೆರವು ಪಡೆಯಬಹುದಿತ್ತು. ಯಾವುದಾದರೂ ಆಯಕಟ್ಟಿನ ಅಧಿಕಾರದ ಹುದ್ದೆಯಲ್ಲಿ ಕೂರಬಹುದಿತ್ತು. ಗೌರಿಯಕ್ಕ ಸಮ ಸಮಾಜದ ನಿರ್ಮಾಣಕ್ಕಾಗಿ ಕೊನೆಯುಸಿರಿನವರೆಗೂ ಹೋರಾಡಿದರು. ಪತ್ರಿಕೆಯನ್ನು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ಅಸ್ತ್ರವಾಗಿ ಬಳಸಿದರು. ಇಂತಹ ಗೌರಿಯಕ್ಕ ಏನೆಂದು ಅವರ ಸಂಗಾತಿಗಳಾದ ನಮಗೆ ಈ ಬೆಂಕಿ ಭಾಷಣಕಾರರಿಂದ ಅರಿಯಬೇಕೇ..?

ಲಕ್ಷ್ಮೀಶ ಗಬ್ಲಡ್ಕರನ್ನು ಆರೆಸ್ಸೆಸ್ ಮತ್ತು ಬಿಜೆಪಿ ಬಳಸುತ್ತದೆಯೇ ಹೊರತು, ಲಾಭ ಮಾಡಿಕೊಳ್ಳುವ ಅವಕಾಶ ನೀಡುವುದಿಲ್ಲ ಎಂದರಿವಾದಾಗ ಕಾಂಗ್ರೆಸ್‌ಗೆ ಹಾರಿದ್ದಾರೆಯೇ ಹೊರತು, ಸಮ ಸಮಾಜದ ಆಶಯಕ್ಕಾಗಿಯೋ, ಸಂವಿಧಾನದ ರಕ್ಷಣೆಗಾಗಿಯೋ ಅವರು ನಿಷ್ಠೆ ಬದಲಾಯಿಸಿದ್ದಲ್ಲ. ಕಾಂಗ್ರೆಸ್‌ ಸೇರಿದ್ದರೂ ಗಬ್ಲಡ್ಕರ ಮನಸ್ಥಿತಿ ಬದಲಾಗಿದೆಯೆಂದು ನನಗನಿಸುವುದಿಲ್ಲ.

ಇನ್ನು ಸುರೇಶ್ ಭಟ್‌ರ ಜೊತೆ ಹತ್ತು ವರ್ಷಗಳ ಕಾಲ ಓರ್ವ ಕಿರಿಯ ಸಂಗಾತಿಯಾಗಿ ಕೆಲಸ ಮಾಡಿದವ ನಾನು. ಅವರ ಅಧ್ಯಕ್ಷತೆಯ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಸಮಿತಿಯಲ್ಲಿ ನಾಲ್ಕು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ದುಡಿದವ ನಾನು. ಭಟ್ರು ಹೇಗೆಂದು ನಿನ್ನೆ ಮೊನ್ನೆವರೆಗೆ ದ್ವೇಷ ಭಾಷಣ ಮಾಡಿಕೊಂಡಿದ್ದ ಗಬ್ಲಡ್ಕರಿಂದ ನಾನು ಕಲಿಯಬೇಕೇ..? ಇದೇ ಗಬ್ಲಡ್ಕ ದ್ವೇಷ ಭಾಷಣ ಮಾಡುತ್ತಿದ್ದ ಕಾಲದಲ್ಲಿ ಅಂತಹದ್ದರ ದಾಖಲೀಕರಣ ಮಾಡ್ಕೊಂಡು ವರದಿ ತಯಾರಿಸುತ್ತಿದ್ದ ಹಿರಿ ಜೀವ ಸುರೇಶ್ ಭಟ್.

ಭಟ್ರು ಮೂಲತಃ ಓರ್ವ ಇಂಜಿನಿಯರ್ ದೇಶ ವಿದೇಶದ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ದುಡಿದು ನಿವೃತ್ತರಾದವರು. ಅವರಿಗೂ ಎಲ್ಲರಂತೆಯೇ ಆರಾಮವಾಗಿ ನಿವೃತ್ತ ಜೀವನ ಕಳೆಯಬಹುದಿತ್ತು.ಇಬ್ಬರು ಮಕ್ಕಳು ಒಳ್ಳೊಳೆಯ ಉದ್ಯೋಗದಲ್ಲಿದ್ದಾರೆ. ಆದರೆ ಭಟ್ರದ್ದು ಅನ್ಯಾಯಕ್ಕೆ ಕಣ್ಮುಚ್ಚುವ ಜಾಯಮಾನವಲ್ಲ. 2005ರ ಬಳಿಕವೇ ಭಟ್ರು ಲೇಖನಿ ಕೈಗೆತ್ತಿಕೊಂಡದ್ದು.ಅಲ್ಲಿಂದಾರಂಭಿಸಿದ ಭಟ್ರು 2020ರವರೆಗೆ ನಿರಂತರವಾಗಿ ಅನ್ಯಾಯದ ವಿರುದ್ಧ, ಅಕ್ರಮದ ವಿರುದ್ಧ, ಕೋಮುವಾದ, ಜಾತಿವಾದದ ವಿರುದ್ಧ ಬೀದಿಯಲ್ಲಿ ನಿಂತು ಹೋರಾಡಿದರು,ಬರೆದರು.. ಅವರು ವೈಯಕ್ತಿಕವಾಗಿ ನಾಸ್ತಿಕರಾದರೂ ಯಾರದೇ ವಿಶ್ವಾಸಗಳನ್ನು ಪ್ರಶ್ನಿಸಲಿಲ್ಲ, ಎಲ್ಲರನ್ನೂ ಗೌರವಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸಂಘರ್ಷಗಳ ಕುರಿತಂತೆ ಅಧ್ಯಯನ ಮಾಡಲು ದೇಶ ವಿದೇಶದ ಪತ್ರಕರ್ತರಿಗೆ ಸಿಗುವ ಅತ್ಯಂತ ನಂಬಿಕಸ್ಥ ಸಂಪನ್ಮೂಲ ಭಟ್ರೊಬ್ಬರೇ ಆಗಿದ್ದಾರೆ. ಅವರಲ್ಲಿರುವಷ್ಟು ದಾಖಲೆ ಇಡೀ ರಾಜ್ಯದಲ್ಲಿ ಇನ್ನೊಬ್ಬರ ಕೈಯಲ್ಲಿರಲಿಕ್ಕಿಲ್ಲ. ಭಟ್ರು ಆಧಾರವಿಲ್ಲದೇ ಒಂದೇ ಒಂದು ಮಾತು ಆಡುವುದಿಲ್ಲ, ಒಂದೇ ಒಂದು ಗೆರೆ ಬರೆಯುವುದಿಲ್ಲ. ಹತ್ತು ಹಲವು ಅನ್ಯಾಯಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದರು‌. ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ 2013ರಲ್ಲಿ ಸಂಘ ಪರಿವಾರದ ಹುಡುಗನೊಬ್ಬ ಸೆಗಣಿ ಎರಚಿದಾಗ ಭಟ್ರ ಜೊತೆಗಿದ್ದ ನಾನು, ಇಸ್ಮಾಯಿಲ್ ಕರ್ವೇಲ್ ಆ ಹುಡುಗನನ್ನು ಹಿಡಿದೆವು. ಅವನಿಗೆ ನಾವು ನಾಲ್ಕು ಬಾರಿಸಿದಾಗ ಭಟ್ರೇ ಸ್ವತಃ ಬಂದು ಅವನಿಗೆ ಹೊಡೆಯದಂತೆ ನಮ್ಮನ್ನು ತಡೆದಿದ್ದರು. ಸಂತನಂತೆ ಬದುಕುವ ಭಟ್ರಿಗೆ ಈಗ ಎಂಬತ್ತರ ಹರೆಯ. ಸದ್ಯ ಸ್ವಲ್ಪ ಆರೋಗ್ಯದ ಸಮಸ್ಯೆಯಿಂದ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಅವರ ಅಧ್ಯಯನಕ್ಕೇನೂ ಚ್ಯುತಿಯಾಗಲಿಲ್ಲ. ಮೊನ್ನೆ ಮೋಹನ್ ಜೊತೆ ಮಾತನಾಡುವಾಗಲೂ ಭಟ್ರ ಮಾತುಗಳು ನಾಡಿನ ನೆಮ್ಮದಿಯನ್ನೇ ಕನಸುತ್ತಿದ್ದವು.

ಗೌರಿ ಲಂಕೇಶ್ ಮತ್ತು ಭಟ್ರು ಆರೆಸ್ಸೆಸ್ಸಿನ ಕಡು ವಿರೋಧಿಗಳಾಗಿದ್ದರು. ಇವರಿಬ್ಬರೂ ಹಿಂದಿನಿಂದಲೂ ಹಿಂದೂ ಧರ್ಮ ಮತ್ತು ಹಿಂದೂತ್ವದ ನಡುವಿನ ಗೆರೆಯನ್ನು ಪ್ರತ್ಯೇಕಿಸುತ್ತಾ ಬಂದವರು. ಹಿಂದೂತ್ವ ಎನ್ನುವುದು ದ್ವೇಷ ಬಿತ್ತುವ ರಾಜಕೀಯ ಅಜೆಂಡಾ ಎಂದು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸುತ್ತಿದ್ದ ಗೌರಿಯಕ್ಕ ಮತ್ತು ಭಟ್ರು ಹಿಂದೂತ್ವವಾದಿಗಳಿಗೆ ನುಂಗಲಾರದ ಬಿಸಿ ತುಪ್ಪವೂ ಆಗಿದ್ದರು. ಹಿಂದೂತ್ವ ಸಿದ್ದಾಂತದ ಪ್ರಬಲ ಪ್ರತಿಪಾದಕರಾದ ಗಬ್ಲಡ್ಕ ಬದಲಿಸಿದ್ದು ಪಕ್ಷವನ್ನೇ ಹೊರತು, ಸಿದ್ಧಾಂತವನ್ನಲ್ಲ ಎನ್ನುವುದಕ್ಕೆ ಅವರು ನನ್ನ ಫೇಸ್‌ಬುಕ್ ಪೋಸ್ಟ್‌ಗೆ ಹಾಕಿದ ಕಾಮೆಂಟ್‌ಗಳೇ ಸಾಕ್ಷಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...