| ಡಾ. ವಾಸು ಎಚ್.ವಿ |
ಬಹುಶಃ ನೀವು ಇದನ್ನು ಕೇಳಿರಬಹುದು. ನಿಮ್ಮ ಕೈಯ್ಯಲ್ಲಿ ಒಂದು ಜೀವಂತ ಕಪ್ಪೆಯನ್ನು ಹಿಡಿದು ಅದನ್ನು ಬಿಸಿ ಬಿಸಿಯಾದ ನೀರಿನಲ್ಲಿ ಹಾಕಿದರೆ ಕಪ್ಪೆ ಏನು ಮಾಡುತ್ತದೆ? ಕೂಡಲೇ ಜಿಗಿದು ಹೊರ ಹಾರುತ್ತದೆ. ಆದರೆ, ಅದೇ ಕಪ್ಪೆಯನ್ನು ತಣ್ಣೀರಿನಲ್ಲಿ ಇಟ್ಟು, ನಿಧಾನಕ್ಕೆ ಕೆಳಗಿನಿಂದ ಬೆಂಕಿ ಹಾಕಿ ಉರಿಸುತ್ತಾ ಹೋದರೆ? ಕಪ್ಪೆಯು ಸ್ವಲ್ಪ ಸ್ವಲ್ಪವೇ ಬಿಸಿಯಾಗುತ್ತಿರುವ ನೀರಿನ ಉಷ್ಣತೆಗೆ ಹೊಂದಿಕೊಳ್ಳುತ್ತಾ ಹೋಗುತ್ತದೆ. ಕಡೆಗೆ ಹೊಂದಿಕೊಳ್ಳಲು ಸಾಧ್ಯವೇ ಆಗದ ಮಟ್ಟ ಮುಟ್ಟಿದಾಗಲೂ ಅದರ ಅರಿವಾಗದೇ ಬೇಯಲು ಶುರುವಾಗುತ್ತದೆ ಮತ್ತು ಸತ್ತು ಹೋಗುತ್ತದೆ.
ಒಟ್ಟಿಗೇ 10-15 ರೂ.ಗಳಷ್ಟು ಪೆಟ್ರೋಲ್ ದರ ಏರಿಸದೇ, ವಾರಕ್ಕೆ 2 ರೂ.ಗಳಂತೆ ಏರಿಸಿದರೆ? ಜನರಿಗೆ ಅದರ ಅರಿವೇ ಆಗುವುದಿಲ್ಲ. ಈ ದಿನ ಮಧ್ಯರಾತ್ರಿಯಿಂದ 5 ರೂ. ಏರಿಕೆ ಆಗುತ್ತದೆ ಎಂದು ಗೊತ್ತಾದಾಗ ವಾಹನ ಸವಾರರು ಏನು ಮಾಡುತ್ತಾರೆ? ಹಿಂದಿನ ದಿನ ಸಂಜೆಯಿಂದಲೇ ಪೆಟ್ರೋಲ್ ಬಂಕಿನಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ಆದಷ್ಟು ಬೇಗ ತಮ್ಮ ಬೈಕ್ ಅಥವಾ ಕಾರಿಗೆ ಫುಲ್ ಟ್ಯಾಂಕ್ ಮಾಡಿಸಿಕೊಂಡರೆ ಯಾರನ್ನೋ ಮಣಿಸಿದ ಹೆಮ್ಮೆಯಲ್ಲಿ ಆ ಮಧ್ಯರಾತ್ರಿ ಗಾಢನಿದ್ರೆ ಮಾಡುತ್ತಾರೆ. ಒಂದು ವೇಳೆ ಸಾಧ್ಯವಾಗದೇ ಹೋದರೆ ನಿದ್ದೆಯಲ್ಲಿ ಚಡಪಡಿಸಿ, ಪೆಟ್ರೋಲ್ ಬಂಕಿನ ನೂಕುನುಗ್ಗಲನ್ನು ಬಯ್ದುಕೊಳ್ಳುತ್ತಾ, ಮುಂದಿನ ಸಾರಿ ಹಾಗಾಗದಂತೆ ಎಚ್ಚರ ವಹಿಸಬೇಕೆಂದುಕೊಳ್ಳುತ್ತಾರೆ.
ಮೊದಲನೆಯದು ಸಾರ್ವಕಾಲಿಕ ಸತ್ಯವಿರಬಹುದಾದರೂ, ಎರಡನೆಯದು ಇತ್ತೀಚಿನ ವಿದ್ಯಮಾನ. ಖಾಸಗಿ ಹೋಟೆಲಿನಲ್ಲಿ ಇಡ್ಲಿಯ ಬೆಲೆ 50 ಪೈಸೆ ಹೆಚ್ಚಾಗಿದ್ದಕ್ಕೂ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾರೀ ಪ್ರತಿಭಟನೆ ನಡೆಸಿದ ಉದಾಹರಣೆಗಳಿವೆ. ಕಾಲ ಬದಲಾಗಿದೆ. ಎಷ್ಟು ಬದಲಾಗಿದೆ ಎಂಬುದಕ್ಕೆ ಟ್ರಾಫಿಕ್ ನಿಯಮಗಳ ಉಲ್ಲಂಘನೆಯ ದಂಡದ ಏರಿಕೆಯೇ ನಿದರ್ಶನ.
ಟ್ರಾಫಿಕ್ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿದ್ದ ದಂಡವನ್ನು 1000 ರೂ.ನಿಂದ 10,000 ರೂ.ಗಳಿಗೆ ಏರಿಸುವಾಗ ಸರ್ಕಾರದ ಅನಿಸಿಕೆ ಏನಿದ್ದಿರಬಹುದು? ಇದಕ್ಕೆ ಬಹಳ ವಿರೋಧ ಬರುವುದರಿಂದ ಅದನ್ನು ಅರ್ಧಕ್ಕೆ ಇಳಿಸಿದರೂ, ಶೇ.500ರಷ್ಟು ಏರಿಕೆಯಾಗುತ್ತದೆ. ಸಾಮಾನ್ಯವಾಗಿ ಇಂತಹ ದಂಡಗಳಿಂದ ಸರ್ಕಾರ ದೊಡ್ಡ ಆದಾಯವೇನೂ ಮಾಡುವುದಿಲ್ಲ. ಸರ್ವಾಧಿಕಾರಿ ಮನಸ್ಥಿತಿಯ ಆಳುವವರಿದ್ದಾಗ ಇಂತಹ ತೀವ್ರ ಹೆಚ್ಚಳವನ್ನು ಹೇರುತ್ತಾರಷ್ಟೇ. ಉಳಿದಂತೆ, ವಿರೋಧ ಬಂದ ಮೇಲೆ ಇಳಿಸಿದರೂ ಲಾಭವಾಗುವ ರೀತಿ ವಿವಿಧ ಶುಲ್ಕಗಳನ್ನು ಏರಿಸುವ ಒಂದು ಚಾಳಿ ಅಧಿಕಾರಶಾಹಿಯಲ್ಲಿದೆ.
ಈ ಸಾರಿಯೂ ಹಾಗೆಯೇ ಆಯಿತು. ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಹಲವು ಈ ಹೆಚ್ಚಳ ಮಾಡಲೇ ಇಲ್ಲ. ಹೆಚ್ಚಿಸಿ ನಂತರ ಶೇ.50ರಷ್ಟು ಗುಜರಾತ್ ಸರ್ಕಾರ ಇಳಿಸಿ ಸುಮ್ಮನಾಯಿತು. ಕರ್ನಾಟಕದಲ್ಲಿ ಹೆಚ್ಚಳದ ಕುರಿತು ಕೆಲವು ನಕಾರಾತ್ಮಕ ಪತ್ರಿಕಾ ವರದಿಗಳು ಬಂದವು, ಸಾಮಾಜಿಕ ಜಾಲತಾಣಗಳಲ್ಲಿ ಗೊಣಗಾಟ ನಡೆಯಿತು. ಸಮಸ್ಯೆ ಆಗಬಹುದೇನೋ ಎಂದು ಮುಖ್ಯಮಂತ್ರಿಗಳು ‘ಇದನ್ನು ವಾಪಸ್ ತೆಗೆದುಕೊಳ್ಳುತ್ತೇವೆ’ ಎಂದು ಘೋಷಿಸಿದರು. ಅದರ ನಂತರ ಇದುವರೆಗೂ ಶುಲ್ಕ ಹೆಚ್ಚಳವನ್ನು ವಾಪಸ್ಸೂ ತೆಗೆದುಕೊಂಡಿಲ್ಲ; ಇಳಿಸಿಯೂ ಇಲ್ಲ.
ಅಂದರೆ, ಶೇ.1000ದಷ್ಟು ಏರಿಸಿ, ಶೇ.500ಕ್ಕಿಳಿಸುವ ಅಗತ್ಯವೂ ಇಲ್ಲ! ಈ ಪ್ರಮಾಣಕ್ಕೆ ಜನರ ಹೊಂದಾಣಿಕೆ ಮನೋಭಾವ ಏರಿದೆ!! ಬಹುಶಃ ಹೀಗೇ ಇದ್ದರೆ, ಯಡಿಯೂರಪ್ಪನವರು ಸುಮ್ಮನಾಗುವ ಸಾಧ್ಯತೆಯೇ ಹೆಚ್ಚು. ಇದೇಕೆ ಹೀಗೆ ಎಂಬುದನ್ನು ಆಳವಾಗಿ ಪರಿಶೀಲಿಸಿ ನೋಡುವ ಅಗತ್ಯವಿದೆ.
ಮೇಲಿನ ಕಪ್ಪೆಯ ನಿದರ್ಶನ ಒಂದು ಸಾಧ್ಯತೆಯನ್ನು ನಮ್ಮ ಮುಂದಿಡುತ್ತದೆ. ಮತಧರ್ಮ ಮತ್ತು ಜಾತಿಗಳ ಅಮಲು (ಜಾತಿಯ ಅಮಲು ಮೇಲ್ಜಾತಿಗಳಲ್ಲಿ ಮಾತ್ರ ಇರುವುದಿಲ್ಲ; ಶೋಷಿತ ಸಮುದಾಯಕ್ಕೆ ಸೇರಿದ ಸಚಿವರೊಬ್ಬರು ಭ್ರಷ್ಟಾಚಾರ ಅಥವಾ ಜನವಿರೋಧಿ ನೀತಿ ತಂದರೆ, ಅಲ್ಲಿಯೂ ಸಮರ್ಥನೆ ಇದ್ದೇ ಇರುತ್ತದೆ) ಅನಸ್ತೇಷಿಯಾ ಥರ ಕೆಲಸ ಮಾಡುತ್ತಿದೆ ಎಂದು ಕೆಲವರು ಹೇಳುತ್ತಾರೆ.
ಯಾವುದಾದರೂ ಒಂದು ವಿಚಾರಕ್ಕೆ, ಸುದ್ದಿಗೆ, ವಿದ್ಯಮಾನಕ್ಕೆ ದೀರ್ಘಕಾಲ ಅಂಟಿಕೊಳ್ಳುವ ಗುಣವೂ ಇಲ್ಲವಾಗಿದೆ. ಎಲ್ಲರ ಗಮನದ ಅವಧಿ (attention span)ಯೂ ಕಡಿಮೆಯಾಗಿದೆ. ತುಸು ಹೆಚ್ಚು ಕಾಲ ಒಂದೇ ವಿಚಾರದ ಮೇಲೆ ಕೇಂದ್ರೀಕರಿಸುವುದು ಬೋರಿಂಗ್ ಆದ ಕೆಲಸ ಎಂಬ ಭಾವನೆ ಹೆಚ್ಚಾಗಿದೆ. ಹಾಗಾಗಿ ಏನೇ ನಡೆದರೂ ತಕ್ಷಣದಲ್ಲಿ ಮುಗಿಯಬೇಕು. ಪ್ರಜ್ಞಾವಂತರು, ಜೀವಪರ ಕಾಳಜಿಯುಳ್ಳವರೂ ಫೇಸ್ಬುಕ್ನ ಆತ್ಮರತಿ ಮತ್ತು ತಕ್ಷಣದ ಪ್ರತಿಕ್ರಿಯೆಯ ಜೋಶ್ನಲ್ಲಿ ಇರುವ ಶಕ್ತಿಯನ್ನೆಲ್ಲಾ ಕಳೆದುಕೊಂಡು ಸಮಾಧಾನ ಪಟ್ಟುಕೊಳ್ಳುತ್ತಾರೆ. ಪ್ರತಿ ವ್ಯಕ್ತಿಯೂ ಕೇವಲ ಬಿಡಿ ವ್ಯಕ್ತಿ ಮಾತ್ರ ಆಗಿಬಿಡಲು ಬೇಕಾದ ಪ್ರತ್ಯೇಕತೆಗಳು ಹಲವು ರೀತಿಯಲ್ಲಿ ಹಿಗ್ಗುತ್ತಿವೆ.
ಇವಿಷ್ಟು ಹೇಳಿದರೂ ಇಂದಿನ ನಿಸ್ತೇಜ, ನಿರ್ವೀರ್ಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ವಿವರಣೆ ಕೊಟ್ಟಂತಾಗುವುದಿಲ್ಲ. ಇಡೀ ಸಮುದಾಯಗಳು ಇಂತಹ ಸ್ಥಿತಿಗೆ ಇಳಿದಿರುವುದನ್ನು ಕಂಡು ರೋಸಿಹೋದ ಸಂವೇದನಾಶೀಲರು ಹತಾಶೆಯಿಂದ ‘ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿ, ಆಗ ಎಲ್ಲರಿಗೂ ಅರ್ಥವಾಗುತ್ತದೆ’ ಎಂದು ಹೇಳುವುದನ್ನು ನೋಡುತ್ತೇವೆ. ಇಂತಹ ಹತಾಶೆ ಇಲ್ಲದಂತಾಗಿ ಪರಿವರ್ತನಶೀಲ ಪ್ರಕ್ರಿಯೆಗಳಿಗೆ ದಾರಿ ಮಾಡಿಕೊಡಲಾದರೂ ಸರಿಯಾದ ವಿಶ್ಲೇಷಣೆ ಮತ್ತು ಬದಲಾವಣೆಯ ವಿಧಾನಗಳ ಶೋಧನೆ ಅಗತ್ಯವಿದೆ.
ಅಂತಹ ವಿಶ್ಲೇಷಣೆಗೆ ತೊಡಗುವವರು ಎರಡು ಅಂಶಗಳನ್ನು ನಿರ್ಲಕ್ಷಿಸಲಾಗದು. ಒಂದು, ಇಡಿ ಇಡೀ ಸಮುದಾಯವೇ ಆತ್ಮಸಾಕ್ಷಿ ಕಳೆದುಕೊಂಡ, ಕೊಳೆತ ಅಥವಾ ಸಂವೇದನಾಶೂನ್ಯ ಸ್ಥಿತಿಯಲ್ಲಿ ದೀರ್ಘಕಾಲವಿದ್ದ ಅವಧಿಗಳು ಇತಿಹಾಸದಲ್ಲಿ ಸಾಕಷ್ಟಿದ್ದವು. ಇದೇ ಮೊದಲೂ ಅಲ್ಲ, ಬಹುಶಃ ಕೊನೆಯೂ ಅಲ್ಲ. ಅಂತಹ ಸ್ಥಿತಿಗಳು ದೀರ್ಘವಿರಬಹುದಾದರೂ ಶಾಶ್ವತವಾಗಿ ಎಲ್ಲೂ ಉಳಿದಿಲ್ಲ. ಎರಡು, ಈಗಿನ ವಿದ್ಯಮಾನದ ಸ್ವರೂಪ ಹಾಗೂ ಅದನ್ನು ಬದಲಿಸಬಲ್ಲ ಪ್ರಕ್ರಿಯೆಯು ಅನನ್ಯ. ಏಕೆಂದರೆ 21ನೇ ಶತಮಾನ ಈ ಭುವಿಯ ಮೇಲೆ ಇದೇ ಮೊದಲ ಸಾರಿ ಬಂದಿದೆ; ಇಂತಹ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಂಕೀರ್ಣತೆ ಈಗ ಮಾತ್ರ ಇದ್ದದ್ದು. ಹಾಗಾಗಿ ಇದನ್ನು ಬದಲಿಸುವ ವಿಧಾನವನ್ನು ಹೊಸದಾಗಿಯೇ ಕಂಡುಕೊಳ್ಳಬೇಕಿದೆ.



ಕರಾವಳಿಯಲ್ಲಿ ಒಂದು ಬಹಳ ಹಳೆಯ ಮಾತಿದೆ. ಮಲಗಿರುವ ಕೋಣಕ್ಕೆ ಬೆತ್ತದಲ್ಲಿ ಒಂದೇಟು ಕೊಟ್ಟರೆ ದಪ್ಪ ಚರ್ಮದ ಅದಕ್ಕೆ ಗೊತ್ತೇ ಆಗುವುದಿಲ್ಲ. ಎರಡನೇ ಏಟಿಗೆ ಕಣ್ಣು ತೆರೆಯುತ್ತದೆ. ಮೂರನೇ ಏಟಿಗೆ ಏನದು ಸದ್ದು ಎಂದು ಯೋಚಿಸುತ್ತದೆ. ನಾಲ್ಕನೇ ಏಟಿಗೆ- ಹೋ! ಯಾರಿಗೋ ಹೊಡೆಯುತ್ತಿದ್ದಾರೆ ಎಂದು ಯೋಚಿಸುತ್ತದೆ. ಐದನೇ ಏಟಿಗೆ ನನಗೇ ಹೊಡೆಯುತ್ತಿರುವುದು ಎಂದು ಗೊತ್ತಾಗಿ ಮೆಲ್ಲಗೆ ಎದ್ದುನಿಲ್ಲುತ್ತದೆ. ನಮ್ಮ ಜನರು ಐದು ಏಟುಗಳ ಬಳಿಕ, ಅಂದರೆ ಮುಂದಿನ ಚುನಾವಣೆ ಹೊತ್ತಿಗಾದರೂ, ತಮಗೆ ಬೀಳುತ್ತಿರುವ ಏಟುಗಳನ್ನು ತಿಳಿದುಕೊಂಡು ಎದ್ದೇಳಲಿ!