ಜಾರ್ಖಂಡ್ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ ಪೌರತ್ವ ನಿಯಮಗಳು ಮತ್ತು ಗುರುತಿನ ಚೀಟಿಗಳು ಜಾರಿಗೆ ಬರುವ ಮುನ್ನವೇ ತಾವು ಈ ಭೂಮಿಯಲ್ಲಿ ಬದುಕುತ್ತಿರುವುದರಿಂದ, ಈ ಆಧುನಿಕ ದಾಖಲಾತಿ ವ್ಯವಸ್ಥೆಗಳು ತಮಗೆ ಅನ್ವಯಿಸುವುದಿಲ್ಲ ಎಂದು ವಾದಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ತಮ್ಮ ಪುರಾತನ ಅಸ್ತಿತ್ವ ಮತ್ತು ಸಾಂಪ್ರದಾಯಿಕ ಗುರುತನ್ನು ಉಳಿಸಿಕೊಳ್ಳಲು ಈ ಸಮುದಾಯವು ಪ್ರಸ್ತುತ ಎಸ್ಐಆರ್ ಪ್ರಕ್ರಿಯೆಯಿಂದ ದೂರ ಉಳಿಯಲು ನಿರ್ಧರಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಖುಂತಿ ಬ್ಲಾಕ್ನ (ತಾಲೂಕು) ಬಾರ್ಬಾಂಡಾ ಗ್ರಾಮದ ಮುಂಡಾ ಸಮುದಾಯದ ಸದಸ್ಯರು ತಮ್ಮನ್ನು ‘ಎಸಿ’ (AC) ಸಮುದಾಯ’ ಎಂದು ಕರೆದುಕೊಳ್ಳುತ್ತಾರೆ. ಇಲ್ಲಿ ‘ಎಸಿ’ ಎಂದರೆ ‘Ante Christum’, ಅಂದರೆ ಕ್ರಿಸ್ತಪೂರ್ವ ಎಂದರ್ಥ. ತಾವು ಈ ಭೂಮಿಯ ಅತ್ಯಂತ ಪುರಾತನ ಮೂಲ ನಿವಾಸಿಗಳು ಎಂಬುವುದನ್ನು ಸಾಬೀತುಪಡಿಸಲು ಅಥವಾ ಬಿಂಬಿಸಲು ಅವರು ತಮ್ಮ ಹೆಸರುಗಳ ಮುಂದೆ ‘ಎಸಿ’ ಎಂಬ ಪದವನ್ನು ಬಳಸುತ್ತಾರೆ.
“ನಮಗೆ ಯಾವುದೇ ದಾಖಲೆಗಳು ಬೇಡ, ನಾವು ಏಸುಕ್ರಿಸ್ತನ ಜನನಕ್ಕೂ ಮುಂಚಿನಿಂದಲೂ ಅಸ್ತಿತ್ವದಲ್ಲಿದ್ದೇವೆ. ಇದೇ ಕಾರಣಕ್ಕಾಗಿ ನಾವು ನಮ್ಮ ಹೆಸರುಗಳ ಮುಂದೆ ‘ಎಸಿ’ ಎಂದು ಬಳಸುತ್ತೇವೆ” ಎಂಬುವುದಾಗಿ ಗ್ರಾಮದ ನಿವಾಸಿ ಎಸಿ ಮಂಗ್ರಾ ಮುಂಡಾ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಉಲ್ಲೇಖಿಸಿದೆ.
ಎಸ್ಐಆರ್ ತಿರಸ್ಕರಿಸುತ್ತಿರುವುದು ಸರ್ಕಾರದ ಕಲ್ಯಾಣ ಯೋಜನೆಗಳು ಹಾಗೂ ಗುರುತಿನ ವ್ಯವಸ್ಥೆಗಳಿಂದ ಸಂಪೂರ್ಣವಾಗಿ ದೂರ ಉಳಿಯುವ ಸಮುದಾಯದ ವಿಶಾಲ ನಿರ್ಧಾರದ ಒಂದು ಭಾಗವಾಗಿದೆ. ತಾವು ಆಧಾರ್ ಕಾರ್ಡ್ ಅಥವಾ ಇತರ ಯಾವುದೇ ಗುರುತಿನ ದಾಖಲೆಗಳನ್ನು ಹೊಂದಿಲ್ಲ ಮತ್ತು ಸರ್ಕಾರದ ಪಡಿತರ ಸೌಲಭ್ಯಗಳನ್ನೂ ಪಡೆಯುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಜೇಡಿಮಣ್ಣಿನ ಹೆಂಚಿನ ಛಾವಣಿಗಳನ್ನು ಹೊಂದಿರುವ ಮಣ್ಣಿನ ಮನೆಗಳಲ್ಲಿ ವಾಸಿಸುವ ಈ ಸಮುದಾಯದ ಜನರ ದೈನಂದಿನ ಜೀವನವು ಕೃಷಿ, ಕಾಡುಗಳು ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಅವಲಂಬಿಸಿದೆ. ಇಲ್ಲಿನ ನಿವಾಸಿಗಳು ಅಕ್ಕಿ, ರಾಗಿ, ಕರಿಬೇವು ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ಅವರು ಹೆಚ್ಚಾಗಿ ಗ್ಯಾಜೆಟ್ಗಳು, ಅಡುಗೆ ಅನಿಲ ಮತ್ತು ಇತರ ಆಧುನಿಕ ಸೌಕರ್ಯಗಳಿಂದ ದೂರು ಇದ್ದಾರೆ. ಪುರುಷರು ಬಿಳಿ ಧೋತಿ, ಶರ್ಟ್ ಅಥವಾ ಕುರ್ತಾಗಳು ಮತ್ತು ಸಾಂಪ್ರದಾಯಿಕ ಪೇಠ ಧರಿಸುತ್ತಾರೆ. ಮಹಿಳೆಯರು ಬಿಳಿ ಸೀರೆ ಉಡುತ್ತಾರೆ. ಈ ಸಮುದಾಯದ ಜನರು ತಾವು ಧೂಮಪಾನ ಮಾಡುವುದಿಲ್ಲ ಮತ್ತು ಸ್ಥಳೀಯ ಅಕ್ಕಿ ಬ್ರೂವಾದ ‘ಹರಿಯಾ’ ಕುಡಿಯುವುದಿಲ್ಲ ಎಂದು ಹೇಳಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿರುವ ಅಧಿಕಾರಿಗಳು, ಸ್ಥಳೀಯರನ್ನು ಒಪ್ಪಿಸಲು ಪದೇ ಪದೇ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.
“ನಾವು ಪ್ರಕೃತಿಯ ನಿಯಮಗಳಿಗನುಸಾರವಾಗಿ ಬದುಕುತ್ತೇವೆ ಎಂದು ಅವರು ಹೇಳುತ್ತಾರೆ” ಎಂಬುವುದಾಗಿ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ದುಲಾರಿ ಹೊರೊ ಎಂಬವರು ತಿಳಿಸಿದ್ದಾರೆ. ಬುಧವಾರದ ಗಡುವಿಗಿಂತ ಮುಂಚಿತವಾಗಿ ಮತದಾರರ ವಿವರಗಳ ನಮೂನೆಯನ್ನು ಸಂಗ್ರಹಿಸಲು ಅವರು ಮತ್ತೊಮ್ಮೆ ಪ್ರಯತ್ನಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ವರದಿ ವಿವರಿಸಿದೆ.
“ಈ ಸಮುದಾಯದ ಮಕ್ಕಳು ಶಾಲೆಗೆ ಹೋಗುತ್ತಾರೆ, ಆದರೆ ಅಲ್ಲಿ ನೀಡುವ ಬಿಸಿಯೂಟವನ್ನು ತಿನ್ನುವುದಿಲ್ಲ” ಎಂದು ಹೊರೊ ಅವರು ಹೇಳಿದ್ದಾರೆ. “ಮಕ್ಕಳ ಜನನ ಸಾಮಾನ್ಯವಾಗಿ ಮನೆಗಳಲ್ಲೇ ಆಗುತ್ತದೆ ಮತ್ತು ಅನೇಕ ನವಜಾತ ಶಿಶುಗಳ ಹೆಸರನ್ನು ಸರ್ಕಾರಿ ದಾಖಲೆಗಳಲ್ಲಿ ನೋಂದಾಯಿಸುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.
ಖುಂತಿ ಬಿಡಿಒ ಜ್ಯೋತಿ ಕುಮಾರಿ ಅವರು ಮಾತನಾಡಿ, ಬಾರ್ಬಾಂಡಾ ಗ್ರಾಮದ 27 ಅರ್ಹ ಮತದಾರರು ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಖುಂತಿ ತಾಲ್ಲೂಕಿನ ಕನಿಷ್ಠ 15 ಬೂತ್ಗಳಲ್ಲಿ ಸುಮಾರು 700 ಜನರು ಮತದಾರರ ವಿವರಗಳ ನಮೂನೆಯನ್ನು ಸಲ್ಲಿಸಿಲ್ಲ ಎಂದು ಅವರು ಹೇಳಿದ್ದಾರೆ.
“ಅವರು (ಬುಡಕಟ್ಟು ಸಮುದಾಯದ ಜನರು) ಬಹುಮಟ್ಟಿಗೆ ಸರ್ಕಾರದ ಅಧಿಕೃತ ಕಲ್ಯಾಣ ಯೋಜನೆಗಳು ಮತ್ತು ಗುರುತಿನ ವ್ಯವಸ್ಥೆಗಳಿಂದ ಹೊರಗುಳಿದಿದ್ದಾರೆ” ಎಂದು ಕುಮಾರಿ ತಿಳಿಸಿದ್ದಾರೆ.
ಮುಖ್ಯ ಚುನಾವಣಾ ಅಧಿಕಾರಿ ಕೆ. ರವಿ ಕುಮಾರ್ ಅವರು ಮಾತನಾಡಿ, ಅಧಿಕಾರಿಗಳು ಸ್ಥಳೀಯರನ್ನು ಸಂಪರ್ಕಿಸುವ ಪ್ರಯತ್ನವನ್ನು ಮುಂದುವರಿಸಲಿದ್ದಾರೆ ಎಂದು ಹೇಳಿದ್ದಾರೆ. “ಅವರು ಭಾರತದ ನಾಗರಿಕರು, ಹಾಗಾಗಿ ನಾವು ಅವರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಲೇ ಇರುತ್ತೇವೆ” ಎಂದು ತಿಳಿಸಿದ್ದಾರೆ. “ಆದಾಗ್ಯೂ, ಅವರು ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರೆ, ಅಂತಿಮವಾಗಿ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬಹುದು” ಎಂದು ಎಚ್ಚರಿಸಿದ್ದಾರೆ.


