ಮಣಿಪುರದ ಗುಡ್ಡಗಾಡು ಪ್ರದೇಶಗಳು ಮಂಗಳವಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಶಾಲಾ-ಕಾಲೇಜುಗಳು, ಮಾರುಕಟ್ಟೆಗಳು ಬಂದಾಗಿವೆ. ಬಂದ್ ಪರಿಣಾಮ ವಾಹನ ಸಂಚಾರ ಕೂಡಾ ಸ್ಥಗಿತಗೊಂಡಿದೆ ಎಂದು ದಿ ಟೆಲಿಗ್ರಾಫ್ ಆನ್ಲೈನ್ ವರದಿ ಮಾಡಿದೆ. ಸೋಮವಾರ ರಾಜ್ಯದ ಜಿರಿಬಾಮ್ನಲ್ಲಿ ಸೇನೆಯಿಂದ ಹತ್ಯೆಗೊಳಗಾದ 10 ಜನರಿಗೆ ಸಾಮೂಹಿಕ ಶ್ರದ್ಧಾಂಜಲಿ ಮತ್ತು ಬೆಂಬಲ ವ್ಯಕ್ತಪಡಿಸಿ ಕುಕಿ-ಜೊ ಕೌನ್ಸಿಲ್ 13 ಗಂಟೆಗಳ ಬಂದ್ಗೆ ಕರೆ ನೀಡಿತ್ತು. ಈ ಬಂದ್ ಅನ್ನು ಬೆಳಿಗ್ಗೆ 5 ಗಂಟೆಗೆ ಪ್ರಾರಂಭಿಸಲಾಯಿತು. 10 ಜನರ
ಆದರೆ ಮಣಿಪುರ ಪೊಲೀಸರು, “ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬಂಡುಕೋರರು ಬೊರೊಬೆಕ್ರಾ ಪೊಲೀಸ್ ಠಾಣೆ ಮತ್ತು ಜಿರಿಬಾಮ್ ಜಿಲ್ಲೆಯ ಪಕ್ಕದ ಸಿಆರ್ಪಿಎಫ್ ಶಿಬಿರದ ಮೇಲೆ ಮನಬಂದಂತೆ ಗುಂಡು ಹಾರಿಸಿದ ನಂತರ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಈ ಭೀಕರ ಗುಂಡಿನ ಚಕಮಕಿಯಲ್ಲಿ 10 ಶಂಕಿತ ಉಗ್ರರು ಹತರಾಗಿದ್ದಾರೆ” ಎಂದು ಹೇಳಿದ್ದರು. ಪೊಲೀಸರ ಈ ಪ್ರತಿಪಾದನೆಯನ್ನು ಕುಕಿ-ಜೊ ಕೌನ್ಸಿಲ್ ನಿರಾಕರಿಸಿದ್ದು, ಅವರು ‘ಗ್ರಾಮ ಸ್ವಯಂ ಸೇವಕ’ರಾಗಿದ್ದು, ಅವರನ್ನು ಸೇನೆಯು ಹೊಂಚು ಹಾಕಿ ಕೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. 10 ಜನರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬಂದ್ ಸಮಯದಲ್ಲಿ ಕುಕಿ ಪ್ರಾಬಲ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಎಲ್ಲಿಯೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು ಮುಚ್ಚಲ್ಪಟ್ಟಿದ್ದು, ಹೆಚ್ಚಿನ ಸ್ಥಳಗಳಲ್ಲಿ ಮಾರುಕಟ್ಟೆಗಳು ಮತ್ತು ಅಂಗಡಿಗಳನ್ನು ಮುಚ್ಚಲಾಗಿದೆ. ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ವಾಹನಗಳು ಕೂಡಾ ರಸ್ತೆಗಿಳಿಯಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಹಲವು ಕುಕಿ-ಜೋ ಸಂಘಟನೆಗಳು ಕೇಂದ್ರದ ಪಡೆಗಳನ್ನು ಗುರಿಯಾಗಿಸಿ, ಜಿರಿಬಾಮ್ನಲ್ಲಿ ನಡೆದ ಘಟನೆಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿವೆ.
ಕುಕಿ ವಿದ್ಯಾರ್ಥಿಗಳ ಸಂಘಟನೆ (ಕೆಎಸ್ಒ) “…ಯಾವುದೇ ಸಿಆರ್ಪಿಎಫ್ ಸಿಬ್ಬಂದಿ ತಮ್ಮ ಶಿಬಿರದ ಆವರಣದಿಂದ ಹೊರಹೋಗಲು ಅನುಮತಿಸುವುದಿಲ್ಲ. ಈ ಸೂಚನೆಯನ್ನು ಉಲ್ಲಂಘಿಸಿದರೆ ಏನಾದರೂ ನಡೆದರೆ ಅದಕ್ಕೆ ಸಿಆರ್ಪಿಎಫ್ ಸಿಬ್ಬಂದಿಯೆ ಹೊಣೆ” ಎಂದು ಎಚ್ಚರಿಸಿದೆ.
“ಈ ಸೂಚನೆಯನ್ನು ನೀಡಿದ ತಕ್ಷಣ ಈ ನಿರ್ದೇಶನ ಜಾರಿಯಲ್ಲಿರುತ್ತದೆ. ಅಲ್ಲದೆ, ಸಿಆರ್ಪಿಎಫ್ ಜಿರಿಬಾಮ್ನಲ್ಲಿ ನಡೆಸಿದ ಅನಾಗರಿಕ ಕೃತ್ಯಗಳನ್ನು ಸಾರ್ವಜನಿಕವಾಗಿ ಅಂಗೀಕರಿಸುವ ವರೆಗೆ ಮತ್ತು ಕ್ಷಮೆಯಾಚಿಸುವವರೆಗೆ ಇದು ಜಾರಿಯಲ್ಲಿರುತ್ತದೆ. ಕುಕಿ ಪ್ರಾಬಲ್ಯವಿರುವ ಪ್ರದೇಶದಲ್ಲಿ ಸಿಆರ್ಪಿಎಫ್ ವಿರುದ್ಧ ಇದನ್ನು ದೊಡ್ಡ ಅಸಹಕಾರ ಚಳುವಳಿಯ ಭಾಗವಾಗಿ ಮಾಡಲಾಗುತ್ತದೆ. ಇದನ್ನು ಮುಂದಿನ ಸೂಚನೆಯವರೆಗೂ ಅನುಸರಿಸಲು ಸಾರ್ವಜನಿಕರಿಗೆ ಮನವಿ ಮಾಡಲಾಗುವುದು” ಎಂದು ವಿದ್ಯಾರ್ಥಿ ಸಂಘಟನೆ ಹೇಳಿದೆ.
ಝೋಮಿ ಸ್ಟೂಡೆಂಟ್ಸ್ ಫೆಡರೇಶನ್ (ZSF) ಗುಂಡಿನ ಚಕಮಕಿಯ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿದೆ. “ಜಿರಿಬಾಮ್ನಲ್ಲಿ ನಿನ್ನೆ ಅಂದರೆ 11-11-2024 ರಂದು ನಮ್ಮ ಹನ್ನೊಂದು ಯುವಕರನ್ನು ವಿಶ್ವಾಸಘಾತುಕವಾಗಿ ಹತ್ಯೆಗೈದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಅಮಾನವೀಯ ಕ್ರಮಗಳ ಹಿನ್ನಲೆಯಲ್ಲಿ, ತಕ್ಷಣವೇ ಜಾರಿಗೆ ಬರುವಂತೆ ನಾವು CRPF ಅನ್ನು ಸಾಮಾಜಿಕ ಬಹಿಷ್ಕಾರ ಮಾಡಿದ್ದೇವೆ ಎಂದು ಘೋಷಿಸುತ್ತೇವೆ.” ಅದು ಹೇಳಿದೆ.
ಘಟನೆಯ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಎಚ್ಮಾರ್ ವಿದ್ಯಾರ್ಥಿಗಳ ಸಂಘ (ಎಚ್ಎಸ್ಎ) ಆಗ್ರಹಿಸಿದೆ. “ಜಖ್ರಾದವರ್ನಲ್ಲಿ ನಡೆದ ಹತ್ಯೆಗಳು ಮತ್ತು ಜೈರಾನ್ ಮೇಲಿನ ದಾಳಿಯ ಬಗ್ಗೆ ತಕ್ಷಣವೆ ಮತ್ತು ನಿಷ್ಪಕ್ಷಪಾತವಾದ ಸಿಬಿಐ ನೇತೃತ್ವದ ತನಿಖೆಯನ್ನು ನಾವು ಒತ್ತಾಯಿಸುತ್ತೇವೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ವಿಶ್ವಾಸಾರ್ಹ, ತಟಸ್ಥ ಭದ್ರತಾ ಕ್ರಮಗಳು ಜಾರಿಯಾಗುವವರೆಗೆ ಕುಕಿ-ಜೋ ಸಮುದಾಯಗಳು ವಾಸಿಸುವ ಪ್ರದೇಶಗಳಿಂದ CRPF ಮತ್ತು ಮಣಿಪುರ ಪೊಲೀಸ್ ಪಡೆಗಳನ್ನು ತಕ್ಷಣವೇ ಹಿಂಪಡೆಯಲು HSA ಆಗ್ರಹಿಸಿದೆ.
ಜಿರಿಬಾಮ್ನಲ್ಲಿ ನಡೆದ ದಾಳಿಯ ನಂತರ ಇನ್ನೂ ಆರು ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಿಂದ ಇಂಫಾಲ್ ಕಣಿವೆ ಮೂಲದ ಮೈತೇಯಿ ಮತ್ತು ಪಕ್ಕದ ಬೆಟ್ಟಗಳಲ್ಲಿ ವಾಸಿಸುವ ಕುಕಿ-ಜೋ ಬುಡಕಟ್ಟು ಸಮುದಾಯದ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ಈ ವರೆಗೆ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಇದನ್ನೂ ಓದಿ: ಲಕ್ಷಕ್ಕೂ ಹೆಚ್ಚಿನ ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಟ್ಟಿದ್ದ ಬಿಜೆಪಿ ಸರ್ಕಾರ; ಜಸ್ಟೀಸ್ ಕುನ್ಹಾ ಆಯೋಗದ ವರದಿಯಲ್ಲಿ ಬಹಿರಂಗ


