’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ ‘ನಾಯಕನ ಪಾತ್ರದಲ್ಲಿ ಕಣ್ಣಪ್ಪನಾಗಿ…’ ನಟಿಸುತ್ತಿದ್ದಾರೆ ಎಂದು ಇನ್ನೊಂದು ಹೆಸರನ್ನು ಸೂಚಿಸಿದ್ದರು. ಅದನ್ನು ಕಂಡೊಡನೇ ನನಗೆ ಜಂಘಾಬಲವೇ ಉಡುಗಿ ಹೋದಂತಾಯಿತು. ‘ಏಕೆ? ನಾನು ಪಾರ್ಟ್ ಮಾಡುತ್ತಿರುವುದು ಸರಿಯಾಗಿಲ್ಲವೆ?! ಅವರಿಗೆ ತೃಪ್ತಿಯಾಗಲಿಲ್ಲವೇ? ಈ ವಿಷಯ ನನಗೆ ಪತ್ರಿಕೆಯ ಮೂಲಕವೇ ತಿಳಿಯಬೇಕೆ? ನನಗೆ ಇದರ ಸುಳಿವೇ ಕೊಡಲಿಲ್ಲವಲ್ಲ…!!!’ ಎಂದು ಮನಸ್ಸಿಗೆ ತುಂಬಾ ನೋವಾಯಿತು. ಅಷ್ಟು ದಿನಗಳಿಂದ ಇದ್ದ ’ಉತ್ಸಾಹ-ಹುಮ್ಮಸ್ಸುಗಳೆಲ್ಲಾ ಕುಸಿದುಬಿದ್ದಿತು. ಒಂದುಕ್ಷಣ ಮನಸ್ಸು ಮಂಕಾಯಿತಾದರೂ ಇದಕ್ಕೆ ಕಾರಣವನ್ನು ಕೇಳಿಯೇ ಬಿಡೋಣ ಎಂದು ಆ ದಿನಪತ್ರಿಕೆಯನ್ನು ಕೈಲಿ ಹಿಡಿದು ನೇರ ನಿರ್ದೇಶಕ ಶ್ರೀಯುತ ಸಿಂಹರವರ ಬಳಿ ಬಂದೆ. ನನ್ನ ಆ ಬಿರುಸಿನ ಬರುವಿಕೆಯನ್ನು ಕಂಡು ‘ಏನಪ್ಪ! ಮುತ್ತುರಾಜು?’ ಎಂದರು.
ನಾನು ‘ಏನಿಲ್ಲ ಸ್ವಾಮಿ! ತಮ್ಮನ್ನ ಒಂದ್ವಿಷಯ ಕೇಳ್ಬೇಕೂಂತ ಬಂದೆ… ಯಾಕ್ ಸ್ವಾಮಿ ನಾನು ತಮ್ಮ ಮನಸ್ಸಿಗೆ ತೃಪ್ತಿ ಕೊಡೋಷ್ಟರ ಮಟ್ಟಿಗೆ ಅಭಿನಯಿಸ್ತಿಲ್ವಾ…?” ಎಂದು ಕೇಳಿದೆ.
ಆಗ ಶ್ರೀಯುತ ಸಿಂಹರವರು ‘ಅದ್ಯಾಕಪ್ಪನಿಂಗೀ ಅನುಮಾನ? ಯಾರ್ ಹೇಳದ್ರು ಹಾಗಂತ?’ ಎಂದು ಕೇಳಿದರು. ತಕ್ಷಣ ನಾನು ಪತ್ರಿಕೆಯನ್ನು ಮುಂದೆ ನೀಡಿದೆ. ‘ಏನಿದೆ ಅದ್ರಲ್ಲಿ?’ ಎಂದು ಹುಸಿನಗೆ ನಕ್ಕರು.
ನಾನು ಆ ಸಾಲನ್ನು ಮಾತ್ರ ಓದಿದೆ. ’ಕಣ್ಣಪ್ಪನ ಪಾತ್ರದಲ್ಲಿ ರಾಜಕುಮಾರ್, ನೀಲಾಳ ಪಾತ್ರದಲ್ಲಿ ಫಂಡರಿಬಾಯಿ… ಹಾಗೂ ಇತರ ತಾರಾಗಣದಲ್ಲಿ… ಸಂಪೂರ್ಣ ಪಟ್ಟಿಯನ್ನು ಓದಿ ’ಯಾರ್ ಸ್ವಾಮಿ ಈ ರಾಜ್ಕುಮಾರ್? ಈ ಪಾತ್ರಕ್ಕೆ ಅವರ್ನೇ ಹಾಕ್ ಬೇಕೂಂತಿದೀರಾ? ಹಾಗಾದ್ರೆ ನಾನಿಲ್ವಾ?’ ಎಂದೆ.
ಆಗ ಸಿಂಹರವರು ನಕ್ಕು ‘ಆ ರಾಜ್ಕುಮಾರ ಯಾರೂ ಅಲ್ಲಪ್ಪ… ನೀನೇ…’ ಎಂದರು.
ನನಗೆ ತಕ್ಷಣ ಗುಂಡಿಗೆ ಧಡಕ್ ಎಂದಿತು.
‘ನೋಡಪ್ಪ! ಮುತ್ತುರಾಜ್ ಅನ್ನೋದನ್ನ ’ರಾಜ್ಕುಮಾರ್ ಅಂತ ಬದಲಾಯ್ಸಿದೆ ಅಷ್ಟೆ’ ಎಂದು ಮಾತು ಮುಂದುವರಿಸಿದರು.
ಆಗ ನನಗೊಂದು ರೀತಿ ನಗು ಬಂದು ಜನಜನಿತವಾದ ಒಂದೆರಡು ಉಪಮಾನದ ವಾಕ್ಯಗಳೂ ನೆನಪಿಗೆ ಬಂದವು.
‘ರೆಕ್ಕೆಯಿಲ್ಲ-ಪುಕ್ಕ ಇಲ್ಲ ಗರುಡಯ್ಯಂಗರ್ರು, ವಿದ್ಯೆ ಇಲ್ಲ-ಬುದ್ಧಿ ಇಲ್ಲ ಶಾರದಮ್ಮನ್ನೋರು, ದುಡ್ಡಿಲ್ಲ-ಕಾಸಿಲ್ಲ ಸಂಪ್ಪತ್ತಯ್ಯಂಗರ್ರು, ರಾಜ್ಯ ಇಲ್ಲ-ಪ್ರಜೆ ಇಲ್ಲ ರಾಜಣ್ಣೋರು ಅನ್ನೋಹಾಗೆ ನನಗ್ಯಾಕ್ ಸ್ವಾಮೀ ಈ ಹೆಸರನ್ನಿಟ್ರಿ? ನಮ್ಮ ಅಪ್ಪಾಜಿಯವರು ಪ್ರೀತಿಯಿಂದ ಆ ರಾಮನ ಸೇವಕನ ಮೇಲಿನ ಭಕ್ತಿಯಿಂದ-ಪ್ರೀತಿಯಿಂದ ಅವನ ವರಪ್ರಸಾದವಾಗಿ ಹುಟ್ಟಿದೇಂತನೋ ಏನೋ ಆ ಮುತ್ತೆತ್ತಿರಾಯನ ಹೆಸರಲ್ಲಿ ನನಗೆ ಮುದ್ದಾಗಿ ’ಮುತ್ತುರಾಜು’ ಅಂತ ಹೆಸರಿಟ್ಟಿದ್ದಾರೆ. ದಯವಿಟ್ಟು ಆ ಹೆಸರ್ನ ಬದಲಾಯ್ಸೋದು ಬೇಡ ಸ್ವಾಮಿ, ಅದೂ ಅಲ್ದೇ ನಾಳೆ ಚಿತ್ರ ಬಿಡುಗಡೆ ಆಗಿ ನನ್ನ ಪಾತ್ರ ಜನಕ್ಕೆ ಒಪ್ಪಿಗೆ ಆಗ್ದೆ ‘ಈ ಸೌಭಾಗ್ಯಕ್ಕೆ ಇವ್ನು ’ರಾಜಕುಮಾರ’ ಅಂತ ಬೇರೆ ಹೆಸರನ್ನಿಟ್ಕೊಂಡ್ನೋ…? ಅಂತ ಅಂದ್ಕೋಬಹುದು. ದಯವಿಟ್ಟು ಬೇಡ ಸ್ವಾಮಿ’ ಎಂದೆ.
ಅದಕ್ಕೆ ಸಿಂಹರವರು ‘ನಿಮ್ಮ ಅಪ್ಪನ ಆಶೀರ್ವಾದದಿಂದ್ಲೇ ಈ ಹೆಸರು ಬಂತೂಂದ್ಕೋಪ್ಪ, ನಾನೊಬ್ನೇ ಅಲ್ಲ ಈ ಹೆಸರನ್ನಿಟ್ಟೋನು.. ಈ ಹೆಸರಿನ ಬದಲಾವಣೇಲಿ ವೀರಣ್ಣೋರು ಒಬ್ರು. (ಗುಬ್ಬಿ ವೀರಣ್ಣ) ನಿಮ್ಮಪ್ಪಾಜಿಯವ್ರೇ ಒಂದ್ಸಲ ವೀರಣ್ಣೊರ್ನ ಕೇಳಿದ್ರಂತೆ. ‘ನನ್ ಮಗ ನಾಟಕದಲ್ ಪಾರ್ಟ್ ಮಾಡ್ತಿದ್ರೆ ಒಳ್ಳೆ ರಾಜಕುಮಾರನ್ಹಾಗ್ ಕಾಣಸ್ತಾನೆ… ಅವರಿಗೆ ಸಿನಿಮಾದಲ್ ಒಂದ್ ಛಾನ್ಸ್ ಕೊಡಿ ಸ್ವಾಮಿ’ ಅಂತ ಕೇಳಿದ್ರಂತೆ ಅದನ್ನ ವೀರಣ್ಣೋರು ಈ ಸಂದರ್ಭದಲ್ಲಿ ಜ್ಞಾಪಿಸ್ಕೊಂಡು ಅವರ ಅಪ್ಪನ ಆತ್ಮಕ್ಕೆ ಶಾಂತಿ ಸಿಗ್ಲಿ… ಈ ಸಂದರ್ಭದಲ್ಲಿ ಅವರಿಗೆ ’ರಾಜಕುಮಾರ್ ಅಂತನೇ ಹೆಸರಿಟ್ ಬಿಡಿ’ ಅಂದಿದ್ರಂತೆ. ನೋಡಪ್ಪ! ದೊಡ್ಡೋರು ಆಶೀರ್ವಾದ ಮಾಡಿಟ್ಟಿರೋ ಹೆಸರು… ಏನು ಆಗಲ್ಲ… ಹೆದರ್ಕೋಬೇಡ ಧೈರ್ಯವಾಗಿರು. ಹಾಗೇನಾದ್ರೂ ಆಗಕ್ ನಾವ್ ಬಿಟ್ ಬಿಡ್ತೀವಾ?’ ಎಂದು ಹೇಳಿದರು ಶ್ರೀಯುತ ಸಿಂಹರವರು.
ಇದರ ಮೇಲೆ ನನಗೆ ಮತ್ತೆ ಮಾತನಾಡಲಾಗಲಿಲ್ಲ. ಅಂತೂ ಆ ಮುತ್ತೆತ್ತಿರಾಯನ ಕೃಪೆಯಿಂದ ಮುಕ್ಕೋಟಿ ಕನ್ನಡ ಕಲಾ ಬಂಧುಗಳ ಹೃದಯದವರ ಮನೆಯಲ್ಲಿ ನಾನು ಉಳಿಯಲು ಸ್ಥಳಾವಕಾಶ ದೊರೆತಿರುವುದು ನನ್ನ ಭಾಗ್ಯವೇ ತಾನೇ?
(ಡಾ. ರಾಜ್ ಕುಮಾರ್ ಆತ್ಮಚರಿತ್ರೆ: ಕಥಾನಾಯಕನ ಕಥೆ ಕೃತಿಯಿಂದ ಆಯ್ದ ಭಾಗ)
ಎ. ಎಸ್. ಪ್ರಭಾಕರ
ಸಂಚಾಲಕರು ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ನಿರೂಪಣೆ: ಚಿ. ದತ್ತರಾಜ್
ಮುತ್ತುರಾಜ್ ‘ರಾಜಕುಮಾರ್’ ಆದ ಕಥೆ
- Advertisement -
- Advertisement -
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ


