Homeಸಾಮಾಜಿಕವೇಶ್ಯೆಯ ಗರ್ಭದಲ್ಲಿ ಮುದುಕನ ಆತ್ಮ !

ವೇಶ್ಯೆಯ ಗರ್ಭದಲ್ಲಿ ಮುದುಕನ ಆತ್ಮ !

- Advertisement -
- Advertisement -

ಬುರುಡೆ ಜೋಯಿಸರು ಜನರನ್ನು ಹೆದರಿಸಲು ಎಂತೆಂತಹ ದೋಷಗಳು, ಗಂಡಗಳು, ಪೀಡೆಗಳು, ಕಾಟಗಳು ಇತ್ಯಾದಿ ಆವಿಷ್ಕಾರಗಳನ್ನು ಮಾಡಿದ್ದಾರೆಂದರೆ, ಅವುಗಳ ಸಂಖ್ಯೆಯನ್ನು ಹೇಳಿದರೆ ನಿಮಗೆ ಅಜೀರ್ಣವಾದೀತು! ಅವುಗಳ ಪರಿಣಾಮಗಳನ್ನು ಹೇಳಿದರೆ ಹೆದರಿ ಸ್ಮೃತಿ ತಪ್ಪಿಬೀಳುವಿರಿ! ಪರಿಹಾರಗಳನ್ನು ವಿವರವಾಗಿ ಬಣ್ಣಿಸಿ ವಿಶ್ಲೇಷಿಸಿರೆ, ನೀವು ನಕ್ಕುನಕ್ಕು ಸುಸ್ತಾಗಿ ‘ಜಠರದೋಷ’ದಿಂದ ಹೊಟ್ಟೆಯಲ್ಲಿ ಹುಣ್ಣಾಗುವ ಸಂಭವವಿದೆ!
ಮನುಷ್ಯನ ಭಯ, ಆತಂಕ, ಲಾಲಸೆ, ಮೌಢ್ಯ ಎಲ್ಲವುಗಳ ಆಳವಾದ ಸಂಶೋಧನೆಗಳನ್ನು ಮಾಡಿರುವ ಜೋಯಿಸರು ಜಾತಕ ದೋಷ, ಮೃತ್ಯುದೋಷ, ಅಪಮೃತ್ಯು ದೋಷ, ಪಿತೃದೋಷ, ಗ್ರಹದೋಷ, ನಕ್ಷತ್ರದೋಷ ಇತ್ಯಾದಿಯಾಗಿ ಹುಟ್ಟಿದರೂ, ಸತ್ತರೂ ಲೆಕ್ಕವಿಲ್ಲದಷ್ಟು ದೋಷಗಳನ್ನು ಕಂಡುಹಿಡಿದಿದ್ದಾರೆ ಮತ್ತು ನಿಮ್ಮಲ್ಲಿ ಎಷ್ಟು ರಸವಿದೆ ಎಂದು ನೋಡಿಕೊಂಡು ನಿಮಗೆ ನೋವಾಗದಂತೆ ಹಿಂಡುವ ಸಲುವಾಗಿ ಬೇರೆಬೇರೆ ಗಾತ್ರದ ಮಾಡೆಲ್‍ಗಳ ಜ್ಯೂಸ್ ತೆಗೆಯುವ ಯಂತ್ರತಂತ್ರಗಳ ಆವಿಷ್ಕಾರಗಳನ್ನೂ ಮಾಡಿದ್ದಾರೆ.
ಕಳೆದ ಸಂಚಿಕೆಯಲ್ಲಿ ನಾವು ಸ್ಮಶಾನಯಾತ್ರೆ ಮಾಡಿ, ಅಲ್ಲಿ ಪಿಂಡಶಾಸ್ತ್ರ ವರ್ಚುವಲ್ ಪೇಮೆಂಟ್ ಮುಂತಾದ ಆವಿಷ್ಕಾರಗಳನ್ನು ನೋಡಿರುವುದರಿಂದ ಈ ಸಂಚಿಕೆಯಲ್ಲಿ ಮೃತ್ಯುವಿನ ಸುತ್ತಲೇ ಕ್ಷುದ್ರಗ್ರಹಗಳಂತೆ ಒಂದು ಸುತ್ತು ಹಾಕೋಣ.
ಮನುಷ್ಯನ ಜೀವನದಲ್ಲಿ ಹುಟ್ಟು ಮತ್ತು ಸಾವು ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಂತೆ ಅನಿವಾರ್ಯ! ಆದುದರಿಂದ ಜೋಯಿಸರಿಗೆ ಆದಾಯದ ನಿರಂತರ ಮೂಲ. ಸತ್ತಮೇಲೆ ಮನುಷ್ಯ ಒಂದೋ ಡಿಸ್ಟಿಂಕ್ಷನ್‍ನಲ್ಲಿ ಪಾಸಾಗಿ ಸ್ವರ್ಗ ಸೇರುತ್ತಾನೆ. ಇಲ್ಲವೇ ಕಡಿಮೆ ಮಾರ್ಕು ತೆಗೆದು ಫೇಲಾಗಿ ನರಕ ಸೇರುತ್ತಾನೆ. ಅವುಗಳಿಗೆ ಬೇರೆಬೇರೆ ಕ್ರಿಯಾಕರ್ಮಗಳುಂಟು. ಅವುಗಳಿಗೆ ಮತ್ತು ಅವುಗಳಿಂದ ‘ಅರ್ಥ’ ಕಲ್ಪಿಸುವ ಅರ್ಥಶಾಸ್ತ್ರಜ್ಞರೇ ಜೋಯಿಸರು. ಹೀಗೆ ಸತ್ತವರ ಕೆಲಸಗಳು ನಿಮ್ಮಲ್ಲಿ ಎಷ್ಟು ದಮ್ಮಡಿ ಇದೆ ಎಂಬುದರ ಮೇಲೆ ಅವಲಂಬಿಸಿವೆ. ಅದು ಒಮ್ಮೆಗೇ ಮುಗಿಯಬಹುದು. ಅಥವಾ ವರ್ಷಕ್ಕೊಮ್ಮೆ ಶ್ರಾದ್ಧ, ಶಾಂತಿ ಹೋಮದಂತಹ ಡೆತ್‍ಡೇ ಪಾರ್ಟಿಗಳನ್ನು ಕೊಡಬೇಕಾಗಿ ಬರಬಹುದು! ಅವುಗಳ ಕಂತ್ರಾಟು ಪಡೆಯಲು ಜೋಯಿಸರು ಬೇರೆ ಬೇರೆ ಮೆನುಗಳೊಂದಿಗೆ ಸದಾ ಸಿದ್ಧರಿರುತ್ತಾರೆ.
ಸಮಸ್ಯೆ ಇರುವುದು ನಡುವೆಯೇ ಶಾಲೆ ಬಿಟ್ಟವರು ಮತ್ತು ಒಂದೆರಡು ಸಬ್ಜೆಕ್ಟ್‍ಗಳಲ್ಲಿ ಫೇಲಾಗಿ ತ್ರಿಶಂಕುಗಳಂತೆ ಸ್ವರ್ಗವನ್ನೂ ಸೇರದೆ, ನರಕವನ್ನೂ ಸೇರದೆ ಅಂತರ್ಭೂತಗಳಾಗಿ ತಿರುಗುವ ಆತ್ಮಗಳದ್ದು. ಇವರು ಸಪ್ಲಿಮೆಂಟರಿ ಪರೀಕ್ಷೆ ಕಟ್ಟುವ ಗಿರಾಕಿಗಳು. ಇವರನ್ನು ಕುಲೆ, ಪಿಶಾಚಿ, ದೆವ್ವ, ಅಂತರ ಬೆಂತರ ಇತ್ಯಾದಿ ಮನಮೋಹಕ ಹೆಸರುಗಳಿಂದ ಕರೆಯಲಾಗುತ್ತದೆ. ಇವರು ಸಪ್ಲಿಮೆಂಟರಿಯಲ್ಲಿ ಪಾಸಾಗಿ ಸ್ವರ್ಗ ಅಥವಾ ನರಕ ಸೇರಿಸಲು ಕೋಚಿಂಗ್ ಕೊಡಬೇಕಾಗುತ್ತದೆ. ಇಂತಹ ವಿದ್ಯಾದಾನದ ಪುಣ್ಯಕಾರ್ಯಕ್ಕೆ ಜೋಯಿಸರು ಸದಾ ಟೊಂಕಕಟ್ಟಿ ನಿಂತಿರುತ್ತಾರೆ. ಇದಕ್ಕೆ ದೊಡ್ಡ ಪೀಸೂ ಉಂಟು.
ಕೆಲವು ಸಲ ಈ ಸಪ್ಲಿಮೆಂಟರಿ ಗಿರಾಕಿಗಳು ಸಹವಾಸದೋಷಕ್ಕೆ ಒಳಗಾಗಿ, ಭೂತಗಳ ಗ್ಯಾಂಗುಗಳ ಕೈಗೆ ಸಿಗುವುದುಂಟು. ಇಂತವರ ಜುಟ್ಟು ಅವುಗಳ ಕೈಯಲ್ಲಿರುವುದರಿಂದ ಈ ಹೋಪ್‍ಲೆಸ್ ಗಿರಾಕಿಗಳನ್ನು ಪಾಸು ಮಾಡಲು ಭೂತಗಳಿಗೂ ಪರೀಕ್ಷಾ ಮಂಡಳಿಯ ಸಿಬ್ಬಂದಿಗಳಿಗೆ ಕೊಡುವಂತೆ ಸಮ್‍ಥಿಂಗ್ ಕೊಟ್ಟು ತೃಪ್ತಿಪಡಿಸಿ ಮಾರ್ಕು ತಿದ್ದಬೇಕಾಗುತ್ತದೆ. ಭೂತಗಳ ಕೈಯಿಂದ ಬಿಡಿಸಬೇಕಾಗುತ್ತದೆ. ಇವೆಲ್ಲವನ್ನೂ ಜೋಯಿಸರು ತಮ್ಮ ಮಂತ್ರಶಕ್ತಿಯಿಂದ ಮಾಡುತ್ತಾರೆ. ಒಂದು ವೇಳೆ ಎಂದೂ ಪಾಸಾಗದ ಮಂದಬುದ್ಧಿಯ ಪಿಶಾಚಿಗಳು ಇದ್ದರೆ, ಅವುಗಳನ್ನು ಉಪಾಯವಾಗಿ ಅವುಗಳ ಸೈಜಿಗೆ ತಕ್ಕಂತೆ ಕ್ವಾರ್ಟರ್, ಹಾಫ್, ಫುಲ್ ಇಲ್ಲವೇ, ಬಿಯರ್ ಬಾಟಲಿಗೆ ಹಾಕಿ ಬಿರಡೆ ಮುಚ್ಚಿ ಬಂದೋಬಸ್ತ್ ಮಾಡಿ ನದಿ, ಸಮುದ್ರಗಳಲ್ಲಿ ತೇಲಿಬಿಡುವ ಜೋಯಿಸರೂ ಇದ್ದು, ನಿಮ್ಮ ಗಿರಾಕಿಯ ಪ್ರಯಾಣ ಭತ್ತೆ ನೀವವರಿಗೆ ಕೊಟ್ಟರಾಯಿತು. ನಿಮ್ಮ ದೆವ್ವಗಳು ನಿರಾಯಾಸವಾಗಿ ಸಮುದ್ರಯಾನ ಮಾಡಿ ಆಫ್ರಿಕಾ, ಅಮೇರಿಕಾ ತೀರ ತಲುಪುತ್ತವೆ. ಅಲ್ಲಿ ಪಾಸ್ಪೋರ್ಟ್, ವೀಸಾ ಇಲ್ಲದೇ ಅವು ಮರಳಿಬಂದು ನಿಮ್ಮನ್ನು ಪೀಡಿಸಲು ಸಾಧ್ಯವಿಲ್ಲ. ಒಟ್ಟಿನಲ್ಲಿ ನೀವು ಮಾಡಬೇಕಾದುದು ಇಷ್ಟೇ- ಜೋಯಿಸರು ಹೇಳಿದ್ದಕ್ಕೆ ಭಯಭಕ್ತಿಯಿಂದ ತಲೆ ಅಲ್ಲಾಡಿಸಬೇಕು ಮತ್ತು ಗಂಟುಬಿಚ್ಚಬೇಕು!
ಇಲ್ಲದಿದ್ದಲ್ಲಿ ಇವರು ವಿಕ್ರಮಾದಿತ್ಯನನ್ನು ಕಾಡಿದ ಬೇತಾಳದಂತೆ ನಿಮ್ಮನ್ನು ಕಾಡುತ್ತಿರುತ್ತಾರೆ. ಬ್ರಹ್ಮಕಪಾಳದಂತೆ ನಿಮ್ಮ ಕುತ್ತಿಗೆಗೆ ಕಚ್ಚಿಕೊಂಡಿರುತ್ತಾರೆ. ನೀವು ಹೆದರದೇ ಇದ್ದರೆ, ಕೆಲವು ಸ್ಯಾಂಪಲುಗಳನ್ನು ಇಲ್ಲಿ ಕೊಡುತ್ತೇನೆ.
ಮೇಲೆ ಹೇಳಿದ್ದು ಅಲ್ಲದೆ, ಜೋಯಿಸರು ಹೇಳುವಂತೆ “ಮನೆತನದಲ್ಲಿ ಯಾರಾದರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ಯಾರಾದರೂ ನೇಣು ಹಾಕಿಕೊಂಡು ಅಥವಾ ಅಪಘಾತದಿಂದ ಸಾವನ್ನಪ್ಪಿದ್ದರೆ, ಇಂತಹವರ ಮನೆಯಲ್ಲಿ ಒಂದು ಪೀಳಿಗೆ ಬಿಟ್ಟು ಮುಂದಿನ ಪೀಳಿಗೆಯವರು ಭಯಂಕರ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.” ಎಷ್ಟರಮಟ್ಟಿಗೆ ಈ ಉಪದ್ರಗಳಿರುತ್ತವೆ ಎಂದರೆ, ಬೆಳಿಗ್ಗೆ ನೀವು ಶೌಚಕ್ಕೆ ಹೋದಾಗ ಹಿಂದಿನ ದಿನ ತಿಂದ ಚಿಕನ್, ಮಟನ್ ಇತ್ಯಾದಿ ಹೊರಗೆ ಬರದಂತೆ ದಿಗ್ಭಂಧನ ವಿಧಿಸುವ ತಾಕತ್ತೂ ಈ ದೆವ್ವ ಪಿಶಾಚಿಗಳಿಗಿವೆ!
ಇಲ್ಲಿರುವ ಒಂದು ರಿಲೇಟಿವಿಟಿ ಥಿಯರಿಯೂ ಒಂದು ದೊಡ್ಡ ಆವಿಷ್ಕಾರವೇ. ನಿಮ್ಮ ಕುಟುಂಬದಲ್ಲಿ ನಿಮ್ಮ ಕಾಲದಲ್ಲಿ ಯಾರೂ ಅಪಮರಣಕ್ಕೆ ತುತ್ತಾಗಿರದಿದ್ದರೂ ನಿಮಗೆ ಮುಕ್ತಿಯಿಲ್ಲ! ನೀವೂ ಕಂಡೂ, ಕೇಳಿಯೂ ಇಲ್ಲದ ಅಜ್ಜನ ಮುತ್ತಜ್ಜ ಮುತ್ತಜ್ಜಿಯರನ್ನು ಜ್ಯೋತಿಷ್ಯ ಪ್ರಶ್ನೆಯ ಮೂಲಕ ನಿದ್ದೆಯಿಂದ ಒದ್ದೆಬ್ಬಿಸಿ ಈ ಜ್ಯೋತಿಷಿಗಳು ಕರೆತರುತ್ತಾರೆ.
ನಿಮಗೆ ನಂಬಿಕೆ ಇಲ್ಲದಿದ್ದರೆ, ಒಂದು ಸತ್ಯ ಘಟನೆ ಹೇಳುತ್ತೇನೆ. ಮೂರು ದಶಕಗಳ ಹಿಂದೆ ನಾನು ಮುಂಬಯಿಯಲ್ಲಿದ್ದೆ. ನಾವಿದ್ದ ಚಾಳ್ (ಒಂದರ ಪಕ್ಕ ಒಂದಿರುವ ಎರಡು ಅರೆಕೋಣೆಗಳ ಮನೆಗಳು)ನ ಪಕ್ಕದ ರೂಮಿನಲ್ಲಿ ನಮ್ಮದೇ ಕರಾವಳಿಯ ಒಬ್ಬರು ‘ಪ್ರಖಾಂಡ’ ಜೋಯಿಸರಿದ್ದರು. ಬ್ರಾಹ್ಮಣರಲ್ಲದ ಅವರು ತಮ್ಮ ಡ್ಯೂಟಿಯ ಅವಧಿಯಲ್ಲಿ ಜನಿವಾರ, ಕಚ್ಚೆ, ನಾಮಗಳಿಂದ ಭೂಷಿತರಾಗಿ, ಮಾರುಕಟ್ಟೆ ಇರುವ ನೂರಾರು ದೇವರುಗಳ ಫೋಟೋ, ವಿಗ್ರಹಗಳನ್ನು ಬೆಳ್ಳಿ ಮಚ್ಚಿದ ಮಹಾಮಂಟಪಗಳಲ್ಲಿ ಹೂ, ಕುಂಕುಮ, ಅರಿಶಿನಗಳ ಅಲಂಕಾರಗಳೊಂದಿಗೆ ಇಟ್ಟುಕೊಂಡು, ಥಳಥಳ ಹೊಳೆಯುವ ತಾಮ್ರ, ಹಿತ್ತಾಳೆ, ಕಂಚಿನ ತಟ್ಟೆ, ಹರಿವಾಣ, ಗಿಂಡೆಗಳಿಂದ ಪರಿವೃತ್ತರಾಗಿ ಬಂದವರ ದೋಷ ಪರಿಹಾರಾರ್ಥವಾಗಿ ಸನ್ನದ್ಧರಾಗಿ ತಮ್ಮ ಏಜೆನ್ಸಿಯಲ್ಲಿ ಬೆಳಿಗ್ಗಿನಿಂದ ತಡರಾತ್ರಿವರೆಗೆ ಕುಳಿತು, ಕೆಲವು ಸಲ ಹೋಮಗಳ ಹೊಗೆ ಹಾಕುತ್ತಾ ಸೊಳ್ಳೆಗಳನ್ನು ಓಡಿಸುವುದಲ್ಲದೆ, ಅಕ್ಕಪಕ್ಕದವರ ಉಸಿರನ್ನೂ ಕಟ್ಟಿಸುತ್ತಿದ್ದರು. ಅವರ ವೇದೋಪನಿಷತ್ ಅಧ್ಯಯನ ಫುಟ್‍ಪಾತ್‍ಗಳಲ್ಲಿ ಸಿಗುವ ಮಂತ್ರದ ಪುಸ್ತಕಗಳಿಗೆ ಸೀಮಿತವಾಗಿದ್ದರೂ ಅವರು ಅವುಗಳ ನಡುವೆ ಉದಾರವಾಗಿ ಹ್ರಾಂ, ಹ್ರೀಂ, ಫಟ್, ಘಟ್, ಷಟ್! ಶಿಟ್! ಇತ್ಯಾದಿಗಳನ್ನು ‘ಕರಿಮಣಿ ಸರದೊಳ್ ಹವಳವಂ ಕೋದಂತೆ’ ಸೇರಿಸುತ್ತಿದ್ದರಿಂದ ಗಿರಾಕಿಗಳು ಪ್ರಭಾವಿತರಾಗಿ ಮನೋರಮೆಯಂತೆ ತಲೆದೂಗುತ್ತಿದ್ದರು. ಇವೆಲ್ಲವುಗಳ ವಿವರ ಮುಂದೆ ಹೇಳುವೆ. ಈಗ ಮುಖ್ಯ ವಿಷಯಕ್ಕೆ ಬರೋಣ.
ಇವರಿಗೆ ಬರುವ ಗಿರಾಕಿಗಳಲ್ಲಿ ಕಾಮಾಟಿಪುರ ಮುಂತಾದ ರೆಡ್‍ಲೈಟ್ ಏರಿಯಾದ ಮಹಿಳೆಯರು ಮತ್ತು ಅವರ ಮೇಡಂಗಳೂ ಇದ್ದರು. ವ್ಯಾಪಾರ ಅಭಿವೃದ್ಧಿ, ಗರ್ಭಪಾತ ದೋಷ, ರೋಗಬಾಧೆ ಇತ್ಯಾದಿಗಳ ಪರಿಹಾರಾರ್ಥ ಬಂದು ತಮ್ಮ ಮನಸ್ಸನ್ನೂ, ಪರ್ಸನ್ನೂ ಹಗುರ ಮಾಡಿಕೊಂಡುಹೋಗುತ್ತಿದ್ದರು.
ಯಾವತ್ತೂ ಬರುವ ಒಬ್ಬಳು ಮೇಡಂ, ಒಂದು ದಿನ ಸಖಿ ಪರಿವಾರ ಸಮೇತಳಾಗಿ ಬಂದಳು. ಅವಳಿಗೆ ಮಹಾ ಆತಂಕವಾಗಿತ್ತು. ಅವಳ ಅಡ್ಡೆಗೆ ಒಬ್ಬ ಶ್ರೀಮಂತ ಮಾರ್ವಾಡಿ ವರ್ಷಗಳಿಂದ ಬರುತ್ತಿದ್ದನಂತೆ. ಅವಳ ಮೇಲೆ ಭಾರೀ ಪ್ರೀತಿಯಂತೆ. ಅವಳಿಗೆ ವಯಸ್ಸಾದರೂ, ಆಗಾಗ ಅವಳ ಸಂಗವನ್ನೂ ಬಯಸುತ್ತಿದ್ದನಂತೆ. ಒಂದು ದಿನ ಬಂದ ಈ ಹಣ್ಣುಹಣ್ಣು ಮುದುಕ ‘ನೀನೇ ಬೇಕು’ ಎಂದು ಯುವತಿಯರನ್ನೆಲ್ಲಾ ತಿರಸ್ಕರಿಸಿ, ಅವಳ ಜೊತೆ ಮಲಗಿ, ಖಕ್ ಪಕ್ ಎಂದು ಕೆಮ್ಮುತ್ತಾ ಆಟವಾಡುತ್ತಿದ್ದವನು ಅವಳೊಳಗೇ ಪ್ರಾಣಬಿಟ್ಟನಂತೆ!
ಅವಳಿದನ್ನು ಹೇಳುತ್ತಿದ್ದಂತೆ, ನಮ್ಮ ಜೋಯಿಸರು ಆಕಾಶವೇ ತಲೆಯಮೇಲೆ ಬಿದ್ದಂತೆ ಉದ್ಘಾರ ತೆಗೆದು, ”ಆತನ ಆತ್ಮ ಇನ್ನೂ ನಿನ್ನ ಗರ್ಭದಲ್ಲಿದೆ, ನಿನ್ನ ಮೇಲೆ ಅಷ್ಟು ಮೋಹ ಇರುವವನು ನೀನು ಸತ್ತರೂ ನಿನ್ನನ್ನು ಬಿಡಲಾರ!” ಎಂದು ಖಡಾಖಂಡಿತವಾಗಿ ಘೋಷಿಸಿದಾಗ ಆತನ ಈ ಅಮರಪ್ರೇಮಕ್ಕೆ ಅನಂದಭಾಷ್ಪ ಸುರಿಸಬೇಕಾಗಿದ್ದವಳು ಸಂತೋಷಾತಿರೇಕದಿಂದ ರೈತರು ಯೂರಿಯಾ ಎಂದು ಕರೆಯುವ ಅಮೋನಿಯಂ ಮಿಶ್ರಿತ ದ್ರಾವಣವನ್ನು ಕುಳಿತಲ್ಲೇ ಇಷ್ಟಗಲಕ್ಕೆ ಸ್ರವಿಸಿದಳಂತೆ!
ನಂತರ ಆಕೆಯ ದೇಹದಿಂದ ಆ ಅಮರಪ್ರೇಮಿ ಮುದುಕ ಮಾರ್ವಾಡಿಯನ್ನು ಓಡಿಸಲು ಆ ಕಾಲಕ್ಕೇ ಒಂದೂವರೆ ಲಕ್ಷ ರೂ.ಗಳ ಮಹಾಪೂಜೆ ಮಾಡಿಸಲಾಯಿತು. ಇದು ನನಗೆ ಗೊತ್ತಾದುದು ನಮ್ಮ ರೂಮಿನಲ್ಲೇ ಇದ್ದ ಕಸಿನ್‍ನಿಂದ. ಆತ ಅಗತ್ಯ ಬಿದ್ದಾಗ ದಿಢೀರ್ ಜನಿವಾರ ಹಾಕಿ ಪರಿಚಾರಕ ಮಾಣಿಯಾಗಿ ಹೋಗುತ್ತಿದ್ದ! ಬಾಲ್ಯದಲ್ಲೇ ಮುಂಬಯಿಗೆ ಓಡಿ ಫುಟ್‍ಪಾತಲ್ಲಿ ಮಲಗಿ, ರಾತ್ರಿ ಶಾಲೆಯಲ್ಲಿ ಕಲಿತ ಈ ಜೋಯಿಸರು ಒಂದು ವಿಷಯದಲ್ಲಿ ಪ್ರಾಮಾಣಿಕರು. ನಮಗೆ ನಂಬಿಕೆ ಇಲ್ಲ ಎಂದು ಗೊತ್ತಾದದ್ದೇ, ಅವರು ರಾತ್ರಿ ಎಲ್ಲರೂ ಹೋದ ಮೇಲೆ ರಿಲಾಕ್ಸಾಗಿ ಇಂತಹ ಕತೆಗಳನ್ನು ಹೇಳುತ್ತಿದ್ದರು. ಇದರ ವಿವರ ತಿಳಿಸಿದ್ದೂ ಅವರೇ. “ಮಾರ್ವಾಡಿಯಿಂದ ಅವಳು ಪೀಕಿಸಿದ್ದಾಳೆ. ಅವಳಿಂದ ಸ್ವಲ್ಪ ನಾನು ಅಷ್ಟೇ!” ಇದು ಅವರ ಫಿಲಾಸಫಿ. ಇಂತಹ ಇನ್ನೂ ಅನೇಕ ಆವಿಷ್ಕಾರಗಳನ್ನು ಮುಂದೆ ನೋಡೋಣ.

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...