ಬಿಡದಿ ಟೌನ್ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ ರದ್ದುಪಡಿಸುವವರೆಗೂ ರೈತರಿಗೆ ನಿಜವಾದ ಜಯ ಸಿಕ್ಕಂತಲ್ಲ,” ಎಂದು ರೈತ ಒಕ್ಕೂಟಗಳ ಸಂಯುಕ್ತ ಹೋರಾಟ ಸಮಿತಿಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿಗಳ ಇತ್ತೀಚಿನ ಪತ್ರಿಕಾಗೋಷ್ಠಿಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಂಯುಕ್ತ ಹೋರಾಟ ಸಮಿತಿಯ ನಾಯಕರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, ಬಿಡದಿ ರೈತರ ಭೂಮಿ ವಿಚಾರದಲ್ಲಿ ಸರ್ಕಾರ ಯಾವುದೇ ಕಾಣಕ್ಕೂ ದ್ವಂದ್ವ ನೀತಿಯನ್ನು ಅನುಸರಿಸಬಾರದು ಎಂದು ಎಚ್ಚರಿಸಿದ್ದಾರೆ.
ಸಂಯುಕ್ತ ಹೋರಾಟ ಸಮಿತಿಯ ಪ್ರಮುಖ ಮುಖಂಡರಾದ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, ಸರ್ಕಾರದ ಸದ್ಯದ ಆಶ್ವಾಸನೆಗಳ ಹಿಂದೆ ಸಂಪೂರ್ಣ ಪ್ರಾಮಾಣಿಕತೆ ಇರಬೇಕು ಎಂದು ಒತ್ತಾಯಿಸಿದರು.
“ಬಲವಂತವಾಗಿ ಭೂಮಿ ಪಡೆಯುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿರುವುದನ್ನು ಸಂಯುಕ್ತ ಹೋರಾಟ ಸಮಿತಿಯು ಸ್ವಾಗತಿಸುತ್ತದೆ. ಆದರೆ ಸರ್ಕಾರ ಕೇವಲ ಬಾಯಿ ಮಾತಿಗೆ ಸೀಮಿತವಾಗದೆ ಪ್ರಾಮಾಣಿಕತೆ ಪ್ರದರ್ಶಿಸಬೇಕು. ಅದಕ್ಕೆ ಪೂರಕವಾಗಿ ಈಗಾಗಲೇ ಬಿಡದಿಯ ಮೂರು ಗ್ರಾಮಗಳಿಗೆ ನೀಡಿರುವ ಭೂಸ್ವಾಧೀನದ ಅಂತಿಮ ನೋಟಿಸ್ ಅನ್ನು ಸರ್ಕಾರ ಮೊದಲು ಹಿಂಪಡೆಯಬೇಕು. ಅಲ್ಲದೆ, ಬಿಡದಿ ಟೌನ್ಶಿಪ್ ಯೋಜನೆಯನ್ನು ಸರ್ಕಾರ ಸಂಪೂರ್ಣವಾಗಿ ಕೈಬಿಡಬೇಕು,” ಎಂದು ಅವರು ಆಗ್ರಹಿಸಿದರು.
ಜುಲೈ 23ರ ಜನಾಭಿಪ್ರಾಯ ಸಂಗ್ರಹ ಹಾಗೂ ಮುಂದಿನ ಹೋರಾಟ:
“ರೈತರ ಒಕ್ಕೊರಲ ಆಶಯವನ್ನು ಅರಿಯಲು ಸಂಯುಕ್ತ ಹೋರಾಟ ಸಮಿತಿಯು ಈಗಾಗಲೇ ನಿರ್ಧರಿಸಿರುವಂತೆ, ಬರುವ ಜುಲೈ 23 ರಂದು ಬಿಡದಿಯ ಗ್ರಾಮಗಳಿಗೆ ನಿಯೋಗವೊಂದು ಭೇಟಿ ನೀಡಿ ನೇರ ಜನಾಭಿಪ್ರಾಯ ಸಂಗ್ರಹಿಸಲಿದೆ. ಆ ಸಂದರ್ಭದಲ್ಲಿ ರೈತರು ವ್ಯಕ್ತಪಡಿಸುವ ನೈಜ ಅಭಿಪ್ರಾಯ ಮತ್ತು ವಾಸ್ತವವನ್ನು ಅರ್ಥಮಾಡಿಕೊಂಡು, ಅದರ ಆಧಾರದ ಮೇಲೆ ಬಿಡದಿ ರೈತರ ಹಿತ ಕಾಯಲು ನಮ್ಮ ಹೋರಾಟವನ್ನು ಮುಂದುವರಿಸಲಿದ್ದೇವೆ,” ಎಂದು ಬಡಗಲಪುರ ನಾಗೇಂದ್ರ ಎಚ್ಚರಿಸಿದ್ದಾರೆ.
ಅಧಿಕಾರಶಾಹಿ ಮತ್ತು ರಾಜಕೀಯ ಹಿತಾಸಕ್ತಿಗಳ ನಡುವೆ ಬಿಡದಿಯ ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ರೈತ ಸಂಘಟನೆಗಳು ಒಗ್ಗಟ್ಟಾಗಿ ನಿಂತಿರುವುದು ಸರ್ಕಾರದ ಮೇಲೆ ಹೆಚ್ಚು ಒತ್ತಡವನ್ನು ಹಾಕಲು ಸಾಧ್ಯವಾಗಿದೆ. ಇದು ನಿಜಕ್ಕೂ ಬಿಡದಿ ರೈತರ ಗೆಲುವಿನ ಮುನ್ನುಡಿ ಎಂದೂ ಅವರು ಬಣ್ಣಿಸಿದರು.
ಸಂಯುಕ್ತ ಹೋರಾಟ ಸಮಿತಿಯ ಮತ್ತೊಬ್ಬ ಮುಖಂಡರಾದ ಯಶವಂತ ಟಿ. ಅವರು ಸರ್ಕಾರದ ನೀತಿಸರ್ಕಾರದ ನಡೆ ‘ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆ’ ಎಂಬಂತಿದೆ ಎಂದಿದ್ದಾರೆ.
“ಒಂದೆಡೆ ಬಲವಂತವಾಗಿ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ದೊಡ್ಡದಾಗಿ ಪ್ರಚಾರ ಪಡೆಯುತ್ತಿರುವ ಸರ್ಕಾರ, ಮತ್ತೊಂದೆಡೆ ತೆರೆಮರೆಯಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳಲು ಅಂತಿಮ ಅಧಿಸೂಚನೆಗಳನ್ನು ಮೇಲಿಂದ ಮೇಲೆ ಹೊರಡಿಸುತ್ತಿದೆ. ಇದು ಕೇವಲ ಕಣ್ಣೊರೆಸುವ ತಂತ್ರವಲ್ಲದೆ ಮತ್ತೇನೂ ಅಲ್ಲ. ಭೂ ಕಬಳಿಕೆಗಾಗಿ ಸರ್ಕಾರ ಅನುಸರಿಸುತ್ತಿರುವ ಫ್ಯಾಸಿಸ್ಟ್ ಕಾರ್ಯತಂತ್ರವಿದು,” ಎಂದು ಹೇಳಿದರು.
ಅಂತಿಮ ಅಧಿಸೂಚನೆ ರದ್ದಾಗಲಿ:
“ದಿನಾಂಕ 13-03-2025 ರಂದು ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ ಪ್ರಕಾರ ಭೂ ಸ್ವಾಧೀನ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ತದನಂತರ ಈ ಪೈಕಿ ಮೂರು ಗ್ರಾಮಗಳ ಅಂತಿಮ ಅಧಿಸೂಚನೆಯನ್ನು ದಿನಾಂಕ 11-06-2026 ರಂದು ಹೊರಡಿಸಲಾಗಿದೆ. ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಿ ರೈತರ ಕೈಕಟ್ಟಿ ಹಾಕಿ, ಈಗ ಬಲವಂತವಿಲ್ಲ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಜೂನ್ 11ರ ಅಂತಿಮ ಅಧಿಸೂಚನೆ ಸೇರಿದಂತೆ ಎಲ್ಲಾ ಭೂಸ್ವಾಧೀನ ಪ್ರಕಟಣೆಗಳನ್ನು ಅಧಿಕೃತವಾಗಿ ರದ್ದುಪಡಿಸುವ ಆದೇಶ ಹೊರಬಿದ್ದರೆ ಮಾತ್ರವೇ ಬಿಡದಿಯ ರೈತರಿಗೆ ಜಯ ಸಿಕ್ಕಂತೆ. ಉಳಿದಂತೆ ಸರ್ಕಾರ ಮಾಡುತ್ತಿರುವ ಸಮಿತಿ ರಚನೆ, ಭರವಸೆಗಳೆಲ್ಲವೂ ಭೂಮಿ ಕಿತ್ತುಕೊಳ್ಳುವ ಬೇರೆ ಬೇರೆ ರೀತಿಯ ಕುತಂತ್ರದ ಭಾಗಗಳಷ್ಟೇ,” ಎಂದು ಯಶವಂತ ಟಿ. ಸ್ಪಷ್ಟಪಡಿಸಿದರು.
ಭೂ ಸ್ವಾಧೀನ ಇಲ್ಲದೇ ಪರಸ್ಪರ ಒಪ್ಪಿಗೆ ಮೇರೆಗೆ ಭೂಮಿ ಪಡೆದುಕೊಳ್ಳಲು ಹಾಗೂ ಅಂತಹ ಭೂಮಿಗೆ ಪರಸ್ಪರ ಚೌಕಾಸಿ ಮೂಲಕ ಎಷ್ಟು ಬೇಕಾದರೂ ಬೆಲೆ ನಿರ್ಧರಿಸಲು ಕಾಯ್ದೆಯಲ್ಲಿ ಅವಕಾಶ ಇದೆ ಎಂಬುದನ್ನು ನೆನಪಿಸಿದ ಅವರು, “ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಅವರೇ ಉಪಮುಖ್ಯಮಂತ್ರಿಯಾಗಿದ್ದಾಗ, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ತೀವ್ರ ಪ್ರತಿಭಟನೆಗೆ ಮಣಿದು ಭೂಸ್ವಾಧೀನವನ್ನು ಸಂಪೂರ್ಣವಾಗಿ ಕೈಬಿಡಲಾಗಿತ್ತು. ಕೇವಲ ಸ್ವಯಂಪ್ರೇರಿತವಾಗಿ ಜಮೀನು ಕೊಡುವ ರೈತರಿಗೆ ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅದೇ ದೇವನಹಳ್ಳಿ ಮಾದರಿಯನ್ನು ಬಿಡದಿ ಹೋಬಳಿಯಲ್ಲೂ ಸರ್ಕಾರ ತಕ್ಷಣವೇ ಜಾರಿಗೊಳಿಸಲಿ,” ಎಂದು ಒತ್ತಾಯಿಸಿದರು.
“ಜೆಡಿಎಸ್ ಕನ್ನಡಕ ಕಳಚಿಟ್ಟು ರೈತರ ಕನ್ನಡಕ ಹಾಕಿ ನೋಡಿ: ನೂರ್ ಶ್ರೀಧರ್
ಸಂಯುಕ್ತ ಹೋರಾಟ ಸಮಿತಿಯ ಮುಖಂಡರಾದ ನೂರ್ ಶ್ರೀಧರ್ ಪ್ರತಿಕ್ರಿಯಿಸಿ, “ಬಿಡದಿ ಟೌನ್ಶಿಪ್ ವಿಚಾರದಲ್ಲಿ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಈಗಲಾದರೂ ಮರುಚಿಂತನೆ ಮಾಡಲು ಮುಂದಾಗಿರುವುದು ಸ್ವಾಗತಾರ್ಹವೇ ಹೌದು. ಆದರೆ, ಸಿಎಂ ಡಿ.ಕೆ.ಶಿವಕುಮಾರ್ ಅವರು ಈ ಇಡೀ ವಿವಾದವನ್ನು ಇನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂಬುದನ್ನು ಅವರ ಇತ್ತೀಚಿನ ಹೇಳಿಕೆಗಳೇ ಸಾಬೀತುಪಡಿಸುತ್ತಿವೆ. ಮುಖ್ಯಮಂತ್ರಿಗಳು ಮೊದಲು ಜೆಡಿಎಸ್ ಕನ್ನಡಕವನ್ನು ಕಳಚಿಟ್ಟು, ರೈತರ ಕನ್ನಡಕವನ್ನು ಹಾಕಿಕೊಂಡು ಈ ಸಮಸ್ಯೆಯನ್ನು ನೋಡಲಿ,” ಎಂದು ಹೇಳಿದರು.
ರೈತರು ದಾರಿ ತಪ್ಪಿಲ್ಲ, ಅಧಿಕಾರಿಗಳ ಸುಳ್ಳನ್ನು ಸಿಎಂ ನಂಬಿದ್ದಾರೆ:
“ಯಾರದ್ದೂ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ, ಪರಿಶೀಲನೆಗೆ ಸಮಿತಿ ರಚಿಸುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿರುವುದು ಒಳ್ಳೆಯದೇ. ಆದರೆ, ಈ ಪ್ರತಿಭಟನೆಯ ಹಿಂದೆ ಕುಮಾರಸ್ವಾಮಿಯವರ ಚಿತಾವಣೆ ಇದೆ, ರೈತರು ದಾರಿ ತಪ್ಪುತ್ತಿದ್ದಾರೆ ಎಂದು ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸುಳ್ಳು ಮತ್ತು ವಾಸ್ತವಕ್ಕೆ ದೂರವಾದದ್ದು. ಬಿಡದಿಯ ರೈತರು ಯಾರಿಂದಲೂ ಏಮಾರುವಷ್ಟು ಮುಗ್ಧರಲ್ಲ, ಅವರು ತಮ್ಮ ಜಮೀನನ್ನು ಉಳಿಸಿಕೊಳ್ಳಲು ಅತ್ಯಂತ ಗಟ್ಟಿಯಾಗಿ ನಿಂತಿದ್ದಾರೆ. ಇಲ್ಲಿ ರೈತರು ದಾರಿ ತಪ್ಪುತ್ತಿಲ್ಲ, ಬದಲಿಗೆ ಸ್ವತಃ ಮುಖ್ಯಮಂತ್ರಿಗಳೇ ದಾರಿ ತಪ್ಪುತ್ತಿದ್ದಾರೆ. ತಮ್ಮ ಅಧಿಕಾರಿಗಳು ನೀಡುತ್ತಿರುವ ಸುಳ್ಳು ವರದಿಗಳನ್ನು ನಂಬಿ ಏಮಾರುತ್ತಿದ್ದಾರೆ,” ಎಂದರು.
“ಬಿಡದಿ ಭಾಗದ ಶೇಕಡಾ 80 ಕ್ಕಿಂತಲೂ ಹೆಚ್ಚು ರೈತರು ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಮೊದಲಿನಿಂದಲೂ ಒಪ್ಪಿಲ್ಲ ಮತ್ತು ಇಂದಿಗೂ ವಿರೋಧಿಸುತ್ತಲೇ ಇದ್ದಾರೆ. ಇದು ವಾಸ್ತವ, ನಾವು ನಿರಂತರವಾಗಿ ಜನರ ಮಧ್ಯೆ ಇರುವುದರಿಂದ ನಮಗೆ ಈ ನೈಜತೆ ತಿಳಿದಿದೆ,” ಎಂದು ನೂರ್ ಶ್ರೀಧರ್ ಅವರು ಸ್ಪಷ್ಟಪಡಿಸಿದರು.


