Homeಸಾಮಾಜಿಕವೇಶ್ಯೆಯ ಗರ್ಭದಲ್ಲಿ ಮುದುಕನ ಆತ್ಮ !

ವೇಶ್ಯೆಯ ಗರ್ಭದಲ್ಲಿ ಮುದುಕನ ಆತ್ಮ !

- Advertisement -
- Advertisement -

ಬುರುಡೆ ಜೋಯಿಸರು ಜನರನ್ನು ಹೆದರಿಸಲು ಎಂತೆಂತಹ ದೋಷಗಳು, ಗಂಡಗಳು, ಪೀಡೆಗಳು, ಕಾಟಗಳು ಇತ್ಯಾದಿ ಆವಿಷ್ಕಾರಗಳನ್ನು ಮಾಡಿದ್ದಾರೆಂದರೆ, ಅವುಗಳ ಸಂಖ್ಯೆಯನ್ನು ಹೇಳಿದರೆ ನಿಮಗೆ ಅಜೀರ್ಣವಾದೀತು! ಅವುಗಳ ಪರಿಣಾಮಗಳನ್ನು ಹೇಳಿದರೆ ಹೆದರಿ ಸ್ಮೃತಿ ತಪ್ಪಿಬೀಳುವಿರಿ! ಪರಿಹಾರಗಳನ್ನು ವಿವರವಾಗಿ ಬಣ್ಣಿಸಿ ವಿಶ್ಲೇಷಿಸಿರೆ, ನೀವು ನಕ್ಕುನಕ್ಕು ಸುಸ್ತಾಗಿ ‘ಜಠರದೋಷ’ದಿಂದ ಹೊಟ್ಟೆಯಲ್ಲಿ ಹುಣ್ಣಾಗುವ ಸಂಭವವಿದೆ!
ಮನುಷ್ಯನ ಭಯ, ಆತಂಕ, ಲಾಲಸೆ, ಮೌಢ್ಯ ಎಲ್ಲವುಗಳ ಆಳವಾದ ಸಂಶೋಧನೆಗಳನ್ನು ಮಾಡಿರುವ ಜೋಯಿಸರು ಜಾತಕ ದೋಷ, ಮೃತ್ಯುದೋಷ, ಅಪಮೃತ್ಯು ದೋಷ, ಪಿತೃದೋಷ, ಗ್ರಹದೋಷ, ನಕ್ಷತ್ರದೋಷ ಇತ್ಯಾದಿಯಾಗಿ ಹುಟ್ಟಿದರೂ, ಸತ್ತರೂ ಲೆಕ್ಕವಿಲ್ಲದಷ್ಟು ದೋಷಗಳನ್ನು ಕಂಡುಹಿಡಿದಿದ್ದಾರೆ ಮತ್ತು ನಿಮ್ಮಲ್ಲಿ ಎಷ್ಟು ರಸವಿದೆ ಎಂದು ನೋಡಿಕೊಂಡು ನಿಮಗೆ ನೋವಾಗದಂತೆ ಹಿಂಡುವ ಸಲುವಾಗಿ ಬೇರೆಬೇರೆ ಗಾತ್ರದ ಮಾಡೆಲ್‍ಗಳ ಜ್ಯೂಸ್ ತೆಗೆಯುವ ಯಂತ್ರತಂತ್ರಗಳ ಆವಿಷ್ಕಾರಗಳನ್ನೂ ಮಾಡಿದ್ದಾರೆ.
ಕಳೆದ ಸಂಚಿಕೆಯಲ್ಲಿ ನಾವು ಸ್ಮಶಾನಯಾತ್ರೆ ಮಾಡಿ, ಅಲ್ಲಿ ಪಿಂಡಶಾಸ್ತ್ರ ವರ್ಚುವಲ್ ಪೇಮೆಂಟ್ ಮುಂತಾದ ಆವಿಷ್ಕಾರಗಳನ್ನು ನೋಡಿರುವುದರಿಂದ ಈ ಸಂಚಿಕೆಯಲ್ಲಿ ಮೃತ್ಯುವಿನ ಸುತ್ತಲೇ ಕ್ಷುದ್ರಗ್ರಹಗಳಂತೆ ಒಂದು ಸುತ್ತು ಹಾಕೋಣ.
ಮನುಷ್ಯನ ಜೀವನದಲ್ಲಿ ಹುಟ್ಟು ಮತ್ತು ಸಾವು ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಂತೆ ಅನಿವಾರ್ಯ! ಆದುದರಿಂದ ಜೋಯಿಸರಿಗೆ ಆದಾಯದ ನಿರಂತರ ಮೂಲ. ಸತ್ತಮೇಲೆ ಮನುಷ್ಯ ಒಂದೋ ಡಿಸ್ಟಿಂಕ್ಷನ್‍ನಲ್ಲಿ ಪಾಸಾಗಿ ಸ್ವರ್ಗ ಸೇರುತ್ತಾನೆ. ಇಲ್ಲವೇ ಕಡಿಮೆ ಮಾರ್ಕು ತೆಗೆದು ಫೇಲಾಗಿ ನರಕ ಸೇರುತ್ತಾನೆ. ಅವುಗಳಿಗೆ ಬೇರೆಬೇರೆ ಕ್ರಿಯಾಕರ್ಮಗಳುಂಟು. ಅವುಗಳಿಗೆ ಮತ್ತು ಅವುಗಳಿಂದ ‘ಅರ್ಥ’ ಕಲ್ಪಿಸುವ ಅರ್ಥಶಾಸ್ತ್ರಜ್ಞರೇ ಜೋಯಿಸರು. ಹೀಗೆ ಸತ್ತವರ ಕೆಲಸಗಳು ನಿಮ್ಮಲ್ಲಿ ಎಷ್ಟು ದಮ್ಮಡಿ ಇದೆ ಎಂಬುದರ ಮೇಲೆ ಅವಲಂಬಿಸಿವೆ. ಅದು ಒಮ್ಮೆಗೇ ಮುಗಿಯಬಹುದು. ಅಥವಾ ವರ್ಷಕ್ಕೊಮ್ಮೆ ಶ್ರಾದ್ಧ, ಶಾಂತಿ ಹೋಮದಂತಹ ಡೆತ್‍ಡೇ ಪಾರ್ಟಿಗಳನ್ನು ಕೊಡಬೇಕಾಗಿ ಬರಬಹುದು! ಅವುಗಳ ಕಂತ್ರಾಟು ಪಡೆಯಲು ಜೋಯಿಸರು ಬೇರೆ ಬೇರೆ ಮೆನುಗಳೊಂದಿಗೆ ಸದಾ ಸಿದ್ಧರಿರುತ್ತಾರೆ.
ಸಮಸ್ಯೆ ಇರುವುದು ನಡುವೆಯೇ ಶಾಲೆ ಬಿಟ್ಟವರು ಮತ್ತು ಒಂದೆರಡು ಸಬ್ಜೆಕ್ಟ್‍ಗಳಲ್ಲಿ ಫೇಲಾಗಿ ತ್ರಿಶಂಕುಗಳಂತೆ ಸ್ವರ್ಗವನ್ನೂ ಸೇರದೆ, ನರಕವನ್ನೂ ಸೇರದೆ ಅಂತರ್ಭೂತಗಳಾಗಿ ತಿರುಗುವ ಆತ್ಮಗಳದ್ದು. ಇವರು ಸಪ್ಲಿಮೆಂಟರಿ ಪರೀಕ್ಷೆ ಕಟ್ಟುವ ಗಿರಾಕಿಗಳು. ಇವರನ್ನು ಕುಲೆ, ಪಿಶಾಚಿ, ದೆವ್ವ, ಅಂತರ ಬೆಂತರ ಇತ್ಯಾದಿ ಮನಮೋಹಕ ಹೆಸರುಗಳಿಂದ ಕರೆಯಲಾಗುತ್ತದೆ. ಇವರು ಸಪ್ಲಿಮೆಂಟರಿಯಲ್ಲಿ ಪಾಸಾಗಿ ಸ್ವರ್ಗ ಅಥವಾ ನರಕ ಸೇರಿಸಲು ಕೋಚಿಂಗ್ ಕೊಡಬೇಕಾಗುತ್ತದೆ. ಇಂತಹ ವಿದ್ಯಾದಾನದ ಪುಣ್ಯಕಾರ್ಯಕ್ಕೆ ಜೋಯಿಸರು ಸದಾ ಟೊಂಕಕಟ್ಟಿ ನಿಂತಿರುತ್ತಾರೆ. ಇದಕ್ಕೆ ದೊಡ್ಡ ಪೀಸೂ ಉಂಟು.
ಕೆಲವು ಸಲ ಈ ಸಪ್ಲಿಮೆಂಟರಿ ಗಿರಾಕಿಗಳು ಸಹವಾಸದೋಷಕ್ಕೆ ಒಳಗಾಗಿ, ಭೂತಗಳ ಗ್ಯಾಂಗುಗಳ ಕೈಗೆ ಸಿಗುವುದುಂಟು. ಇಂತವರ ಜುಟ್ಟು ಅವುಗಳ ಕೈಯಲ್ಲಿರುವುದರಿಂದ ಈ ಹೋಪ್‍ಲೆಸ್ ಗಿರಾಕಿಗಳನ್ನು ಪಾಸು ಮಾಡಲು ಭೂತಗಳಿಗೂ ಪರೀಕ್ಷಾ ಮಂಡಳಿಯ ಸಿಬ್ಬಂದಿಗಳಿಗೆ ಕೊಡುವಂತೆ ಸಮ್‍ಥಿಂಗ್ ಕೊಟ್ಟು ತೃಪ್ತಿಪಡಿಸಿ ಮಾರ್ಕು ತಿದ್ದಬೇಕಾಗುತ್ತದೆ. ಭೂತಗಳ ಕೈಯಿಂದ ಬಿಡಿಸಬೇಕಾಗುತ್ತದೆ. ಇವೆಲ್ಲವನ್ನೂ ಜೋಯಿಸರು ತಮ್ಮ ಮಂತ್ರಶಕ್ತಿಯಿಂದ ಮಾಡುತ್ತಾರೆ. ಒಂದು ವೇಳೆ ಎಂದೂ ಪಾಸಾಗದ ಮಂದಬುದ್ಧಿಯ ಪಿಶಾಚಿಗಳು ಇದ್ದರೆ, ಅವುಗಳನ್ನು ಉಪಾಯವಾಗಿ ಅವುಗಳ ಸೈಜಿಗೆ ತಕ್ಕಂತೆ ಕ್ವಾರ್ಟರ್, ಹಾಫ್, ಫುಲ್ ಇಲ್ಲವೇ, ಬಿಯರ್ ಬಾಟಲಿಗೆ ಹಾಕಿ ಬಿರಡೆ ಮುಚ್ಚಿ ಬಂದೋಬಸ್ತ್ ಮಾಡಿ ನದಿ, ಸಮುದ್ರಗಳಲ್ಲಿ ತೇಲಿಬಿಡುವ ಜೋಯಿಸರೂ ಇದ್ದು, ನಿಮ್ಮ ಗಿರಾಕಿಯ ಪ್ರಯಾಣ ಭತ್ತೆ ನೀವವರಿಗೆ ಕೊಟ್ಟರಾಯಿತು. ನಿಮ್ಮ ದೆವ್ವಗಳು ನಿರಾಯಾಸವಾಗಿ ಸಮುದ್ರಯಾನ ಮಾಡಿ ಆಫ್ರಿಕಾ, ಅಮೇರಿಕಾ ತೀರ ತಲುಪುತ್ತವೆ. ಅಲ್ಲಿ ಪಾಸ್ಪೋರ್ಟ್, ವೀಸಾ ಇಲ್ಲದೇ ಅವು ಮರಳಿಬಂದು ನಿಮ್ಮನ್ನು ಪೀಡಿಸಲು ಸಾಧ್ಯವಿಲ್ಲ. ಒಟ್ಟಿನಲ್ಲಿ ನೀವು ಮಾಡಬೇಕಾದುದು ಇಷ್ಟೇ- ಜೋಯಿಸರು ಹೇಳಿದ್ದಕ್ಕೆ ಭಯಭಕ್ತಿಯಿಂದ ತಲೆ ಅಲ್ಲಾಡಿಸಬೇಕು ಮತ್ತು ಗಂಟುಬಿಚ್ಚಬೇಕು!
ಇಲ್ಲದಿದ್ದಲ್ಲಿ ಇವರು ವಿಕ್ರಮಾದಿತ್ಯನನ್ನು ಕಾಡಿದ ಬೇತಾಳದಂತೆ ನಿಮ್ಮನ್ನು ಕಾಡುತ್ತಿರುತ್ತಾರೆ. ಬ್ರಹ್ಮಕಪಾಳದಂತೆ ನಿಮ್ಮ ಕುತ್ತಿಗೆಗೆ ಕಚ್ಚಿಕೊಂಡಿರುತ್ತಾರೆ. ನೀವು ಹೆದರದೇ ಇದ್ದರೆ, ಕೆಲವು ಸ್ಯಾಂಪಲುಗಳನ್ನು ಇಲ್ಲಿ ಕೊಡುತ್ತೇನೆ.
ಮೇಲೆ ಹೇಳಿದ್ದು ಅಲ್ಲದೆ, ಜೋಯಿಸರು ಹೇಳುವಂತೆ “ಮನೆತನದಲ್ಲಿ ಯಾರಾದರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ಯಾರಾದರೂ ನೇಣು ಹಾಕಿಕೊಂಡು ಅಥವಾ ಅಪಘಾತದಿಂದ ಸಾವನ್ನಪ್ಪಿದ್ದರೆ, ಇಂತಹವರ ಮನೆಯಲ್ಲಿ ಒಂದು ಪೀಳಿಗೆ ಬಿಟ್ಟು ಮುಂದಿನ ಪೀಳಿಗೆಯವರು ಭಯಂಕರ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.” ಎಷ್ಟರಮಟ್ಟಿಗೆ ಈ ಉಪದ್ರಗಳಿರುತ್ತವೆ ಎಂದರೆ, ಬೆಳಿಗ್ಗೆ ನೀವು ಶೌಚಕ್ಕೆ ಹೋದಾಗ ಹಿಂದಿನ ದಿನ ತಿಂದ ಚಿಕನ್, ಮಟನ್ ಇತ್ಯಾದಿ ಹೊರಗೆ ಬರದಂತೆ ದಿಗ್ಭಂಧನ ವಿಧಿಸುವ ತಾಕತ್ತೂ ಈ ದೆವ್ವ ಪಿಶಾಚಿಗಳಿಗಿವೆ!
ಇಲ್ಲಿರುವ ಒಂದು ರಿಲೇಟಿವಿಟಿ ಥಿಯರಿಯೂ ಒಂದು ದೊಡ್ಡ ಆವಿಷ್ಕಾರವೇ. ನಿಮ್ಮ ಕುಟುಂಬದಲ್ಲಿ ನಿಮ್ಮ ಕಾಲದಲ್ಲಿ ಯಾರೂ ಅಪಮರಣಕ್ಕೆ ತುತ್ತಾಗಿರದಿದ್ದರೂ ನಿಮಗೆ ಮುಕ್ತಿಯಿಲ್ಲ! ನೀವೂ ಕಂಡೂ, ಕೇಳಿಯೂ ಇಲ್ಲದ ಅಜ್ಜನ ಮುತ್ತಜ್ಜ ಮುತ್ತಜ್ಜಿಯರನ್ನು ಜ್ಯೋತಿಷ್ಯ ಪ್ರಶ್ನೆಯ ಮೂಲಕ ನಿದ್ದೆಯಿಂದ ಒದ್ದೆಬ್ಬಿಸಿ ಈ ಜ್ಯೋತಿಷಿಗಳು ಕರೆತರುತ್ತಾರೆ.
ನಿಮಗೆ ನಂಬಿಕೆ ಇಲ್ಲದಿದ್ದರೆ, ಒಂದು ಸತ್ಯ ಘಟನೆ ಹೇಳುತ್ತೇನೆ. ಮೂರು ದಶಕಗಳ ಹಿಂದೆ ನಾನು ಮುಂಬಯಿಯಲ್ಲಿದ್ದೆ. ನಾವಿದ್ದ ಚಾಳ್ (ಒಂದರ ಪಕ್ಕ ಒಂದಿರುವ ಎರಡು ಅರೆಕೋಣೆಗಳ ಮನೆಗಳು)ನ ಪಕ್ಕದ ರೂಮಿನಲ್ಲಿ ನಮ್ಮದೇ ಕರಾವಳಿಯ ಒಬ್ಬರು ‘ಪ್ರಖಾಂಡ’ ಜೋಯಿಸರಿದ್ದರು. ಬ್ರಾಹ್ಮಣರಲ್ಲದ ಅವರು ತಮ್ಮ ಡ್ಯೂಟಿಯ ಅವಧಿಯಲ್ಲಿ ಜನಿವಾರ, ಕಚ್ಚೆ, ನಾಮಗಳಿಂದ ಭೂಷಿತರಾಗಿ, ಮಾರುಕಟ್ಟೆ ಇರುವ ನೂರಾರು ದೇವರುಗಳ ಫೋಟೋ, ವಿಗ್ರಹಗಳನ್ನು ಬೆಳ್ಳಿ ಮಚ್ಚಿದ ಮಹಾಮಂಟಪಗಳಲ್ಲಿ ಹೂ, ಕುಂಕುಮ, ಅರಿಶಿನಗಳ ಅಲಂಕಾರಗಳೊಂದಿಗೆ ಇಟ್ಟುಕೊಂಡು, ಥಳಥಳ ಹೊಳೆಯುವ ತಾಮ್ರ, ಹಿತ್ತಾಳೆ, ಕಂಚಿನ ತಟ್ಟೆ, ಹರಿವಾಣ, ಗಿಂಡೆಗಳಿಂದ ಪರಿವೃತ್ತರಾಗಿ ಬಂದವರ ದೋಷ ಪರಿಹಾರಾರ್ಥವಾಗಿ ಸನ್ನದ್ಧರಾಗಿ ತಮ್ಮ ಏಜೆನ್ಸಿಯಲ್ಲಿ ಬೆಳಿಗ್ಗಿನಿಂದ ತಡರಾತ್ರಿವರೆಗೆ ಕುಳಿತು, ಕೆಲವು ಸಲ ಹೋಮಗಳ ಹೊಗೆ ಹಾಕುತ್ತಾ ಸೊಳ್ಳೆಗಳನ್ನು ಓಡಿಸುವುದಲ್ಲದೆ, ಅಕ್ಕಪಕ್ಕದವರ ಉಸಿರನ್ನೂ ಕಟ್ಟಿಸುತ್ತಿದ್ದರು. ಅವರ ವೇದೋಪನಿಷತ್ ಅಧ್ಯಯನ ಫುಟ್‍ಪಾತ್‍ಗಳಲ್ಲಿ ಸಿಗುವ ಮಂತ್ರದ ಪುಸ್ತಕಗಳಿಗೆ ಸೀಮಿತವಾಗಿದ್ದರೂ ಅವರು ಅವುಗಳ ನಡುವೆ ಉದಾರವಾಗಿ ಹ್ರಾಂ, ಹ್ರೀಂ, ಫಟ್, ಘಟ್, ಷಟ್! ಶಿಟ್! ಇತ್ಯಾದಿಗಳನ್ನು ‘ಕರಿಮಣಿ ಸರದೊಳ್ ಹವಳವಂ ಕೋದಂತೆ’ ಸೇರಿಸುತ್ತಿದ್ದರಿಂದ ಗಿರಾಕಿಗಳು ಪ್ರಭಾವಿತರಾಗಿ ಮನೋರಮೆಯಂತೆ ತಲೆದೂಗುತ್ತಿದ್ದರು. ಇವೆಲ್ಲವುಗಳ ವಿವರ ಮುಂದೆ ಹೇಳುವೆ. ಈಗ ಮುಖ್ಯ ವಿಷಯಕ್ಕೆ ಬರೋಣ.
ಇವರಿಗೆ ಬರುವ ಗಿರಾಕಿಗಳಲ್ಲಿ ಕಾಮಾಟಿಪುರ ಮುಂತಾದ ರೆಡ್‍ಲೈಟ್ ಏರಿಯಾದ ಮಹಿಳೆಯರು ಮತ್ತು ಅವರ ಮೇಡಂಗಳೂ ಇದ್ದರು. ವ್ಯಾಪಾರ ಅಭಿವೃದ್ಧಿ, ಗರ್ಭಪಾತ ದೋಷ, ರೋಗಬಾಧೆ ಇತ್ಯಾದಿಗಳ ಪರಿಹಾರಾರ್ಥ ಬಂದು ತಮ್ಮ ಮನಸ್ಸನ್ನೂ, ಪರ್ಸನ್ನೂ ಹಗುರ ಮಾಡಿಕೊಂಡುಹೋಗುತ್ತಿದ್ದರು.
ಯಾವತ್ತೂ ಬರುವ ಒಬ್ಬಳು ಮೇಡಂ, ಒಂದು ದಿನ ಸಖಿ ಪರಿವಾರ ಸಮೇತಳಾಗಿ ಬಂದಳು. ಅವಳಿಗೆ ಮಹಾ ಆತಂಕವಾಗಿತ್ತು. ಅವಳ ಅಡ್ಡೆಗೆ ಒಬ್ಬ ಶ್ರೀಮಂತ ಮಾರ್ವಾಡಿ ವರ್ಷಗಳಿಂದ ಬರುತ್ತಿದ್ದನಂತೆ. ಅವಳ ಮೇಲೆ ಭಾರೀ ಪ್ರೀತಿಯಂತೆ. ಅವಳಿಗೆ ವಯಸ್ಸಾದರೂ, ಆಗಾಗ ಅವಳ ಸಂಗವನ್ನೂ ಬಯಸುತ್ತಿದ್ದನಂತೆ. ಒಂದು ದಿನ ಬಂದ ಈ ಹಣ್ಣುಹಣ್ಣು ಮುದುಕ ‘ನೀನೇ ಬೇಕು’ ಎಂದು ಯುವತಿಯರನ್ನೆಲ್ಲಾ ತಿರಸ್ಕರಿಸಿ, ಅವಳ ಜೊತೆ ಮಲಗಿ, ಖಕ್ ಪಕ್ ಎಂದು ಕೆಮ್ಮುತ್ತಾ ಆಟವಾಡುತ್ತಿದ್ದವನು ಅವಳೊಳಗೇ ಪ್ರಾಣಬಿಟ್ಟನಂತೆ!
ಅವಳಿದನ್ನು ಹೇಳುತ್ತಿದ್ದಂತೆ, ನಮ್ಮ ಜೋಯಿಸರು ಆಕಾಶವೇ ತಲೆಯಮೇಲೆ ಬಿದ್ದಂತೆ ಉದ್ಘಾರ ತೆಗೆದು, ”ಆತನ ಆತ್ಮ ಇನ್ನೂ ನಿನ್ನ ಗರ್ಭದಲ್ಲಿದೆ, ನಿನ್ನ ಮೇಲೆ ಅಷ್ಟು ಮೋಹ ಇರುವವನು ನೀನು ಸತ್ತರೂ ನಿನ್ನನ್ನು ಬಿಡಲಾರ!” ಎಂದು ಖಡಾಖಂಡಿತವಾಗಿ ಘೋಷಿಸಿದಾಗ ಆತನ ಈ ಅಮರಪ್ರೇಮಕ್ಕೆ ಅನಂದಭಾಷ್ಪ ಸುರಿಸಬೇಕಾಗಿದ್ದವಳು ಸಂತೋಷಾತಿರೇಕದಿಂದ ರೈತರು ಯೂರಿಯಾ ಎಂದು ಕರೆಯುವ ಅಮೋನಿಯಂ ಮಿಶ್ರಿತ ದ್ರಾವಣವನ್ನು ಕುಳಿತಲ್ಲೇ ಇಷ್ಟಗಲಕ್ಕೆ ಸ್ರವಿಸಿದಳಂತೆ!
ನಂತರ ಆಕೆಯ ದೇಹದಿಂದ ಆ ಅಮರಪ್ರೇಮಿ ಮುದುಕ ಮಾರ್ವಾಡಿಯನ್ನು ಓಡಿಸಲು ಆ ಕಾಲಕ್ಕೇ ಒಂದೂವರೆ ಲಕ್ಷ ರೂ.ಗಳ ಮಹಾಪೂಜೆ ಮಾಡಿಸಲಾಯಿತು. ಇದು ನನಗೆ ಗೊತ್ತಾದುದು ನಮ್ಮ ರೂಮಿನಲ್ಲೇ ಇದ್ದ ಕಸಿನ್‍ನಿಂದ. ಆತ ಅಗತ್ಯ ಬಿದ್ದಾಗ ದಿಢೀರ್ ಜನಿವಾರ ಹಾಕಿ ಪರಿಚಾರಕ ಮಾಣಿಯಾಗಿ ಹೋಗುತ್ತಿದ್ದ! ಬಾಲ್ಯದಲ್ಲೇ ಮುಂಬಯಿಗೆ ಓಡಿ ಫುಟ್‍ಪಾತಲ್ಲಿ ಮಲಗಿ, ರಾತ್ರಿ ಶಾಲೆಯಲ್ಲಿ ಕಲಿತ ಈ ಜೋಯಿಸರು ಒಂದು ವಿಷಯದಲ್ಲಿ ಪ್ರಾಮಾಣಿಕರು. ನಮಗೆ ನಂಬಿಕೆ ಇಲ್ಲ ಎಂದು ಗೊತ್ತಾದದ್ದೇ, ಅವರು ರಾತ್ರಿ ಎಲ್ಲರೂ ಹೋದ ಮೇಲೆ ರಿಲಾಕ್ಸಾಗಿ ಇಂತಹ ಕತೆಗಳನ್ನು ಹೇಳುತ್ತಿದ್ದರು. ಇದರ ವಿವರ ತಿಳಿಸಿದ್ದೂ ಅವರೇ. “ಮಾರ್ವಾಡಿಯಿಂದ ಅವಳು ಪೀಕಿಸಿದ್ದಾಳೆ. ಅವಳಿಂದ ಸ್ವಲ್ಪ ನಾನು ಅಷ್ಟೇ!” ಇದು ಅವರ ಫಿಲಾಸಫಿ. ಇಂತಹ ಇನ್ನೂ ಅನೇಕ ಆವಿಷ್ಕಾರಗಳನ್ನು ಮುಂದೆ ನೋಡೋಣ.

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...