ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಚುನಾವಣಾ ಆಯೋಗವು ಟಿಎಂಸಿ ಎರಡೂ ಪ್ರತಿಸ್ಪರ್ಧಿ ಬಣಗಳು ‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಎಂಬ ಹೆಸರನ್ನು ಹಾಗೂ ಪಕ್ಷದ ಸಾಂಪ್ರದಾಯಿಕ ‘ಹುಲ್ಲಿನ ಮೇಲಿನ ಜೋಡಿ ಹೂವು’ (ಜೋಡಾ ಘಾಸ್ ಫುಲ್) ಚಿಹ್ನೆಯನ್ನು ಬಳಸದಂತೆ ನಿಷೇಧಿಸಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಚುನಾವಣಾ ಆಯೋಗವು ಶುಕ್ರವಾರ (ಸೆ.18) “ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್” ಎಂಬ ಹೆಸರು ಹಾಗೂ ‘ಫುಟ್ಬಾಲ್ ಆಟಗಾರ’ನ ಹೊಸ ಚಿಹ್ನೆಯನ್ನು ಮಂಜೂರು ಮಾಡಿದೆ. ಇದೇ ವೇಳೆ, ಪ್ರತಿಸ್ಪರ್ಧಿ ಬಣಕ್ಕೆ “ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್” ಎಂಬ ಹೆಸರು ಮತ್ತು ‘ಲಕೋಟೆ’ ಚಿಹ್ನೆಯನ್ನು ಹಂಚಿಕೆ ಮಾಡಿದೆ.
ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ಮತ್ತು ರೆಜಿನಗರ ಸೇರಿದಂತೆ ಮುಂಬರುವ ಉಪಚುನಾವಣೆಗಳಿಗೆ ಚುನಾವಣಾ ಆಯೋಗದ ಹಂಚಿಕೆ ಮಾಡಿರುವ ಮಧ್ಯಂತರ ಹೆಸರು ಮತ್ತು ಚಿಹ್ನೆ ಅನ್ವಯಿಸಲಿದೆ.
ಹೊಸ ಹೆಸರುಗಳು ಮತ್ತು ಚಿಹ್ನೆಗಳ ಹಂಚಿಕೆಯು ಕೇವಲ ಒಂದು ಮಧ್ಯಂತರ ವ್ಯವಸ್ಥೆಯಾಗಿದ್ದು, ಇದು ಮೂಲ ಪಕ್ಷದ ಹೆಸರು ಮತ್ತು ಚಿಹ್ನೆಯ ಮೇಲಿನ ಪ್ರತಿಸ್ಪರ್ಧಿಗಳ ಹಕ್ಕುಗಳ ಅಂತಿಮ ತೀರ್ಪಲ್ಲ ಎಂದು ಭಾರತೀಯ ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ಈ ವಿವಾದವನ್ನು 1968ರ ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶದ ಪ್ಯಾರಾಗ್ರಾಫ್ 15ರ ಅಡಿಯಲ್ಲಿ ಪ್ರತ್ಯೇಕವಾಗಿ ನಿರ್ಧರಿಸಲಾಗುವುದು ಎಂದಿದೆ.
ಮಮತಾ ಬ್ಯಾನರ್ಜಿಯ ರಿಟ್ ಅರ್ಜಿಯನ್ನು ಸೆಪ್ಟೆಂಬರ್ 18ರಂದು ಸುಪ್ರೀಂ ಕೋರ್ಟ್ನಲ್ಲಿ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಚುನಾವಣಾ ಆಯೋಗ ಮತ್ತು ಪ್ರತಿಸ್ಪರ್ಧಿ ಬಣದ ಮುಖ್ಯಸ್ಥರಾದ ರಿತಬ್ರತ ಬ್ಯಾನರ್ಜಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.


