ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೊಪ್ಪಳ ತಾಲೂಕು ನಾಗೇಶನಹಳ್ಳಿ ಗ್ರಾಮದ ರವಿ ಎಂಬವರು ನೀಡಿದ ದೂರಿನ ಅನ್ವಯ ಭಾರತೀಯ ನ್ಯಾಯಸಂಹಿತೆ (ಬಿಎನ್ಎಸ್) ಸೆಕ್ಷನ್ 189(2), 191(2), 118(1), 115(2), 351(2), 352, 191 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(r), 3(1)(s), 3(2)(va) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ಸೆಪ್ಟೆಂಬರ್ 16 (ಬುಧವಾರ) ನಾಗೇಶನಹಳ್ಳಿ ಗ್ರಾಮದ ಇಮ್ಮಡಿ ಪುಲಿಕೇಶಿ ಯುವಕ ಮಿತ್ರಮಂಡಳಿ ವತಿಯಿಂದ ಗ್ರಾಮದ ಪ್ರಾಥಮಿಕ ಶಾಲೆಯಿಂದ ಸರ್ಕಾರಿ ಪ್ರೌಢ ಶಾಲೆಯವರೆಗೆ ಗಣೇಶ ವಿಸರ್ಜನೆ ಮೆರವಣಿ ಹಮ್ಮಿಕೊಳ್ಳಲಾಗಿತ್ತು. ರಾತ್ರಿ 11.30ರ ವೇಳೆಗೆ ಯುವಕರ ತಂಡ ಗ್ರಾಮದ ಮೈಲಮ್ಮದೇವಿ ಗುಡಿಯ ಹತ್ತಿರ ಬಂದು ಡಿಜೆ ಹಾಕಿಕೊಂಡು ಜೋರಾಗಿ ಶಬ್ದ ಮಾಡುತ್ತಾ ಕುಣಿಯುತ್ತಿದ್ದರು. ಈ ವೇಳೆ ನಮ್ಮ ಸಮುದಾಯದ ರಮೇಶ್ ಎನ್ನುವವರು ಸ್ಥಳಕ್ಕೆ ಹೋಗಿ, ರಾತ್ತಿ ತುಂಬಾ ಹೊತ್ತಾಗಿದೆ. ಹಾಗಾಗಿ, ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ಸಂದರ್ಭದಲ್ಲಿ ಮಂಜುನಾಥ ಈಳೀಗೇರ, ಮಂಜುನಾಥ ಚಮಕನಹಳ್ಳಿ, ರಮೇಶ ವಣಗೇರಿ, ಶರಣಪ್ಪ ನಾಯಕ ಹಾಗೂ ರಾಜಪ್ಪ ಈಳೀಗೇರ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ ಎಂದು ರವಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಆರೋಪಿಗಳು ನಾವು ಕೂರಿಸಿದ್ದ ಗಣಪತಿಯನ್ನು ಎತ್ತಿ ಹೊರಗಡೆ ಎಸೆಯುತ್ತೇವೆ ಎಂದು ಮೈಲಮ್ಮದೇವಿಯ ಗುಡಿಯ ಬಳಿ ಬಂದಿದ್ದರು. ಈ ವೇಳೆ ನಮ್ಮ ಸಮುದಾಯದ ಹಿರಿಯರು ತಿಳಿ ಹೇಳಿ ಕಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೈಲಮ್ಮದೇವಿ ಗುಡಿಯ ಗಲಾಟೆ ಬಳಿಕ, ನಾನು ನನ್ನ ತಮ್ಮ ಅಂಬರೀಶನನ್ನು ಹುಡುಕುತ್ತಾ ಅತ್ತೆಯ ಮಗನಾದ ರಾಮಸ್ವಾಮಿ ಕಲ್ಗುಡಿಯೊಂದಿಗೆ ಗಾಡಿಯಲ್ಲಿ ನಮ್ಮೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿಕ ಹೋಗಿದ್ದೆ. ಅಲ್ಲಿ ಡ್ಯಾನ್ಸ್ ಮಾಡುತ್ತಿದ್ದ ತಮ್ಮ ಅಂಬರೀಶನನ್ನು ಮನೆಗೆ ಕರೆದೊಯ್ಯಲು ಮುಂದಾದಾಗ, ಮಂಜುನಾಥ ಈಳೀಗೇರ ಮತ್ತು ಇತರರು ನನ್ನ ಮತ್ತು ಅತ್ತೆಯ ಮಗ ರಾಮಸ್ವಾಮಿಗೆ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿದ್ದಾರೆ. ನಾವು ಆರೋಪಿಗಳಿಗೆ ಸಮಾಧಾನ ಹೇಳಿದರೂ, ಅವರು ಅವರು ನನಗೆ ಕಾಲಿನಿಂದ ಒದ್ದಿದ್ದಾರೆ. ಈ ವೇಳೆ ಬಿಡಿಸಿಕೊಳ್ಳಲು ಬಂದ ರಾಮಸ್ವಾಮಿಯ ಕೈಗೆ ಕಟ್ಟಿಯಿಂದ ಹೊಡೆದು ಗಾಯಗೊಳಿಸಿದ್ದಾರೆ. ಇದನ್ನು ಕಂಡು ಬಿಡಿಸಿಕೊಳ್ಳಲು ಬಂದ ತಮ್ಮ ಅಂಬರೀಶ ಮತ್ತು ಆತನ ಸ್ನೇಹಿತರಿಗೂ ಹಲ್ಲೆ ನಡೆಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು ಮಂಜುನಾಥ ಈಳೀಗೇರ, ಮಂಜುನಾಥ ಚಮಕನಹಳ್ಳಿ ಸೇರಿದಂತೆ 31 ಜನರ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಘಟನೆ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿರುವ ದೂರುದಾರ ರವಿ ಅವರು, ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾದರೂ ಇನ್ನೂ ಆರೋಪಿಗಳ ಬಂಧನವಾಗಿಲ್ಲ. ಹಲ್ಲೆಗೊಳಗಾದ ನಮ್ಮ ಮೇಲೆಯೇ ದೂರು ದಾಖಲಾಗಿದೆ ಎಂದು ಹೇಳಿದ್ದಾರೆ.


