Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಬೇಯುವ ಭೂಮಿಯನ್ನು ಉಳಿಸುವುದು ಎಲ್ಲರ ಕರ್ತವ್ಯ

ಬೇಯುವ ಭೂಮಿಯನ್ನು ಉಳಿಸುವುದು ಎಲ್ಲರ ಕರ್ತವ್ಯ

- Advertisement -
- Advertisement -

ನಿನ್ನೆ ದೆಹಲಿಯಲ್ಲಿ ಅತ್ಯಂತ ಹೆಚ್ಚು ಮಾಲಿನ್ಯವಿತ್ತೆಂದು ಇಂದಿನ ದಿನಪತ್ರಿಕೆಗಳು ಬರೆದಿವೆ. ಇದರಿಂದ ಜನರು ಕಂಗಾಲಾಗಿದ್ದಾರೆಂದೂ ವರದಿಯಲ್ಲಿ ಹೇಳಲಾಗಿದೆ. ವಾಸ್ತವದಲ್ಲಿ ಜನರೇನೂ ಕಂಗಾಲಾಗಿಲ್ಲ. ಏಕೆಂದರೆ, ಇದು ಇದ್ದಕ್ಕಿದ್ದಂತೆ ಒಂದು ದಿನ ಸಂಭವಿಸಿದ ವಿಕೋಪವಲ್ಲ. ಪ್ರವಾಹ, ಸುನಾಮಿ, ಭೂಕಂಪದಂತಹ ಕೆಲವು ಪ್ರಾಕೃತಿಕ ವಿಕೋಪಗಳು ಉಂಟುಮಾಡುವ ಪರಿಣಾಮದ ಸ್ವರೂಪ ಬೇರೆ. ಒಳಗೊಳಗೇ ಶಿಥಿಲಗೊಳಿಸುವ ಬರ, ಪರಿಸರ ಮಾಲಿನ್ಯಗಳ ಪರಿಣಾಮದ ಸ್ವರೂಪ ಬೇರೆ. ನಿಧಾನಕ್ಕೆ ಹೆಚ್ಚಾಗುತ್ತಾ ಹೋಗುವ ಎರಡನೆಯ ಬಗೆಯ ಸಮಸ್ಯೆಗಳಿಗೆ ಜನರು ಹೊಂದಿ ಕೊಳ್ಳುತ್ತಾ ಹೋಗುತ್ತಾರೆ. ಅವರಲ್ಲಿ ಅಂತಹ ‘ಕಂಗಾಲು’ ಉಂಟಾ ಗುವುದಿಲ್ಲ. ಸದರಿ ವರದಿಯನ್ನು ಬರೆದ ವರದಿಗಾರರಿಗೂ ಕಂಗಾಲು ಉಂಟಾಗಿರುವುದಿಲ್ಲ; ತನ್ನ ಕರ್ತವ್ಯದ ಭಾಗವಾಗಿ ಬರೆದ ವರದಿಯಾಗಿರುತ್ತದೆ. ಇಲ್ಲವೇ ಗಮನ ಸೆಳೆಯುವ ದೃಷ್ಟಿಯಿಂದ ಪರಿಣಾಮ ಬೀರುವ ಪದಗಳನ್ನು ಬಳಸಬೇಕೆಂಬ ಉದ್ದೇಶ ಅವರದ್ದಾಗಿರುತ್ತದೆ.
ಇದಕ್ಕೆ ಕಾರಣವಿದೆ. ಈಗಾಗಲೇ ಚಾಲ್ತಿಯಲ್ಲಿರುವ ಉದಾಹರಣೆಯೊಂದರ ಮೂಲಕ ಅದನ್ನು ವಿವರಿಸಬಹುದು. ನೀವು ಕಪ್ಪೆಯೊಂದನ್ನು ಬಿಸಿ ನೀರಿಗೆ ಹಾಕಿದಲ್ಲಿ ಅದು ಕೂಡಲೇ ನೆಗೆದು ಅಲ್ಲಿಂದ ತಪ್ಪಿಸಿಕೊಳ್ಳುತ್ತದೆ. ಆದರೆ, ತಣ್ಣೀರಿನ ಪಾತ್ರೆಯಲ್ಲಿ ಅದನ್ನು ಇಟ್ಟು ತಳವನ್ನು ನಿಧಾನಕ್ಕೆ ಬಿಸಿ ಮಾಡುತ್ತಾ ಹೋದಲ್ಲಿ, ತಾನು ಬೆಂದು ಹೋಗುವವರೆಗೂ ಅದು ಸುಮ್ಮನೇ ಇರುತ್ತದೆ.
ಈ ರೀತಿ ಬೇಯುವ ಸ್ಥಿತಿಗೆ ಭೂಮಿ ಬರುತ್ತಿದೆ ಎಂದು ಹಲವು ತಜ್ಞರು ಹೇಳುತ್ತಿದ್ದಾರೆ. ಅದನ್ನು ಸೂಚಿಸುತ್ತಿರುವ ಹಲವು ಸಂಗತಿಗಳನ್ನೂ ಅವರು ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಇನ್ನೂ ಎಲ್ಲವೂ ಮುಗಿದು ಹೋಗಿಲ್ಲ ಎಂಬ ಸಮಜಾಯಿಷಿಯನ್ನು ನೀಡುತ್ತಾ, ಭೂಮಿಯನ್ನು ಮತ್ತಷ್ಟು ಸಂಕಷ್ಟಕ್ಕೆ ಒಡ್ಡುವ ಕೆಲಸ ನಡೆಯುತ್ತಲೇ ಇದೆ. ಉದಾಹರಣೆಗೆ ಕಾವೇರಿಗೆ ಅಡ್ಡಲಾಗಿರುವ ಕಟ್ಟಿರುವ ಕೆಆರ್‍ಎಸ್ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದ ಉಂಟಾದ ಕಂಪನಗಳು, ಅಣೆಕಟ್ಟೆಯ ಪಕ್ಕದಲ್ಲೇ ಸ್ಥಾಪನೆಯಾಗಿರುವ ಕಂಪನ ಮಾಪನ ಕೇಂದ್ರದವರೆಗೂ ಹೋಗಿ ಅಲ್ಲಿ ದಾಖಲಾಗಿವೆ. ಆದರೆ, ಆ ಕಂಪನದಿಂದ ಅಣೆಕಟ್ಟೆಗೆ ಯಾವುದೇ ಧಕ್ಕೆಯಾಗಿಲ್ಲವೆಂಬ ವರದಿಯನ್ನು ಇಟ್ಟುಕೊಂಡು ಗಣಿಗಾರಿಕೆ ಮುಂದುವರೆಸುವ ಸನ್ನಾಹಗಳು ಜಾರಿಯಲ್ಲಿವೆ. ಹಾಗಾದರೆ, ಒಮ್ಮೆ ಅಣೆಕಟ್ಟೆಗೆ ಧಕ್ಕೆಯಾದ ಮೇಲೆಯೇ ನಾವು ಎಚ್ಚೆತ್ತುಕೊಳ್ಳಬೇಕೆಂಬುದು ಅದರ ಅರ್ಥವೇ?
ಇಂತಹ ಅದೆಷ್ಟೋ ಉದಾಹರಣೆಗಳನ್ನು ನೀಡುತ್ತಾ ಹೋಗಬಹುದು. ಒಟ್ಟಿನಲ್ಲಿ ಮನುಷ್ಯರು ಸಾಂದ್ರವಾಗಿ ಜೀವನ ನಡೆಸುವ ಎಲ್ಲೆಡೆ ಪ್ರಕೃತಿಯಲ್ಲಿ ಭಾರೀ ಪ್ರಮಾಣದ ಏರುಪೇರುಗಳುಂಟಾಗುತ್ತವೆ. ಅವರು ಬಳಸಿ ಎಸೆಯುವ ತ್ಯಾಜ್ಯದ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗುತ್ತದೆ. ಆದರೆ, ಅದನ್ನೂ ದಾಟಿ ನೋಡಿದರೆ, ಇದು ‘ಜೀವನ’ದ ಪ್ರಶ್ನೆ ಅಷ್ಟೇ ಅಲ್ಲ. ಈ ರೀತಿಯ ನಗರೀಕರಣ ಹೆಚ್ಚಾದರೆ, ಭೂಮಿಯನ್ನು ಬೇಯಿಸುತ್ತಲೇ ಹೋಗುವ ಅಭಿವೃದ್ಧಿ ಹೆಚ್ಚಾಗುತ್ತಾ ಹೋದರೆ ಜಿಡಿಪಿ ಹೆಚ್ಚಾಗುತ್ತದೆ. ಹಾಗಾಗಿ ಜಿಡಿಪಿ ಹೆಚ್ಚಳದ ಹಿಂದೆ ಬಿದ್ದಿರುವ, ಕೆಲವು ಕಂಪೆನಿಗಳ ಲಾಭ ಹೆಚ್ಚಿಸುವ ಅಭಿವೃದ್ಧಿಯನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳ ಕೂಟ ಬೆಂಬಲಿಸುತ್ತಾ ಹೋಗುತ್ತದೆ. ಅಂತಿಮವಾಗಿ ಇನ್ನು ತಡೆದುಕೊಳ್ಳುವುದು ಸಾಧ್ಯವೇ ಇಲ್ಲ ಎನಿಸಿದಾಗ, ದೂರದ ಕಾಡಿನಲ್ಲಿರುವ ಜನರಿಗೆ ಕಾಡನ್ನು ರಕ್ಷಿಸುವ ಹೊಣೆ ವಹಿಸಲಾಗುತ್ತದೆ. ಅಲ್ಲಿ ಉಳಿದುಕೊಳ್ಳುವ ಕಾಡು, ಇನ್ನೆಲ್ಲೋ ನಡೆಯುತ್ತಿರುವ ಉತ್ಪಾತವನ್ನು ತಡೆಗಟ್ಟುವ ವಿಪರೀತದ ಪರಿಸರ ಸಮತೋಲನದ ಯೋಜನೆಗಾಗಿ ವರದಿಗಳು ತಯಾರಾಗುತ್ತವೆ.
ಒಂದಲ್ಲಾ ಒಂದು ರೀತಿಯಲ್ಲಿ ಕಸ್ತೂರಿ ರಂಗನ್ ವರದಿ ಅದೇ ಆಗಿದೆ. ಪಶ್ಚಿಮಘಟ್ಟ ಏನು ಮಾಡಬೇಕು ಎಂದು ನೀಡಲಾಗುತ್ತಿರುವ ವರದಿಗಿಂತ, ಈ ನಗರಗಳಲ್ಲಿ ಏನು ಮಾಡಬೇಕು ಎಂಬ ವರದಿಗಳು ಬರಬೇಕು ಮತ್ತು ಅವನ್ನು ಉಲ್ಲಂಘಿಸಲೇಬಾರದು ಎಂಬ ನಿಯಮಗಳನ್ನು ಹಾಕಿಕೊಳ್ಳಬೇಕು. ಅದು ನಡೆಯುತ್ತಿಲ್ಲ.
ನಮ್ಮ ನಗರಗಳ ಜನರ ಬದುಕನ್ನು ಸಹನೀಯಗೊಳಿಸಲು ಪ್ರತ್ಯೇಕ ಬಿಡಿ ಯೋಜನೆಗಳನ್ನು ತಯಾರಿಸುವುದನ್ನೇ ಬಿಡಬೇಕು. ಇಡೀ ಭೂಮಿಯ ಎಲ್ಲಾ ಭಾಗಗಳಲ್ಲೂ ಸಮತೋಲನದ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳಲು ಹೆಚ್ಚಿನ ತಜ್ಞತೆಯೇನೂ ಬೇಕಿಲ್ಲ. ದೆಹಲಿಯ ವಿಚಾರವನ್ನೇ ನೋಡಿ. ದೆಹಲಿ ಕೇಂದ್ರಿತವಾದ ಅಭಿವೃದ್ಧಿಯ ಭಾಗವಾಗಿ ಜಾರಿಗೆ ಬಂದ ಹಸಿರುಕ್ರಾಂತಿಯನ್ನು ಪಂಜಾಬಿನವರು ಅನುಸರಿಸಬೇಕಾಯಿತು. ಈಗ ಅಲ್ಲಿನ ಹೊಲಗದ್ದೆಗಳಲ್ಲಿ ಬೆಳೆ ಬೆಳೆದ ನಂತರ ಉಳಿಯುವ ಹುಲ್ಲಿನ ವಿಲೇವಾರಿ ಸಾಧ್ಯವಾಗದೇ ಬೆಂಕಿ ಹಾಕಲಾಗುತ್ತದೆ. ಆಗ ಅಲ್ಲಿಂದ ಏಳುವ ಹೊಗೆಯು ದೆಹಲಿಯವರೆಗೆ ಬಂದು ಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ವರದಿಯೊಂದಿದೆ. ಅದೇ ಪಂಜಾಬಿನವರೂ, ಹರಿಯಾಣದವರು ತಮ್ಮ ಹಳ್ಳಿಗಳಲ್ಲಿ ಬದುಕಲಾರದೇ ದೆಹಲಿಗೆ ಬಂದು ದುಡಿಯುತ್ತಾರೆ. ದೆಹಲಿಯನ್ನು ಜೀವಂತವಾಗಿಡಲು ಅವರೂ ಬೆವರು ಸುರಿಸುತ್ತಾರೆ ಮತ್ತು ದೆಹಲಿಯ ಕೊಳೆಗೆ ಅವರೂ ಕಾರಣರಾಗುತ್ತಾರೆ.
ಅಂದರೆ ಎಲ್ಲವೂ ಪರಸ್ಪರ ಹೆಣೆದುಕೊಂಡಿರುವ ಸಂಗತಿಗಳಿವು ಮತ್ತು ದೆಹಲಿಗೋ ಬೆಂಗಳೂರಿಗೋ ವಾಷಿಂಗ್ಟನ್ನಿಗೋ ಸೀಮಿತವಾದ ಸಂಗತಿಗಳೂ ಅಲ್ಲ. ಹಾಗೆಯೇ ಇದನ್ನು ಉಳಿಸಿಕೊಳ್ಳುವ ಕರ್ಮವನ್ನು ಅಂಚಿನಲ್ಲಿರುವವರ ಮೇಲೆ ಹೇರುವುದಕ್ಕಿಂತ ಆಷಾಢಭೂತಿತನ ಹಾಗೂ ಕ್ರೌರ್ಯ ಇನ್ನೊಂದಿಲ್ಲ. ಯಾರು ಶುರು ಮಾಡಬೇಕೆಂದು ಯಾದಿ ತಯಾರಿಸುವುದಾದರೆ, ಇದು ಮೊದಲು ಮೇಲಿನವರಿಂದ ಶುರುವಾಗಬೇಕಾದ ಕೆಲಸ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...