ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟು ಗ್ರಾಮದ ಚಿಟ್ಟೆಬೆಟ್ಟು ಕೊರಗ ಕಾಲೋನಿಯಲ್ಲಿ ಕಳೆದ ಡಿ.27ರ ರಾತ್ರಿ ಜರುಗಿದ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿ ಪೊಲೀಸರು ನಡೆಸಿದ ದೌರ್ಜನ್ಯ ಮತ್ತು ಸಮುದಾಯದ ಯುವಕರ ವಿರುದ್ದ ದಾಖಲಾದ ಸುಳ್ಳು ದೂರಿನ ಪ್ರಕರಣದ ಸಮಗ್ರ ತನಿಖೆ ಸಿಓಡಿಗೆ ವಹಿಸಲಾಗಿದೆ ಎಂದು ಗೃಹ ಮಂತ್ರಿ ಅರಗ ಜ್ಞಾನೇಂದ್ರ ಘೋಷಿಸಿದ್ದಾರೆ.
ಪ್ರಕರಣ ನಡೆದ ಕೋಟತಟ್ಟು ಗ್ರಾಮದ ಬಾರಿಕೆರೆ ಕೊರಗ ಕಾಲೋನಿಗೆ ಜ.1ರಂದು ಭೇಟಿ ಕೊಟ್ಟು ನೊಂದವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದುಮಗ ಮತ್ತು ಮನೆಯ ಹೆಣ್ಣು ಮಕ್ಕಳ ಮೇಲೆ ಪೊಲೀಸರು ಲಾಠಿ ಬೀಸಿರುವುದು ಅತಿರೇಕ ಕ್ರಮವಾಗಿದ್ದು, ಇದರಿಂದ ಬೇಸರವಾಗಿದೆ. ಅದಕ್ಕೆ ಪೊಲೀಸರು ತಕ್ಕ ಬೆಲೆ ತೆರಲೇಬೇಕು. ಗಾಯಾಳುಗಳಿಗೆ ತಲಾ 2ಲಕ್ಷ ಪರಿಹಾರ ನೀಡಲಾಗುತ್ತಿದ್ದು, ತಕ್ಷಣಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ರೂ.50,000 ವಿತರಿಸಲಾಗುತ್ತಿದೆ ಎಂದು ಹೇಳಿದರು.
ಹಲ್ಲೆ ನಡೆಸಿದ ಪಿಎಸ್ಐ ಅಮಾನತು ಮಾಡಲಾಗಿದ್ದು, ದಾಳಿಯಲ್ಲಿದ್ದ ಪೊಲೀಸರನ್ನು ವರ್ಗಾಯಿಸಲಾಗಿದೆ. ಇವರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯವಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಗೃಹ ಸಚಿವರ ಹೇಳಿಕೆ ಗಮನಿಸಿದರೆ ಈ ಪ್ರಕರಣ ಇಷ್ಟಕ್ಕೇ ನಿಲ್ಲುವಂತೆ ಕಾಣಿಸುತ್ತಿಲ್ಲ. ಈ ಬಗ್ಗೆ ನಮ್ಮ ಅಸಮಾಧಾನ ವ್ಯಕ್ತಪಡಿಸಲು ಜ.3ರಂದು ಜಿಲ್ಲೆಯ ಎಲ್ಲ ಕೊರಗ ಸಂಘಟನೆಗಳು ಒಂದಾಗಿ ಮಣಿಪಾಲದಲ್ಲಿ ಬೃಹತ್ ಜಾಥಾ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಿದ್ದೇವೆ. ಒಂದು ವಾರದಲ್ಲಿ ಕೊರಗರ ಮೇಲೆ ಹಾಕಿರುವ ಸುಳ್ಳು ಕೇಸು ವಾಪಸ್ ಪಡೆಯದಿದ್ದರೆ ತೀವ್ರ ಹೋರಾಟ ಮಾಡಲಾಗುವುದೆಂದು ಕೊರಗ ಮುಖಂಡ ಗಣೇಶ್ ಕುಂದಾಪುರ ಹೇಳಿದ್ದಾರೆ.
ಇದನ್ನೂ ಓದಿ: ಕೊರಗರ ಮೇಲೆಯೆ ಪ್ರಕರಣ: ಬಿಜೆಪಿಯ ಗುಪ್ತ ಅಜೆಂಡವೇ ಎಂದ ಸಿದ್ದರಾಮಯ್ಯ