ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್ ಖಾತೆಗಳನ್ನು ದೈನಂದಿನ ವೆಚ್ಚಗಳಿಗಾಗಿ ಬಳಸಲು ಕಲ್ಕತ್ತಾ ಹೈಕೋರ್ಟ್ ಗುರುವಾರ (ಜುಲೈ 9) ಅನುಮತಿ ನೀಡಿದೆ.
ಟಿಎಂಸಿ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಯಾವುದೇ ಬಲವಾದ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿರುವ ಸೆಪ್ಟೆಂಬರ್ 30ರವರೆಗೆ ಈ ಮೂರು ಖಾತೆಗಳನ್ನು ಬಳಸಲು ಪಕ್ಷಕ್ಕೆ ಮುಕ್ತ ಅವಕಾಶ ನೀಡಿದೆ. ಅಲ್ಲದೆ, ಈ ಖಾತೆಗಳ ನಿರ್ವಹಣೆಯನ್ನು ನಿಯಂತ್ರಿಸಲು ಕಲ್ಕತ್ತಾ ಹೈಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಸುಬ್ರತಾ ತಾಲೂಕ್ದಾರ್ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಿದೆ.
ಇದೇ ವೇಳೆ, ಬಂಡಾಯ ಟಿಎಂಸಿ ಶಾಸಕರು ನೀಡಿದ ದೂರಿನ ಆಧಾರದ ಮೇಲೆ ತರಾತುರಿಯಲ್ಲಿ ಕ್ರಮ ಕೈಗೊಂಡಿದ್ದಕ್ಕಾಗಿ ಪಶ್ಚಿಮ ಬಂಗಾಳ ಪೊಲೀಸರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. “ಈ ದೂರನ್ನು ಜೂನ್ 18 ರಂದು ದಾಖಲಿಸಲಾಗಿದೆ ಮತ್ತು ಮರುದಿನವೇ ಅಂದರೆ ಜೂನ್ 19 ರಂದು ಖಾತೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬೆಳವಣಿಗೆಗಳನ್ನು ನೋಡಿದಾಗ ದೂರು ದಾಖಲಿಸಿದ್ದೇ ಈ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಎಂಬಂತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಜೂನ್ 18ರಂದು ನಿಮ್ಮ ಬಳಿ ಇದ್ದ ಸಾಕ್ಷ್ಯಗಳಾದರೂ ಏನು? ಎಲ್ಲವೂ ಇಷ್ಟು ಮಿಂಚಿನ ವೇಗದಲ್ಲಿ ಏಕೆ ನಡೆಯುತ್ತಿದೆ? ಒಬ್ಬ ಬಡ ನಾಗರಿಕ ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ಇಷ್ಟು ವೇಗವಾಗಿ ಕ್ರಮ ಕೈಗೊಳ್ಳುವುದು ಅಪರೂಪ, ಆದರೆ ಈ ಪ್ರಕರಣದಲ್ಲಿ ದೂರು ದಾಖಲಾದ ತಕ್ಷಣ ಖಾತೆಗಳನ್ನು ಫ್ರೀಜ್ ಮಾಡಲಾಗಿದೆಯೇ?” ಎಂದು ನ್ಯಾಯಮೂರ್ತಿ ಸೌಗತ ಭಟಾಚಾರ್ಯ ಪ್ರಶ್ನಿಸಿದರು.
ಪ್ರಕರಣದಲ್ಲಿ ದೂರುದಾರರಾಗಿರುವ ಬಂಡಾಯ ಟಿಎಂಸಿ ಶಾಸಕರ ನಡವಳಿಕೆಯನ್ನೂ ನ್ಯಾಯಾಲಯ ಪ್ರಶ್ನಿಸಿದೆ. ಮೇ 4 ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲು, ಇದೇ ದೂರುದಾರರು ಟಿಎಂಸಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾಗ ಇದೇ ಖಾತೆಗಳ ಹಣವನ್ನು ಬಳಸಿದ್ದರು. ಆದರೆ ತಾವು ಮತ್ತೊಂದು ಬಣ ಸೇರಿದ ನಂತರವೇ ಈ ಖಾತೆಗಳಿಗೆ ಅಕ್ರಮ ಹಣ ಜಮೆಯಾಗಿದೆ ಎಂದು ಆರೋಪಿಸುತ್ತಿರುವುದನ್ನು ಕೋರ್ಟ್ ಗಮನಿಸಿತು.
ರಾಜ್ಯ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಳ್ಳಲು ಅಟಾರ್ನಿ ಜನರಲ್ ತುಷಾರ್ ಮೆಹ್ತಾ ಹೊಸ ದೆಹಲಿಯಿಂದ ಆಗಮಿಸಿದ್ದರೆ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಟಿಎಂಸಿ ಪರವಾಗಿ ವಾದ ಮಂಡಿಸಿದರು.
“ರಾಜಕೀಯ ಪಕ್ಷವೊಂದನ್ನು ಈ ರೀತಿ ಆರ್ಥಿಕವಾಗಿ ಹತ್ತಿಕ್ಕಿದರೆ, ಅದು ಪ್ರಜಾಪ್ರಭುತ್ವದ ಸಮಾನ ಅವಕಾಶದ (level playing field) ತತ್ವವನ್ನು ನಾಶಪಡಿಸುತ್ತದೆ” ಎಂದು ಸಿಂಘ್ವಿ ವಾದಿಸಿದರು. ಪೊಲೀಸರ ಆತುರದ ಕ್ರಮವನ್ನು ಉಲ್ಲೇಖಿಸಿ ಲೇವಡಿ ಮಾಡಿದ ಅವರು, “ನಮ್ಮ ದೇಶದಲ್ಲಿ ಎಲ್ಲಾ ಪ್ರಕರಣಗಳೂ ಇಷ್ಟೇ ವೇಗವಾಗಿ ನಡೆದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದರು. ಪೊಲೀಸರಿಗೆ ನೀಡಲಾದ ದೂರು ಯಾವುದೇ ನಿರ್ದಿಷ್ಟ ಆರೋಪಗಳಿಲ್ಲದೆ “ಅಸ್ಪಷ್ಟ”ವಾಗಿತ್ತು ಮತ್ತು ಬ್ಯಾಂಕ್ ಖಾತೆಗಳನ್ನು ಬಳಸದಂತೆ ತಡೆದಿರುವುದು ಒಂದು ಮಾನ್ಯತೆ ಪಡೆದ ರಾಜಕೀಯ ಪಕ್ಷದ ದೈನಂದಿನ ಕಾರ್ಯನಿರ್ವಹಣೆಯನ್ನೇ ಸ್ಥಗಿತಗೊಳಿಸಿದೆ ಎಂದು ಅವರು ಪ್ರತಿಪಾದಿಸಿದರು.
ರಾಜ್ಯ ಪೊಲೀಸರ ಪರವಾಗಿ ಹಾಜರಾದ ತುಷಾರ್ ಮೆಹ್ತಾ ಅವರು ಕ್ರಮವನ್ನು ಸಮರ್ಥಿಸಿಕೊಂಡರು ಮತ್ತು ತನಿಖೆಯ ಸಂದರ್ಭದಲ್ಲಿ ಆಸ್ತಿಯನ್ನು ವಶಪಡಿಸಿಕೊಳ್ಳಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 106 ಪೊಲೀಸರಿಗೆ ಅಧಿಕಾರ ನೀಡುತ್ತದೆ ಎಂದು ವಾದಿಸಿದರು. ಅಪರಾಧದ ಹಣ ದುರ್ಬಳಕೆಯಾಗುವುದನ್ನು ತಡೆಯಲು ಖಾತೆಗಳನ್ನು ಫ್ರೀಜ್ ಮಾಡುವುದು ಅಗತ್ಯವಾಗಿತ್ತು. ಒಂದು ವೇಳೆ ಕೋರ್ಟ್ ಯಾವುದಾದರೂ ಒಂದು ಬಣಕ್ಕೆ ಖಾತೆ ನಿರ್ವಹಿಸಲು ಅನುಮತಿ ನೀಡಿದರೆ, ಅದು ಆ ಬಣವನ್ನೇ ಅಸಲಿ ಟಿಎಂಸಿ ಎಂದು ಮನ್ನಣೆ ನೀಡಿದಂತಾಗುತ್ತದೆ ಎಂದು ಅವರು ವಾದಿಸಿದರು.
ಆದರೆ ನ್ಯಾಯಾಲಯವು ಈ ವಾದವನ್ನು ನಿರಾಕರಿಸಿ, “ನೀವು ಟಿಎಂಸಿ ಸದಸ್ಯರಾಗಿದ್ದೀರಿ, ಚುನಾವಣೆಯಲ್ಲಿ ಸ್ಪರ್ಧಿಸಿದ್ದೀರಿ, ಈ ಸಮಯ ಮತ್ತು ನಿಮ್ಮ ನಡವಳಿಕೆ ಪ್ರಸ್ತುತ ಹಂತದಲ್ಲಿ ನಂಬಿಕೆ ಹುಟ್ಟಿಸುವಂತಿಲ್ಲ” ಎಂದು ಕೋರ್ಟ್ ಕಠಿಣವಾಗಿ ಹೇಳಿತು. ಮುಂದುವರಿದು, ರಾಜಕೀಯ ಪಕ್ಷವೊಂದಕ್ಕೆ ಮನ್ನಣೆ ನೀಡುವುದು ಭಾರತೀಯ ಚುನಾವಣಾ ಆಯೋಗದ (ಇಸಿಐ) ಕೆಲಸ ಎಂದು ಹೈಕೋರ್ಟ್ ಹೇಳಿದೆ. ಚುನಾವಣಾ ಆಯೋಗವು ತನ್ನ ತೀರ್ಪನ್ನು ನೀಡಿದ ನಂತರ, ಅರ್ಜಿದಾರರು ಕೋರ್ಟ್ ಆದೇಶದ ಮಾರ್ಪಾಡಿಗೆ ಮನವಿ ಮಾಡಲು ಸ್ವತಂತ್ರರು ಎಂದು ಸ್ಪಷ್ಟಪಡಿಸಿತು.
ಪಕ್ಷದ ಖಾತೆಗಳಿಗೆ “ಅಕ್ರಮ ಹಣ” ಹರಿದುಬಂದಿರುವ ಸಾಕ್ಷ್ಯಗಳನ್ನು ಹುಡುಕಲು ಇಡಿ ದಾಳಿ ನಡೆಸಿದ ಬೆನ್ನಲ್ಲೇ, ಬುಧವಾರದಂದು ಟಿಎಂಸಿಯ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿತ್ತು. ಜಾರಿ ನಿರ್ದೇಶನಾಲಯವು ರಾಜಕೀಯ ಪಕ್ಷವೊಂದರ ನಿಧಿಯ ಬಗ್ಗೆ ತನಿಖೆ ನಡೆಸುತ್ತಿರುವುದು ಇದೇ ಮೊದಲು. ಈ ಹಿಂದೆ ಆಮ್ ಆದ್ಮಿ ಪಕ್ಷದ (ಆಪ್) ಖಾತೆಗಳು ಇಡಿಯ ಪರಿಶೀಲನೆಗೆ ಒಳಪಟ್ಟಿದ್ದರೂ, ಆ ತನಿಖೆಯು ದೆಹಲಿ ಮದ್ಯ ನೀತಿ ಹಗರಣದ ತನಿಖೆಯ ಭಾಗವಾಗಿತ್ತು.
ಈ ಕುರಿತು ಈ ಹಿಂದೆ ಹೇಳಿಕೆ ನೀಡಿದ್ದ ಟಿಎಂಸಿ, ‘ಪಕ್ಷದ ಬ್ಯಾಂಕ್ ಖಾತೆಗಳಲ್ಲಿರುವ ಎಲ್ಲಾ ಹಣವನ್ನು ಸಂಪೂರ್ಣವಾಗಿ ಮತ್ತು ಪಾರದರ್ಶಕವಾಗಿ ಬಹಿರಂಗಪಡಿಸಲಾಗಿದೆ. ಪಕ್ಷವು ಎಲ್ಲಾ ದೇಣಿಗೆ ವ್ಯವಹಾರಗಳನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ಆದಾಯ ತೆರಿಗೆ ಇಲಾಖೆಗೆ ನಿಯಮಿತವಾಗಿ ವರದಿ ಮಾಡಿದೆ. ಈ ವಿವರಗಳನ್ನು ಪ್ರತಿವರ್ಷ ಇಸಿಐ ವೆಬ್ಸೈಟ್ನಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ. ಎಲೆಕ್ಟೋರಲ್ ಬಾಂಡ್ಗಳಿಗೆ ಸಂಬಂಧಿಸಿದ ವಿವರಗಳು ಈಗಾಗಲೇ ಭಾರತ ಸರ್ಕಾರದ ಬಳಿ ಇವೆ, ಏಕೆಂದರೆ ಈ ಬಾಂಡ್ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವಿತರಿಸಿದ್ದು, ನಂತರ ಅದನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿದೆ’ ಎಂದು ತಿಳಿಸಿತ್ತು.
ಜಾರಿ ನಿರ್ದೇಶಾಲಯದ ಈ ಕ್ರಮವನ್ನು ರಾಜಕೀಯ ಪ್ರೇರಿತ ಮತ್ತು ಕಾನೂನುಬಾಹಿರ ಎಂದು ಖಂಡಿಸಿರುವ ಟಿಎಂಸಿ, ಇದು ಬಹುಪಕ್ಷೀಯ ವ್ಯವಸ್ಥೆಯ ಮೇಲಿನ ದಾಳಿ ಮತ್ತು ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಸಮಾನ ಅವಕಾಶದ ತತ್ವಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಹೇಳಿದೆ. ಅಲ್ಲದೆ, ಇಡಿ ಇದೇ ನಿಯಮಗಳನ್ನು ಅನುಸರಿಸಿ ಬಿಜೆಪಿಯ ನಿಧಿಯನ್ನೂ ತನಿಖೆಗೊಳಪಡಿಸುತ್ತದೆಯೇ? ಎಂಬ ‘ಅಲಿಖಿತ ಪ್ರಶ್ನೆ’ಯನ್ನು ಪಕ್ಷವು ಮುಂದಿಟ್ಟಿದೆ.


